ಭಾನುವಾರ, ಮಾರ್ಚ್ 31, 2013

ಕರ್ನಾಟಕ ಕೇಂದ್ರಿತ ರಾಜಕಾರಣದ ಅನಿವಾರ್ಯತೆ


ಮತ್ತೆ ಚುನಾವಣೆ ಬಂದಿದೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿ  ಪ್ರಾದೇಶಿಕ ಪಕ್ಷಗಳು ದೊಡ್ಡ ಮಟ್ಟದಲ್ಲಿ ಸ್ಪರ್ಧೆಗೆ ಸಜ್ಜಾಗಿವೆ. ಕಳೆದ ಐದು ವರ್ಷದಲ್ಲಿ ರಾಜ್ಯ ರಾಜಕಾರಣ ತಲುಪಿರುವ ಸ್ಥಿತಿಯಿಂದ ಸಾಕಷ್ಟು ಜನರಿಗೆ ಚುನಾವಣಾ ವ್ಯವಸ್ಥೆಯ ಬಗ್ಗೆಯೇ ಒಂದು ರೀತಿಯಲ್ಲಿ ಭ್ರಮ ನಿರಸನವಾಗಿ ಮತದಾನದಿಂದಲೇ ದೂರ ಉಳಿಯುವ ನಿರ್ಧಾರ ಕೈಗೊಂಡರೂ ಅಚ್ಚರಿಯಿಲ್ಲ. ಆದರೆ ಸಮಸ್ಯೆಗೆ ದೂರ ಉಳಿಯುವುದು ಪರಿಹಾರವಲ್ಲವೇ ಅಲ್ಲ. ಎಂತಹುದೇ ಕೆಡುಕಿನ ಸ್ಥಿತಿಯಲ್ಲಿದ್ದರೂ ಪ್ರತಿ ಐದು ವರ್ಷಕ್ಕೊಮ್ಮೆ ಅದನ್ನು ಸರಿಪಡಿಸಿಕೊಳ್ಳಲು ಸಿಗುವ ಒಂದೇ ಒಂದು ಅಸ್ತ್ರ ಮತದಾನ. ಅದನ್ನು ಕನ್ನಡಿಗ ಅನ್ನುವ ಐಡೆಂಟಿಟಿ ಇಟ್ಟುಕೊಂಡು ಸರಿಯಾಗಿ, ಅಳೆದು, ತೂಗಿ ಚಲಾಯಿಸುವ ಹೊಣೆ ನಮ್ಮೆಲ್ಲರದ್ದು. ಇರಲಿ, ಭಾರತ ಒಕ್ಕೂಟದಲ್ಲಿ ಕರ್ನಾಟಕದ ಸಮಸ್ಯೆಗಳಿಗೆ ರಾಜಕೀಯವಾದ ಪರಿಹಾರ ಕಂಡುಕೊಳ್ಳುವಲ್ಲಿ ಕನ್ನಡಿಗರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು ಮತ್ತು ಮತದಾನದಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯವಾದ ಕೆಲಸ ಎಂದು ಹೇಳಲು ಮೇಲಿನ ಒಂದೆರಡು ಮಾತು ಬರೆದೆ. ಆದರೆ ಇವತ್ತು ಹೇಳ ಹೊರಟಿದ್ದು ಇನ್ನೆನೋ ಇದೆ. ಅದು ಈ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜಕೀಯವಾಗಿ ಎಂತಹ ದಿಗಿಲಿನ  ಸ್ಥಿತಿಯಲ್ಲಿದೆ, ಕನ್ನಡ-ಕರ್ನಾಟಕ-ಕನ್ನಡಿಗನ ಬದುಕಿನ ಸವಾಲುಗಳಿಗೆ ರಾಜಕೀಯವಾದ ಪರಿಹಾರ ಕಂಡುಕೊಳ್ಳುವಲ್ಲಿ ಎಷ್ಟು ಕೆಟ್ಟದಾಗಿ ಎಡವಿದ್ದೇವೆ ಮತ್ತು ಈ ಹೊತ್ತಿನಲ್ಲಿ ಇದಕ್ಕೆ ಪರಿಹಾರವಾಗಿ  ಕನ್ನಡಿಗರಲ್ಲಿ ರಾಜಕೀಯ ಪ್ರಜ್ಞೆ ಯಾಕೆ ಬೆಳೆಯಬೇಕಿದೆ? ಯಾರು ಏನೇ ಅಂದುಕೊಂಡರೂ ನಮ್ಮ ಸುತ್ತ ಮುತ್ತಲಿನ ಪ್ರತಿಯೊಂದು ವಿಷಯವನ್ನು "ಕನ್ನಡಿಗರ ಹಿತಾಸಕ್ತಿ" ಅನ್ನುವ ಕಣ್ಣಿನಿಂದ ಮಾತ್ರ ನೋಡಬೇಕಾದ ಸಂದರ್ಭ ಯಾಕೆ ಬಂದಿದೆ ಅನ್ನುವುದರ ಕುರಿತು ನನ್ನ ಅನಿಸಿಕೆ ಬರೆಯಲು ಈ ಬರಹ.

ಟಿಕೇಟ್ ಹಂಚಿಕೆಯೇ ಕನ್ನಡಿಗರ ಸಮಸ್ಯೆಯೇ?
ಚುನಾವಣೆ ಘೋಷಣೆಯಾಗಿ ಹೆಚ್ಚು ಕಮ್ಮಿ ಎರಡು ವಾರ ಆಗಿದೆ. ಈ ಎರಡು ವಾರದಲ್ಲಿ ಪತ್ರಿಕೆ, ಸುದ್ದಿವಾಹಿನಿಗಳನ್ನು ಗಮನಿಸಿದ್ದರೆ ಏನು ಕಾಣುತ್ತೆ? ಅಲ್ಲೇನಾದರೂ ಕರ್ನಾಟಕ ಕೇಂದ್ರಿತವಾಗಿ ಯಾರು ಏನು ಮಾಡುತ್ತಾರೆ? ಕನ್ನಡಿಗರ ಸಮಸ್ಯೆಗಳಿಗೆ ಯಾರ ಬಳಿ ಏನು ಪರಿಹಾರವಿದೆ ಅಂತೇನಾದ್ರೂ ಕಾಣುತ್ತಾ? ಖಂಡಿತ ಇಲ್ಲ. ಕಳೆದ ಎರಡು ವಾರದಿಂದ ಚುನಾವಣೆಗೆ ಸಂಬಂಧಿಸಿದಂತೆ ಕಾಣುತ್ತಿರುವ ಒಂದೇ ಒಂದು ಸುದ್ದಿ ಅಂದರೆ ಟಿಕೇಟ್ ಹಂಚಿಕೆ. ಹಾಗಿದ್ದರೆ ಟಿಕೇಟ್ ಹಂಚಿಕೆಯೇ ಕನ್ನಡಿಗರ ಎದುರಿರುವ ಅತಿ ದೊಡ್ಡ ಸಮಸ್ಯೆಯೇ? ಯಾಕೆ ನಮ್ಮ ರಾಜಕೀಯದ ಡಿಸ್-ಕೋರ್ಸ್ ಇಂತಹ ಸಣ್ಣ ವಿಷಯಗಳತ್ತ ಗಿರಕಿ ಹೊಡೆಯುತ್ತಿದೆ? ಕನ್ನಡಿಗರ ಮುಂದೆ ದೊಡ್ಡ ಸಮಸ್ಯೆಗಳು, ಸವಾಲುಗಳೇ ಇಲ್ಲವೇ? ರೈಲು, ರಸ್ತೆ, ಅನುದಾನ, ತೆರಿಗೆ ಹಂಚಿಕೆ, ಕಲಿಕೆ, ನೆರೆ ಪರಿಹಾರ, ಬರ ಪರಿಹಾರ, ನದಿ ನೀರಿನ ಹಂಚಿಕೆ, ಗಡಿ ವಿವಾದ ಹೀಗೆ ಕನ್ನಡಿಗರ ಬದುಕನ್ನು ನೇರವಾಗಿ ತಟ್ಟುವ ಹತ್ತಾರು ಸಮಸ್ಯೆಗಳು ಯಾಕೆ ನಮ್ಮ ಚುನಾವಣೆಯ ವೇದಿಕೆಯ ಮೇಲೆ ಈ ಹೊತ್ತಲ್ಲಿ ಅತ್ಯಂತ ಗಟ್ಟಿಯಾಗಿ ಕೇಳಿಸುತ್ತಿಲ್ಲ, ಪ್ರಸ್ತುತವಾಗಿ ಕಾಣಿಸುತ್ತಿಲ್ಲ? 
ಕಾವೇರಿ ಅನ್ಯಾಯ ಟ್ರಿವಿಯಲ್ ಆದ ವಿಷಯವೇ?
ಬಹಳ ಹಿಂದೆ ಹೋಗಬೇಕಿಲ್ಲ. ಬರೀ ಒಂದು ತಿಂಗಳ ಹಿಂದೆ ಮುಂದೆಂದೂ ಸರಿಪಡಿಸಿಕೊಳ್ಳಲಾಗದ ರೀತಿಯಲ್ಲಿ ಕಾವೇರಿ ನದಿ ನೀರಿನ ಹಂಚಿಕೆಯ ಐತೀರ್ಪಿನಲ್ಲಾದ ಅನ್ಯಾಯವನ್ನು ಕೇಂದ್ರದ ಕಾಂಗ್ರೆಸ್ ಸರ್ಕಾರ ಗೆಜೆಟ್ಟಿನಲ್ಲಿ ಪ್ರಕಟಿಸಿದೆ. ಕಾವೇರಿ ಕೊಳ್ಳದ ಮೇಲೆ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗೆ ಬೀರಲಿದೆ ಅನ್ನುವ ಚಿಕ್ಕ ಕಲ್ಪನೆಯೂ ಕೊಳ್ಳದ ರೈತರಲ್ಲಿ, ಜನಸಾಮಾನ್ಯರಲ್ಲಿ ಇದ್ದಂತಿಲ್ಲ.  ಈಗಾಗಲೇ ಕೊಳ್ಳದ ರೈತರು ಕಬ್ಬು ಬೆಳೆಯಬೇಡಿ, ಅದೇ ನೀರನ್ನು ಬೆಂಗಳೂರು ಎಂಬ ವಲಸಿಗರ ಸ್ವರ್ಗಕ್ಕೆ ಮೀಸಲಿಡಿ ಅನ್ನುವ ಮಾತುಗಳು ಕೇಂದ್ರದ ಅಧಿಕಾರಿಗಳಿಂದ ಕೇಳಿಬರುತ್ತಿವೆ. ಇಂತಹ ಸಂದರ್ಭ ಬಂದಾಗಲೂ  ಕಾವೇರಿಯ ವಿಷಯದ ಬಗ್ಗೆ ರಾಜಕೀಯವಾಗಿ ಮಾತನಾಡೋದೇ ತಪ್ಪು ಅನ್ನುವ ಮಾತನ್ನು ಮಾಧ್ಯಮದ ಹಲವು ವಲಯಗಳೇ ಹೇಳಿದ್ದನ್ನು ಕಂಡೆವು. ಜೆಡಿಎಸ್ ಈ ವಿಷಯವಾಗಿ ಮಾತನಾಡಿದರೆ ಅದು ರಾಜಕೀಯ ಮಾಡುತ್ತಿದೆ ಅನ್ನುವ ಆರೋಪ ಕಂಡೆವು.  ಇಂತಹ ಬದುಕಿನ ವಿಷಯಗಳನ್ನಿಟ್ಟುಕೊಂಡು ರಾಜಕೀಯ ಮಾಡದೇ ಇನ್ನಾವ ವಿಷಯದಲ್ಲಿ ಮಾಡಬೇಕು? ಸಾಹಿತ್ಯ ಸಮ್ಮೇಳನದಲ್ಲಿ ಬಿಸಿಲು ಜಾಸ್ತಿ ಇತ್ತು ಅನ್ನುವ ವಿಷಯಕ್ಕೆ ರಾಜಕೀಯ ಮಾಡಬೇಕೇ? ನಮ್ಮ ರಾಜಕೀಯವಾದ ಆದ್ಯತೆಗಳಿಗೆ ಏನಾಗಿದೆ? ನಾಳೆಯ ಭವಿಷ್ಯವನ್ನೇ ನಿರ್ಧರಿಸುವಂತಹ ವಿಷಯಗಳು ಯಾಕೆ ಒಂದು ರೀತಿಯಲ್ಲಿ ಟ್ರಿವಿಯಲೈಸ್ ಆಗಿವೆ? ಕಾವೇರಿ ಅನ್ಯಾಯ ಈ ಹೊತ್ತಿನ ಚುನಾವಣೆಯ ಚರ್ಚೆಯಲ್ಲಿ ಅತ್ಯಂತ ಮುಂದಿರಬೇಕಿದ್ದ ಪ್ರಶ್ನೆಯಾಗಿತ್ತಲ್ಲವೇ?  ಹಾಗಿದ್ದರೆ ನಮ್ಮ ರಾಜಕಾರಣಿಗಳು ಇಂತಹ ಬದುಕಿನ ವಿಷಯಗಳನ್ನು ಕೈ ಬಿಟ್ಟು ಟಿಕೆಟ್ ಹಂಚಿಕೆಯ ಸುತ್ತಲೇ ತಲೆ ಕೆಡಿಸಿಕೊಳ್ಳುವಂತಾಗಲು ಕಾರಣ ಯಾರು? "ಅಯ್ಯೋ ಬಿಡಿ ಸಾರ್, ರಾಜಕಾರಣಿಗಳೆಲ್ಲ ಸರಿಯಿಲ್ಲ" ಅಂತ ಸಿನಿಕರಾಗಿ ಇದಕ್ಕೆಲ್ಲ ನಮ್ಮ ರಾಜಕಾರಣಿಗಳನ್ನು ದೂರುವುದೇ ಪರಿಹಾರವೇ? 
ಕರ್ನಾಟಕ ಕೇಂದ್ರಿತ ರಾಜಕಾರಣದ ಅನಿವಾರ್ಯತೆ
ಇಲ್ಲ, ಸಮಸ್ಯೆ ಅವರಲ್ಲ. ರಾಜಕಾರಣಿಗಳು ಯಾವತ್ತು playing to the gallery ಅನ್ನುವಂತೆಯೇ ವರ್ತಿಸುವವರು, ಒಂದು ವಿಷಯ ಮುಖ್ಯವಾದದ್ದು ಎಂದು ಜನರಿಗೂ ಅನ್ನಿಸಿದೆ ಎಂದಾಗದ ಹೊರತು ಅವರೆಂದೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳರು. ಕರ್ನಾಟಕಕ್ಕೆ ಆಗುತ್ತಿರುವ ಸಾಲು ಸಾಲು ಅನ್ಯಾಯಗಳನ್ನು ಕನ್ನಡಿಗ ಅನ್ನುವ ಐಡೆಂಟಿಟಿ ಇಟ್ಟುಕೊಂಡು ನೋಡುವ ರಾಜಕೀಯ ಪ್ರಜ್ಞೆ ಇಲ್ಲದಿರುವುದು, ನಮ್ಮನ್ನು ತಟ್ಟುವ ಎಲ್ಲ ವಿಷಯಗಳಲ್ಲೂ ಕರ್ನಾಟಕದ ಹಿತಾಸಕ್ತಿ ಅನ್ನುವುದು ಎಲ್ಲಕ್ಕಿಂತ ಮುಖ್ಯವಾದದ್ದು ಅನ್ನುವ ನ್ಯಾರೆಟಿವ್ ನಮ್ಮ ಸಮಾಜದಲ್ಲಿ ಇಲ್ಲದಿರುವುದು ಇಂತಹ ವಿಷಯಗಳಿಗೆ ಸ್ಪಂದಿಸಲೇಬೇಕು ಅನ್ನುವ ಒತ್ತಡವನ್ನು ನಮ್ಮನ್ನು ಆಳುವವರ ಮೇಲೆ ತಂದಿಲ್ಲ ಅನ್ನಬಹುದು. ಜಾತಿ ರಾಜಕೀಯ, ಹಣ, ಹೆಂಡದ ಲೆಕ್ಕಾಚಾರದಲ್ಲೇ ಚುನಾವಣೆ ಗೆಲ್ಲಬಹುದು ಅಂತಿದ್ದಾಗ ಬದುಕಿನ ವಿಷಯಗಳತ್ತ ಆಳುವವರಿಗೆ ಇರಬೇಕಾದ ಗಮನ ಹೇಗೆ ತಾನೇ ಇದ್ದೀತು? ದೆಹಲಿಯವರು ಏನ್ ಅಂದ್ಕೊತಾರೆ, ಇನ್ನಾರೋ ಏನ್ ಅಂದ್ಕೊತಾರೆ ಅಂತ ಯೋಚಿಸುವುದನ್ನ ಬಿಟ್ಟು ನಮ್ಮ ಬದುಕಿನ ವಿಷಯಗಳು ಬಂದಾಗ ನಮ್ಮ ಹಿತ ಕಾಯುವ ರಾಜಕಾರಣವೇ ಸರಿಯಾದದ್ದು, 
ಕರ್ನಾಟಕ ಕೇಂದ್ರಿತ ರಾಜಕಾರಣವೇ rational ಆದದ್ದು ಅನ್ನುವ ದಿಟ ಕನ್ನಡಿಗರಲ್ಲಿ ಕಂಡಾಗಲೇ ಆಳುವವರು ನಮ್ಮ ಹೊಣೆ ಹೊತ್ತಾರು !  

ಪ್ರಾದೇಶಿಕ ಚಿಂತನೆ ಅನ್ನುವ ಸಿಸ್ಟಮಿಕ್ ಕರೆಕ್ಷನ್ !
ಇವತ್ತಿನ ಈ ಚುನಾವಣೆಯ ಸಂದರ್ಭದಲ್ಲಿ ಭಾರತ ಒಕ್ಕೂಟದಲ್ಲಿ ಕರ್ನಾಟಕಕ್ಕೆ ರೈಲು, ರಸ್ತೆ, ಅನುದಾನ, ತೆರಿಗೆ ಹಂಚಿಕೆ, ಕಲಿಕೆ, ನೆರೆ, ಬರ ಪರಿಹಾರ, ನದಿ ನೀರಿನ ಹಂಚಿಕೆ, ಗಡಿ ವಿವಾದ ಹೀಗೆ ಎಲ್ಲ ವಿಷಯಗಳಲ್ಲೂ ನ್ಯಾಯಸಮ್ಮತ ಅವಕಾಶಗಳು ಸಿಗುವಂತಾಗಲು ಕರ್ನಾಟಕ ಕೇಂದ್ರಿತವಾದ ಚಿಂತನೆ ಇರುವ ಪಕ್ಷಗಳಿಗೆ ಶಕ್ತಿ ತುಂಬುವ ಕೆಲಸ ಕನ್ನಡಿಗರು ಮಾಡಬೇಕಿದೆ. ಇಡೀ ಭಾರತ ಒಕ್ಕೂಟದ ಹೆಚ್ಚಿನ ರಾಜ್ಯಗಳಲ್ಲಿ ಅಲ್ಲಿನ ಏಳಿಗೆಗೆ ಪ್ರದೇಶದ ಆಶೋತ್ತರಗಳಿಗೆ ಸ್ಪಂದಿಸಬಲ್ಲ ಪಕ್ಷವೇ ಮುಖ್ಯ ಅನ್ನುವ ವಾದಕ್ಕೆ ಬೆಂಬಲ ಸಿಗುತ್ತಿರುವಾಗ, ಕೇಂದ್ರದ ಅತಿಯಾದ ಕೇಂದ್ರಿಕೃತ ವ್ಯವಸ್ಥೆಯಿಂದ ಆಗಿರುವ ತೊಡಕುಗಳಿಗೆ ತಾನೇತಾನಾದ ಕರೆಕ್ಶನ್ ಅನ್ನುವಂತೆ ಪ್ರಾದೇಶಿಕ ಚಿಂತನೆ ಬಲಗೊಳ್ಳುತ್ತಿರುವಾಗ ಕರ್ನಾಟಕ ಆ ದಿಕ್ಕಿನಲ್ಲಿ ಸಾಗಬೇಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಚುನಾವಣೆಯ ಚರ್ಚೆಯ ಡಿಸ್-ಕೋರ್ಸ್ ಕರ್ನಾಟಕ ಕೇಂದ್ರಿತ ರಾಜಕಾರಣದ ಅನಿವಾರ್ಯತೆಯನ್ನು ಕಟ್ಟಿಕೊಳ್ಳುವತ್ತ, ಕನ್ನಡಿಗ ಅನ್ನುವ ಗುರುತಿಗೆ ರಾಜಕೀಯದ ಬಲ ಪಡೆದುಕೊಳ್ಳುವತ್ತ ಸಾಗಬೇಕಿದೆ.  ಈ ನಿಟ್ಟಿನಲ್ಲಿ ಮಾಧ್ಯಮಗಳ, ಚಿಂತಕರ ಮತ್ತು ಕರ್ನಾಟಕ ಪರವಾದ ಎಲ್ಲ ಶಕ್ತಿಗಳ ಪಾತ್ರ ಹಿರಿದಿದೆ.
ಸರಣಿ ಬರಲಿದೆ: ಚುನಾವಣೆಗೆ ಇನ್ನು ಕೆಲವು ವಾರಗಳಿರುವುದರಿಂದ ಅಲ್ಲಿಯವರೆಗೆ ಕೇಂದ್ರ ರಾಜ್ಯದ ಕೊಡು-ಕೊಳ್ಳುವಿಕೆ, ಕರ್ನಾಟಕಕ್ಕಾದ ಅನ್ಯಾಯಗಳು, ಒಕ್ಕೂಟದಲ್ಲಿ ಕರ್ನಾಟಕ ಪಡೆದುಕೊಂಡಿದ್ದೇನು, ಕಳೆದುಕೊಂಡಿದ್ದೇನು ಅನ್ನುವ ಸುತ್ತ ಸರಣಿ ಬರಹಗಳನ್ನು ಬರೆಯಲಿದ್ದೇನೆ. ಎಂದಿನಂತೆ ಓದಿ ನಿಮ್ಮ ಅನಿಸಿಕೆಗಳನ್ನು ಬರೆಯಿರಿ.

ಭಾನುವಾರ, ಮಾರ್ಚ್ 17, 2013

GST ಮತ್ತು ಒಕ್ಕೂಟ ವ್ಯವಸ್ಥೆ

ಹೆಚ್ಚಿನ ರಾಜ್ಯಗಳು ಒಪ್ಪಿಗೆ ಸೂಚಿಸುವುದರೊಂದಿಗೆ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಇನ್ನೇನು ಜಾರಿಗೆ ಬರುವ ದಿನಗಳು ಹತ್ತಿರದಲ್ಲಿವೆ. ಏನಿದು ಜಿ.ಎಸ್.ಟಿ, ಅದರಿಂದಾಗುವ ಲಾಭವೇನು? ಯಾಕೆ ರಾಜ್ಯಗಳು ಅದನ್ನು ವಿರೋಧಿಸುತ್ತಿವೆ, ಒಕ್ಕೂಟ ವ್ಯವಸ್ಥೆಯ ಮೇಲೆ ಇದರ ಪರಿಣಾಮಗಳೇನು ಅನ್ನುವುದದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಈ ಅಂಕಣ.

ಭಾರತ ಒಕ್ಕೂಟದ ತೆರಿಗೆ ವ್ಯವಸ್ಥೆಯ ಮೇಲೊಂದು ಹಕ್ಕಿ ನೋಟ
ಭಾರತದ ಸಂವಿಧಾನ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಬೇರ ಬೇರೆ ರೀತಿಯ ತೆರಿಗೆ ಸಂಗ್ರಹಿಸುವ ಅಧಿಕಾರ ನೀಡಿದೆ. ಕೇಂದ್ರ ಸರ್ಕಾರ ನೇರ ತೆರಿಗೆಗಳಾದ ಜನರ ಆದಾಯ ತೆರಿಗೆ, ಕಂಪನಿಗಳ ಕಾರ್ಪೊರೇಟ್ ತೆರಿಗೆ ಹಾಗೂ ವಾರೆ (ಇಂಡೈರೆಕ್ಟ್) ತೆರಿಗೆಗಳಾದ ಸೇವಾ ತೆರಿಗೆ, ಕಸ್ಟಮ್ಸ್ ಮತ್ತು ಒಳನಾಡ ತೆರಿಗೆ(ಎಕ್ಸೈಸ್) ಸಂಗ್ರಹಿಸಿದರೆ, ರಾಜ್ಯ ಸರ್ಕಾರಗಳ ತೆರಿಗೆ ವ್ಯಾಪ್ತಿಗೆ ವ್ಯಾಟ್, ಮಾರಾಟ ತೆರಿಗೆ ಮತ್ತು ಕೆಲ ಸ್ಥಳೀಯ ತೆರಿಗೆಗಳು ಬರುತ್ತವೆ. ರಾಜ್ಯವೊಂದರಿಂದ ಕೇಂದ್ರಕ್ಕೆ ಹೋಗುವ ತೆರಿಗೆಗೆ ಹೋಲಿಸಿದರೆ ರಾಜ್ಯ ಸಂಗ್ರಹಿಸುವ ತೆರಿಗೆಯ ಪ್ರಮಾಣ ಬಹಳ ಸಣ್ಣದೇ ಅನ್ನಬಹುದು. ಕೇಂದ್ರ ಸಂಗ್ರಹಿಸಿದ ತೆರಿಗೆಯಲ್ಲಿ ಕೆಲ ಪಾಲನ್ನು ರಾಜ್ಯಗಳಿಗೆ ಹಣಕಾಸು ಆಯೋಗವು ನಿರ್ಧರಿಸಿದಂತೆ ಮರಳಿ ಹಂಚಲಾಗುತ್ತದೆ. ಸಂವಿಧಾನ ಕೊಟ್ಟಿರುವ ಅವಕಾಶಗಳಡಿ ಕೇಂದ್ರ ಒಂದು ಸರಕಿನ ತಯಾರಿಕೆ ಮತ್ತು ಸೇವೆಯ ಮೇಲೆ ತೆರಿಗೆಯನ್ನು ವಿಧಿಸಬಹುದಾಗಿದ್ದರೆ, ಸರಕಿನ ಮೇಲೆ ಮಾರಾಟದ ತೆರಿಗೆ ಹಾಕುವ ಹಕ್ಕನ್ನು ರಾಜ್ಯಗಳಿಗೆ ನೀಡಿದೆ. ರಾಜ್ಯಗಳಿಗೆ ಆಮದು ಸುಂಕ ಹಾಕುವ ಅವಕಾಶವೂ ಇಲ್ಲ. ಈ ಮುಂಚಿನ ತೆರಿಗೆ ಪದ್ದತಿಯಲ್ಲಿ ಜನರು ಬೇರೆ ಬೇರೆ ಹಂತದಲ್ಲಿ ತೆರಿಗೆ ಕಟ್ಟಬೇಕಾಗಿತ್ತು. ಅಂದರೆ ಒಂದು ಉತ್ಪನ್ನಕ್ಕೆ ಬಳಸುವ ಮೂಲವಸ್ತುವಿನ ಖರೀದಿಯಿಂದ ಹಿಡಿದು ಉತ್ಪಾದನೆ, ಹಂಚಿಕೆ, ಸಾಗಾಟ ಕೊನೆಯಲ್ಲಿ ಗ್ರಾಹಕನಿಗೆ ಮಾರುವ ಹಂತದವರೆಗೆ ಪ್ರತಿ ಹಂತದಲ್ಲೂ ತೆರಿಗೆ ಕಟ್ಟಬೇಕಾದ ಅಗತ್ಯವಿತ್ತು. ಸರಿಯಾದ ವ್ಯವಸ್ಥೆಯಲ್ಲಿ ಉತ್ಪಾದಕನೊಬ್ಬ ಒಂದು ವಸ್ತುವಿಗೆ ತನ್ನ ಮಟ್ಟದಲ್ಲಿ ತಾನು ಸೇರಿಸಿದ ಮೌಲ್ಯ ವರ್ಧನೆಗೆ ತಕ್ಕುದಾಗಿ ತೆರಿಗೆ ಕಟ್ಟುವ ಹಾಗಿರಬೇಕಿತ್ತು. ಹಾಗಿರದೇ ಇದ್ದ ವ್ಯವಸ್ಥೆಯಿಂದಾಗಿ ಉತ್ಪಾದಕರು ಅತಿ ಹೆಚ್ಚಿನ ತೆರಿಗೆ ಕಟ್ಟುವ ಒತ್ತಡಕ್ಕೊಳಗಾಗುತ್ತಿದ್ದರು. ಇದರಿಂದ ಸಹಜವಾಗಿಯೇ ತೆರಿಗೆ ವ್ಯವಸ್ಥೆಯಿಂದಲೇ ಆಚೆ ಉಳಿಯುವ, ತೆರಿಗೆ ವಂಚಿಸುವವರ ಸಂಖ್ಯೆ ಹೆಚ್ಚಿತ್ತು. ಈ ಸಮಸ್ಯೆಗೆ ಪರಿಹಾರವೆಂಬಂತೆ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಅನ್ನು ಕೆಲ ವರ್ಷಗಳ ಹಿಂದೆ ಪರಿಚಯಿಸಲಾಯಿತು. ವ್ಯಾಟ್ ಹೆಚ್ಚಾಗಿ ಸರಕುಗಳ ಮೇಲೆ ಹಾಕುವ ತೆರಿಗೆಯಾಗಿದ್ದರೆ ಹೊಸತಾಗಿ ಪರಿಚಯಗೊಳ್ಳುತ್ತಿರುವ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಹೆಸರೇ ಸೂಚಿಸುವಂತೆ ಸರಕಿನೊಂದಿಗೆ ಸೇವೆಯ ಮೇಲೂ ತೆರಿಗೆ ವಿಧಿಸುವ ಅವಕಾಶ ಹೊಂದಿದೆ.

ಏನಿದು ಜಿ.ಎಸ್.ಟಿ?
ಜಿ.ಎಸ್.ಟಿ ಒಂದು ತೆರಿಗೆ ಸುಧಾರಣೆಯಲ್ಲಿನ ಮಹತ್ವದ ಕ್ರಮವೆಂದೇ ಬಿಂಬಿತವಾಗಿದೆ. 1991ರಿಂದಾಚೆ ನಡೆಯುತ್ತಿರುವ ಆರ್ಥಿಕ ಸುಧಾರಣೆಗಳಲ್ಲಿ ಅತ್ಯಂತ ಮಹತ್ವದ್ದು ಕೂಡ ಅನ್ನಿಸಿಕೊಂಡಿದೆ. ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿರುವ ಹತ್ತಾರು ಗೋಜಲಿನ ವಾರೆ ತೆರಿಗೆಗಳ ಜಾಗದಲ್ಲಿ ಈ ಎಲ್ಲ ತೆರಿಗೆಗಳನ್ನು ಒಂದಾಗಿಸಿದ ಹೊಸತೊಂದು ತೆರಿಗೆ ಮಾದರಿ ಜಿ.ಎಸ್.ಟಿ ಅನ್ನಬಹುದು. ಆರ್ಥಿಕ ತಜ್ಞ ವಿಜಯ್ ಕೇಲ್ಕರ್ ಮುಂದಾಳತ್ವದ ಸಮಿತಿ ಕೇಂದ್ರ ಮತ್ತು ರಾಜ್ಯ ಮಟ್ಟದ ಎಲ್ಲ ಪರೋಕ್ಷ ತೆರಿಗೆಗಳನ್ನು ಒಂದಾಗಿಸಿ ದೇಶಕ್ಕೆ ಒಂದೇ ಜಿ.ಎಸ್.ಟಿ ತರುವ ಪ್ರಸ್ತಾವನೆಯನ್ನು ಮುಂದೆ ತಂದಿದ್ದರು. ಆ ಪ್ರಸ್ತಾವನೆಯಂತೆ ಎಲ್ಲ ತೆರಿಗೆಗಳನ್ನು ಕೇಂದ್ರವೇ ಸಂಗ್ರಹಿಸಿ ಆನಂತರ ರಾಜ್ಯಗಳಿಗೆ ಸೂತ್ರವೊಂದರ ಅನ್ವಯ ಹಂಚುವ ಸಲಹೆ ನೀಡಿದ್ದರು. ಮೊದಲೇ ಸಂಪನ್ಮೂಲಗಳ ಕೊರತೆ ಅನುಭವಿಸುತ್ತಿರುವ ರಾಜ್ಯಗಳು ತಮ್ಮ ಕೈಯಲ್ಲಿನ ಚಿಕ್ಕ ಪುಟ್ಟ ತೆರಿಗೆ ಸಂಗ್ರಹಿಸುವ ಅವಕಾಶವನ್ನು ಕಿತ್ತುಕೊಳ್ಳುವ ಕೇಂದ್ರದ ನಡೆಯನ್ನು ಸಹಜವಾಗಿಯೇ ವಿರೋಧಿಸಿದ್ದರ ಪರಿಣಾಮವಾಗಿ ಈಗ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸುವಂತೆ ಇಬ್ಬಗೆಯ (ಡ್ಯುಯಲ್ ) ಜಿ.ಎಸ್.ಟಿ ತೆರಿಗೆಯನ್ನು ತರುವ ಪ್ರಯತ್ನ ನಡೆಯುತ್ತಿದೆ. ಈ ಸುಲಭವಾದ ತೆರಿಗೆ ಪದ್ದತಿಯಿಂದ ಭಾರತ ಒಕ್ಕೂಟದ ಜಿ.ಡಿ.ಪಿ ಕಡಿಮೆಯೆಂದರೂ 1.5% ಏರಿಕೆ ಕಾಣುವ ನಿರೀಕ್ಷೆಯನ್ನು ಆರ್ಥಿಕ ತಜ್ಞರು ವ್ಯಕ್ತ ಪಡಿಸುತ್ತಾರೆ. ಸರಿ ಸುಮಾರು 75.000 ಕೋಟಿ ರೂಪಾಯಿಯಷ್ಟು ಹೆಚ್ಚಿನ ತೆರಿಗೆಯನ್ನು ಸಂಗ್ರಹಿಸುವ ಸಾಧ್ಯತೆ ಇದೆ ಅನ್ನುತ್ತಾರೆ ಪರಿಣಿತರು.

ಯಾರಿಗೆ ಏನು ಲಾಭ?

ಜಿ.ಎಸ್.ಟಿ ವ್ಯವಸ್ಥೆ ಜಾರಿಗೆ ಬಂದ ಮೇಲೆ ಯಾವುದೇ ವಸ್ತುವಿನ ಮೇಲಿನ ಕೇಂದ್ರ ಮತ್ತು ರಾಜ್ಯ ಜಿ.ಎಸ್.ಟಿ ತೆರಿಗೆಯನ್ನು ಮಾರಾಟದ ಹಂತದಲ್ಲಿ (ಪಾಯಿಂಟ್ ಆಫ್ ಸೇಲ್) ಸಂಗ್ರಹಿಸಲಾಗುವುದು. ಉತ್ಪಾದನೆಗೆ ತಗಲಿರುವ ವೆಚ್ಚದ ಮೇಲೆ ಈ ಎರಡೂ ತೆರಿಗೆಗಳನ್ನು ವಿಧಿಸಲಾಗುವುದು. ಈ ಮೊದಲಿನ ವ್ಯವಸ್ಥೆಯಲ್ಲಿದ್ದ ಪರೋಕ್ಷ ತೆರಿಗೆಗಳಾದ ಸೇವಾ ತೆರಿಗೆ, ಮಾರಾಟ ತೆರಿಗೆ, ಒಳಬರುವ ತೆರಿಗೆ, ಒಳನಾಡ ತೆರಿಗೆ, ಸೆಸ್, ಸರ್ಚಾರ್ಜ್, ವ್ಯಾಟ್, ರಾಜ್ಯ-ರಾಜ್ಯಗಳ ನಡುವಿನ ಮಾರಾಟ ತೆರಿಗೆ ಎಲ್ಲದರ ಜಾಗದಲ್ಲಿ ಕೇವಲ ಕೇಂದ್ರ ಮತ್ತು ರಾಜ್ಯ ಜಿ.ಎಸ್.ಟಿಗಳು ಮಾತ್ರ ಅನ್ವಯಿಸಲಿವೆ. ಹತ್ತಾರು ಗೋಜಲಿನ ತೆರಿಗೆಗಳು ದೂರವಾಗುವುದರಿಂದ ಗ್ರಾಹಕರಿಗೆ ನೇರವಾಗಿ ಅದರ ಲಾಭ ದೊರಕಲಿದೆ. ಕಡಿಮೆಯಾದ ಬೆಲೆಯಿಂದ ಹೆಚ್ಚುವ ಕೊಳ್ಳುವಿಕೆಯಿಂದ ಕಂಪನಿಗಳಿಗೂ ಹೆಚ್ಚಿನ ವ್ಯಾಪಾರದಿಂದ ಲಾಭವಾಗಲಿದೆ. ಜೊತೆಯಲ್ಲೇ ಉತ್ಪಾದಕರಿಗೆ ತಗಲುವ ತೆರಿಗೆ ಪ್ರಮಾಣ ದೊಡ್ಡ ಮಟ್ಟದಲ್ಲಿ ಕಡಿಮೆಯಾಗುವುದರಿಂದ ಅವರು ತೆರಿಗೆ ಕದಿಯದೇ ತೆರಿಗೆ ಕಟ್ಟುವ ಪ್ರಮಾಣವೂ ಏರಲಿದೆ ಅನ್ನುವುದು ಬಲ್ಲವರ ಅಂಬೋಣ.

ಇಷ್ಟೆಲ್ಲ ಲಾಭವಿದ್ದರೂ ರಾಜ್ಯಗಳ ವಿರೋಧವೇಕೆ?
ಎಲ್ಲವೂ ರಂಗು ರಂಗಾಗಿ ಕಂಡರೂ ಕಾಂಗ್ರೆಸ್, ಬಿಜೆಪಿ, ಪ್ರಾದೇಶಿಕ ಪಕ್ಷವೆನ್ನದೇ ಹಲವಾರು ರಾಜ್ಯಗಳು ಜಿ.ಎಸ್.ಟಿಯನ್ನು ವಿರೋಧಿಸುತ್ತ ಬಂದಿವೆ. ಹಲವು ಹಂತದ ಕೊಡುಕೊಳ್ಳುವಿಕೆಯ ನಂತರ ರಾಜ್ಯಗಳ ಪಟ್ಟು ಸಡಿಲಿಸದ ಹೋರಾಟದ ಫಲವಾಗಿ ಕೇಂದ್ರ ಇಂದು ರಾಜ್ಯಗಳ ಕಾಳಜಿಯನ್ನು ಪರಿಹರಿಸುವತ್ತ ಗಮನ ಹರಿಸಿದೆ ಮತ್ತು ಅದರಿಂದಾಗಿ ಜಿ.ಎಸ್.ಟಿ ಜಾರಿಗೆ ದಿನ ಹತ್ತಿರದಲ್ಲಿವೆ ಎಂಬಂತೆ ಕಾಣುತ್ತಿದೆ. ಹಾಗಿದ್ದರೆ ರಾಜ್ಯಗಳು ವಿರೋಧ ಮಾಡಿದ್ದಾದರೂ ಯಾವ ಕಾರಣಕ್ಕೆ ಅನ್ನುವುದನ್ನು ನೋಡಿದಾಗ ಕಾಣುವ ಮುಖ್ಯ ಅಂಶಗಳು.
  • ಈ ಸದ್ಯಕ್ಕೆ ರಾಜ್ಯಗಳು ಸಂಗ್ರಹಿಸುತ್ತಿರುವ ಹಲವು ತೆರಿಗೆಗಳಿಗೆ ಜಿ.ಎಸ್.ಟಿ ಕತ್ತರಿ ಹಾಕಲಿದೆ. ಇದರಿಂದ ತೆರಿಗೆ ಸಂಗ್ರಹ ವಿಷಯದಲ್ಲಿನ ಸ್ವಾಯತ್ತತೆ ಕಳೆದುಕೊಳ್ಳುವ ಆತಂಕ ರಾಜ್ಯಗಳದ್ದಾಗಿದೆ.


  • ಇಲ್ಲಿಯವರೆಗೆ ರಾಜ್ಯಗಳು ಸಂಗ್ರಹಿಸುತ್ತಿದ್ದ ಕೇಂದ್ರ ಮಾರಾಟ ತೆರಿಗೆ (ಸಿ.ಎಸ್.ಟಿ) ಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದರಿಂದ ರಾಜ್ಯಗಳ ತೆರಿಗೆ ಸಂಗ್ರಹಕ್ಕೆ ದೊಡ್ಡ ಹೊಡೆತ ಬೀಳಲಿದೆ.
  • ಕಾಳು ಕಡಿ ಖರೀದಿ ಮೇಲಿನ ತೆರಿಗೆಯನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರುವುದರಿಂದಾಗಿ ಕೆಲ ರಾಜ್ಯಗಳಿಗೆ ತೆರಿಗೆ ಕೊರತೆಯಾಗಲಿದೆ. ಪಂಜಾಬ್ ರಾಜ್ಯ ತನಗೆ ವರ್ಷಕ್ಕೆ 1500 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದಿದೆ.


  • ಜಿ.ಎಸ್.ಟಿ ತೆರಿಗೆಯ ಮಿತಿಯನ್ನು ಕೇಂದ್ರ 20%ಗೆ ನಿಕ್ಕಿ ಮಾಡಿದ್ದರೆ ಕರ್ನಾಟಕ ರಾಜ್ಯ ಈ ಮಿತಿಯನ್ನು 24-26%ವರೆಗೆ ನಿಗದಿ ಮಾಡುವ ಹಕ್ಕನ್ನು ನೀಡಬೇಕು ಎಂದು ಆಗ್ರಹಿಸಿದೆ.
  • ಎಲ್ಲ ರಾಜ್ಯಗಳು ಜಿ.ಎಸ್.ಟಿ ಕೆಳಗೆ ಕೇಂದ್ರ ತರಲು ಬಯಸಿರುವ ಡಿಕ್ಲರ್ಡ್ ಗೂಡ್ಸ್ (ಘೋಷಿತ ಸರಕು) ಅನ್ನುವ ವಿಷಯವನ್ನು ವಿರೋಧಿಸಿವೆ. ಹತ್ತಿ, ಎಣ್ಣೆ, ಸಕ್ಕರೆ, ಬಟ್ಟೆ, ಕಬ್ಬಿಣ, ಸ್ಟೀಲ್, ಬೇಳೆ ಕಾಳು, ತಂಬಾಕು, ಎಲ್.ಪಿ.ಜಿ ಮುಂತಾದವುಗಳನ್ನು ಘೋಷಿತ ಸರಕಿನ ವ್ಯಾಪ್ತಿಗೆ ತರಲು ಕೇಂದ್ರ ತಂತ್ರ ರೂಪಿಸಿತ್ತು. ಒಮ್ಮೆ ಘೋಷಿತ ಸರಕು ಎಂದು ನಿರ್ಣಯವಾದರೆ ಆ ವಸ್ತುಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ಕೇವಲ ಕೇಂದ್ರಕ್ಕೆ ಮಾತ್ರ ದಕ್ಕಲಿದೆ. ಇದನ್ನು ಎಲ್ಲ ರಾಜ್ಯಗಳು ವಿರೋಧಿಸಿವೆ.
  • ತೈಲ ಉತ್ಪನ್ನಗಳನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಲು ಕೇಂದ್ರ ಮುಂದಾಗಿದ್ದನ್ನು ರಾಜ್ಯಗಳು ವಿರೋಧಿಸಿವೆ. ರಾಜ್ಯಗಳ 22%ಕ್ಕೂ ಅಧಿಕ ಆದಾಯ ಈ ಒಂದೇ ಮೂಲದಿಂದ ಬರುತ್ತಿರುವಾಗ ಇದರ ಮೇಲೆ ಸೂಕ್ತವೆನಿಸುವ ತೆರಿಗೆ ವಿಧಿಸುವ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಕೇಂದ್ರ ಮಾಡುತ್ತಿದೆ ಎಂದು ರಾಜ್ಯಗಳು ದೂರಿದ್ದವು.
  • ಕೇಂದ್ರ-ರಾಜ್ಯ-ರಾಜ್ಯಗಳ ನಡುವಿನ ತೆರಿಗೆ ತಕರಾರುಗಳನ್ನು ಬಗೆಹರಿಸಲು ಜಿ.ಎಸ್.ಟಿ ಯೊಡನೆ ಶುರು ಮಾಡಬೇಕೆಂದಿದ್ದ ಡಿಸ್ಪ್ಯೂಟ್ ಸೆಟ್ಲಮೆಂಟ್ ಅತಾರಿಟಿ ಒಂದು ಸಂವಿಧಾನಿಕ ಸ್ಥಾನಮಾನ ಹೊಂದುವ ವ್ಯವಸ್ಥೆಯಾಗುವುದರಿಂದ ತಕರಾರು ಬಗೆಹರಿಸಲು ಮಧ್ಯಸ್ತಿಕೆಗಿಂತ ತನ್ನ ಅಭಿಪ್ರಾಯಗಳನ್ನೇ ರಾಜ್ಯಗಳ ಮೇಲೆ ಹೇರುವಂತಹ ವ್ಯವಸ್ಥೆ ಇದಾಗಬಹುದು ಅನ್ನುವ ಆತಂಕ ರಾಜ್ಯಗಳಲ್ಲಿದ್ದು ಹೆಚ್ಚಿನ ಎಲ್ಲ ರಾಜ್ಯಗಳು ಇದನ್ನು ವಿರೋಧಿಸಿವೆ.
ಕೇಂದ್ರ ತನ್ನ ಜಿಗುಟುತನ ಬಿಡಲಿ
ಹಿಂದಿನಿಂದಲೂ ರಾಜ್ಯಗಳನ್ನು ತನ್ನ ಅಡಿಯಾಳೆಂಬಂತೆ ನೋಡಿಕೊಂಡು ಬಂದಿರುವ ಕೇಂದ್ರಕ್ಕೆ ಇತ್ತೀಚಿನ ದಿನಗಳಲ್ಲಿ ರಾಜ್ಯಗಳು ತಮ್ಮ ಹಕ್ಕಿಗಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಮೂಲಕ ಭಾರತ ಒಂದು ಒಕ್ಕೂಟ ವ್ಯವಸ್ಥೆಯೇ ಹೊರತು ಒಂದು ಕೇಂದ್ರಿಕೃತ ವ್ಯವಸ್ಥೆಯಲ್ಲ ಅನ್ನುವ ಸಂದೇಶವನ್ನು ಕೊಟ್ಟಿವೆ. ಲೋಕಪಾಲ್ ವ್ಯಾಪ್ತಿಗೆ ಲೋಕಾಯುಕ್ತರನ್ನು ತರುವ ಪ್ರಯತ್ನ, ಉಗ್ರರ ವಿರುದ್ದದ ಹೋರಾಟದಲ್ಲಿ ರಾಜ್ಯಗಳ ಅನಿಸಿಕೆಯನ್ನೇ ಕೇಳದೇ ಎನ್.ಸಿ.ಟಿ.ಸಿ ಮಾಡಲು ಹೊರಟಿದ್ದು, ಆರ್.ಪಿ.ಎಫ್ ಬಿಲ್ ಮೂಲಕ ರೈಲ್ವೆ ಪೋಲಿಸರಿಗೆ ರಾಜ್ಯ ಪೋಲಿಸರ ಕೈಯಲ್ಲಿದ್ದ ಅಧಿಕಾರವನ್ನು ಕೊಡುವ ಪ್ರಯತ್ನ ಹೀಗೆ ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿ ನಡೆದುಕೊಂಡಿದ್ದನ್ನು ಪ್ರಾದೇಶಿಕ ಪಕ್ಷಗಳ ಆಳ್ವಿಕೆಯ ಹಲವಾರು ರಾಜ್ಯಗಳು ಉಗ್ರವಾಗಿ ವಿರೋಧಿಸಿದ್ದರ ಪರಿಣಾಮವಾಗಿ ಇಂದು ರಾಜ್ಯಗಳ ಸ್ವಾಯತ್ತತೆ ಕಾಯ್ದುಕೊಳ್ಳುವಲ್ಲಿ ಸಹಾಯವಾಗಿದೆ. ಜಿ.ಎಸ್.ಟಿ ವಿಷಯದಲ್ಲೂ ಕೇಂದ್ರ ತನ್ನ ಜಿಗುಟುತನ ಬಿಟ್ಟು ಎಲ್ಲ ರಾಜ್ಯಗಳ ಆತಂಕಗಳನ್ನು ದೂರ ಮಾಡಿ ಮುಂದಿನ ಹೆಜ್ಜೆ ಇಡಲಿ. ಹಾಗೆಯೇ, ರಾಜ್ಯಗಳ ಪರ ಧ್ವನಿ ಎತ್ತುವ ಕೆಲಸವನ್ನು ಕೇವಲ ಬೇರೆ ರಾಜ್ಯದ ಪ್ರಾದೇಶಿಕ ಪಕ್ಷಗಳಿಗೆ ಹೊರ ಗುತ್ತಿಗೆ ಕೊಟ್ಟಂತೆ ವರ್ತಿಸುವ ಬದಲು ಕರ್ನಾಟಕ ಸರ್ಕಾರವೂ ಒಕ್ಕೂಟದಲ್ಲಿ ತನ್ನ ನ್ಯಾಯಯುತ ಹಕ್ಕಿಗಾಗಿ ದನಿ ಎತ್ತಲಿ.

ಬುಧವಾರ, ಮಾರ್ಚ್ 13, 2013

ಜಿ.ಎಸ್.ಟಿ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳು

Goods and Services Act and it's impact on Federalism. My column in 13th March Kannada Prabha.. 

ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ Vs ಮಾರುಕಟ್ಟೆ ಆಧಾರಿತ ಸಮಾಜ

ಮೈಕಲ್ ಸ್ಯಾಂಡೆಲ್ ನಮ್ಮ ನಡುವಿನ ಅಪರೂಪದ ರಾಜಕೀಯದ ಫಿಲಾಸಫರ್ ಗಳಲ್ಲಿ ಒಬ್ಬರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ "ಜಸ್ಟಿಸ್" ಅನ್ನುವ ಕೋರ್ಸ್ ಕಲಿಸುವ ಇವರು ತಮ್ಮ "ವಾಟ್ ಮನಿ ಕಾಂಟ್ ಬಯ್ - ದಿ ಮಾರಲ್ ಲಿಮಿಟ್ಸ್ ಆಫ್ ಮಾರ್ಕೆಟ್" ಅನ್ನುವ ಹೊತ್ತಗೆಯ ಮೂಲಕ ಮುಕ್ತ ಮಾರುಕಟ್ಟೆಯ ಈ ಸಂದರ್ಭದಲ್ಲಿ ನೈತಿಕವಾದದ ಒಂದು ಬಹು ದೊಡ್ಡ ಪ್ರಶ್ನೆಯೊಂದನ್ನು ನಮ್ಮ ಮುಂದಿರಿಸಿದ್ದಾರೆ. ಅದು "ಮಂದಿಯಾಳ್ವಿಕೆಯ ವ್ಯವಸ್ಥೆಯಲ್ಲಿ ಮಾರುಕಟ್ಟೆಯ ಸರಿಯಾದ ಪಾತ್ರ ಏನಾಗಿರಬೇಕು? ಹಣದಿಂದ ಕೊಳ್ಳಲಾಗದ, ನೈತಿಕತೆಯ ನೆಲೆಗಟ್ಟಿನಲ್ಲಿ ಮಾತ್ರ ನೋಡಬಹುದಾದ ವಿಷಯಗಳಲ್ಲಿ ಮಾರುಕಟ್ಟೆಯ ತಲುಪಿಗೆ ಎಲ್ಲಿ ಮತ್ತು ಯಾಕೆ ಗೆರೆ ಎಳೆಯಬೇಕಿದೆ ಅನ್ನುವುದರ ಬಗ್ಗೆ ಹತ್ತಾರು ಉದಾಹರಣೆಗಳ ಸಮೇತ ಅಮೇರಿಕದ ಸಮಾಜದಲ್ಲಾಗುತ್ತಿರುವ ಚರ್ಚೆ, ತಲ್ಲಣಗಳಿಗೆ ಕನ್ನಡಿ ಹಿಡಿಯುವ ಕೆಲಸ ಈ ಹೊತ್ತಗೆಯ ಮೂಲಕ ಮಾಡಿದ್ದಾರೆ. ಮಾರುಕಟ್ಟೆಯ ವ್ಯವಸ್ಥೆಯತ್ತ ದಾಪುಗಾಲಿಡುತ್ತಿರುವ ಭಾರತ ಮತ್ತು ಕರ್ನಾಟಕದ ವ್ಯವಸ್ಥೆಗಳಿಗೂ ಅರೆಗಳಿಗೆ ನಿಂತು ನೋಡುವ ಪಾಠಗಳು ಈ ಹೊತ್ತಗೆಯಲ್ಲಿವೆ ಅನ್ನಬಹುದು.



ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಗೂ ಮಾರುಕಟ್ಟೆ ಆಧಾರಿತ ಸಮಾಜಕ್ಕೂ ವ್ಯತ್ಯಾಸವಿದೆ
ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ ಅಮೇರಿಕಕ್ಕೆ ತಂದು ಕೊಟ್ಟಿರುವ ಅನುಕೂಲಗಳು, ಲಾಭಗಳು, ಉದ್ಯಮಶೀಲತೆ ಮತ್ತು ಸ್ಪರ್ಧಾತ್ಮಕ ಗುಣಗಳಾವದನ್ನು ಸ್ಯಾಂಡೆಲ್ ಅಲ್ಲಗಳೆಯುವುದಿಲ್ಲ. ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ  ಜಗತ್ತಿನ ಹಲವೆಡೆ ಸಿರಿವಂತಿಕೆ, ಏಳಿಗೆಯನ್ನು ತಂದಿದೆ ಆದರೆ ಇಂದು ನಾವು ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಯಿಂದ ಮಾರುಕಟ್ಟೆ ಆಧಾರಿತ ಸಮಾಜದೆಡೆಗೆ ಹೆಜ್ಜೆ ಹಾಕುತ್ತಿದ್ದೇವೆ. ಇದು ಅಪಾಯಕಾರಿ ಎಂದು ಸ್ಯಾಂಡೆಲ್ ವಾದಿಸುತ್ತಾರೆ. ಹಾಗಿದ್ದರೆ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆಗೂ, ಸಮಾಜಕ್ಕೂ ಏನಿದೆ ಅಂತರ ಅನ್ನುವ ಪ್ರಶ್ನೆ ಏಳುತ್ತೆ. ಅದಕ್ಕೆ ಸ್ಯಾಂಡೆಲ್ ಕೊಡುವ ಉತ್ತರ ಮಾರುಕಟ್ಟೆ ಆಧಾರಿತ ಅರ್ಥ ವ್ಯವಸ್ಥೆ ಉತ್ಪಾದಕತೆ ಹೆಚ್ಚಿಸಲು, ಆರ್ಥಿಕ ಏಳಿಗೆ ಸಾಧಿಸಲು ಇರುವ ಅತ್ಯಂತ ಮಹತ್ವದ ಮತ್ತು ಪರಿಣಾಮಕಾರಿಯಾದ ಸಾಧನ ಆದರೆ ಮಾರುಕಟ್ಟೆ ಆಧಾರಿತ ಸಮಾಜ ಹಾಗಲ್ಲ, ಅಲ್ಲಿ ಹಣವೊಂದಿದ್ದರೆ ಸಾಕು  ಸರಿ ತಪ್ಪುಗಳ ಪ್ರಶ್ನೆಗಳೇ ಇಲ್ಲದೆ ಎಲ್ಲವೂ ಕೊಳ್ಳಲು ಸಿಗುತ್ತೆ. ಆರೋಗ್ಯ, ಕಲಿಕೆ, ಸಾರ್ವಜನಿಕ ಸುರಕ್ಷತೆ, ಪರಿಸರದ ಉಳಿವಿನಂತಹ ಸಮಾಜವೆಲ್ಲವನ್ನೂ ತಟ್ಟುವಂತಹ ವಿಷಯಗಳ ಹಂಚಕೆ ಹೇಗಾಗಬೇಕು ಅನ್ನುವುದನ್ನು ಮಾರುಕಟ್ಟೆಯೇ ನಿರ್ಧರಿಸುವ ಮಾದರಿ ಇಲ್ಲಿದೆ. ಸಮಾಜದ ಎಲ್ಲ ಹಂತದ ಎಲ್ಲ ವಿಷಯಗಳನ್ನೂ ಮಾರುಕಟ್ಟೆಯೇ ನಿರ್ಧರಿಸುವಂತಾದಾಗ ಮಾರುಕಟ್ಟೆಯಾಚೆಗಿನ ನೈತಿಕವಾದ, ಮಾನವೀಯವಾದ ಮೌಲ್ಯಗಳು ಮೂಲೆ ಸೇರಿ, ದುಡ್ಡಿದ್ದವರಿಗೆ ಎಲ್ಲವೂ ಸಿಗುತ್ತೆ, ಆದರೆ ದುಡ್ಡಿಲ್ಲದವರಿಗೆ ಏನು ದೊರೆಯದು ಅನ್ನುವಂತಹ ವ್ಯವಸ್ಥೆ ಜಾರಿಗೆ ಬಂದುಬಿಡುವ ಆತಂಕ ಅಮೇರಿಕ ಎದುರಿಸುತ್ತಿದೆ ಎಂದು ಸ್ಯಾಂಡೆಲ್ ಕಳವಳ ತೋರುತ್ತಾರೆ.


ತಮ್ಮ ಮಾತನ್ನು ಸಮರ್ಥಿಸಲು ಅವರು ಕೆಲವು ಎತ್ತುಗೆಗಳನ್ನು ಕೊಡುತ್ತಾರೆ. ಅಮೇರಿಕದ ಹಲವಾರು ರಾಜ್ಯಗಳಲ್ಲಿ ಶಾಲೆ ಮಕ್ಕಳು ತಮ್ಮ ಹೋಂ ವರ್ಕ್ ಮಾಡಿದರೆ, ಒಳ್ಳೆಯ ಫಲಿತಾಂಶ ತೋರಿದರೆ ಅವರಿಗೆ ಹಣದ ಪ್ರೋತ್ಸಾಹ ನೀಡುವ ಪದ್ದತಿ ಜಾರಿಗೆ ಬಂದಿದೆ. ಇನ್ನು ಕೆಲವು ಶಾಲೆಗಳಲ್ಲಿ ಓದುವ ಪ್ರತಿ ಹೊತ್ತಗೆಗೂ ಮಗುವಿಗೆ ಎರಡು ಡಾಲರ್ ಹಣ ಉತ್ತೇಜನದ ರೂಪದಲ್ಲಿ ಕೊಡುವ ಪದ್ದತಿ ಜಾರಿಗೆ ಬಂದಿದೆ. ಮಕ್ಕಳಿಗೆ ಕಲಿಯಲು ಹಣದ ಆಸೆ ತೋರಿಸುವಂತದ್ದು ಕೆಟ್ಟ ಪಾಟವನ್ನು ಕಲಿಸುತ್ತದೆ. ಓದುವುದು ಒಂದು ಸಾರ್ಥಕತೆ ನೀಡುವ, ಮನೋವಿಕಾಸದ ಹಾದಿಯೆಂದು ನೋಡದೇ ಹಣ ಮಾಡಲು ಇರುವ ಒಂದು ಕೆಲಸ ಅನ್ನುವ ಭಾವ ಮಕ್ಕಳಲ್ಲಿ ಬಿತ್ತುವ ಎಲ್ಲ ಅಪಾಯವಿದೆ ಅನ್ನುತ್ತಾರೆ ಸ್ಯಾಂಡೆಲ್. ಇನ್ನೊಂದು ಉದಾಹರಣೆಯಾಗಿ ಅಲ್ಲಿನ ಕೆಲ ಆಸ್ಪತ್ರೆಗಳಲ್ಲಿ ಸರದಿಯಲ್ಲಿ ಮೊದಲು ಬಂದ ರೋಗಿಯ ಬದಲು ಹಣ ತೆತ್ತು ಸರದಿ ಮುರಿದು ಬರುವ ರೋಗಿಗಳಿಗೆ ಆದ್ಯತೆ ನೀಡುವಂತಹ ಬೆಳವಣಿಗೆಗಳನ್ನ ಸ್ಯಾಂಡೆಲ್ ಎತ್ತಿ ತೋರುತ್ತಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಅನ್ನುವುದು ಸರದಿ ಧರ್ಮ. ಆದರೆ ಕೊಂಚ ಹಣ ತೆತ್ತರೆ ಸರದಿ ಮುರಿವ ಹಕ್ಕು ಸಿಗುವಂತಾದರೆ ಅಷ್ಟೊತ್ತು ಸರದಿಯಲ್ಲಿ ಕಾದ, ಆದರೆ ಹಣ ಕೊಡಲಾಗದ ವ್ಯಕ್ತಿಯ ಮನದಲ್ಲಿ ನಾವು ಯಾವ ಭಾವನೆಯನ್ನು ತುಂಬುತ್ತಿದ್ದೇವೆ? ಅಮೇರಿಕದ ಸಾಮಾಜಿಕ ಜೀವನದೆಲ್ಲೆಡೆ ಸರದಿಯಲ್ಲಿ ನಿಲ್ಲುವ ಸಂಸ್ಕಾರದ ಜಾಗದಲ್ಲಿ ಹಣದ ಸಂಸ್ಕಾರ ಬಂದು ನೆಲೆ ಕಾಣುತ್ತಿದೆ. ಇದು ಸಮಾನತೆಯ ನೆಲೆಯ ಸಮಾಜದ ಆರೋಗ್ಯದ ಕಣ್ಣಿನಿಂದ ಎಷ್ಟು ಸರಿ ಅನ್ನುವ ನೈತಿಕವಾದವನ್ನು ಅವರು ಮಂಡಿಸುತ್ತಾರೆ.

ಸಮಾಜದೊಳಿತು ಅನ್ನುವ ಮೌಲ್ಯ ಹಣ ಕೊಂಡುಕೊಳ್ಳಲಾಗದ್ದು
ಇಡೀ ಸಮಾಜಕ್ಕೆ ಒಳಿತಾಗುವಂತದ್ದನ್ನು ಮಾರುಕಟ್ಟೆಯ ಕಟ್ಟಳೆಗಳಿಂದ ಅಳೆದಾಗ ಅದರ ಪರಿಣಾಮ ಕೆಡುಕಾಗುತ್ತೆ ಅನ್ನಲು ಇನ್ನೊಂದು ಎತ್ತುಗೆಯಾಗಿ ಸ್ವೀಜರ್ ಲ್ಯಾಂಡಿನ ಹಳ್ಳಿಯೊಂದರಲ್ಲಿ ಅಣು ಕಸ ಎಸೆಯುವ ತಾಣವೊಂದನ್ನು ಮಾಡಲು ಹೊರಟಾಗ ಕಾಸರಿಗರು ಕೈಗೊಂಡ ಸಮೀಕ್ಷೆಯೊಂದನ್ನು ಅವರು ತಿಳಿಸುತ್ತಾರೆ. ಬಹು ಜನರಿಗೆ ಒಳಿತು ಮಾಡುವ ಈ ತಾಣವನ್ನು ನಿಮ್ಮ ಹಳ್ಳಿಯಲ್ಲಿ ಶುರು ಮಾಡಲು ನೀವು ಒಪ್ಪುತ್ತೀರಾ ಅಂದಾಗ ಅಲ್ಲಿನ 51% ಜನರು ಎಲ್ಲ ಜನರ ಒಳಿತಿಗಾಗಿ ಇದನ್ನು ಒಪ್ಪುತ್ತೇವೆ ಎಂದರು. ಇದಾದ ಮೇಲೆ ಕಾಸರಿಗರು ಒಪ್ಪಿಗೆ ಸೂಚಿಸಿದವರಿಗೆ ಪ್ರತಿ ವರ್ಷ ಇಂತಿಷ್ಟು ಹಣ ಸಂದಾಯ ಮಾಡಲಾಗುವುದು, ಇದಕ್ಕೆ ಒಪ್ಪಿಗೆಯಿದೆಯೇ ಎಂದು ಅದೇ ಪ್ರಶ್ನೆಯನ್ನು ಹಣದ ಆಮಿಷದೊಂದಿಗೆ ಕೇಳಿದಾಗ ಈ ತಾಣ ತಮ್ಮ ಹಳ್ಳಿಗೆ ಬರಲಿ ಎಂದವರ ಸಂಖ್ಯೆ 25%ಕ್ಕೆ ಕುಸಿಯಿತಂತೆ. ಈ ವಿಷಯದಲ್ಲಿ ಯಾವಾಗ ಮಾರುಕಟ್ಟೆ ಮೌಲ್ಯ ಒಳಬಂತೋ  ಸಮಾಜದೊಳಿತಿಗೆ ತ್ಯಾಗ ಮಾಡಲು ಸಿದ್ದರಾಗಿದ್ದ ಜನರ ವರ್ತನೆಯಲ್ಲಿ ಹಟಾತ್ ಬದಲಾವಣೆಯಾಯಿತು. ಸಮಾಜದೊಳಿತು ಅನ್ನುವ ಮೌಲ್ಯ ಹಣ ಕೊಂಡುಕೊಳ್ಳಲಾಗದ್ದು ಮತ್ತು ಅಂತಹ ಸಾಮಾಜಿಕ ಮೌಲ್ಯಗಳು ನಿರ್ಧರಿಸಬೇಕಾದ ವಿಷಯಗಳಲ್ಲಿ ಮಾರುಕಟ್ಟೆ ಮೌಲ್ಯಗಳು ಒಳಬರದಿರವುದೇ ಒಳಿತು ಅನ್ನುವ ಅಭಿಪ್ರಾಯವನ್ನು ಸ್ಯಾಂಡೆಲ್ ವ್ಯಕ್ತಪಡಿಸುತ್ತಾರೆ. ಇಂತಹ ನೂರಾರು ಉದಾಹರಣೆಗಳನ್ನು ಈ ಹೊತ್ತಗೆಯುದ್ದಕ್ಕೂ ಅವರು ನೀಡುತ್ತಾರೆ. ಮುಕ್ತ ಮಾರುಕಟ್ಟೆಯಾಧಾರಿತ ಅರ್ಥ ವ್ಯವಸ್ಥೆಗೂ  ಮುಕ್ತ ಮಾರುಕಟ್ಟೆಯಾಧಾರಿತ ಸಮಾಜಕ್ಕೂ ನಡುವಿನ ತೆಳು ಗೆರೆಯನ್ನು ನಾವು ಕಂಡುಕೊಳ್ಳದಿದ್ದರೆ ಹಣವೊಂದೇ ಎಲ್ಲವನ್ನೂ ನಿರ್ಧರಿಸುವ ಸಾಮಾಜಿಕ, ನೈತಿಕ ಮತ್ತು ಮಾನವೀಯ ಮೌಲ್ಯಗಳು ಬಲಗುಂದುವ ಸಮಾಜವಾಗಿ ಅಮೇರಿಕ ಬದಲಾಗುತ್ತೆ ಅನ್ನುವ ಆತಂಕದೊಂದಿಗೆ ಅವರ ಹೊತ್ತಗೆ ಮುಗಿಯುತ್ತೆ. ಅಂತಹದೊಂದು ಪಲ್ಲಟ ಜರುಗುತ್ತಿರುವ ಕನ್ನಡ ಸಮಾಜಕ್ಕೂ ಇಲ್ಲಿ ಕೆಲ ಪಾಠಗಳಿವೆ ಅನ್ನಿಸದೇ ಇರದು.

ಈ ಹೊತ್ತಗೆಯ ಬಗ್ಗೆ ನನ್ನ ಎರಡು ಮಾತುಗಳು ವಿಜಯ ಕರ್ನಾಟಕದ ರವಿವಾರದ  "ನಾನು ಓದುತ್ತಿರುವ ಹೊತ್ತಗೆ" ವಿಭಾಗದಲ್ಲಿ ಪ್ರಕಟಗೊಂಡಿದೆ. ಅದು ಇಲ್ಲಿದೆ:

ಶನಿವಾರ, ಮಾರ್ಚ್ 9, 2013

ವೈವಿಧ್ಯತೆಯ ಸಮಾಧಿ ಮೇಲೆ UPSC ಕಟ್ಟಲು ಹೊರಟ ಎಲೈಟ್ ವ್ಯವಸ್ಥೆ

ಯು.ಪಿ.ಎಸ್.ಸಿ ತನ್ನ ಪರೀಕ್ಷಾ ನಿಯಮಾವಳಿಗಳನ್ನು ಬದಲಾಯಿಸಿದ್ದು, ಅದಕ್ಕೆ ಮಾನ್ಯ ಪ್ರಧಾನಮಂತ್ರಿಗಳು ಒಪ್ಪಿಗೆ ಸೂಚಿಸಿರುವ ಸುದ್ದಿಯಿದೆ. ಈ ಬದಲಾವಣೆಗಳನ್ನು ಹಲವಾರು ರಾಜ್ಯಗಳು ವಿರೋಧಿಸಿವೆ. ಈ ಬದಲಾವಣೆಗಳೇನು ಮತ್ತು ರಾಜ್ಯಗಳು ಯಾಕೆ ವಿರೋಧಿಸಿವೆ ಎಂದು ಯು.ಪಿ.ಎಸ್.ಸಿ ಮಿಂಬಲೆ ತಾಣ (ಪುಟ 12)  ನೋಡಿದಾಗ ಕಂಡಿದ್ದು ನಿಜಕ್ಕೂ ಅಚ್ಚರಿ ತರುವಂತದ್ದು. ಭಾರತದ ವೈವಿಧ್ಯತೆಯನ್ನು ಶವಪೆಟ್ಟಿಗೆಯೊಳಗೆ ಕೂರಿಸಿ ಪೆಟ್ಟಿಗೆಗೆ ಹೊಡೆಯುತ್ತಿರುವ ಮೊಳೆಗೆ ಇನ್ನೊಂದು ಮೊಳೆ ಸೇರ್ಪಡೆಯಾಗಿದೆ. ಯು.ಪಿ.ಎಸ್.ಸಿಯ  ಬದಲಾದ ನಿಯಮಗಳು ಮತ್ತು ಕನ್ನಡಿಗನೊಬ್ಬನ ಮೇಲೆ ಅದರ ಪರಿಣಾಮಗಳು ಇಂತಿವೆ:




  1. ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಸಾಹಿತ್ಯದ ಪದವಿ ಪಡೆದವರು ಮಾತ್ರ ಮುಖ್ಯ ಪರೀಕ್ಷೆಯಲ್ಲಿ  ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಮುಖ್ಯ ಪರೀಕ್ಷೆ ಬರೆಯಬಹುದು. ಹಿಂದಿನಂತೆ ಯಾವುದೇ ಮಾಧ್ಯಮದಲ್ಲಿ, ಯಾವ ವಿಷಯವನ್ನೇ ಓದಿದ್ದರೂ ಐಚ್ಛಿಕ ವಿಷಯವಾಗಿ ಅಭ್ಯರ್ಥಿಯ ತಾಯ್ನುಡಿಯಲ್ಲಿ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳಲಾಗದು. ಆದರೆ ಈ ನಿಯಮ ಐಚ್ಛಿಕ ವಿಷಯಗಳ ಪಟ್ಟಿಯಲ್ಲಿರುವ ಗಣಿತ, ಅರ್ಥಶಾಸ್ತ್ರ, ಇಂಜಿನಿಯರಿಂಗ್ ಮುಂತಾದ ವಿಷಯಗಳಿಗೆ ಅನ್ವಯಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರತಿಭೆಗಳು ಆಯ್ಕೆ ಮಾಡಿಕೊಳ್ಳುತ್ತಿದ್ದ ಸಾಹಿತ್ಯದ ವಿಷಯಕ್ಕೆ ಮಾತ್ರ ರೂಪಿಸಲಾಗಿದೆ. ಕನ್ನಡದಂತಹ ನುಡಿಯಲ್ಲಿ ಲಭ್ಯವಿದ್ದಿದ್ದೇ ಸಾಹಿತ್ಯದಂತಹ ವಿಷಯಗಳು. ಈಗ ಕೇವಲ ಸಾಹಿತ್ಯ ಓದಿದವರಿಗೆ ಮಾತ್ರ ಅದನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಬಹುದು ಅನ್ನುವ ಮೂಲಕ ಇಂಜಿನಿಯರಿಂಗ್, ಕಾನೂನು, ವೈದ್ಯಕೀಯ ಪದವಿ ಪಡೆದು ಕನ್ನಡ ಸಾಹಿತ್ಯ ಆಯ್ದುಕೊಂಡು ಪರೀಕ್ಷೆ ಬರೆಯುತ್ತಿದ್ದ ಕನ್ನಡಿಗರಿಗೆ ಮೋಸವಾಗಲಿದೆ. ಇದೇ ಪಾಡು ಇತರೆ ಭಾಷಿಕರದ್ದು ಆಗಲಿದೆ.
  2. ಯಾವ ಮಾಧ್ಯಮದಲ್ಲಿ  ಅಭ್ಯರ್ಥಿಯ ಡಿಗ್ರಿ ಆಗಿದೆಯೋ ಅದೇ ಮಾಧ್ಯಮದಲ್ಲಿ ಆತ ಪರೀಕ್ಷೆ ಬರೆಯಬೇಕು. ಅಂದರೆ ಇಂಗ್ಲಿಶ್ ಮಾಧ್ಯಮದಲ್ಲಿ ಡಿಗ್ರಿ ಓದಿದ ಕನ್ನಡಿಗನೊಬ್ಬ ಕನ್ನಡ ಭಾಷೆಯಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವಂತಿಲ್ಲ. ಕರ್ನಾಟಕದಿಂದ ಇತ್ತಿಚೆಗೆ ಯು.ಪಿ.ಎಸ್.ಸಿ ಪರೀಕ್ಷೆ ಬರೆಯುತ್ತಿರುವವರಲ್ಲಿ ಬಹಳಷ್ಟು ಜನರು ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಕಾನೂನು ವೃತ್ತಿಯಿಂದ ಬಂದವರು ಮತ್ತು ತಮ್ಮ ಡಿಗ್ರಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಪಡೆದವರು, ಆದರೆ ಅವರಾರು ಈ ನಿಯಮದ ದೆಸೆಯಿಂದ ಬಯಸಿದರೂ ಕನ್ನಡದಲ್ಲಿ ಯು.ಪಿ.ಎಸ್.ಸಿ ಪರೀಕ್ಷೆ ಬರೆಯಲಾರರು.
  3. ಒಬ್ಬ ಕನ್ನಡ ಮಾಧ್ಯಮದಲ್ಲಿ ಓದಿದದವನು ಕನ್ನಡದಲ್ಲೇ ಪರೀಕ್ಷೆಯ ಆಯ್ಕೆ ಕೈಗೊಂಡಾಗಲೂ ಅವನೊಂದಿಗೆ ಕೊನೆ ಪಕ್ಷ 25 ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆಯಲು ಸಿಗಬೇಕು. ಇಲ್ಲದಿದ್ದಲ್ಲಿ ಅವನಿಗೆ ಕೊಟ್ಟ ಕನ್ನಡ ಆಯ್ಕೆಯನ್ನು ಹಿಂಪಡೆದು ಅವರು ಇಂಗ್ಲಿಷ್ ಇಲ್ಲವೇ ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕು ಅನ್ನುವ ನಿಯಮ ರೂಪಿಸಲಾಗಿದೆ. 
  4. ಕನ್ನಡದಲ್ಲಿ ಪರೀಕ್ಷೆ ಬರೆಯುವವನು ತನ್ನ ಉತ್ತರದಲ್ಲಿ ಬರುವ ತಾಂತ್ರಿಕ ಶಬ್ದಗಳಿಗೆ ಬ್ರಾಕೆಟ್ಟಿನಲ್ಲಿ ಇಂಗ್ಲಿಷಿನಲ್ಲಿ ವಿವರಣೆ ಬರೆಯಬಹುದು. ಆದರೆ ಅಭ್ಯರ್ಥಿ ಈ ಆಯ್ಕೆಯನ್ನು ಸರಿಯಾಗಿ ಬಳಸದಿದ್ದರೆ ಅಂಕ ಕಡಿತಗೊಳಿಸಲಾಗುವುದು ಅನ್ನುವ ಮೂಲಕ ಇಂಗ್ಲಿಷ್ ಮತ್ತು ಹಿಂದಿಯೇತರ ನುಡಿಗಳಲ್ಲಿ ಪರೀಕ್ಷೆ ಬರೆಯುವುದು ಒಂದು ರೀತಿಯಲ್ಲಿ ರಿಸ್ಕ್ ಅನ್ನುವ ಭಾವನೆಯನ್ನು ಅಭ್ಯರ್ಥಿಗಳಲ್ಲಿ ತರುವ ನಿಯಮ ರೂಪಿಸಲಾಗಿದೆ.
  5. ಸಾಹಿತ್ಯದ ವಿಷಯವೊಂದನ್ನು ಹೊರತು ಪಡಿಸಿ ಉಳಿದೆಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನೀಡಲಾಗುವುದು ಅನ್ನುವ ನಿಯಮ ರೂಪಿಸಲಾಗಿದೆ. ಅಲ್ಲಿಗೆ ಇನ್ನುಳಿದ ಭಾಷೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಸಂದೇಶವನ್ನು ಎಲ್ಲ ಭಾಷೆಗಳನ್ನು ಸಮಾನವೆಂದು ಕಾಣಬೇಕಾದ ಕೇಂದ್ರದ ವ್ಯವಸ್ಥೆಯೇ ನೀಡುತ್ತಿದೆ.
  6. ಮುಖ್ಯ ಪರೀಕ್ಷೆಯಲ್ಲಿ ಎರಡು ಐಚ್ಛಿಕ ವಿಷಯಗಳು ಸೇರಿದಂತೆ ಏಳು ಪತ್ರಿಕೆಗಳಿವೆ. ಅದರಲ್ಲಿ ಇಂಗ್ಲಿಷ್ ಜ್ಞಾನವನ್ನು ಪರೀಕ್ಷಿಸುವ ಪ್ರಶ್ನೆ ಪತ್ರಿಕೆಯೂ ಒಂದು. ಇನ್ನು ಮುಂದೆ ಈ ಏಳರಲ್ಲೂ ಪಡೆದ ಅಂಕಗಳನ್ನು ಒಟ್ಟು ಮಾಡಿ ರಾಂಕ್ ಪಟ್ಟಿ ನೀಡಲಾಗುವುದು.ಈ ಮುಂಚೆ ಇಂಗ್ಲಿಷ್ ಮತ್ತು ಒಂದು ಐಚ್ಛಿಕ ವಿಷಯದಲ್ಲಿ ಅರ್ಹತೆ ಪಡೆಯಬೇಕಾಗಿದ್ದರೂ ಅಂತಿಮ ಆಯ್ಕೆಯಲ್ಲಿ ಈ ವಿಷಯಗಳ ಅಂಕಗಳನ್ನು ಲೆಕ್ಕಕ್ಕೆ ಪಡಯುತ್ತಿರಲಿಲ್ಲ. ಆದರೆ ಈಗ ಇಂಗ್ಲಿಷಿನಲ್ಲಿನ ಅಂಕವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದರಿಂದಾಗಿ ಇಂಗ್ಲಿಶ್ ಮೇಲೆ ಹಿಡಿತ ಸಾಧಿಸುವವರಿಗೆ ಸಹಜವಾಗಿ ಮೇಲುಗೈ ದೊರೆಯುತ್ತದೆ.
  7. ಯಾವುದೇ ಒಂದು ಇಲ್ಲವೇ ಎಲ್ಲ ವಿಷಯಗಳಲ್ಲೂ ಅರ್ಹತಾ ಅಂಕವನ್ನು  ತನಗೆ ತೋಚಿದಂತೆ ನಿರ್ಧರಿಸುವ ಹಕ್ಕು ಯು.ಪಿ.ಎಸ್.ಸಿ ಪಡೆದುಕೊಂಡಿದೆ. ಇದರರ್ಥ ಎಲ್ಲ ವಿಷಯಗಳಲ್ಲೂ ಚೆನ್ನಾಗಿ ಸಾಧನೆ ಮಾಡಿದರೂ ಇಂಗ್ಲಿಷಿನಲ್ಲಿ ಅಂಕ ಕಡಿಮೆ ಪಡೆದ ಕನ್ನಡಿಗನೊಬ್ಬ ಅದೇ ಕಾರಣಕ್ಕೆ ಆಯ್ಕೆಯಾಗಲು ಸಾಧ್ಯವೇ ಇಲ್ಲದ ಸ್ಥಿತಿ ಬಂದಿದೆ.
ಇಂಗ್ಲಿಶ್ ಮತ್ತು ಹಿಂದಿ ಬಲ್ಲವರಷ್ಟೇ ನಡೆಸುವ ನಿಯಂತ್ರಿಸುವ ಎಲೈಟ್ ವ್ಯವಸ್ಥೆ ಕಟ್ಟುವ ಕೆಲಸ !
ಪ್ರಿಲಿಮ್ಸ್ ಹಂತದಲ್ಲಿ ಇದ್ದ ಐಚ್ಛಿಕ ವಿಷಯಗಳ ಆಯ್ಕೆಯನ್ನು ಎರಡು ವರ್ಷದ ಹಿಂದೆ ರದ್ದು ಮಾಡಿದ್ದ ಯು.ಪಿ.ಎಸ್.ಸಿ ಅದರ ಜಾಗದಲ್ಲಿ ಇಂಗ್ಲಿಶ್ ಅಪ್ಟಿಟ್ಯೂಡ್ ಪರೀಕ್ಷೆಯನ್ನು ಸೇರಿಸಿತ್ತು, ಇದರಿಂದಾಗಿ ತಾಯ್ನುಡಿಯಲ್ಲಿ ಕಲಿತ ಹಲವರು ಇಂಗ್ಲಿಶ್ ಚೆನ್ನಾಗಿ ಬಾರದ ಕಾರಣಕ್ಕೆ ಪ್ರಿಲಿಮ್ಸ್ ಹಂತವನ್ನೇ ದಾಟುವುದು ಕಷ್ಟವಾಗಿತ್ತು. ಈಗ ಮುಖ್ಯ ಪರೀಕ್ಷೆಯಲ್ಲಿ ಮಾಡಿರುವ ಈ ಬದಲಾವಣೆಗಳು ಹಿಂದಿ/ಇಂಗ್ಲಿಶ್ ಬಾರದ ಭಾರತೀಯರನ್ನು ಯು.ಪಿ.ಎಸ್.ಸಿಯಿಂದ ಹೆಚ್ಚು ಕಡಿಮೆ ಆಚೆ ತಳ್ಳುವಂತಿದೆ. ಆ ಮೂಲಕ ಕೇಂದ್ರದ ವ್ಯವಸ್ಥೆಯೆಲ್ಲವನ್ನು ಕೇವಲ ಇಂಗ್ಲಿಶ್ ಮತ್ತು ಹಿಂದಿ ಬಲ್ಲವರಷ್ಟೇ ನಡೆಸುವ ನಿಯಂತ್ರಿಸುವ ಎಲೈಟ್ ವ್ಯವಸ್ಥೆ ಕಟ್ಟುವ ಕೆಲಸವಾಗುತ್ತಿದೆ. ಇದು ಸಂವಿಧಾನದಲ್ಲಿ ಇರುವ ಸಮಾನ ಅವಕಾಶದ ಆಶಯಗಳಿಗೆ ವಿರುದ್ಧವಾದುದಾಗಿದೆ. ಹಿಂದಿ/ಇಂಗ್ಲಿಷ್ ಎರಡೇ ಭಾಷೆ ಬಲ್ಲವರು ನಾಳೆ ಕರ್ನಾಟಕದ ಸೇವೆಗೆ ನಿಯುಕ್ತರಾದಾಗ ಅವರು ಕನ್ನಡದಲ್ಲಿ ಆಡಳಿತ ಅನುಷ್ಟಾನ ಮಾಡಲಿ ಅನ್ನುವುದು ತಿರುಕನ ಕನಸು ಅನ್ನಿಸುವುದಿಲ್ಲವೇ? ಜನರ ನುಡಿಯಲ್ಲಿ ಆಡಳಿತ ರೂಪಿಸಲು ಸಾಧ್ಯವೇ ಇಲ್ಲದ ಅಧಿಕಾರಿಗಳನ್ನು ಹೊಂದಿದ ಮೇಲೆ ಆ ವ್ಯವಸ್ಥೆ ಜನರಿಂದ ಇನ್ನಷ್ಟು ದೂರಕ್ಕೆ ಹೋಗುವುದಿಲ್ಲವೇ? ಅಲ್ಲಿಗೆ ಪ್ರಜಾಪ್ರಭುತ್ವವೇ ಬಲಹೀನಗೊಂಡಂತಾಗುವುದಿಲ್ಲವೇ? ಈ ಬಗ್ಗೆ ಚುನಾವಣೆಯಲ್ಲಿ ಮುಳುಗಿರುವ ನಮ್ಮನ್ನಾಳುವ ದೊರೆಗಳು ಇತರೆ ರಾಜ್ಯಗಳ ಜೊತೆ ಸೇರಿ ದನಿ ಈ ಹಿಂದಿ ಅಧಿಕಾರಶಾಹಿಯ ವಿರುದ್ದ ದನಿ ಎತ್ತಲಿ. ಸಂಸತ್ತಿನಲ್ಲಿ ಮೌನ ವೃತ ಆಚರಿಸುವ ಕರ್ನಾಟಕದ ರಾಷ್ಟ್ರೀಯ ಪಕ್ಷಗಳ ಸಂಸದರು ಬಾಯಿ ಬಿಟ್ಟು ಈ ಅನ್ಯಾಯದ ಬಗ್ಗೆ ಪ್ರತಿಭಟಿಸಿ ಕನ್ನಡದ ಅಭ್ಯರ್ಥಿಗಳ ಹಿತ ಕಾಯಲಿ ಅಥವಾ ಅದಕ್ಕೂ ಇವರ ಹೈಕಮಾಂಡಿನ ಅಪ್ಪಣೆ ಸಿಗಬೇಕೊ ಗೊತ್ತಿಲ್ಲ.