ಶನಿವಾರ, ಏಪ್ರಿಲ್ 24, 2010

ಒಬ್ಬ ಕ್ಯಾಪ್ಟನ್ ಗೋಪಿನಾಥ್, ಒಬ್ಬ ನಾರಾಯಣ ಮೂರ್ತಿ ಸಾಕಾ?

ಒಂದು ನಾಡಿನ ಏಳಿಗೆಯಲ್ಲಿ ಆ ನಾಡಿನ ಜನಾಂಗದ ಕಲಿಕೆ, ದುಡಿಮೆ, ಒಗ್ಗಟ್ಟಿನಷ್ಟೇ ಮಹತ್ವದ ಪಾತ್ರ ಆ ನಾಡಿಗರಲ್ಲಿರುವ ಸಾಧಿಸುವ ಛಲಕ್ಕೂ ಇದೆ ಎಂಬುದು ನನ್ನ ಗಟ್ಟಿ ನಂಬಿಕೆ. ಎರಡನೇ ವಿಶ್ವ ಯುದ್ಧದಲ್ಲಿ ನೆಲಸಮವಾಗಿದ್ದ ಜಪಾನ್ ದೇಶ, ಜಪಾನಿಗರು ಅಮೇರಿಕದ ಮೇಲೆ ಸೇಡು ತೀರಿಸಿಕೊಂಡಿದ್ದು ಅವರ ಮೇಲೆ ಯುದ್ದ ಮಾಡಿಯಲ್ಲ, ಬದಲಿಗೆ ನೆಲಸಮವಾಗಿದ್ದ ಆ ದೇಶವನ್ನು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಕಟ್ಟಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿ. ಛಲ ಅಂದ್ರೆ ಅದು !

ನಮ್ಮ ಯೋಗ್ಯತೆನೆ ಇಷ್ಟಾ?
ಜಗತ್ತಿನ ಯಾವುದೇ ಮುಂದುವರೆದ ದೇಶ ನೋಡಿ. ಆ ನಾಡಲ್ಲಿ, ಆ ಜನರಲ್ಲಿ ಕಲಿಕೆ, ದುಡಿಮೆ, ಛಲ, ಒಗ್ಗಟ್ಟು ಎಂಬ ನಾಲ್ಕು ವಿಷಯಗಳು ಸರಿಯಾಗಿರುತ್ತವೆ. ಇವತ್ತು ಕನ್ನಡ ನಾಡಲ್ಲಿ ಈ ನಾಲ್ಕು ವಿಷಯಗಳಲ್ಲಿ ಸಾಕಷ್ಟು ತೊಡಕುಗಳಿವೆ. ಛಲದ ಕೊರತೆಯಂತೂ ಸಾಕಷ್ಟಿದೆ. ದೊಡ್ಡ ಕನಸು ಕಾಣ್ತಿನಿ,ಮುನ್ನುಗ್ಗಿ ಸವಾಲು ಎದುರಿಸಿ ದೊಡ್ಡ ಗುರಿ ತಲುಪ್ತಿನಿ ಅನ್ನೋ ಛಲ ಕನ್ನಡಿಗರಲ್ಲಿ ತುಂಬಾ ಕಡಿಮೆ. ಎಲ್ಲೋ ಒಬ್ಬ ಕ್ಯಾಪ್ಟನ್ ಗೋಪಿನಾಥ್, ಒಬ್ಬ ನಾರಾಯಣ ಮೂರ್ತಿ, ಒಬ್ಬ ಸಿದ್ಧಾರ್ಥ ರಂತಹ ಉದ್ಯಮಿಗಳನ್ನು ಬಿಟ್ರೆ ದೊಡ್ಡ ಉದ್ಯಮ ಸ್ಥಾಪಿಸಿ ಎತ್ತರಕ್ಕೆ ಬೆಳೆದಿರುವ ಕನ್ನಡಿಗರೆಲ್ಲಿ? ಉಳಿದವರೆಲ್ಲ ಚಿಕ್ಕ ಪುಟ್ಟ ಕಂಪನಿಗಳಲ್ಲಿ ಪುಡಿಗಾಸಲ್ಲೇ ಜೀವನ ಕಳೆಯೋದಕಷ್ಟೇ ಯೋಗ್ಯರಾ? ಇತಿಹಾಸದಲ್ಲಿ ಛಲಕ್ಕೆ ಇನ್ನೊಂದು ಹೆಸರೇ ಕನ್ನಡಿಗರು. ಹಾಗಿದ್ದ ಈ ನಾಡು,ಈ ಜನ ಇವತ್ತು ಹೀಗಾಗಿದ್ದಾರೆ. ಕಾರಣಗಳೇನೇ ಇರಲಿ, ಇದು ಬದಲಾಗಬೇಕು. ಬದಲಾಗಲೇಬೇಕು. ಅದಿಲ್ಲದೇ ಈ ನಾಡಿಗೆ, ಈ ನಾಡಿನ ಮಕ್ಕಳಿಗೆ ಭವಿಷ್ಯವಿಲ್ಲ.

ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ
ಈ ಸಂದರ್ಭದಲ್ಲಿ ನನಗೆ ಅಣ್ಣಾವ್ರು ನೆನಪಾಗ್ತಾರೆ. ಚೆನ್ನೈನಲ್ಲಿ ತಮಿಳು ಚಿತ್ರದ ಜೆರಾಕ್ಸ್ ಕಾಪಿಯಂತಿದ್ದ ಕನ್ನಡ ಚಿತ್ರೋದ್ಯಮವನ್ನು ಬೆಂಗಳೂರಿಗೆ ಕರೆ ತರಲು, ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಅದನ್ನು ಕಟ್ಟುವಲ್ಲಿ ಅಣ್ಣಾವ್ರ ಕೊಡುಗೆ ಬಲು ದೊಡ್ಡದು. ಇವತ್ತು ಅವರ ಹುಟ್ಟಿದ ದಿನ. ಒಂದಿಡೀ ನಾಡನ್ನು, ನಾಡಿಗರನ್ನು ಭಾವನಾತ್ಮಕವಾಗಿ ಬೆಸೆದ, ಒಂದಿಡೀ ನಾಡಿಗೆ ಆತ್ಮ ಗೌರವ, ಸ್ವಾಭಿಮಾನದ ಕಿಡಿ ತುಂಬಿದ, ತಮ್ಮ ಅಭಿನಯದ ಚಿತ್ರಗಳ ಮೂಲಕ ಜನರಲ್ಲಿ ಸರಿದಾರಿಯಲ್ಲಿ ನಡೆಯುವಂತ ಮೌಲ್ಯಗಳನ್ನು ತುಂಬಿದ ಅಣ್ಣಾವ್ರನ್ನು ಈ ಹಾಡಿನೊಂದಿಗೆ ನೆನೆಯೋಣ. ನರನಾಡಿಯಲ್ಲಿ ಛಲದ ಬಿಸಿ ನೆತ್ತರು ತುಂಬುವ, ಸಾಧಿಸಬೇಕು ಅನ್ನುವ ಹಟ ತುಂಬುವ ಈ ಹಾಡು evergreen !



ಹುಟ್ಟು ಹಬ್ಬದ ಸವಿ ಸಹಿ ಹಾರೈಕೆಗಳು ಅಣ್ಣಾವ್ರೇ ...

ಶನಿವಾರ, ಏಪ್ರಿಲ್ 3, 2010

ಬೆಂಗಳೂರಿನ ಎಲ್ಲ ಕನ್ನಡದ ಮಕ್ಕಳು ಹೀಗೆ ಕನ್ನಡ ಮಾತಾಡಿದ್ರೆ ಎಷ್ಟು ಚೆಂದ !

ಮೊನ್ನೆ ಅಮೇರಿಕದಲ್ಲಿರೋ ಗೆಳೆಯನೊಬ್ಬ ಒಂದು ಯು-ಟ್ಯೂಬ್ ವಿಡಿಯೋ ಲಿಂಕ್ ಕೊಟ್ಟ. ಪುಟ್ಟ ಕಂದಮ್ಮ ತೊದಲುತ್ತ ಕನ್ನಡ ಮಾತಾಡೋ ಈ ವಿಡಿಯೋ ನಿಜಕ್ಕೂ ಖುಷಿ ಕೊಡ್ತು. ಅಮೇರಿಕಕ್ಕೆ, ಯುರೋಪಿಗೆ ಹೋದವರಿಗೆ ತಾಯ್ನಾಡು, ತಾಯ್ನುಡಿಯ ಸೆಳೆತ ಇಂತಹ ಒಳ್ಳೆ ಕೆಲಸಕ್ಕೆ ಸ್ಪೂರ್ತಿ ಕೊಡುತ್ತೆ.




ಅಮೇರಿಕದ ಈ ಕನ್ನಡದ ಕಂದನ ಕತೆ ಇಂತಾದ್ರೆ, ಇದೇ ವಯಸ್ಸಿನ ಕನ್ನಡದ ಮಗು ಬೆಂಗಳೂರಿನ ಮಾಲ್-ನಲ್ಲೋ, ಹೋಟೆಲ್-ನಲ್ಲೋ ನೋಡಿದ್ರೆ ಒಂದು ವ್ಯತ್ಯಾಸ ಅಂತೂ ಕಾಣುತ್ತೆ (ಎಲ್ಲ ಮಕ್ಕಳಿಗೂ ಅನ್ವಯಿಸಲ್ಲ!). ಇಲ್ಲಿ ಮಗು ಇಂಗ್ಲಿಷ್ ಅಲ್ಲಿ ಅರಳು ಹುರಿದಂತೆ ಮಾತಾಡಿದ್ರೆ, ಕನ್ನಡದ ಗಂಧ-ಗಾಳಿಯೂ ಇಲ್ಲದಂತೆ ಬೆಳೆದ್ರೆ ತಮ್ಮ ಜೀವನ ಪಾವನ ಆಯ್ತು, ಮಗುವಿನ ಭವಿಷ್ಯ secured ಆಯ್ತು ಅಂದುಕೊಳ್ಳೊ ಅಪ್ಪ-ಅಮ್ಮಂದಿರಿದ್ದಾರೆ ! ತಾಯ್ನುಡಿಯಿಂದ ಬೆಳೆವ ಮಗುವನ್ನು ಬೇರ್ಪಡಿಸುವುದು, ಆ ಮಗುವನ್ನು ತನ್ನ ತಾಯ್ನುಡಿ, ತಾಯ್ನುಡಿಯ ಸುತ್ತಲೂ ಕಟ್ಟಿಕೊಂಡಿರುವ ಸಂಸ್ಕೃತಿ, ಸೊಗಡು, ಇತಿಹಾಸ, ಜೀವನ ವಿಧಾನ, ಹಬ್ಬ, ಹರಿದಿನ, ಒಟ್ಟಾರೆ ತನ್ನತನದಿಂದಲೇ ವಂಚಿಸಿದಂತೆ ಅನ್ನುವುದು ನನ್ನ ಅನಿಸಿಕೆ.

ಹುಟ್ಟಿಂದಲೇ ಇಂಗ್ಲಿಷ್ ಮಾತಾಡೋ ಮಗುವಿಗೆ, ಕರ್ನಾಟಕ ಕಟ್ಟಲು ಆಲೂರು ವೆಂಕಟರಾಯರು ಜೀವನ ಸವೆಸಿದರು ಅನ್ನೋದು ಗೊತ್ತಾಗುತ್ತಾ? 50 ವರ್ಷಗಳ ಕಾಲ ಕನ್ನಡಿಗರನ್ನು ಭಾವನಾತ್ಮಕವಾಗಿ ಒಗ್ಗೂಡಿಸಿದ ಡಾ.ರಾಜ್ಕುಮಾರ್ ಯಾರು ಅಂತ ಗೊತ್ತಿರುತ್ತಾ? ಈ ಮಕ್ಕಳು ಓದೋ ICSE, CBSE ಸಿಲಾಬಸ್ ನೋಡಿದ್ರೆ, ಈ ಮಕ್ಕಳು ಕರ್ನಾಟಕದ ಗಂಧ-ಗಾಳಿ ಇಲ್ಲದೇ ಬೆಳಿತಾರೆ ಅನ್ನೋದಂತೂ ದಿಟ.  ಹೋಗಲಿ ರಾಜ್ಕುಮಾರ್ ಯಾರು ಅಂತ ಗೊತ್ತಿದ್ರೂ, ರಾಜ್ಕುಮಾರ್ ಅಂದ ತಕ್ಷಣ ಕನ್ನಡಿಗರು ಅಭಿಮಾನ ಪಡೋ ರೀತಿ, ಕನ್ನಡಿಗರು ಭಾವಾವೇಶಕ್ಕೆ ಒಳಗಾಗೋ ರೀತಿ ಇವೆಲ್ಲ ಎಂದಿಗಾದ್ರೂ ಅರ್ಥ ಆಗುತ್ತಾ? ಇವತ್ತು ಬೆಂಗಳೂರಲ್ಲಿ ಒಬ್ಬ ತಮಿಳನೋ, ತೆಲುಗನೋ, ಇಲ್ಲ ಹಿಂದಿಯವನೋ, ರಾಜ್ಕುಮಾರ್ ಸತ್ರೆ ಜನ ಹೀಗ್ಯಾಕೆ ದುಃಖ ಪಡ್ತಾರೆ ಅಂತ ಕೇಳಿದ ಪ್ರಶ್ನೆನಾ ನಾಳೆ, ಈ ಮಣ್ಣು, ಈ ಮಣ್ಣಿನ ಹಿರಿಮೆ, ಇತಿಹಾಸ ಗೊತ್ತಿಲ್ಲದ ಕನ್ನಡದ ಮಕ್ಕಳೇ ಕೇಳಿದ್ರೆ ಏನು ಅಚ್ಚರಿ ಪಡಬೇಡಿ.ಕನ್ನಡದ ಮಕ್ಕಳನ್ನು ತನ್ನ ಬೇರಿಂದಲೇ ಬೇರ್ಪಡಿಸೋ ಕೆಲಸ ಆಗ್ತಾ ಇರೋವಾಗ, ಕನ್ನಡದ ಮಕ್ಕಳು, ಯುವಕರು ಕನ್ನಡ ಸಾಹಿತ್ಯ, ಸಂಗೀತ, ಸಿನೆಮಾದಂತಹ ವಿಷಯಗಳ ಬಗ್ಗೆ ಆಸಕ್ತಿ ತಳೆಯುತ್ತಾ ಇಲ್ಲ ಅನ್ನೋದು ಬರೀ ಗೊಣಗಾಟವಾಗಿ ಉಳಿದುಬಿಡಲ್ವಾ?

ಕೊನೆ ಪಕ್ಷ, State syllabus ಇರಲಿ, ಇಲ್ಲ CBSE, ICSE Syllabus ಇರಲಿ, ಎಲ್ಲ ಪಠ್ಯಕ್ರಮದಲ್ಲೂ ಕನ್ನಡವನ್ನ, ಕನ್ನಡದ ಸರಿಯಾದ ಇತಿಹಾಸವನ್ನ ಕಲಿಸೋ ಕೆಲಸಕ್ಕೆ ಸರ್ಕಾರ ಮುಂದಾಗಬೇಕು. ಇದು ಮಕ್ಕಳಲ್ಲಿ ಕನ್ನಡ ಪ್ರಜ್ಞೆ ತುಂಬೋ ನಿಟ್ಟಿನಲ್ಲಿ ಬಲು ಅವಶ್ಯಕ.