ಗುರುವಾರ, ನವೆಂಬರ್ 24, 2011

ರಾಹುಲ್ ಗಾಂಧಿ ಹೇಳಿಕೆ, ಅಂತರ್-ರಾಜ್ಯ ವಲಸೆ ಮತ್ತು ಕೆಲ ಇಂಗ್ಲಿಷ್ ಮಾಧ್ಯಮಗಳ ಇಬ್ಬಂದಿತನವೂ...

ಇತ್ತಿಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುಪಿಯಲ್ಲಿ ಮಾತನಾಡುತ್ತ "ಇನ್ನೆಷ್ಟು ದಿನ ಇದೇ ರೀತಿ ಉತ್ತರಪ್ರದೇಶದ ಯುವಕರು ಭಿಕ್ಷೆ ಕೇಳಿ ಮುಂಬೈನಂತಹ ಊರಿಗೆ ವಲಸೆ ಹೋಗುತ್ತಿರಿ?" ಅಂದರು. ಅಭಿವೃದ್ದಿಯಲ್ಲಿ ಉತ್ತರಪ್ರದೇಶ ಎಷ್ಟು ಹಿಂದೆ ಬಿದ್ದಿದೆ, ಅಲ್ಲಿನ ಯುವಕರಿಗೆ ಒಳ್ಳೆ ಜೀವನ, ದುಡಿಮೆ ಕಲ್ಪಿಸುವಲ್ಲಿ ಅದೆಷ್ಟು ಎಡವಿದೆ, ಅಲ್ಲಿನ ಯುವಕರೆಲ್ಲ ಅನ್ನ ಅರಸಿ ಮುಂಬೈ, ದೆಹಲಿ, ಬೆಂಗಳೂರಿನಂತಹ ಹಸಿರು ಹುಲ್ಲುಗಾವಲಿಗೆ ವಲಸೆ ಹೋಗದೇ ವಿಧಿಯಿಲ್ಲ ಅನ್ನುವಂತೆ ಅಲ್ಲಿನ ಆಡಳಿತ ಹೇಗೆ ಮಾಡಿದೆ ಅನ್ನುವುದನ್ನು ಒಂದು ರೀತಿಯಲ್ಲಿ ಎಲ್ಲರ ಎದುರಿಟ್ಟರು. ಅಲ್ಲಿ ತಮ್ಮ ಪಕ್ಷಕ್ಕೆ ಲಾಭ ಮಾಡಿಕೊಳ್ಳುವ ದೃಷ್ಟಿಯಿಂದ ಈ ಮಾತನ್ನು ಅವರು ಹೇಳಿದ್ದರೂ, ಅವರು ಎತ್ತಿರುವ ಪ್ರಶ್ನೆ ಮಾತ್ರ ಎಲ್ಲರೂ ಯೋಚಿಸಬೇಕಾದಂತದ್ದೇ. ಅವರ ಮಾತನ್ನು ಸಹಜವಾಗಿಯೇ ಕೆಲವು ವಲಸೆ ಪರವಾಗಿರುವವರು ವಿರೋಧಿಸಿದರು. ಮೈಸೂರಿನ ಒಂದು ಪ್ರಖ್ಯಾತ ಇಂಗ್ಲಿಷ್ ಬ್ಲಾಗ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಹುಲ್ ಗಾಂಧಿ ಈ ಮಾತಿನ ಮೂಲಕ ಅವರಿಗೂ ಮರಾಠಿಗರ ಹಿತಕ್ಕಾಗಿ ಧ್ವನಿ ಎತ್ತುವ ಎಮ್.ಎನ್.ಎಸ್ ಮತ್ತು ಕನ್ನಡಿಗರ ಹಿತಕ್ಕಾಗಿ ಹೋರಾಡುವ ಕರವೇಗೂ ಯಾವುದೇ ಅಂತರವಿಲ್ಲ ಎಂದು ತೋರಿಸಿದ್ದಾರೆ ಎಂದು ಪ್ರತಿಪಾದಿಸುವ ಅಂಕಣವೊಂದನ್ನು ಪ್ರಕಟಿಸಿತು ಮತ್ತು ಆ ಬಗ್ಗೆ ಚರ್ಚೆಯಾಗಲಿ ಎಂದು ತಮ್ಮ ಅನಿಸಿಕೆ ಬರೆದ ಅನೇಕ ಗೆಳೆಯರ ಅನಿಸಿಕೆಯನ್ನು ಪ್ರಕಟಿಸಲೂ ಇಲ್ಲ. ಇರಲಿ, ಪ್ರಜಾತಂತ್ರದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ತಿಳಿಸುವ ಎಲ್ಲ ಆಯ್ಕೆಯಿದೆ. ಆದರೆ ತಮ್ಮ ಅನ್ನ, ಕಲಿಕೆ, ದುಡಿಮೆ, ಬಾಳುವೆಗಾಗಿ ಧ್ವನಿ ಎತ್ತುವ ಯಾವುದೇ ಸಂಸ್ಥೆ, ಸಂಘಟನೆಯನ್ನು ಈ ಹೊತ್ತಿನ ಹಲ ಮಾಧ್ಯಮಗಳು, ಬುದ್ದಿಜೀವಿಗಳು ನೋಡುವ ರೀತಿ, ಸಂಕುಚಿತ, ಮೂಲಭೂತವಾದಿಗಳು ಎಂದೆಲ್ಲ ಮಾಡಲಾಗುವ ಟೀಕೆಗಳು, ತಮ್ಮ ಹಕ್ಕಿಗಾಗಿ ನಡೆಯುವ ಹೋರಾಟವನ್ನು ಟ್ರಿವಿಯಲೈಸ್ ಮಾಡುವುದನ್ನು ಗಮನಿಸಿದಾಗ ಅನಿಯಂತ್ರಿತ ವಲಸೆ, ಅದರಿಂದಾಗುವ ಡೆಮಾಗ್ರಾಫಿಕ್ ಬದಲಾವಣೆಗಳು, ವಲಸೆಗೆ ಪ್ರೋತ್ಸಾಹ ನೀಡುವ ಭಾಷಾ ನೀತಿ, ತಪ್ಪು ಜನಸಂಖ್ಯಾ ನೀತಿ, ಇವೆಲ್ಲದರಿಂದ ದೇಶದ ವೈವಿಧ್ಯತೆಗೆ ತಗಲುತ್ತಿರುವ ಅಪಾಯ ಮತ್ತು ಅದರಿಂದ ಮುಂದಾಗಬಹುದಾದ ಪರಿಣಾಮಗಳನ್ನು ಈ ಜನರು ಯೋಚಿಸುತ್ತಿಲ್ಲವೆನೋ ಎಂದು ನನ್ನ ಅನಿಸಿಕೆ. ನನ್ನ ಮಾತುಗಳಿಗೆ ಕೆಲವು ಸಮರ್ಥನೆಯನ್ನು ಈ ಕೆಳಗೆ ನೀಡಲು ಬಯಸುತ್ತೇನೆ.

ಉತ್ತರ ಪ್ರದೇಶದ ಯುವಕರಿಗೆ ಕೆಲಸ ಕೊಡಬೇಕಾದದ್ದು ಯಾರು? ಉತ್ತರ ಪ್ರದೇಶವೋ, ಇಲ್ಲ ಮಹಾರಾಷ್ಟ್ರ, ಕರ್ನಾಟಕವೋ?
ಉತ್ತರ ಪ್ರದೇಶದ ಸರ್ಕಾರವಿರುವುದು ಯಾರ ಏಳಿಗೆಗಾಗಿ? ಅಲ್ಲಿನ ಸಂಪತ್ತು, ಸಂಪನ್ಮೂಲ ಬಳಸಿ ಅಲ್ಲಿನ ಜನರಿಗೆ ದುಡಿಮೆ, ಬದುಕಿನ ಅವಕಾಶಗಳನ್ನು ಕಲ್ಪಿಸಲೆಂದೇ ಅಲ್ಲಿನ ಸರ್ಕಾರವಿರುವುದಲ್ಲವೇ? ಜನರಿಗೆ ಒಳ್ಳೆಯ ಆಡಳಿತ ನೀಡದೇ ಜನರು ವಲಸೆ ಹೋಗಲು ಅನುಕೂಲವಾಗುವಂತೆ ರೈಲಿನ ಮೇಲೆ ರೈಲು ಬಿಟ್ಟು ಜನರನ್ನು ಹೊರ ರಾಜ್ಯಕ್ಕೆ ತಳ್ಳುವಂತದ್ದನ್ನೇ ಆಡಳಿತ ಎಂಬಂತೆ ನಡೆದುಕೊಂಡರೆ ಅಂತಹ ವೈಫಲ್ಯತೆಯನ್ನು ಪ್ರಶ್ನಿಸುವುದು ಯಾವ ರೀತಿಯಲ್ಲಿ ಸಂಕುಚಿತ ಇಲ್ಲವೇ ಮೂಲಭೂತವಾದವಾಗುತ್ತೆ? ಇದು ಭಾರತ, ಯಾರು ಎಲ್ಲಿ ಬೇಕಾದರೂ ವಲಸೆ ಹೋಗಬಹುದು ಅನ್ನುವ ಮಾತನ್ನೇ ಆಡಿಕೊಂಡು ಎಲ್ಲೆಂದರಲ್ಲಿ ವಲಸೆ ಹೋಗಿ ಅಲ್ಲಿನ ಸ್ಥಳೀಯರ ಉದ್ಯೋಗ, ಬದುಕು, ಸ್ಥಳೀಯತೆಯ  ಹಕ್ಕುಗಳಿಗೆ ತೊಂದರೆ ಆದಾಗ ಅಲ್ಲಿ ನೂರಾರು ಕಾಲದಿಂದ ನೆಲೆಸಿರುವ ಸ್ಥಳೀಯ ತನ್ನ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಯಾವ ರೀತಿಯಲ್ಲಿ ಸಂಕುಚಿತ ಇಲ್ಲವೇ ಮೂಲಭೂತವಾದವಾಗುತ್ತೆ? ವಿವಿಧತೆಯಲ್ಲಿ ಏಕತೆ ಎಂದು ಕಟ್ಟಿರುವ ಈ ದೇಶದಲ್ಲಿ ಎಲ್ಲ ಭಾಷಿಕರು ಈ ಒಕ್ಕೂಟವನ್ನು ಸೇರಿದ್ದು ಎಲ್ಲರಿಗೂ ಸಮ ಬಾಳು, ಸಮ ಪಾಲು ದೊರಕಲಿ ಅನ್ನುವ ಕಾರಣಕ್ಕಲ್ಲವೇ? ಹಾಗಿದ್ದಲ್ಲಿ, ಆ ನಂಬಿಕೆಗೆ ತೊಂದರೆ ಆದಾಗ ಅದನ್ನು ಪ್ರಶ್ನಿಸಿದರೆ ಅದನ್ನು ಸಂಕುಚಿತ, ಮೂಲಭೂತವಾದ ಅನ್ನುವ ಹಲವು ಬುದ್ದಿಜೀವಿಗಳಿಗೆ ನನ್ನದೊಂದು ಸರಳ ಉದಾಹರಣೆ ಸಮೇತ ಪ್ರಶ್ನೆ. ಎರಡು ವರ್ಷದ ಹಿಂದೆ ರೈಲ್ವೆ ಇಲಾಖೆಯ ಗ್ರೂಪ್ ಡಿ ಹಂತದ ೪೭೦೦ ಹುದ್ದೆಗಳನ್ನು ಕನ್ನಡಿಗರಿಗೆ ಗೊತ್ತೂ ಆಗದಂತೆ ಬಿಹಾರಿಗಳ ಪಾಲಾಗಿಸುವ ಯತ್ನ ನಡೆದಾಗ ಅದನ್ನು ತಡೆದು ನ್ಯಾಯ ಸಿಗುವಂತೆ ಮಾಡಿದ್ದು ಯಾರು? ಕನ್ನಡ ಪರ ಸಂಘಟನೆಗಳೋ ಇಲ್ಲ ಕೂತು ತೋಚಿದ್ದು ಬರೆಯುವ  ಇಂತಹ ಮಾಧ್ಯಮಗಳೋ? ಸಹಜವಾಗಿ ಜನರ ಬದುಕಿನ ಈ ಪ್ರಶ್ನೆಯನ್ನು ಎತ್ತಿಕೊಂಡು ಅವರಿಗೆ ನ್ಯಾಯ ದೊರಕಿಸುವ ಕೆಲಸ ಈ ಮಾಧ್ಯಮಗಳು ಯಾಕೆ ಮಾಡಲಿಲ್ಲ? ಯಾಕೆ ಕನ್ನಡ ಪರ ಸಂಘಟನೆಗಳು ಬೇಕಾದವು?

ಅನಿಯಂತ್ರಿತ ವಲಸೆಗೆ ಇಂಬು ಕೊಡುತ್ತಿರುವ ಹುಳುಕಿನ ಭಾಷಾ ನೀತಿ
ಇವತ್ತು ಅನಿಯಂತ್ರಿತ ವಲಸೆ ಮುಂಬೈ, ಬೆಂಗಳೂರಿನಂತಹ ಊರಿಗಾಗುತ್ತಿದ್ದಲ್ಲಿ ಅದಕ್ಕೆ ಬಹು ದೊಡ್ಡ ಕಾರಣ ಭಾರತದ ಹುಳುಕಿನ ಭಾಷಾ ನೀತಿ. ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳಿನಡಿ ಕಲಿಕೆ, ಮನರಂಜನೆ, ಆಡಳಿತ,ಉದ್ಯೋಗ ಹೀಗೆ ಎಲ್ಲ ರೂಪದಲ್ಲೂ ಹಿಂದಿಯನ್ನು ಹೇರಿ ಎಲ್ಲೆಡೆ ಹಿಂದಿಗೆ ಮಾನ್ಯತೆ ದೊರಕಿಸುವಂತಹ ಭಾಷಾ ನೀತಿಯಿಂದಾಗಿಯೇ ಇಂದು ಎಲ್ಲೆಡೆ ಹಿಂದಿ ಭಾಷಿಕರ ವಲಸೆ ಅಂಕೆಯಿಲ್ಲದೇ ನಡೆಯುತ್ತಿದೆ. ನೀವೇ ಗಮನಿಸಿ, ಬೆಂಗಳೂರು ಇಲ್ಲ ಮುಂಬೈಗೆ ಬರುವ ಹಿಂದಿ ಭಾಷಿಕನಿಗೆ ಇವತ್ತು ಒಂದಿನಿತಾದರೂ ತೊಡಕಾಗುತ್ತಿದೆಯೇ? ಸ್ಥಳೀಯ ನುಡಿಯ ಒಂದೇ ಒಂದು ಪದ ಕಲಿಯದೇ ಬದುಕಿ, ಬಾಳುವಂತಹ ವ್ಯವಸ್ಥೆ ಕಲ್ಪಿಸಿರುವುದರಿಂದಲೇ ಇವತ್ತು ಈ ಪಾಟಿ ವಲಸೆಯಾಗುತ್ತಿದೆಯಲ್ಲವೇ? ಇಂತಹ ವಲಸೆಯಿಂದಲೇ ಬೆಂಗಳೂರಿನ ಸರ್ಜಾಪುರ, ಮಾರ್ತಹಳ್ಳಿಯಂತಹ ಕೇವಲ ೨೦ ವರ್ಷಗಳ ಹಿಂದೆ ಅಪ್ಪಟ ಕನ್ನಡದವಾಗಿದ್ದ ಹಳ್ಳಿಗಳಲ್ಲಿ ಇವತ್ತು ಕನ್ನಡದ ಧ್ವನಿ ಉಡುಗಿ ಹೋಗುವ ಹಂತ ತಲುಪಿರುವುದು? ಯಾವ ವಲಸೆ ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಅಳಿಸುವಂತದ್ದೋ ಅಂತಹ ವಲಸೆ, ಅದಕ್ಕೆ ಇಂಬು ಕೊಡುವ ಭಾಷಾ ನೀತಿಯ ಬಗ್ಗೆ ಯಾರು ಧ್ವನಿ ಎತ್ತಬೇಕಿತ್ತು? ಇಂತಹ ಮಾಧ್ಯಮಗಳೇ ಅಲ್ಲವೇ? ಆದರೆ ಅಲ್ಲಿನ ಕೆಲ ಜನರಿಗೆ ಇವತ್ತು ಅದಾವುದು ಮುಖ್ಯವಲ್ಲ. ಜನಸಾಮಾನ್ಯರಿಂದ, ಅವರ ನಾಡಿಮಿಡಿತದಿಂದ ಬೇರ್ಪಟ್ಟಿರುವ ಈ ಜನರು, ಸಂಸ್ಥೆಗಳು ಈ ಜನರ ಪರವಾಗಿ ಧ್ವನಿ ಎತ್ತುವವರನ್ನು ಸಂಕುಚಿತ ಮನಸ್ಸಿನ ಮೂಲಭೂತವಾದಿಗಳು ಎಂದು ಟೀಕಿಸುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ ಮತ್ತು ಆ ಮೂಲಕ ತಾವು ಒಂದು ರೀತಿ ತೂಗು ಕುರ್ಚಿಯ ಬುದ್ದಿಜೀವಿಗಳೆಂದು ತೋರಿಸಿಕೊಂಡಿದ್ದಾರೆನ್ನಬಹುದು. ಧರ್ಮದ ವೈವಿಧ್ಯತೆಗೆ ಯಾವುದೇ ತೊಡಕಾಗುವುದನ್ನು ಉಗ್ರವಾಗಿ ಖಂಡಿಸುವ ಈ ಮಾಧ್ಯಮಗಳು ಭಾಷಾ ವೈವಿಧ್ಯತೆಯ ವಿಷಯಕ್ಕೆ ಬಂದಾಗ ಮಾತ್ರ ಯಾಕೆ ಸಂಕುಚಿತತೆಯ ರಾಗ ಎಳೆಯುವುದು? ವೈವಿಧ್ಯತೆ ಯಾವುದಿದ್ದರೂ ಅದು ವೈವಿಧ್ಯತೆಯೇ ಅಲ್ಲವೇ? ಯಾಕೀ ಈ ಇಬ್ಬಂದಿತನ ಹಾಗಿದ್ದರೆ?

ಜನಸಂಖ್ಯಾ ನೀತಿ ತರುತ್ತಿರುವ ಆತಂಕ !
ಮೇಲಿನ ಮಾತೆಲ್ಲ ಒಂದು ತೂಕವಾದರೆ, ಇವತ್ತು ಭಾರತ ಅನುಸರಿಸುತ್ತಿರುವ ಜನಸಂಖ್ಯಾ ನೀತಿ ತಂದಿರುವ ಆತಂಕ ಇನ್ನೊಂದು ತೂಕದ್ದು. ನಮ್ಮ ಕರ್ನಾಟಕದ ಜನಸಂಖ್ಯೆ ಇಂದು ಸುಮಾರು ೬ ಕೋಟಿಯ ಆಸುಪಾಸಿನಲ್ಲಿದೆ. ಆದರೆ ಕರ್ನಾಟಕದಲ್ಲಿ ಇನ್ನು ಮುಂದೆ ಮಕ್ಕಳ, ಯುವಕರ ಸಂಖ್ಯೆಯ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ. ೨೦೧೧ರ ಜನಸಂಖ್ಯೆಯ ಆಧಾರದಲ್ಲಿ ಕರ್ನಾಟಕ ಈಗಾಗಲೇ ತನ್ನ ರಿಪ್ಲೇಸ್-ಮೆಂಟ್ ಅನುಪಾತವಾದ TFR=2.0 ಅನ್ನು ತಲುಪಿದೆ. (TFR ಅಂದರೆ Total Fertility Rate- ಯಾವುದೇ ಜನಾಂಗ ಅಳಿಯದೇ ಉಳಿಯಲು ಇರಬೇಕಾದ ಜನಸಂಖ್ಯೆ ಬೆಳವಣಿಗೆಯ ಪ್ರಮಾಣ). ಆದರೆ 11ನೇ ಪಂಚವಾರ್ಷಿಕ ಯೋಜನೆ ಅನ್ವಯ ಭಾರತ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ TFR ಟಾರ್ಗೆಟ್ 1.8. ಇದರರ್ಥ ಕರ್ನಾಟಕದ TFR ಮಟ್ಟ ಈಗ ತಲುಪಿರುವ ನಾರ್ಮಲ್ ರಿಪ್ಲೇಸ್-ಮೆಂಟ್ ಮಟ್ಟದಿಂದಲೂ ಕೆಳಗಿಳಿದು ಕುಸಿಯುತ್ತ ಸಾಗುತ್ತೆ. ಅದರಿಂದಾಚೆ, ವರ್ಷದಿಂದ ವರ್ಷಕ್ಕೆ ನಮ್ಮ ಕನ್ನಡ ಜನಾಂಗದ ಸಂಖ್ಯೆ ಇಳಿಮುಖವಾಗುತ್ತ ಹೋಗುವುದು. ಇದೇ ಸಮಯದಲ್ಲಿ ಬಿಹಾರ್, ಉತ್ತರ ಪ್ರದೇಶದಂತಹ ರಾಜ್ಯಗಳ TFR ಮಟ್ಟ 3.0ಕ್ಕಿರುತ್ತೆ. ಅಲ್ಲಿ ಜನಸಂಖ್ಯೆ ಹೆಚ್ಚಿದರೆ, ಇಲ್ಲಿ ಇಳಿಮುಖ ! ಪರಿಣಾಮ? ತಗ್ಗಿರುವ ಜಾಗಕ್ಕೆ ನೀರು ಹರಿವಂತೆ ನಿರಂತರವಾಗಿ ವಲಸೆ ಹೆಚ್ಚುವುದು. ಅಂತಹ ವಲಸೆಗೆ ಇಂಬು ಕೊಡುವ ಭಾಷಾ ನೀತಿಯೂ ಈಗಾಗಲೇ ಇಲ್ಲಿದೆ ಅಂದ ಮೇಲೆ ಪರಿಣಾಮ ಊಹಿಸುವುದು ಕಷ್ಟವೇ? ಇಂತಹ ಕಟ್ಟೆಯೊಡೆದ ವಲಸೆಯ ಪ್ರವಾಹಕ್ಕೆ ಸಿಕ್ಕುವ ಕನ್ನಡ, ಕನ್ನಡಿಗನಿಗೆ ಕೊನೆಗೇನು ಉಳಿವುದು? ಒಂದು ಭಾಷಾ ಸಮೂಹದ ಅಸ್ತಿತ್ವವನ್ನೇ ಕಿತ್ತು ಹಾಕಬಹುದಾದ ಇಂತಹ ತೊಂದರೆಗಳ ಬಗ್ಗೆ ಮಾತನಾಡಬೇಕಾದದ್ದು ಯಾರು? ಇದೇ ಮಾಧ್ಯಮವಲ್ಲವೇ? ಆದರೆ ಅವರಿಗೆ ಇಂತಹ ಶ್ರಮದ ಕೆಲಸವಾವುದು ಬೇಡ. ತುರಿಕೆ ಆದಾಗ ಕೆರೆದುಕೊಳ್ಳುವಂತೆ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುವವರು parochial, fanatic, fringe elements ಎಂದು ಜರಿದು ತಮ್ಮದೇ ಪ್ರಪಂಚದಲ್ಲಿ ಮುಳುಗಿ ಹೋಗುತ್ತಾರೆ. 
ಜನರಿಗೋಸ್ಕರ ಸಂವಿಧಾನವಿರುವುದು
ಸಂವಿಧಾನದಲ್ಲಿ ಅಂತರ್-ರಾಜ್ಯ ವಲಸೆಯ ಬಗ್ಗೆ ಏನು ಹೇಳಿಲ್ಲ. ಯಾರೂ ಎಲ್ಲಿಗೆ ಬೇಕಾದರೂ ಹೋಗಬಹುದು ಅನ್ನುವವರು ಅರ್ಥ ಮಾಡಿಕೊಳ್ಳಬೇಕಿರುವುದು ಒಂದಿದೆ. ಸಂವಿಧಾನವೆನ್ನುವುದು ಇರುವುದು ಜನರಿಗಾಗಿ. ಜನರ (ಯಾರೋ ಒಂದು ಭಾಷಿಕ ಜನರಲ್ಲ, ಎಲ್ಲ ಭಾಷಿಕರು) ಒಳಿತಿಗಾಗಿ ಸಂವಿಧಾನವನ್ನು ತಿದ್ದುವ ಕೆಲಸ ಮಾಡಿದರೆ ತಪ್ಪಿಲ್ಲ. ಮಿತಿ ಮೀರಿದ ವಲಸೆಯಿಂದ ಮುಂಬೈ ಅನ್ನುವುದು ಕೊಳಗೇರಿಯ ನಗರವಾಗಿದೆ ಅಲ್ಲಿನ ಮೂಲಭೂತ ಸೌಕರ್ಯವೆಲ್ಲವೂ ಹಳಿತಪ್ಪಿವೆ ಅನ್ನುವುದು ಅಲ್ಲಿಯ ಜನರ ಅನಿಸಿಕೆ. ಬೆಂಗಳೂರಿನಂತಹ ಊರಲ್ಲೂ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ದೊಡ್ಡ ಮಟ್ಟದಲ್ಲೇ ಎಲ್ಲರನ್ನೂ ಕಾಡುತ್ತಿವೆ. ವಲಸೆಯನ್ನು ನಿಯಂತ್ರಿಸುವ, ಆಯಾ ನಾಡಿನ ಸ್ಥಳೀಯತೆ, ಬದುಕು, ಸಂಸ್ಕೃತಿ ಮೂರಾಬಟ್ಟೆ ಮಾಡುವಂತಹ ವಲಸೆಯನ್ನು ನಿಯಂತ್ರಿಸುವ ಹಕ್ಕು ಪ್ರತಿ ರಾಜ್ಯಕ್ಕೂ ಕೊಡುವ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯಲು ಇದು ಸಕಾಲ. ಅದು ಬಿಟ್ಟು ಮಾತೆತ್ತಿದರೆ ಸಂವಿಧಾನದ ಹೆಸರು ಹೇಳಿ ಏನು ಮಾಡೋಕಾಗಲ್ಲ ಎಂದು ಕೈ ಚೆಲ್ಲುವ ಧೋರಣೆ ಬಿಡಲು ವಲಸೆಯಿಂದ ತತ್ತರಿಸಿರುವ ರಾಜ್ಯಗಳೆಲ್ಲ ಮುಂದಾಗಬೇಕಿದೆ.

ಕೊನೆಹನಿ: ಸರಿಯಾದ ಮಾಧ್ಯಮವಾಗಿದ್ದರೆ " ಹೌದು, ರಾಹುಲ್ ಗಾಂಧಿ ಹೇಳಿದ್ದು ಸರಿಯಿದೆ.ಪ್ರತಿ ರಾಜ್ಯವೂ ತನ್ನ ಏಳಿಗೆಗೆ ದುಡಿಯಬೇಕು. ಪ್ರತಿ ರಾಜ್ಯದ ಸರ್ಕಾರವೂ ಅಲ್ಲಿನ ಜನರ ಹಿತ ಕಾಯಲೆಂದೇ ಅಧಿಕಾರಕ್ಕೆ ಬಂದಿರುವುದು, ಅಲ್ಲಿನ ಜನರಿಗೆ ದುಡಿಮೆ, ಬದುಕು ರೂಪಿಸುವ ಕೆಲಸ ಮಾಡಬೇಕು. ಪ್ರತಿ ರಾಜ್ಯದ ಅನನ್ಯತೆ, ಸಂಸ್ಕೃತಿ, ನುಡಿ, ಬದುಕು ಎಲ್ಲವೂ ಉಳಿಯಬೇಕು, ಅದಕ್ಕೆ ಮಾರಕವಾಗುವ ವಲಸೆಗೆ ನಿಯಂತ್ರಣವಿರಬೇಕು" ಎಂದು ಮಾತಾಡುತ್ತಿದ್ದರೋ ಇಲ್ಲವೇ "ಇಂತಹ ಹೇಳಿಕೆ ಮೂಲಕ ಮೂಲಭೂತವಾದಿಗಳಿಗೂ ಇವರಿಗೂ ಯಾವ ಅಂತರವೂ ಇಲ್ಲ" ಅನ್ನುವ ಬಾಲಿಶವಾದ ಮಾತಾಡುತ್ತಿದ್ದರೋ ನೀವೇ ಊಹಿಸಿ.

ಮಂಗಳವಾರ, ನವೆಂಬರ್ 8, 2011

ದೆಹಲಿ, ಚೆನ್ನೈ ಮೆಟ್ರೊಗೂ ಬೆಂಗಳೂರಿನ ನಮ್ಮ ಮೆಟ್ರೊಗೂ ಏನ್ ವ್ಯತ್ಯಾಸ ಗೊತ್ತಾ? ..

(ದೆಹಲಿಯ ಮೆಟ್ರೋದಲ್ಲಿ ಭಾಷಾ ಆಯ್ಕೆ ಹಿಂದೀ/ ಇಂಗ್ಲೀಷ್)
ನಮ್ಮ ಮೆಟ್ರೋ ಮಿಂಬಲೆಗೆ ಯಾವಾಗಾದ್ರೂ ಭೇಟಿ ನೀಡಿದ್ದೀರಾ? ಅದಕ್ಕಿಂತ ಮೊದಲು ಭಾರತದ ರಾಜಧಾನಿ ದೆಹಲಿಯ ಮೆಟ್ರೋ ಮಿಂಬಲೆಯನ್ನು ತೆರೆದು ನೋಡಿ. ಇದರ ಮುಖಪುಟ ಇಂಗ್ಲೀಷಿನಲ್ಲಿ ತೆರೆದುಕೊಳ್ಳುತ್ತದೆ. ದೆಹಲಿ ಮೆಟ್ರೋದ ಹೆಸರು "ದೆಹಲಿ ಮೆಟ್ರೋ" ಅಂತಾ. ಇದರ ಮಿಂಬಲೆಯಲ್ಲಿ ಹಿಂದೀ ಭಾಷೆಯ ಆಯ್ಕೆಯೂ ಇದೆ. ದೆಹಲಿ ಮೆಟ್ರೋದ ಅಧಿಕಾರಿಗಳ ಈ ಪಟ್ಟಿಯನ್ನೊಮ್ಮೆ ನೋಡಿ ಬಿಡಿ. ಎಷ್ಟು ಜನ ಹಿಂದೀ ಅಧಿಕಾರಿಗಳಿದ್ದಾರೆ ಅಂತಾ ಹಾಗೇ ಲೆಕ್ಕ ಹಾಕ್ಕೊಂಡ್ಬುಡಿ.
ಈಗ ಇಲ್ಲಿ ಬನ್ನಿ... ಇನ್ನೂ ಯೋಜನಾ ಹಂತದಲ್ಲಿರೋ ಚೆನ್ನೈ ಮೆಟ್ರೋ ಮಿಂಬಲೆಯನ್ನು ಈಗ ತೆರೆಯೋಣ. 
(ಚೆನ್ನೈ ಮೆಟ್ರೋದಲ್ಲಿ ಭಾಷಾ ಆಯ್ಕೆ ಇಂಗ್ಲೀಷ್/ ತಮಿಳು)
ಚೆನ್ನೈ ಮೆಟ್ರೋದ ಹೆಸರು "ಚೆನ್ನೈ ಮೆಟ್ರೋ ರೈಲ್" ಅಂತಾ. ಇದರ ಮಿಂಬಲೆ ತೆರೆದು ಕೊಳ್ಳುವುದು ಇಂಗ್ಲೀಷಿನಲ್ಲೇ... ಇದರಲ್ಲಿ ತಮಿಳು ಭಾಷೆಯ ಆಯ್ಕೆಯ ಅವಕಾಶವೂ ಇದೆ. ಇದರ ಅಧಿಕಾರಿಗಳ ಪಟ್ಟಿಯನ್ನೂ ನೋಡಿ. ಇದರಲ್ಲಿ ಎಷ್ಟು ಜನ ತಮಿಳು ಭಾಷಿಕರಿದ್ದಾರೆ ಅನ್ನೋದನ್ನೊಂದು ಸಲ ಗುರುತಿಟ್ಟುಕೊಂಡುಬಿಡಿ. 

ಈಗ ಬನ್ನಿ, ಬೆಂಗಳೂರಿನ ನಮ್ಮ ಮೆಟ್ರೋ ಮಿಂಬಲೆಗೆ. ಏನು ಕಾಣುಸ್ತಿದೆ? ಇಂಗ್ಲೀಷಿನ ಮುಖಪುಟವಾ? ದಿಲ್ಲೀಲೂ ಚೆನ್ನೈಲೂ ಅದೇ ಕಾಣೋದಲ್ವಾ? ಮತ್ತೇನು ಹುಡುಕ್ತಿದೀರಾ? ಭಾಷಾ ಆಯ್ಕೆ? ಕನ್ನಡ ಇಲ್ಲಾ ಅಂತಾ ಬೇಸರಾನಾ? ಸ್ವಾಮಿ ಹಾಗೆಲ್ಲಾ ಹುಡುಕಕ್ಕೆ ಹೋಗಿ ಬೇಸರವಾಗಿ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಪತ್ರ ಗಿತ್ರಾ ಬರೆದೀರಾ ಜೋಕೆ! 

(ಬೆಂಗಳೂರಿನ ನಮ್ಮ ಮೆಟ್ರೋಲಿ ಭಾಷಾ ಆಯ್ಕೆಯೇ ಇಲ್ಲ...)
ಅದರ ಮುಖ್ಯಸ್ಥರೇ ನಿಮಗೆ ಖುದ್ದಾಗಿ ಉತ್ತರ ಬರೆದು "ಕನ್ನಡಿಗರು ಸಹನಶೀಲರು. ದಯವಿಟ್ಟು ನೀವು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಈ ರೀತಿಯ ಭಾಷಾ ದುರಭಿಮಾನ ಸಲ್ಲದು. ಈ ತಾಣಕ್ಕೆ ಪರಭಾಷಿಕರು ಬರುತ್ತಾರೆ ಹಾಗಾಗಿ ಇಂಗ್ಲೀಷು ಹಾಕಿದ್ದೀವಿ..ನೀವು ಹೀಗೆ ಆಕ್ಷೇಪಿಸುವುದು ನಿಮ್ಮ ಪರಭಾಷಾ ದ್ವೇಷದ ಮನಸ್ಥಿತಿ ತೋರಿಸುತ್ತದೆ..." ಎಂದಾರು!

ನಮ್ಮ ಮೆಟ್ರೋಲಿ ಮಾತ್ರಾ ಯಾಕೆ ಕನ್ನಡ ಆಯ್ಕೆ ಇಲ್ಲಾ ಅಂತಾ ಯೋಚಿಸೋ ಮೊದಲು ಇದರ ಅಧಿಕಾರಿಗಳ ಹೆಸರಿನ ಪಟ್ಟಿಯನ್ನೊಮ್ಮೆ ನೋಡಿ. ಎಷ್ಟು ಜನ ಕನ್ನಡದವರಿದ್ದಾರೆ ಹುಡುಕ್ಕೊಳ್ಳಿ. ಏನು? ದುರ್ಬೀನು ಬೇಕಾ?