ಮಂಗಳವಾರ, ಸೆಪ್ಟೆಂಬರ್ 20, 2011

ಮೋದಿ ಉಪವಾಸವೂ, ಬಿಜೆಪಿಯ ದ್ವಂದ್ವ ನಿಲುವುಗಳೂ..

ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಗುಜರಾತಿನಲ್ಲಿ ಶಾಂತಿ, ಸೌಹಾರ್ದತೆ ಬೆಳೆಯಲಿ ಎಂದು ಸದ್ಭಾವನಾ ಮಿಶನ್ ಹೆಸರಿನಲ್ಲಿ ಉಪವಾಸ ಕೈಗೊಂಡದ್ದು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಯಿತು. ಗುಜರಾತಿನ ಮೇಲೆ, ಅದರ ಅಸ್ಮಿತೆಯ ಮೇಲೆ ಕಳೆದ ಹತ್ತು ವರ್ಷಗಳಿಂದಲೂ ಬೇರೆ ಬೇರೆ ಮಾಧ್ಯಮಗಳು, ಬುದ್ದಿಜೀವಿಗಳು, ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೂ ಈ ಉಪವಾಸದ ಮೂಲಕ ಶಾಂತಿಯ ಉತ್ತರ ನೀಡುತ್ತಿದ್ದೇನೆ ಅನ್ನುವುದು ಮೋದಿಯವರ ವಾದವಾಗಿತ್ತು. ರಾಷ್ಟ್ರೀಯ ಪಕ್ಷವೊಂದರ ಪ್ರತಿನಿಧಿಯಾಗಿದ್ದು ಗುಜರಾತಿನ ಅಸ್ಮಿತೆ, ಗುಜರಾತಿನ ಸ್ವಾಭಿಮಾನ, ಗುಜರಾತಿನ ಏಳಿಗೆ ಅಂತ ಸ್ಥಳೀಯತೆಯ ಮಂತ್ರ ಜಪಿಸುತ್ತ ಒಕ್ಕೂಟ ವ್ಯವಸ್ಥೆ(federalism)ಯಲ್ಲಿ ರಾಜ್ಯಗಳ ಏಳಿಗೆಯಿಂದಲೇ ದೇಶದ ಏಳಿಗೆ ಸಾಧ್ಯ ಅನ್ನುವ ಸಂದೇಶ ಕೊಟ್ಟ ಅವರಿಗೆ ಅದೊಂದು ಕಾರಣಕ್ಕೆ ಅಭಿನಂದಿಸುವೆ. ಆದರೆ ಹಲವು ಸಂದರ್ಭಗಳಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಅವರು ಪ್ರತಿನಿಧಿಸುವ ಪಕ್ಷಕ್ಕಿರುವ ದ್ವಂದ್ವದ ನಿಲುವುಗಳಿಂದ ಇವರಿಗಾಗಲಿ, ಇವರ ಪಕ್ಷಕ್ಕಾಗಲಿ ಭಾರತಕ್ಕೆ ಒಕ್ಕೂಟ ವ್ಯವಸ್ಥೆಯೆನ್ನುವ ಆಡಳಿತ ವ್ಯವಸ್ಥೆ ಬೇಕು ಎಂಬ ಬಗ್ಗೆ  ನಿಜಕ್ಕೂ ಪೂರ್ತಿ ಬದ್ಧತೆ ಇದೆಯೇ ಅನ್ನುವ ಬಗ್ಗೆ ನನ್ನಲ್ಲಿ ಅನುಮಾನಗಳಂತೂ ಸಾಕಷ್ಟಿವೆ !

ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ರೆ ಸೊಸೆ ಕಡೆ
ಮೊನ್ನೆ ಮೊನ್ನೆ ಕೇಂದ್ರದ ಸರ್ಕಾರ ಗುಜರಾತಿನಲ್ಲಿ ಹಲವು ವರ್ಷಗಳಿಂದ ಲೋಕಾಯುಕ್ತ ಹುದ್ದೆಗೆ ಗುಜರಾತ್ ಸರ್ಕಾರ ಯಾರನ್ನು ನೇಮಿಸಿಲ್ಲ ಎಂದು ಅಲ್ಲಿನ ರಾಜ್ಯಪಾಲರ ಮೂಲಕ ತಾನೇ ಮುಂದೆ ನಿಂತು ಲೋಕಾಯುಕ್ತರ ನೇಮಕ ಮಾಡಿತು. ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸುವ ಮೂಲಕ ಒಕ್ಕೂಟ ವಿರೋಧಿ ಧೋರಣೆ ತೋರಿಸಿದ ಕೇಂದ್ರದ ಪ್ರತಿನಿಧಿಯಾದ ರಾಜ್ಯಪಾಲರ ವಿರುದ್ದ ಕೆಂಡಾಮಂಡಲವಾದ ಬಿಜೆಪಿ ಇದು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ನಡೆ ಎಂದು ರಾಷ್ಟ್ರಪತಿಗಳವರೆಗೆ ಹೋಗಿ ಪ್ರತಿಭಟಿಸಿತು. ಆದರೆ ಇದೇ ಬಿಜೆಪಿ ಕರ್ನಾಟಕದಂತಹ ರಾಜ್ಯದಿಂದ ರಾಜ್ಯಸಭೆಗೆ ಸ್ಥಳೀಯರನ್ನು ಆರಿಸಿ ಕಳಿಸಿ ಎಂದಾಗ, ನಮ್ಮದು ರಾಷ್ಟ್ರೀಯ ಪಕ್ಷ, ಹೀಗೆಲ್ಲ ಪ್ರಾಂತೀಯ ವಾದ ಒಪ್ಪುವುದಿಲ್ಲ ಎಂಬಂತೆ ವರ್ತಿಸಿ ಪರ ರಾಜ್ಯದ, ಕರ್ನಾಟಕದ ಬಗ್ಗೆ ನಯಾ ಪೈಸೆ ಕೆಲಸ ಮಾಡದ ನಿವೃತ್ತ ನಟಿಮಣಿಯೊಬ್ಬರನ್ನು, ಆಂಧ್ರದಲ್ಲಿ ಒಂದೇ ಒಂದು ಚುನಾವಣೆ ಗೆಲ್ಲಲಾಗದ ಮಹಾನ್ ರಾಷ್ಟ್ರನಾಯಕರೊಬ್ಬರನ್ನು ಕರ್ನಾಟಕದಿಂದ ರಾಜ್ಯ ಸಭೆಗೆ ಕಳಿಸಿತು. ಅಷ್ಟೇ ಅಲ್ಲ ರಾಜ್ಯಗಳನ್ನು ಪ್ರತಿನಿಧಿಸಲೆಂದೇ ಇರುವ ರಾಜ್ಯಸಭೆಗೆ ಸ್ಪರ್ಧಿಸುವ ಅಭ್ಯರ್ಥಿಯ ಹೆಸರು ಆಯಾ ರಾಜ್ಯದ ಮತದಾರರ ಪಟ್ಟಿಯಲ್ಲಿರಬೇಕು ಅನ್ನುವ ರಾಜ್ಯದ ಪರವಾಗಿದ್ದ ನಿಯಮವನ್ನು ಸಡಿಲಿಸಿ, ಯಾರೂ ಬೇಕಾದರೂ ಬಂದು ನಿಲ್ಲಬಹುದು ಅನ್ನುವಂತೆ ಬದಲಾಯಿಸಿದ್ದು ಮತ್ತು ಆ ಮೂಲಕ ಕನ್ನಡೇತರರನ್ನು ರಾಜ್ಯಸಭೆಗೆ ಕಳಿಸುವಂತಾಗಿದ್ದು ಇದೇ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಮಾಡಿದ ಕೆಲಸದಿಂದ ಅನ್ನುವುದನ್ನು ನೋಡಿದರೆ ಇವರ ಒಕ್ಕೂಟದ ಪರವಾಗಿನ ಎಲ್ಲ ಮಾತುಗಳು ತಮ್ಮ ಅನುಕೂಲಕ್ಕೆ ತಕ್ಕಾಗ ಮಾತ್ರ ಅನ್ನಿಸುವುದಿಲ್ಲವೇ? 

ದೀನ್ ದಯಾಳ್ ಉಪಾಧ್ಯಾಯ್ ಒಕ್ಕೂಟ ವ್ಯವಸ್ಥೆಯ ಪರವಾಗಿರಲಿಲ್ಲ !
ಹಿಂದೆ ಬ್ರಿಟಿಷರಿಂದ ಬಿಡುಗಡೆ ಸಿಕ್ಕಾದ ಇಷ್ಟೊಂದು ಭಾಷೆ, ಸಂಸ್ಕೃತಿ, ಆಚರಣೆ, ಜೀವನಶೈಲಿಯ ವೈವಿಧ್ಯತೆ ಇರುವ ದೇಶಕ್ಕೆ ಹೊಂದುವ ವ್ಯವಸ್ಥೆ ಯಾವುದಿರಬೇಕು ಅನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದ ನಂತರವೇ ಭಾರತಕ್ಕೆ ಒಕ್ಕೂಟ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸ್ಥಾಪಕ ಸದಸ್ಯರಲ್ಲೊಬ್ಬರಾದ ದೀನ್ ದಯಾಳ್ ಉಪಾಧ್ಯಾಯ್ ಅವರು ಈ ರೀತಿಯ ವ್ಯವಸ್ಥೆಯನ್ನು ಪ್ರತಿಭಟಿಸಿ, ಭಾರತಕ್ಕೆ ಏಕಕೇಂದ್ರ ಪ್ರಭುತ್ವ ಬೇಕೆ ಹೊರತು ಒಕ್ಕೂಟ ವ್ಯವಸ್ಥೆಯಲ್ಲ ಎಂದು ವಾದಿಸಿದ್ದರು. ಏಪ್ರಿಲ್ ೨೨-೨೫, ೧೯೬೫ ರಂದು ಮುಂಬೈನಲ್ಲಿ ಅವರು ನೀಡಿದ 4 ಅಂಶಗಳ ಭಾಷಣದಲ್ಲಿ ಹೇಳಿದ್ದು ಹೀಗಿತ್ತು:
According to the first para of the Constitution, "India that is Bharat will be a federation of States", i.e. Bihar Mata, Banga Mata, Punjab Mata, Kannada Mata, Tamil Mata, all put together make Bharat Mata. This is ridiculous. We have thought of the provinces as limbs of Bharat Mata and not as individual mother. Therefore our constitution should be unitary instead of federal.

ಅದರ ಬಗ್ಗೆ ಹೆಚ್ಚಿನ ಓದಿಗೆ ಕರ್ನಾಟಿಕ್ ಬ್ಲಾಗಿನಲ್ಲಿ ಬಂದಿದ್ದ ಒಂದು ಬರಹದ ಈ ಕೊಂಡಿ ನೋಡಿ.

ಕಾಂಗ್ರೆಸಿನಷ್ಟೇ ಟೊಳ್ಳು !
ಯಾವ ಪಕ್ಷದ ಸ್ಥಾಪಕರಲ್ಲೇ ಭಾರತವೆನ್ನುವುದು ಒಕ್ಕೂಟವಾಗದೇ ದೆಹಲಿಯೆಂಬ ಅಧಿಕಾರ ಕೇಂದ್ರದ ಅಡಿಯಾಳಾಗಿರಬೇಕು ಅನ್ನುವ ನಿಲುವಿತ್ತೋ, ಆ ಪಕ್ಷಕ್ಕೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ನಿಜವಾದ ಕಾಳಜಿ ಇದೆ ಅನ್ನುವುದನ್ನು ನಂಬುವುದು ಕೊಂಚ ಕಷ್ಟವಲ್ಲವೇ? ಕಳೆದ ಹಲ ದಶಕಗಳ ರಾಜಕೀಯದ ಅನುಭವದಿಂದ  ಭಾರತಕ್ಕೆ ಒಕ್ಕೂಟ ವ್ಯವಸ್ಥೆಯೇ ಸರಿಯೆಂಬ ನಿಲುವಿಗೆ ಬಿಜೆಪಿ ಬಂದಿದ್ದಲ್ಲಿ ಅದು ಸ್ವಾಗತಾರ್ಹ. ಆದರೆ ಗುಜರಾತಿನಲ್ಲೊಂದು ರೀತಿ, ಕರ್ನಾಟಕದಲ್ಲೊಂದು ರೀತಿ ನಡೆದುಕೊಳ್ಳುವ ಅವರ ನಡವಳಿಕೆ ಗಮನಿಸಿದರೆ ಒಕ್ಕೂಟ ವ್ಯವಸ್ಥೆಯ ಬಗೆಗಿನ ಅವರ ಬದ್ಧತೆ ಕಾಂಗ್ರೆಸಿನಷ್ಟೇ ಟೊಳ್ಳಾಗಿದೆ ಅನ್ನಿಸದೇ ಇರದು.

ಮಂಗಳವಾರ, ಸೆಪ್ಟೆಂಬರ್ 6, 2011

ಯಾಕೆ ಕರ್ನಾಟಕದ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ಮಾಯವಾಗುತ್ತಿದೆ?

ಇತ್ತಿಚೆಗೆ ಎಲ್.ಐ.ಸಿ ಕಚೇರಿಯಿಂದ ಪಾಲಿಸಿಯೊಂದರ ಬಗ್ಗೆ ಪತ್ರವೊಂದು ನನ್ನ ಹತ್ತಿರದ ಸಂಬಂಧಿಯೊಬ್ಬರಿಗೆ ಬಂದಿತ್ತು. ಅವರ ಮನೆಗೆ ಹೋದಾಗ ಅವರು ಅದನ್ನು ನನಗೆ ನೀಡಿ, ಏನಂತ ಬರೆದಿದ್ದಾರೆ ಅಂತ ಕೇಳಿದರು. ಆ ಪತ್ರ ನೋಡಿದರೆ ಕೇವಲ ಇಂಗ್ಲಿಷ್ ಮತ್ತು ಹಿಂದೀಯಲ್ಲಿ ಮಾಹಿತಿ ಹೊಂದಿತ್ತು. ಪತ್ರ ಓದಿ, ಅವರಿಗೆ ಏನು ಮಾಡಬೇಕು ಅನ್ನುವುದನ್ನೆನೋ ಹೇಳಿದೆ, ಆದರೆ ಅಚ್ಚರಿ ಅನಿಸಿದ್ದು, ಬೆಂಗಳೂರಿನ ಸ್ಥಳೀಯ ಎಲ್.ಐ.ಸಿ ಕಚೇರಿಯಿಂದ ಬಂದ ಪತ್ರ ಯಾಕೆ ಕನ್ನಡದಲ್ಲಿಲ್ಲ ಅನ್ನುವುದು. "ಭಾರತೀಯ ಜೀವ ವಿಮಾ ನಿಗಮ, ಬೆಂಗಳೂರು ವಿಭಾಗ" ಅನ್ನುವ ನಾಲ್ಕು ಪದ ಕನ್ನಡದಲ್ಲಿದ್ದದ್ದು ಬಿಟ್ಟರೆ ಇನ್ನೆಲ್ಲ ಮಾಹಿತಿ ಹಿಂದೀ ಮತ್ತು ಇಂಗ್ಲಿಷಿನಲ್ಲಿತ್ತು. ನಾಲ್ಕು ಪದ ಕನ್ನಡ ಬರೆಯುವವರಿಗೆ ಅದ್ಯಾಕೆ ಇಡೀ ಪತ್ರವನ್ನೇ ಕನ್ನಡದಲ್ಲಿ ಕೊಡಲಾಗುತ್ತಿಲ್ಲ, ಇದರ ಹಿಂದಿರುವ ಕಾರಣವಾದರೂ ಏನು ಅನ್ನುವುದನ್ನು ತಿಳಿಯಬೇಕು ಅನ್ನಿಸಿ ಎಲ್.ಐ.ಸಿಯ ವೆಬ್ ಸೈಟ್ ಮತ್ತಿತರ ಸರ್ಕಾರಿ ತಾಣಗಳನ್ನು ಜಾಲಾಡುವಾಗ ಗೊತ್ತಾದದ್ದು, ಇದು ಕಣ್ ತಪ್ಪಿನಿಂದ ಆದ ತಪ್ಪಾಗಿರದೇ, ಬೇಕು ಅಂತಲೇ ಕನ್ನಡ ಕೈಬಿಟ್ಟು ಹಿಂದಿಯಲ್ಲಿ ಎಲ್ಲ ಮಾಹಿತಿ ಕೊಡುವ ಕೆಲಸ ಎಲ್.ಐ.ಸಿ ಮಾಡುತ್ತಿದೆ ಅನ್ನುವುದು ಮತ್ತು ಅಂತಹದೊಂದು ತಪ್ಪನ್ನು ಎಲ್.ಐ.ಸಿ ಕೈಯಲ್ಲಿ ಮಾಡಿಸುತ್ತಿರುವುದು ಕೇಂದ್ರ ಸರ್ಕಾರದ ರಾಜಭಾಷಾ ಆಯೋಗ ಅನ್ನುವ "ಯಾವುದೇ ಹಾದಿಯಲ್ಲಾದರೂ ಸರಿ ಆಡಳಿತದಲ್ಲಿ  ಹಿಂದೀ ಬಳಸುವಂತೆ ಮಾಡಬೇಕು" ಅನ್ನುವ ವೈವಿಧ್ಯತೆ ವಿರೋಧಿ, ಹೇರಿಕೆ ಮನಸ್ಥಿತಿಯ ಸಂಸ್ಥೆ ಅನ್ನುವುದು.

ಯಾವ ಹಾದಿಯಾದರೂ ಸರಿ, ಹಿಂದಿ ಒಪ್ಪಿಕೊಳ್ಳುವಂತೆ ಮಾಡಿ !
ಕರ್ನಾಟಕದಲ್ಲಿ ವ್ಯಾಪಾರ ಮಾಡುವ ಯಾವುದೇ ಸಂಸ್ಥೆ ಸಹಜವಾಗಿ ಇಲ್ಲಿನ ಸ್ಥಳೀಯ, ಅಧಿಕೃತ ಮತ್ತು ಜನರ ಭಾಷೆಯಾದ ಕನ್ನಡದಲ್ಲಿ ವ್ಯವಹರಿಸುವುದು ಕಾಮನ್ ಸೆನ್ಸ್. ಆದರೆ ಅದ್ಯಾಕೆ ಕೇಂದ್ರ ಸರ್ಕಾರಿ ಕಚೇರಿಗಳಾದ ಬ್ಯಾಂಕು, ತೆರಿಗೆ, ರೈಲ್ವೆ, ಅಂಚೆ ಹೀಗೆ ಜನಸಾಮಾನ್ಯರು ಬಳಸುವ ಹೆಚ್ಚಿನ ಇಲಾಖೆಗಳ ಕಚೇರಿಗಳಲ್ಲಿ ಕನ್ನಡ ಕೈ ಬಿಟ್ಟು, ಇಲ್ಲವೇ ಕಾಟಾಚಾರಕ್ಕೆ ಅನ್ನುವಂತೆ ಎರಡು ಅಕ್ಷರ ಬಳಸಿ, ಎಲ್ಲೆಡೆ ಹಿಂದೀಯನ್ನೇ ಬಳಸಬೇಕು ಅನ್ನುವ ನಿಲುವು ಯಾಕಿದೆ ಎಂದು ಹುಡುಕಿದರೆ ಕಾಣಿಸುವುದು ರಾಜಭಾಷಾ ಆಯೋಗ ಅನ್ನುವ ಪ್ರಜಾಪ್ರಭುತ್ವ ವಿರೋಧಿ,ವೈವಿಧ್ಯತೆಯನ್ನು ಶಾಪದಂತೆ ಕಾಣುವ, ಒಗ್ಗಟ್ಟಿನ ಹೆಸರಲ್ಲಿ ಒಂದು ಪ್ರದೇಶದ ಭಾಷೆಯಾದ ಹಿಂದೀಯನ್ನು ಎಲ್ಲರ ಮೇಲೂ ಹೇರಬೇಕು ಅನ್ನುವ ಮನಸ್ಥಿತಿಯ ಸಂಸ್ಥೆ.  ಒತ್ತಾಯ, ಆಮಿಷ, ವಿಶ್ವಾಸ ಹೀಗೆ ಯಾವ ಹಾದಿಯಲ್ಲಾದರೂ ಸರಿ, ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದೀಯನ್ನು ಆಡಳಿತದ ಭಾಷೆಯಾಗಿಸಬೇಕು ಅನ್ನುವುದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾದ ಭಾರತಕ್ಕೆ ಬಗೆಯುತ್ತಿರುವ ದ್ರೋಹವೆನ್ನಿಸುವುದಿಲ್ಲವೇ?

ರಾಜಭಾಷೆ ಅನುಷ್ಟಾನಕ್ಕಾಗಿ ಸಂಸತ್ ಸದಸ್ಯರ ಸಮಿತಿ
ಇವರೆನೋ ಹಿಂದೀಯನ್ನು ಅಧಿಕೃತ ಭಾಷೆ ಎಂದು ಘೋಷಿಸಿಕೊಂಡು ಅದನ್ನು ಎಲ್ಲೆಡೆ ಹೇರಲು ನೂರಾರು ತಂತ್ರಗಳನ್ನು ಹೊಸೆದುಕೊಂಡು ಯುದ್ಧಕ್ಕೆ ಹೊರಟಂತೆ ಹೊರಟು ಎಲ್ಲೆಡೆ ಹಿಂದೀ ಹೇರಲು ಶುರು ಹಚ್ಚಿಕೊಂಡರು, ಆದರೆ ಬಹುಸಂಖ್ಯಾತ ಜನರ ನುಡಿಯಾಗಿರದ ಹಿಂದೀಗೆ ಯಾವಾಗ ಇವರು ಅಂದುಕೊಂಡ ಮಟ್ಟದಲ್ಲಿ ಮನ್ನಣೆ, ಒಪ್ಪಿಗೆ ಸಿಗಲಿಲ್ಲವೋ ಆಗ ಶುರುವಾಗಿದ್ದೇ "ರಾಜಭಾಷೆ ಅನುಷ್ಟಾನಕ್ಕಾಗಿ ಸಂಸತ್ ಸದಸ್ಯರ ಸಮಿತಿ" ಅನ್ನುವ ಇನ್ನೊಂದು ಪ್ರಜಾಪ್ರಭುತ್ವ ವಿರೋಧಿ ಸಮಿತಿ. ಈ ಸಮಿತಿಯಲ್ಲಿರುವ ಹಿಂದೀ ಪ್ರೇಮಿ ಸಂಸದರೆಲ್ಲ ಸೇರಿ ರೈಲ್ವೆ, ವಿಮೆ, ಆದಾಯ ತೆರಿಗೆ, ಬ್ಯಾಂಕು, ಅಂಚೆ, ಸಾರ್ವಜನಿಕ ಸ್ವಾಮ್ಯದ ಹತ್ತಾರು ಸಂಸ್ಥೆಗಳು ಹೀಗೆ ದೇಶಾದ್ಯಂತ ಸಾವಿರಾರು ಕಚೇರಿಗಳನ್ನು ಸಮೀಕ್ಷೆ ಮಾಡಿ ಆಡಳಿತ, ತರಬೇತಿ, ಉದ್ಯೋಗ, ಶಿಕ್ಷಣ, ಜಾಹೀರಾತು ಹೀಗೆ ಎಲ್ಲ ಹಂತದಲ್ಲೂ ಹಿಂದೀಯ ಬಳಕೆಯನ್ನು ಹೆಚ್ಚಿಸಲು ಏನೇನು ಮಾಡಬೇಕು ಅನ್ನುವ ಶಿಫಾರಸ್ಸುಗಳನ್ನು ರಾಷ್ಟ್ರಪತಿಗಳಿಗೆ ಕಳಿಸುವ ಮತ್ತು ರಾಷ್ಟ್ರಪತಿಗಳು ಅದನ್ನು ಕಾನೂನಾಗಿಸುವಂತೆ ಸರ್ಕಾರಕ್ಕೆ ಕಳಿಸುವ ಮಟ್ಟಿಗೆ "ಹಿಂದೀ"ಯನ್ನು ಶತಾಯ ಗತಾಯ ಹೇರಲೇಬೇಕು ಎಂದು ಪಣ ತೊಟ್ಟಿರುವ ವ್ಯವಸ್ಥೆ ಇಂದು ನಮ್ಮ ನಡುವೆ ಇದೆ.

ಹಿಂದಿ ಸಪ್ತಾಹವೆನ್ನುವ ಗಾಯದ ಮೇಲೆ ಉಪ್ಪು ಸವರುವ ಹೀನ ಕೆಲಸ
ಅದು ಸಾಲದು ಎಂಬಂತೆ ಪ್ರತಿ ವರ್ಷ ಸೆಪ್ಟೆಂಬರ್ 7ರಿಂದ 14ರವರೆಗೆ ಹಿಂದೀ ಸಪ್ತಾಹ ಅನ್ನುವ ಹೆಸರಿನಲ್ಲಿ ಒಂದು ವಾರ ಎಲ್ಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದೀ ಬಳಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳು, ಹಿಂದೀಯನ್ನು ಹೆಚ್ಚೆಚ್ಚು ಬಳಸುವ ಹಿಂದೀ ಮತ್ತು ಹಿಂದೀಯೇತರರಿಗೆ ಬಹುಮಾನ, ಬಡ್ತಿ, ಪ್ರಶಸ್ತಿ ಕೊಡುವ, ಆ ಮೂಲಕ ಹಿಂದೀಯನ್ನು ಇನ್ನಷ್ಟು ವ್ಯಾಪಕಗೊಳಿಸುವ ಸಂಚು ನಮ್ಮದೇ ತೆರಿಗೆ ಹಣದಲ್ಲಿ ನಡೆಯುತ್ತಿರುವ ಅನ್ಯಾಯ ನಮ್ಮೆಲ್ಲರ ಕಣ್ಣ ಮುಂದಿದೆ. ಎಲ್ಲ ಭಾಷೆಗಳೂ ಸಮಾನ, ಎಲ್ಲ ಜನರು ಸಮಾನ ಅನ್ನುವ ಪರಿಕಲ್ಪನೆಯೊಂದಿಗೆ ಅಸ್ತಿತ್ವಕ್ಕೆ ಬಂದ ಭಾರತವೆಂಬ ಭಾಷಾವಾರು ಪ್ರಾಂತ್ಯಗಳ ಒಕ್ಕೂಟ ಈ ರೀತಿ ಒಂದು ನುಡಿಯ ಬೆನ್ನ ಹಿಂದೆ ನಿಂತು, ಎಲ್ಲೆಲ್ಲಿ ಯಾವ ಯಾವ ನುಡಿಗಳು ಸಹಜವಾಗಿ ಉದ್ಯೋಗದ, ವ್ಯವಹಾರದ, ಆಡಳಿತದ ಭಾಷೆಯಾಗಿರಬೇಕಿತ್ತೋ ಅಲ್ಲಿಂದ ಅವೆಲ್ಲವನ್ನು ಬುಡಸಮೇತ ಕಿತ್ತು, ಹಿಂದೀಯನ್ನು ಸ್ಥಾಪಿಸುತ್ತಿರುವುದನ್ನು ಸಮಾನತೆ ಎಂದು ಕರೆಯಲಾದೀತೆ? ನ್ಯಾಯವೆಂದು ಕರೆಯಲಾದೀತೆ?

ಈಗ ಮಾಡದಿದ್ದರೆ ಇನ್ನೆಂದೂ ಮಾಡಲಾಗದು !
ಭ್ರಷ್ಟಾಚಾರದಿಂದ ಬೇಸತ್ತ ಜನರು ಇತ್ತಿಚೆಗೆ ಪ್ರತಿಭಟಿಸಿದಂತೆ ವೈವಿಧ್ಯತೆಯನ್ನು ಶಾಪದಂತೆ ಕಾಣುತ್ತ, ಒಂದು ದೇಶ- ಒಂದು ಭಾಷೆ ಒಗ್ಗಟ್ಟಿಗೆ ದಾರಿ ಅನ್ನುತ್ತ ಈ ದೇಶದ ಒಗ್ಗಟ್ಟನ್ನು ಒಡೆಯುತ್ತಿರುವ ಇಂತಹ ಜನ ವಿರೋಧಿ ನೀತಿಗಳನ್ನು ಅದೇ ರೀತಿ ಪ್ರತಿಭಟಿಸಬೇಕಾದ ಅಗತ್ಯ ಇಂದು ಎಲ್ಲ ಹಿಂದೀಯೇತರ ಭಾರತೀಯರ ಮೇಲಿದೆ. ಹಿಂದೀ ಸಪ್ತಾಹ ನಡೆಯುವ ಇದೇ ಸಮಯದಲ್ಲಿ ಹಿಂದೀ ಹೇರಿಕೆಯಿಂದಾಗುತ್ತಿರುವ ಕೆಡುಕುಗಳನ್ನು ಮನಗಾಣುವ, ಇತರರಿಗೆ ಮನವರಿಕೆ ಮಾಡುವ ಕೆಲಸ ನಾವೆಲ್ಲರೂ ಮಾಡಬೇಕಿದೆ. ನಿಮ್ಮ ಸಾಮಾಜಿಕ ಸಂಪರ್ಕ ತಾಣವಿರಲಿ, ಅಂತರ್ಜಾಲ ತಾಣವಿರಲಿ, ಗುಂಪಿರಲಿ, ಅಲ್ಲೆಲ್ಲ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಎಲ್ಲ ಸಾಧನಗಳ ಮೂಲಕ ಹಿಂದೀ ಹೇರಿಕೆಗೆ (ಹಿಂದೀ ಭಾಷೆ ಅಥವಾ ಭಾಷಿಕರ ಬಗ್ಗೆಯಲ್ಲ) ಇರುವ ನಿಮ್ಮ ವಿರೋಧವನ್ನು ದಾಖಲಿಸಿ. ಹೆಚ್ಚೆಚ್ಚು ಜನರಲ್ಲಿ ಈ ತಪ್ಪು ಭಾಷಾ ನೀತಿಯ ಬಗ್ಗೆ ಅರಿವು ಮೂಡಿದಲ್ಲಿ ಮಾತ್ರ ಇಂತಹ ಹೇರಿಕೆಯ ನೀತಿಗಳು ರದ್ದಾಗಿ, ಎಲ್ಲ ಭಾಷೆಗಳಿಗೂ ಸಮಾನ ಗೌರವ ಕೊಡುವ ವ್ಯವಸ್ಥೆ ಮುಂದೊಂದು ದಿನ ಬರಬಹುದು. ಈಗ ಎಚ್ಚರ ತಪ್ಪಿದರೆ ಮುಂದೆಂದೂ ಇದನ್ನು ಸರಿಪಡಿಸಿಕೊಳ್ಳಲಾಗದು ಅನ್ನುವುದನ್ನು ಮರೆಯದಿರೋಣ ಗೆಳೆಯರೆ..