ಭಾನುವಾರ, ಆಗಸ್ಟ್ 21, 2011

ನಾನ್ಯಾಕೆ ಜನಲೋಕಪಾಲ್ ಮಸೂದೆಯ ಪರವಾಗಿಲ್ಲ..

ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ದೇಶದಲ್ಲಿ ಅದಕ್ಕೆ ಪರಿಹಾರವಾಗಿ ಜನ್ ಲೋಕ್ ಪಾಲ್ ಅನ್ನುವ ಮಸೂದೆ ಜಾರಿಯಾಗಬೇಕು ಎಂದು ಅಣ್ಣಾ ಹಜಾರೆ ನೇತೃತ್ವದ ತಂಡ ಹೋರಾಟ ಮಾಡುತ್ತಿದೆ. ಕಳೆದ ಹಲವು ತಿಂಗಳಿಂದ ಜನರು ನಿಬ್ಬೆರಗಾಗುವಂತಹ ಹತ್ತು ಹಲವು ಭ್ರಷ್ಟಾಚಾರದ ಪ್ರಕರಣಗಳು ಬೆಳಕಿಗೆ ಬಂದ ಸಂದರ್ಭದಲ್ಲಿ ಈ ಹೋರಾಟದಿಂದಲಾದರೂ ಭ್ರಷ್ಟಾಚಾರ ಅಂತ್ಯ ಕಾಣಲಿ ಎಂದು ಜನಸಾಮಾನ್ಯರು ಬಯಸಿದ್ದರಲ್ಲಿ ಅಚ್ಚರಿಯಿಲ್ಲ. ಚುನಾವಣಾ ಸುಧಾರಣೆಗಳ ಮೂಲಕ ಯೋಗ್ಯರು ಆಯ್ಕೆಯಾಗಿ ಬರುವಂತಾಗುವ ಬದಲಾವಣೆ ಮತ್ತು ಆರ್ಥಿಕ ಸುಧಾರಣೆಗಳ ಮೂಲಕ ಸರ್ಕಾರದ ಪಾತ್ರ ಕಡಿಮೆ ಮಾಡಿ ಹೆಚ್ಚು ಪರಿಣಾಮಕಾರಿಯಾದ ಮತ್ತು ಗುಣಮಟ್ಟದ ಸೇವೆಯನ್ನು ಜನರಿಗೆ ನೀಡುವಂತಹ ಬದಲಾವಣೆಗಳು ಬಂದಾಗ ಭ್ರಷ್ಟಾಚಾರ ಕಡಿಮೆಯಾಗುವುದೇ ಹೊರತು ದೆಹಲಿಯಲ್ಲಿ ಒಬ್ಬ ಲೋಕಪಾಲ್ ಅನ್ನುವ ನ್ಯಾಯಾಂಗ, ಸರ್ಕಾರ, ಸಂಸತ್ತು ಎಲ್ಲವನ್ನೂ ಮೀರಿದ ಸರ್ವ ಶಕ್ತನನ್ನು ಕೂರಿಸುವುದರಿಂದಲ್ಲ ಅನ್ನುವುದು ನನ್ನ ಅನಿಸಿಕೆ. ಹಾಗಿದ್ದರೆ ಲೋಕ್ ಪಾಲ್ ಅಲ್ಲಿರುವ ತೊಂದರೆ ಏನು? ಅಣ್ಣ ಹಜಾರೆಯವರ ಹೋರಾಟದಲ್ಲಿ ಏನು ತೊಡಕಿದೆ ಅನ್ನುವುದನ್ನು ತಕ್ಷಶಿಲ ಅನ್ನುವ ಚಿಂತಕರ ಸಂಸ್ಥೆಯನ್ನು ನಡೆಸುವ ಹಾಗೂ ಪ್ರಗತಿ ಅನ್ನುವ ಪತ್ರಿಕೆ ನಡೆಸುವ ಬೆಂಗಳೂರಿನ ನಿತಿನ್ ಪೈ ಬರೆದಿರುವ ಬರಹವೊಂದು ಗಮನ ಸೆಳೆಯುತ್ತೆ. ಪ್ರಶ್ನೋತ್ತರ ಮಾದರಿಯಲ್ಲಿ ಬರೆದಿರುವ ಅವರ ಬರಹವನ್ನು ಕನ್ನಡಕ್ಕೆ ಅನುವಾದಿಸಿ, ಅವರ ಅನುಮತಿಯೊಂದಿಗೆ ಇಲ್ಲಿ ಪ್ರಕಟಿಸಿರುವೆ.

ಭ್ರಷ್ಟಾಚಾರವನ್ನು ಹೊಡೆದೊಡಿಸಲು ಲೋಕಪಾಲ್ ಬೇಕೆ?
ಇಲ್ಲ. ಅದು ಬೇಕಿಲ್ಲ. ಅಷ್ಟೇ ಅಲ್ಲ, ಅದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವುದು. ಅಂಕೆ ಮೀರಿ ಎಲ್ಲ ರಂಗದಲ್ಲೂ ಹೆಚ್ಚೆಚ್ಚು ಸರ್ಕಾರದ ಪಾತ್ರವಿರುವುದು, ಗೊಂದಲಮಯವಾಗಿರುವ, ಸಂಕೀರ್ಣವಾದ  ಬೇಡದ ನೀತಿ ನಿಯಮಗಳೆಲ್ಲವೂ ಭಾರತದಲ್ಲಿ ಭ್ರಷ್ಟಾಚಾರದ ಹೆಚ್ಚಳಕ್ಕೆ ಕಾರಣವಾಗಿವೆ. ಲೋಕಪಾಲ್ ಮೂಲಕ ಈಗಾಗಲೇ ಸಂಕೀರ್ಣವಾಗಿರುವ ಈ ವ್ಯವಸ್ಥೆಗೆ ಇನ್ನೊಂದು ಶಕ್ತಿಶಾಲಿ ಪದರವನ್ನು ಸೇರಿಸುವುದು ವ್ಯವಸ್ಥೆಯನ್ನು ಇನ್ನಷ್ಟು ಗೊಜಲಾಗಿಸುವುದು. ಈ ರೀತಿಯ ಗೊಂದಲಮಯ, ಸಂಕೀರ್ಣವಾದ ಸ್ಥಿತಿಯೇ ಲಂಚ ಕೊಡುವವನಿಗೂ, ಪಡೆಯುವವನಿಗೂ ಪೂರಕವಾಗುವಂತಹ ಭ್ರಷ್ಟಾಚಾರದ ವಾತಾವರಣ ನಿರ್ಮಿಸುತ್ತದೆ.

ಲೋಕಪಾಲ್ ಯಾಕೆ ಪರಿಹಾರವಲ್ಲ ಅನ್ನುವ ವಿಷಯದಲ್ಲಿ ನಿತೀನ್ ಪೈ ಅವರ ಇನ್ನೊಂದು ಅಂಕಣ ಇಲ್ಲಿದೆ. ಹಾಗೂ ಪ್ರಗತಿಯಲ್ಲಿ ಪ್ರಕಟವಾದ ಅಂಬಾ ಸಲೇಲಕರ್ ಅವರ ಅಂಕಣಕ್ಕೆ ಇಲ್ಲಿ ನೋಡಿ.

1A. ಹಾಗಿದ್ರೆ ಸರ್ಕಾರಿ ಲೋಕಪಾಲ್ ಮಸೂದೆ ಜನಲೋಕಪಾಲ್ ಗಿಂತ ಒಳ್ಳೆಯದೇ?
ಇಲ್ಲ. ನಮಗೆ ಯಾವುದೇ ಲೋಕಪಾಲ್ ಬೇಕಾಗಿಲ್ಲ. ಈಗಾಗಲೇ ಇರುವ ಸಂಸ್ಥೆಗಳಾದ ಸಿಎಜಿ, ಸಿವಿಸಿ, ಸಿಬಿಐ ಮತ್ತು ಚುನಾವಣಾ ಆಯೋಗಗಳಿಗೆ ಇನ್ನಷ್ಟು ಸ್ವತಂತ್ರವಾಗಿ ಕೆಲಸ ಮಾಡಲು ಆಗುವಂತೆ ಸ್ವಾತಂತ್ರ್ಯ ಕೊಟ್ಟರೂ ಸಾಕು, ಅವು ಸಮರ್ಥವಾಗಿ ಭ್ರಷ್ಟಾಚಾರವನ್ನು ಅಂಕೆಯಲ್ಲಿಡಬಲ್ಲವು. ಈಗಿರುವ ಈ ಸಂಸ್ಥೆಗಳಿಗೆ ರಾಜಕೀಯ ಬಣ್ಣ ಬಳಿದು ಅವುಗಳು ಮಹತ್ವ ಕಳೆದುಕೊಳ್ಳುವುದನ್ನು ತಪ್ಪಿಸಲಾಗದ ನಾವು ಲೋಕಪಾಲ್ ಅನ್ನುವ ಸಂಸ್ಥೆಗೆ ರಾಜಕೀಯದ ವಾಸನೆ ತಾಕದೇ, ಅದು ಮಹತ್ವ ಕಳೆದುಕೊಳ್ಳುವುದನ್ನು ಹೇಗೆ ತಡೆಯಬಲ್ಲೇವು? ಲೋಕಪಾಲ್ ರಾಜಕೀಯದ ಬಣ್ಣ ಪಡೆಯದಂತೆ, ಮಹತ್ವ ಕಳೆದುಕೊಳ್ಳದಂತೆ ನೋಡಿಕೊಳ್ಳಬಲ್ಲೆವು ಅನ್ನುವುದೇ ಆದರೆ, ಈಾಗಲೇ ಇರುವ  ಸಿಎಜಿ, ಸಿವಿಸಿ, ಸಿಬಿಐ ಮತ್ತು ಚುನಾವಣಾ ಆಯೋಗಗಳಂತಹ ಸಂಸ್ಥೆಗಳಿಗೆ ಸ್ವಾಯತ್ತತೆ ಕೊಟ್ಟು ಅವುಗಳ ನಂಬಿಕೆಯನ್ನು ಮರಳಿ ಸ್ಥಾಪಿಸಲು ಅದೇಕೆ ಆಗದು?  


2. ಲೋಕಪಾಲ್ ಬೇಡ ಅನ್ನುವುದಾದರೆ ಬೇರಾವ ಹಾದಿಯಿದೆ?
ಇದಕ್ಕುಳಿದಿರುವ ಹಾದಿಯೆಂದರೆ ಅರ್ಥ ವ್ಯವಸ್ಥೆಯ  ಎರಡನೆ ಪೀಳಿಗೆಯ ಸುಧಾರಣೆಗಳೊಂದಿಗೆ ಮುಂದುವರೆಯುವುದು. ವಸ್ತು ಸ್ಥಿತಿ ಏನೆಂದರೆ ಸುಧಾರಣೆ(reforms) ಗಳು ಭ್ರಷ್ಟಾಚಾರವನ್ನು ಒಂದು ಹಂತಕ್ಕೆ ಕಡಿಮೆ ಮಾಡಿವೆಯಾದರೂ ಸರ್ಕಾರದ ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ಹೆಚ್ಚಾಗಿವೆ ಅನ್ನುವುದು ಸುಳ್ಳಲ್ಲ. 1989ರಲ್ಲಿ ಸಾಮಾನ್ಯ ಮನುಷ್ಯನೊಬ್ಬ ಒಂದು ಟೆಲಿಪೋನ್ ಸಂಪರ್ಕ ಪಡೆಯಲು ಲಂಚ ಕೊಡಬೇಕಾದ ಸ್ಥಿತಿ ಇತ್ತು, ಆದರೆ 2005ರ ಹೊತ್ತಿಗೆ ಲಂಚ ಕೊಡದೇ ಫೋನ್ ಸಂಪರ್ಕವನ್ನು ನಿಮಿಷಗಳಲ್ಲಿ ಪಡೆಯುವ ಬದಲಾವಣೆ ಬಂದಿದೆ. 2010ರಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ 2ಜಿ ಯಂತಹ ದೊಡ್ಡ ಹಗರಣವೇ ಬೆಳಕಿಗೆ ಬಂತು, ಆದರೆ ಇದಕ್ಕೆ ಯುಪಿಎ ಸರ್ಕಾರ ಆರ್ಥಿಕ ಸುಧಾರಣೆಗಳಿಗೆ ಎಳ್ಳು-ನೀರು ಬಿಟ್ಟಿದ್ದೇ ಕಾರಣವಾಗಿದೆ. 
ನಿಜ ಹೇಳಬೇಕು ಅಂದರೆ ಅರ್ಥ ವ್ಯವಸ್ಥೆಯ ಯಾವ ಯಾವ ಕ್ಷೇತ್ರಗಳು ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಿವೆಯೋ ಅಲ್ಲೆಲ್ಲ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗಿದೆ ಅನ್ನುವುದಕ್ಕೆ ಮಾಹಿತಿ ಇದೆ.  ಇನ್ನಾವ ಹಾದಿ ಇದೆ ಎಂಬ ಬಗ್ಗೆ ಹೆಚ್ಚು ತಿಳಿಯಲು ಅತನು ಡೇ ಅವರ ಚಿಕ್ಕ ಪುಸ್ತಕ ಟ್ರಾನ್ಸಫಾರ್ಮಿಂಗ್ ಇಂಡಿಯಾವನ್ನೊಮ್ಮೆ ಓದಿ.

3. ಹಾಂಕಾಂಗ್ ನಲ್ಲೂ ಲೋಕಪಾಲ್ ನಂತೆ ಒಬ್ಬ ಒಂಬ್ಡುಸಮನ್ ಇದ್ದಾರೆ, ಅಲ್ಲಿ ಭ್ರಷ್ಟಾಚಾರ ಕಡಿಮೆಯೂ ಇದೆ, ಇದಕ್ಕೇನಂತೀರಿ?
ಇದೊಂದು ಸರಿ ಅನ್ನಿಸೋ ತಪ್ಪು ವಾದ. ಹಾಂಕಾಂಗ್ ನಲ್ಲಿ ಒಬ್ಬ ಒಂಬ್ಡುಸಮನ್ ಇರುವುದರಿಂದಾಗಿ ಅಲ್ಲಿ ಭ್ರಷ್ಟಾಚಾರ ಕಡಿಮೆ ಇದೆ ಅನ್ನಲು ಯಾವ ಆಧಾರವೂ ಇಲ್ಲ. ಹಾಗೇ ನೋಡಿದ್ರೆ, ಮುಕ್ತ ಆರ್ಥಿಕ ನೀತಿ, ಆರ್ಥಿಕ ಸ್ವಾತಂತ್ರ್ಯ ಹೊಂದಿರುವ ದೇಶಗಳಲ್ಲಿ ಭ್ರಷ್ಟಾಚಾರ ಕಡಿಮೆ ಅನ್ನುವ ಮಾತನ್ನು ಸಮರ್ಥಿಸಲು ಜಗತ್ತಿನೆಲ್ಲೆಡೆಯಿಂದ ಸಾಕಷ್ಟು  ಎಂಪಿರಿಕಲ್ ಸಾಕ್ಷಿ ಇದೆ.
ಹಾಂಕಾಂಗ್ ಅತ್ಯಂತ ಮುಕ್ತ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶಗಳಲ್ಲೊಂದಾಗಿದೆ. ಇದರಿಂದಾಗಿಯೇ, ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟರಾಗುವ ಅವಕಾಶಗಳಾಗಲಿ, ಸಾಧ್ಯತೆಗಳಾಗಲಿ, ಪ್ರೋತ್ಸಾಹವಾಗಲಿ ಅತ್ಯಂತ ಕಡಿಮೆಯಿದೆ. ಅರ್ಥ ವ್ಯವಸ್ಥೆಯ ಕೆಲ ಭಾಗಗಳ ಮೇಲೆ ಕಾನೂನಿನ ನೇರ ಹಿಡಿತವಿರುವುದಿಲ್ಲವೋ ಅಂತಲ್ಲಿ ಒಂಬ್ಡುಸಮನ್ ಬೇಕಾಗಬಹುದು.

4. ಭ್ರಷ್ಟ ರಾಜಕಾರಣಿಗಳು ಬಿಡದೇ ಹೇಗೆ ಆರ್ಥಿಕ ಸುಧಾರಣೆಗಳು ಜಾರಿಯಾದಾವು?
ನಿಜ ಹೇಳಬೇಕು ಅಂದರೆ, ನಾವು ಸರಿಯಾಗಿ ಆರ್ಥಿಕ ಸುಧಾರಣೆಗಳಿಗಾಗಿ ಧ್ವನಿಯೇ ಎತ್ತಿಲ್ಲ. ಅದನ್ನು ನಾವು ಮಾಡಿದರೆ, ಖಂಡಿತ ಈ ವಿಷಯಗಳು ರಾಷ್ಟ್ರದ ರಾಜಕೀಯದ ಕಾರ್ಯಸೂಚಿಯಲ್ಲಿ ಸೇರಿಕೊಳ್ಳುತ್ತವೆ. ರಾಜಕೀಯದ ನಾಯಕರಿಗೆ ಅವರ ರಾಜಕೀಯ ಭವಿಷ್ಯವೇ ಈ ಆರ್ಥಿಕ ಸುಧಾರಣೆಗಳ ಮೇಲೆ ಅವಲಂಬಿತವಾಗಿವೆ ಅನ್ನುವಂತ ಬಿಂಬಿಸುವ, ಮನವೊಲಿಸುವ ಕೆಲಸ ನಾವು ಮಾಡಬೇಕಿದೆ.

5. ಹೇಳೊದೇನೊ ಸುಲಭ, ಆದರೆ ಇದನ್ನ ಹೇಗೆ ಮಾಡೋದು ?
ಮತ ಚಲಾಯಿಸುವ ಮೂಲಕ. ಆರ್ಥಿಕ ಸುಧಾರಣೆಗಳ ನೇರ ಲಾಭ ಪಡೆಯುವ ಮಧ್ಯಮ ವರ್ಗ ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಬೇಕಿದೆ. ಮಧ್ಯಮ ವರ್ಗದ ಮತ ಬ್ಯಾಂಕ್ ಇಲ್ಲದಿರುವುದರಿಂದಲೇ ಇವತ್ತು ಬೇರೆ ಬೇರೆ ಆಮಿಷವೊಡ್ಡಿ ಬಡವರನ್ನು ಮತ ಬ್ಯಾಂಕಾಗಿಸುವತ್ತ ರಾಜಕಾರಣಿಗಳ ಗಮನ ಹರಿದಿದೆ. ಅಷ್ಟೇ ಅಲ್ಲ, ಅರ್ಧಂಬರ್ಧ ಸುಧಾರಣೆಗೆ ತೆರೆದುಕೊಂಡಿರುವ ಅರ್ಥ ವ್ಯವಸ್ಥೆಯನ್ನು ಅತಿ ಶ್ರೀಮಂತರು ತಮ್ಮ ಲಾಭಕ್ಕೆ ಬಳಸಿಕೊಳ್ಳುವಲ್ಲಿಯೂ ರಾಜಕಾರಣಿಗಳ ಸಹಾಯಹಸ್ತವಿದೆ. ಈ ವ್ಯವಸ್ಥೆಯನ್ನು  ಬದಲಾಯಿಸುವುದು ಸುಲಭವಲ್ಲ, ಆದರೆ ನಾವು ಹೊಸ ರೀತಿಯಲ್ಲಿ ಯೋಚಿಸಿ ಇದರತ್ತ ಕೆಲಸ ಮಾಡಬೇಕಿದೆ. ಒಳ್ಳೆಯ ಆಡಳಿತಕ್ಕೆ ಅನುವಾಗುವಂತೆ ಮಧ್ಯಮ ವರ್ಗದ ಮತ ಬ್ಯಾಂಕ್ ಕಟ್ಟುವುದು ಹೇಗೆ ಅನ್ನುವ ಬಗ್ಗೆ ಅತನು ದೇವ್ ಅವರ ಕೂತುಹಲ ಕೆರಳಿಸೋ ಐಡಿಯಾ ಬಗ್ಗೆ ಇಲ್ಲಿ ನೋಡಿ.

ಲೋಕಪಾಲ್ ಬೆನ್ನಿಗಿರುವವರು ಏನೇ ಹೇಳಬಹುದು, ಆದರೆ ಅದು ಖಂಡಿತ ಮಂತ್ರದಂಡದಂತೆ ಕೆಲಸ ಮಾಡದು. ಒಂತರ ಕಣ್ ಮುಚ್ಚಿ ಕಣ್ ತೆರೆಯೊದ್ರೊಳಗೆ ತೂಕ ಕಳೆದುಕೊಳ್ಳೊ ಮ್ಯಾಜಿಕ್ ಮಾತ್ರೆಯಂತೆ ಲೋಕಪಾಲ್ ಅನ್ನು ಬಿಂಬಿಸಲಾಗುತ್ತಿದೆ. ಆದರೆ, ಅಂತಹ ಮಾತ್ರೆ ಎಂದಿಗೂ ಕೆಲಸ ಮಾಡಲ್ಲ. ನಿಮ್ಮ ಅರೋಗ್ಯವನ್ನೇ ಅದು ಹಾಳು ಮಾಡಬಹುದು. ಈ ಮಾತ್ರೆ ತೆಗೆದುಕೊಳ್ಳಬೇಡಿ ಅಂದ ತಕ್ಷಣ, " ಹಾಗಿದ್ರೆ ಇನ್ನಾವ ಮ್ಯಾಜಿಕ್ ಮಾತ್ರೆ ತಗೊಬೇಕು" ಅಂತ ಕೇಳಬೇಡಿ. ಇಂತಹ ಸಮಸ್ಯೆಗೆಲ್ಲ ರಾತ್ರೋರಾತ್ರಿ ಯಾವ ಪರಿಹಾರವೂ ಇಲ್ಲ. ಪರಿಹಾರಕ್ಕೆ ಶ್ರಮಪಡಬೇಕು.

6. ಅದೆಲ್ಲ ಸರಿ, ಈಗಿರೋ ಜನ್ ಲೋಕ್ ಪಾಲ್ ಅಲ್ಲಿ ಏನ್ ತೊಂದರೆ ಇದೆ?
ಇದಕ್ಕೆ ಆಗಲೇ ಉತ್ತರಿಸಲಾಗಿದೆ. ಆದರೆ ಅದೇ ಪ್ರಶ್ನೆ ಮತ್ತೆ ಮತ್ತೆ ಬರೋದರಲ್ಲಿ ಅಚ್ಚರಿಯೇನಿಲ್ಲ. ಲೋಕಪಾಲ್ ಅಲ್ಲಿರೋ ಸಮಸ್ಯೆಯೆನೆಂದರೆ ಅದು ಈಗಾಗಲೇ ಇರುವ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡುತ್ತೆ. ನಿಮ್ಮಲ್ಲಿ ಯಾರಿಗಾದರೂ ಅನ್ನಿಸುತ್ತಾ ಹತ್ತಾರು ಸಾವಿರ ಪ್ರಾಮಾಣಿಕ ಅಧಿಕಾರಿಗಳನ್ನು ತಂದು ಲೋಕಪಾಲ್ ಮಾಡಬಲ್ಲೆವು ಎಂದು? ಸರಿ ಅವರ ಮೇಲೆ ಯಾರು ನಿಗಾ ಇಡುತ್ತಾರೆ? ಅದಕ್ಕೊಂದು ಸೂಪರ್ ಲೋಕಪಾಲ್ ಮಾಡುವೆವಾ? ಅವರನ್ನು ಗಮನಿಸಲು ಇನ್ನೊಂದು ಹೈಪರ್ ಲೋಕಪಾಲ್? ತಮಾಷೆ ಮಾಡ್ತಿಲ್ಲ. ಲೋಕಪಾಲ್ ಪರವಾಗಿ ವಾದ ಮಂಡಿಸುವವರು ಹೇಳುವುದೇ ಇದನ್ನು ತಾನೇ? ಈಗಿರುವ ವ್ಯವಸ್ಥೆ ಸರಿಯಿಲ್ಲ, ಆದ್ದರಿಂದ ಅವನ್ನು ಗಮನಿಸಲು ಲೋಕಪಾಲ್ ಬೇಕು ಅಂತ ತಾನೇ?

7. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ನಮಗಿಲ್ಲವೇ? "ಜೀವ ಇರುವವರೆಗೂ ಉಪವಾಸ" ಅನ್ನುವುದು ಯಾಕೆ ವಿಶ್ವಾಸಾರ್ಹವಲ್ಲ?
ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಖಂಡಿತ ನಮಗೆಲ್ಲರಿಗೂ ಇದೆ. ನಮಗೆ ಹಕ್ಕಿದೆಯೋ ಇಲ್ಲವೋ ಅನ್ನುವುದಕ್ಕಿಂತ ಇದನ್ನು ನಾವು ಸರಿಯಾಗಿ ಬಳಸುತ್ತಿದ್ದೆವೆಯೋ ಅನ್ನುವುದು ಹೆಚ್ಚು ಮುಖ್ಯವಾಗಿದೆ. (ನಿಮಗೆ ಫ್ರೀಡಂ ಆಫ್ ಸ್ಪೀಚ್ ಇದೆ ಎಂದು ರಾತ್ರಿ ಎರಡು ಗಂಟೆಗೆ ಮನೆಗಳಿರೋ ಜಾಗದಲ್ಲಿ ಎಮಿನೆಮ್ ಹಾಡನ್ನ ಲೌಡ್ ಸ್ಪೀಕರ್ ಅಲ್ಲಿ ಹಾಕ್ತಿನಿ ಅನ್ನೋದು ಅಂತಹ ಒಳ್ಳೆಯ ಐಡಿಯಾ ಏನಲ್ಲ :) )
ಅಂಬೇಡ್ಕರ್ ಸಂವಿಧಾನವನ್ನು ಪರಿಚಯಿಸುತ್ತ ನವೆಂಬರ್ 1949ರಲ್ಲಿ ಒಂದು ಮಾತು ಹೇಳಿದ್ರು. "ಒಮ್ಮೆ ಸಂವಿಧಾನ ಜಾರಿಗೆ ಬಂದ ಮೇಲೆ, ಪ್ರತಿಭಟನೆ, ಸತ್ಯಾಗ್ರಹದಂತ ಅಸಂವಿಧಾನಿಕ ಹಾದಿ ತುಳಿಯುವುದನ್ನು ನಾವು ತಪ್ಪಿಸಬೇಕು. ಅವು ಅರಾಜಕತೆಯ ಮೂಲವಾಗಿವೆ. ಒಂದೊಮ್ಮೆ ಇಬ್ಬರು ವ್ಯಕ್ತಿಗಳು ಎರಡು ಪರಸ್ಪರ ವಿರೋಧಿ ಕಾರಣಗಳಿಗಾಗಿ ಸಾಯುವವರೆಗೂ ಉಪವಾಸ ಅಂತ ಕುಳಿತರೆ ಯಾರು ಮೊದಲು ಸಾಯುತ್ತಾರೋ ಅವರೇ ಗೆದ್ದರು ಎಂದು ನಾವು ತೀರ್ಮಾನಿಸಲಾಗುವುದಿಲ್ಲ.  ಸಾಯುವವರೆಗೂ ಉಪವಾಸ ಅನ್ನುವುದು ರಾಜಕೀಯ ಬ್ಲಾಕ್-ಮೇಲ್. ಇದೊಂದು ರೀತಿಯಲ್ಲಿ ಪ್ರತಿಭಟನೆಕಾರರು ಬಯಸಿದ ಹಾದಿಯನ್ನೇ ಸರ್ಕಾರ ತುಳಿಯುವಂತೆ ಒತ್ತಾಯಿಸುವ ಮಾದರಿಯ ನಾಟಕವೆನ್ನಬಹುದು. ಕಾರಣ ಎಂತಹುದೇ ಇರಬಹುದು, ಆದರೆ ಒಬ್ಬ ವ್ಯಕ್ತಿ ಇಡೀ ದೇಶಕ್ಕೆ ಇಂತಹುದೇ ಕಾನೂನು ಬೇಕು ಎಂದು ಅಪ್ಪಣೆ ಹೊರಡಿಸುವುದನ್ನು ಒಪ್ಪಲಾಗದು.

8. ಅಣ್ಣಾ ಹಜಾರೆಯವರಿಗೆ ಸಾಯುವವರೆಗೂ ಉಪವಾಸ ಮಾಡುವ ಹಕ್ಕಿಲ್ಲವೇ?
ಅಣ್ಣಾ ಹಜಾರೆಯವರಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಖಂಡಿತ ಇದೆ. ಅವರ ಪ್ರತಿಭಟನೆ  ಆತ್ಮಹತ್ಯೆಗೆ ಪ್ರಯತ್ನ ಅನ್ನುವಂತ ಹಂತಕ್ಕೆ ಹೋದಲ್ಲಿ ಅದು ಕಾನೂನಿನನ್ವಯ ತಪ್ಪು. ಆತ್ಮಹತ್ಯೆಯ ಪ್ರಯತ್ನಕ್ಕೆ ಕಾರಣಗಳೇನೇ ಇದ್ದರೂ ಅವರು ತಮ್ಮನ್ನು ತಾವೇ ಕೊಂದುಕೊಳ್ಳದಂತೆ ತಡೆಯುವ ಎಲ್ಲ ಅಧಿಕಾರ ಕಾನೂನಿನನ್ವಯ ಸರ್ಕಾರಕ್ಕಿದೆ.

9. ನೀನೊಬ್ಬ ತೋಳುಕುರ್ಚಿ ಬುದ್ದಿಜೀವಿ (armchair intellectual). ನಿನಗಿಂತ ಬೀದಿಯಲ್ಲಿ ಹೋರಾಡುತ್ತಿರುವ ಚಳುವಳಿಗಾರರನ್ನೇ ನಾವು ನಂಬಬಾರದೇಕೆ?
ಪೈಲಟ್ ಗಳು ವಿಮಾನವನ್ನೇನು ವಿನ್ಯಾಸ ಮಾಡುವುದಿಲ್ಲ. ಮದ್ದು ಕೊಡುವ ವೈದ್ಯರು ಹೊಸ ಔಷಧಿಗಳನ್ನೇನು ಕಂಡು ಹಿಡಿಯುವುದಿಲ್ಲ. ಈ ಕೆಲಸ ಮಾಡುವುದು ತೋಳುಕುರ್ಚಿ ಬುದ್ದಿಜೀವಿಗಳಂತಹ ಜನರೇ. ಆದ್ದರಿಂದ ತೋಳುಕುರ್ಚಿ ಬುದ್ದಿಜೀವಿಯಾಗಿರುವುದರಿಂದ ಈ ವಿಷಯಗಳ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ಅಂತೇನು ಇಲ್ಲ.   
ಅವರು ಏನು ಹೇಳುತ್ತಾ ಇದ್ದಾರೆ ಅನ್ನುವ ಕಾರಣಕ್ಕೆ ನೀವು ಯಾವುದೇ ಬುದ್ದಿಜೀವಿ ಇಲ್ಲವೇ ಕಾರ್ಯಕರ್ತನನ್ನು ನಂಬಬೇಡಿ. ನೀವು ಅವರ ವಾದವನ್ನು ಕೇಳಿ, ಪರಾಮರ್ಷಿಸಿ, ನಿಮ್ಮದೇ ಆದ ತೀರ್ಮಾನ ಕೈಗೊಳ್ಳಿ. ಜನಲೋಕಪಾಲ್ ಬೇಕೆನ್ನುತ್ತಿರುವ ಹೆಚ್ಚಿನ ಜನರಿಗೆ ಆ ಬಿಲ್ ಅಲ್ಲಿ ಏನಿದೆ ಎಂದೂ ತಿಳಿದಿಲ್ಲ, ಅದರ ವಿರುದ್ಧವಾಗಿ ಯಾರು ವಾದ ಮಾಡುತ್ತಿರುವರೋ ಅವರ ವಾದವನ್ನು ಕೇಳಿಲ್ಲ. ಕುರುಡಾಗಿ, ಯಾರೋ ಜನಪ್ರಿಯ ವ್ಯಕ್ತಿ ಹೇಳಿದ್ದಾರೆ ಅನ್ನುವ ಕಾರಣಕ್ಕೆ ಇದೊಂದೇ ಪರಿಹಾರವೆಂಬಂತೆ ಅದನ್ನು ಒಪ್ಪಿಕೊಳ್ಳುತ್ತಿದ್ದಾರೆ.

11. ಅಣ್ಣಾ ಹಜಾರೆಯವರ ಹೋರಾಟವನ್ನು ವಿರೋಧಿಸುತ್ತಿರುವವರು ಭ್ರಷ್ಟ ರಾಜಕಾರಣಿಗಳನ್ನು ಬೆಂಬಲಿಸಿದಂತಲ್ಲವೇ?
ಇಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟ ಹೇಗಿರಬೇಕು ಅನ್ನುವುದು ಕೇವಲ ಅಣ್ಣ ಹಜಾರೆ ಮತ್ತು ಅವರ ಸಂಗಡಿಗರಿಗೆ ಸೇರಿದ ವಿಷಯವಲ್ಲ. ನಿಜ ಜಗತ್ತಿನಲ್ಲಿ, ನೂರಕ್ಕೆ ನೂರು ಶುದ್ಧವಾಗಿರುವ, ಭ್ರಷ್ಟರಲ್ಲದ ರಾಜಕಾರಣಿಗಳಿರಬೇಕು ಎಂದು ಅಪೇಕ್ಷಿಸುವುದು ನಿಜಕ್ಕೂ ಮೂರ್ಖತನವಾದೀತು. ಅಪೂರ್ಣವಾದ ಸಂವಿಧಾನಗಳು, ಅಪೂರ್ಣವಾದ ಸಂಸ್ಥೆಗಳು, ಅಪೂರ್ಣವಾದ ನಾಯಕರು ಮತ್ತು ಅಪೂರ್ಣವಾದ ನಾಗರಿಕರನ್ನು ಇಟ್ಟುಕೊಂಡೇ ಒಳ್ಳೆಯ ಆಡಳಿತ ಪಡೆಯುವುದು ನಿಜ ಜಗತ್ತಿನ ಸವಾಲು. ಲಂಚ ಕೊಡಲು, ಪಡೆಯಲು ಇರುವ ಅವಕಾಶವನ್ನು ಕಡಿಮೆ ಮಾಡಿದಲ್ಲಿ ಭ್ರಷ್ಟಾಚಾರ ಕಡಿಮೆಯಾಗುವುದು. ಇದನ್ನು 1991ರಲ್ಲಿ ಶುರುವಾದ ಆದರೆ 2004ರಿಂದಾಚೆ ನಿಂತು ಹೋಗಿರುವ ಸುಧಾರಣೆಗಳನ್ನು ಮುಂದುವರೆಸುವುದೇ ಇಂತಹದೊಂದು ವಾತಾವರಣ ಕಟ್ಟಲು ಸಹಾಯ ಮಾಡುವುದು.

ಸಂವಿಧಾನದನ್ವಯ ರಚಿತವಾದ ಯುಪಿಎ ಸರ್ಕಾರದ ರಾಜಕೀಯ ಮತ್ತು ನೀತಿನಿಯಮಗಳನ್ನು ವಿರೋಧಿಸಲು ಖಂಡಿತ ಎಲ್ಲರಿಗೂ ಹಕ್ಕಿದೆ. ಕೆಲವು ವ್ಯಕ್ತಿಗಳು, ಪಕ್ಷಗಳು ಕಡು ಭ್ರಷ್ಟಾಚಾರದಿಂದ ನಂಬಿಕೆ ಕಳೆದುಕೊಂಡಿರಬಹುದು, ಆದರೆ ಒಂದು ಸಂವಿಧಾನಿಕ ಸಂಸ್ಥೆಯಾಗಿ ಭಾರತ ಸರ್ಕಾರ ಮಾತ್ರವೇ ದೇಶಕ್ಕೆ ಬೇಕಿರುವ ಕಾಯಿದೆ,ಕಾನೂನು ರೂಪಿಸುವ ಅಧಿಕಾರವಾಗಿದೆ.

12. ಬ್ರಿಟಿಷರ ವಿರುದ್ಧ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿಯೇ ಉಪವಾಸಕ್ಕೆ ಮುಂದಾಗಿರುವಾಗ, ಈಗ ಉಪವಾಸ ಮಾಡುವುದು ಯಾಕೆ ವಿಶ್ವಾಸಾರ್ಹವಲ್ಲ? 
ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬಂದ 26 ಜನವರಿ1950 ಮತ್ತು ಅದಕ್ಕೂ ಮೊದಲಿದ್ದ ದಿನಗಳ ನಡುವಿನ  ಸಂದರ್ಭಗಳ ಮಧ್ಯೆ ಅಗಾಧವಾದ ಅಂತರವಿದೆ. ಬ್ರಿಟಿಷ ಸರ್ಕಾರ ವಿಧಿಸಿದ್ದ ಕಾನೂನುಗಳ ವಿರುದ್ಧ ಮಹಾತ್ಮ ಗಾಂಧಿ ಅಸಹಕಾರದ ಹಾದಿಯನ್ನು ತುಳಿದಿದ್ದರು. ಆಗ ಭಾರತೀಯರಿಗೆ ಕಾನೂನು ರೂಪಿಸುವಲ್ಲಿ ಇಲ್ಲವೇ ಅನುಷ್ಟಾನಕ್ಕೆ ತರುವಲ್ಲಿ ಯಾವುದೇ ರೀತಿಯ ಹಿಡಿತವಿರಲಿಲ್ಲ. ತಮಗೆ ಬೇಡದ ಯಾವುದೇ ಕಾನೂನಿನ ಬಗ್ಗೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಅವರಿಗಿರಲಿಲ್ಲ. ಈ ಅರ್ಥದಲ್ಲಿ  ಉಪವಾಸದ ಚಳುವಳಿಗೆ ಒಂದು ಸಮರ್ಥನೆ ಇದೆ. 

ಅಂಬೇಡ್ಕರ್ ಸೇರಿದಂತೆ ಹಲವು ಭಾರತದ ನಾಯಕರನ್ನು ತಮ್ಮ ನಿಲುವಿಗೆ ಒಪ್ಪಿಸಲು ಕೂಡಾ ಗಾಂಧಿ ಈ ಮಾರ್ಗವನ್ನು ಬಳಸಿದ್ದರು. ಗಾಂಧಿಯವರ ಉದ್ದೇಶಗಳಲ್ಲಿನ ತಿಳುವಳಿಕೆ ಏನೇ ಇದ್ದರೂ, ಇದು ಅಸಂವಿಧಾನಿಕವೂ, ಒಂದು ರೀತಿಯಲ್ಲಿ "ಹೈಕಮಾಂಡ್" ಸಂಸ್ಕೃತಿಯನ್ನು ಹುಟ್ಟು ಹಾಕಿದ ಮಾರ್ಗವಾಗಿತ್ತು. ಈ ಹೈಕಮಾಂಡ್ ಸಂಸ್ಕೃತಿ ನಮ್ಮಲ್ಲಿ ಇಂದಿಗೂ ಜೀವಂತವಾಗಿದೆ. ಈ ಅರ್ಥದಲ್ಲಿ ಉಪವಾಸವನ್ನು ಸಮರ್ಥಿಸಿಕೊಳ್ಳಲಾಗದು. ಆದರೆ ಭಾರತೀಯ ಇತಿಹಾಸವನ್ನು ವಿವರಿಸುವಾಗ ಗಾಂಧಿ ಬದುಕಿನ ಈ ಭಾಗಕ್ಕೆ ಯಾವುದೇ ಗಮನ ಸಿಕ್ಕಿಲ್ಲ.

26 ಜನವರಿ1950ರಂದು ನಮ್ಮ ಸಂವಿಧಾನ ಅಸ್ತಿತ್ವಕ್ಕೆ ಬರುವುದರೊಂದಿಗೆ ಒಂದು ದೊಡ್ಡ ಬದಲಾವಣೆ ಆಯಿತು. ಭಾರತೀಯರೆಲ್ಲರಿಗೂ ಹೇಗೆ ಕಾನೂನುಗಳನ್ನು ಮಾಡಲಾಗುತ್ತೆ, ಇಲ್ಲವೇ ಅನುಷ್ಟಾನಗೊಳಿಸಲಾಗುತ್ತೆ ಅನ್ನುವುದರ ಮೇಲೆ ಒಂದು ಹಿಡಿತವಿದೆ. ನಮಗೆ ಬೇಕಿಲ್ಲದ ಕಾನೂನನ್ನು ತೆಗೆದುಹಾಕುವ ಇಲ್ಲವೇ ಬದಲಾಯಿಸುವ ಸಾಧ್ಯತೆ ನಮಗಿದೆ. ಆದರೆ ಇದನ್ನು ಮಾಡಲು ಖಂಡಿತ ಸರಿಯಾದ ಮಾರ್ಗವೊಂದಿದೆ ಮತ್ತು ಅದನ್ನು ಎಲ್ಲರೂ ಪಾಲಿಸಬೇಕಿದೆ. ಈ ಮಾರ್ಗಗಳನ್ನೇ ಅಂಬೇಡ್ಕರ್ ತಮ್ಮ ಗ್ರಾಮರ್ ಆಫ್ ಅನಾರ್ಕಿ ಭಾಷಣದಲ್ಲಿ ಉಲ್ಲೇಖಿಸಿದ್ದು. ಸಂವಿಧಾನಿಕವಾದ ಮಾರ್ಗಗಳು ಲಭ್ಯವಿರುವಾಗ, ಸತ್ಯಾಗ್ರಹ, ಉಪವಾಸದಂತಹ ಅಸಂವಿಧಾನಿಕ ಮಾರ್ಗಗಳಿಗೆ ಅರ್ಥವಿಲ್ಲ. ಆದ್ದರಿಂದ ಬ್ರಿಟಿಷರ ಆಳ್ವಿಕೆಯಲ್ಲಿ ಗಾಂಧಿ ಮಾಡಿದ ಸತ್ಯಾಗ್ರಹಕ್ಕೂ, ನಮ್ಮನ್ನು ನಾವೇ ಆಳಿಕೊಳ್ಳುವ ಈ ದಿನದಲ್ಲಿ ಅಣ್ಣಾ ಹಜಾರೆಯವರು ಮಾಡುತ್ತಿರುವ ಉಪವಾಸಕ್ಕೂ ಹೋಲಿಕೆಯಿಲ್ಲ.

ನಿಲ್ಲಿ ನಿಲ್ಲಿ ನಿಲ್ಲಿ ! : ನನಗೆ ಗೊತ್ತು, ಇದನ್ನು ಓದಿದ ಕೂಡಲೇ ಕೆಲವರು "ನಾನು ಭ್ರಷ್ಟಾಚಾರದ ಪರ, ಕಾಂಗ್ರೆಸ್ ಪರ, ಸರ್ಕಾರದ ಪರ" ಅನ್ನುತ್ತ ನನ್ನ ಮೇಲೆ ಹಾರುತ್ತಾರೆ ಎಂದು. ಅವರಿಗೆ ನಾನು ಹೇಳುವುದು ಇಷ್ಟೇ. ಸಮಾಧಾನದಿಂದ ಇನ್ನೊಬ್ಬರ ಅಭಿಪ್ರಾಯ ಕೇಳುವ, ಅದರ ಬಗ್ಗೆ ಚರ್ಚಿಸುವ ವ್ಯವಧಾನ ಬೆಳೆಸಿಕೊಳ್ಳಿ, ಚರ್ಚೆಯ ನಂತರ ನಿಮ್ಮ ಅಭಿಪ್ರಾಯ ಬದಲಾಗಬಹುದು, ಬದಲಾಗದೇ ಇರಬಹುದು. ನಾನಂತೂ ಅದನ್ನು ಗೌರವಿಸುತ್ತೇನೆ. After all, democracy is all about that. Mob frenzy ಮನಸ್ಥಿತಿ ಇಟ್ಟುಕೊಂಡು ಬಂದರೆ ಯಾವ ಚರ್ಚೆಯೂ ಅಸಾಧ್ಯ.

ಸೋಮವಾರ, ಆಗಸ್ಟ್ 1, 2011

ದೆಹಲಿಯೇ ಬೆಂಗಳೂರಿಗೆ ಬಂತು ಮತ್ತು ಅದೇ ಸರಿಯಾದದ್ದು !

ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ನಡೆದಿರೋ ರಾಜಕೀಯ ಬಿಕ್ಕಟ್ಟು ಇನ್ನೇನು ಮುಗಿಬಹುದು ಅನ್ನೋ ಹಂತಕ್ಕೆ ಬಂದಿದೆ. ಕಳೆದ ಒಂದು ವಾರದಿಂದ ನಡೆದಿರೋ ವಿದ್ಯಮಾನವನ್ನು ಗಮನಿಸಿದರೆ ಕರ್ನಾಟಕದ ರಾಜಕೀಯ ಒಂದು ದೊಡ್ಡ ಬದಲಾವಣೆಯ ಘಟ್ಟದಲ್ಲಿದೆ ಅನ್ನಬಹುದು. ಯಾಕೆ ಹಾಗಂದೆ ಅಂತ ಕೇಳಿದ್ರೆ ನನ್ನ ಅನಿಸಿಕೆ ಇಂತಿದೆ:

ದೆಹಲಿಯೇ ಬೆಂಗಳೂರಿಗೆ ಬಂತು ಮತ್ತು ಅದೇ ಸರಿಯಾದದ್ದು !
ಕಳೆದ 60 ವರ್ಷದಿಂದಲೂ ನಾವು ನೋಡಿರುವುದು ಏನೆಂದರೆ ಕರ್ನಾಟಕದ ರಾಜಕೀಯ ನಾಯಕರು ಒಂದು ಸಣ್ಣ ವಿಷಯಕ್ಕೂ ದೆಹಲಿಗೆ ಹೋಗಿ ಅಲ್ಲಿನ ದೊರೆಗಳ ಮುಂದೆ ಕೈ ಕಟ್ಟಿಕೊಂಡು ನಿಂತು, "ಅಪ್ಪಣೆ ಮಹಾಪ್ರಭು" ಅಂತ ನಿಂತುಕೊಳ್ಳೊರು. ಅವರು ಕೊಟ್ಟ ಆಜ್ಞೆನಾ ಪ್ರಸಾದ ಅಂಬಂತೆ ಕಣ್ಣಿಗೊತ್ತಿಕೊಂಡು ವಾಪಸ್ ಬರೋರು. "ನಮ್ದು ನ್ಯಾಶನಲ್ ಪಾರ್ಟಿ ರೀ, ನಾವು ಶಿಸ್ತಿನ ಸಿಪಾಯಿಗಳು ರೀ,,ಹೈಕಮಾಂಡ್ ಮಾಡಿದ ಆಜ್ಞೆ ನಾವ್ ಮೀರುವುದುಂಟೇನು" ಎಂದು ತಮ್ಮ ಗುಲಾಮಗಿರಿಯನ್ನೇ ಖುಷಿಯಾಗಿ ಸಮರ್ಥಿಸಿಕೊಳ್ಳೊರು. ಆದರೆ ಮೊಟ್ಟ ಮೊದಲ ಬಾರಿಗೆ ದೆಹಲಿಯ ಮೂರು ಮತ್ತೊಂದು ನಿವೃತ್ತ ನಾಯಕರಿಗೆ ಸೆಡ್ಡು ಹೊಡೆದು ದೆಹಲಿಯೇ ಬೆಂಗಳೂರಿಗೆ ಬರುವಂತೆ ಮಾಡಿದ್ದು, ಎರಡು ದಿನವಾದರೂ ಅವರಿಗೆ toughest ಫೈಟ್ ಕೊಟ್ಟಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದಿಂದ ಕೇಂದ್ರವಿರಬೇಕು, ಬಾಟಮ್ ಅಪ್ ಆಪ್ರೋಚ್ ಇರಬೇಕು ಅನ್ನುವ ಸಂದೇಶವನ್ನು ಕೊಟ್ಟ ಕಾರಣಕ್ಕೆ ಯಡಿಯೂರಪ್ಪನವರನ್ನು ಮೆಚ್ಚದಿರಲು ಆಗದು.

ಪ್ರಜಾತಂತ್ರದಲ್ಲಿ ಹೈಕಮಾಂಡ್ ಅನ್ನೋದೇ ತಪ್ಪು
ಪ್ರಜಾತಂತ್ರವಿರುವುದು ಜನರಿಂದ ಜನರಿಗಾಗಿ. ಜನರು ಆರಿಸಿ ಕಳಿಸಿದ ನಾಯಕರು ರಾಜ್ಯವಾಳಬೇಕು. ಅವರಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ಕೂತು ಮಾತನಾಡಿ ಬಗೆಹರಿಸಿಕೊಳ್ಳಲಿ. ಇದೇನಿದು ಹೈಕಮಾಂಡ್ ಅನ್ನೋದು? ಅಸಲಿಗೆ, ಕಮಾಂಡ್ ಅನ್ನೋದೆ ಪ್ರಜಾತಂತ್ರದಲ್ಲಿ ತಪ್ಪು. ಪಾಳೆಗಾರನಂತೆ ಕಮಾಂಡ್ ಮಾಡ್ತಿನಿ ಅನ್ನೋದು ಯಾವ ಸೀಮೆ ಜನತಂತ್ರ? ಬಂದ ಸೋ ಕಾಲ್ಡ್ ವರಿಷ್ಟರು facilitators ಆಗಬೇಕು, messengers ಆಗಬೇಕು. ಅದು ಬಿಟ್ಟು ಇಂತವರೇ ಸಿ.ಎಮ್ ಆಗಬೇಕು ಅಂತ ನಿರ್ಧಾರ ಮಾಡ್ಕೊಂಡು ಬಂದು ಇಲ್ಲಿ ಹೇರಲು ಹೊರಟರೆ ಅದು ಪ್ರಜಾತಂತ್ರವಾಗುತ್ತ? ಅಂತಹ ದೊಣ್ಣೆ ನಾಯಕರಿಗೆ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರಿಯಾದ್ದೊಂದು ಮುಟ್ಟಿ ನೋಡಿಕೊಳ್ಳುವಂತ ಫೈಟ್ ಕೊಟ್ಟಿದ್ದಾರೆ ಅಂತಲೇ ಅನ್ನಬಹುದು. ಒಂದಿಡಿ ದಿನ ಎಲ್ಲ ನ್ಯಾಶನಲ್ ಮಾಧ್ಯಮದಲ್ಲೂ ಕರ್ನಾಟಕದ ಸುದ್ದಿ ಆವರಿಸಿಕೊಂಡದ್ದು ನೋಡಿದರೆ ಈ ಮಟ್ಟಿಗೆ ಕನ್ನಡಿಗನೊಬ್ಬ ಫೈಟ್ ಕೊಟ್ನಲ್ಲ ಅನ್ನೋದೇ ನನಗೆ ಸಂತಸದ, ಸೋಜಿಗದ ಸಂಗತಿಯಾಗಿ ಕಾಣೋದು.

ನ್ಯಾಶನಲ್ ಲೀಡರ್ಸ್ ಅಂದ್ರೆ ದೇವರಾ?
ನ್ಯಾಶನಲ್ ಲೀಡರ್ಸ್ ಅಂದ ಕೂಡಲೇ "Paragon of Virtue" ಅನ್ನೋ ರೀತಿಯಲ್ಲಿ ನೈತಿಕತೆಯ ಚಾಂಪಿಯನ್ಸ್ ಅನ್ನೋ ರೀತಿಯಲ್ಲಿ ಅವರನ್ನು ಟ್ರೀಟ್ ಮಾಡುವ, ಅವರು ಹೇಳಿದ್ದೆಲ್ಲ ಸರಿ ಅನ್ನುವ ಗುಲಾಮಗಿರಿಯ ಮನಸ್ಥಿತಿ ನಮ್ಮಲ್ಲಿ ಹಲವು ನಾಯಕರಿಗಿದೆ. ಈಗ ನೈತಿಕತೆಯ ಎಳೆ ಹಿಡಿದು ರಾಜಿನಾಮೆ ಕೇಳಲು ಬಂದಿದ್ದಾರೆಂದು ನನಗಂತೂ ಅನ್ನಿಸಿಲ್ಲ. ಸಂಸತ್ತಿನ ಮಾನ್ಸುನ್ ಅಧಿವೇಶನದಲ್ಲಿ ಕಾಂಗ್ರೆಸ್ ಅನ್ನು ಹಣಿಯಲು ಹೊರಡುವ ಮುನ್ನ ಇವರಿಗೆ ತಾವು ಕೊಂಚ ಕ್ಲೀನ್ ಅನ್ನಿಸಿಕೊಳ್ಳಬೇಕಿತ್ತು. ಅದಕ್ಕೆ ಆರೋಪ ಕೇಳಿದ ತಕ್ಷಣ ಮುಖ್ಯಮಂತ್ರಿಗಳ ರಾಜಿನಾಮೆ ತೆಗೆದುಕೊಳ್ಳುವ ನಾಟಕ. ಅದಿಲ್ಲದಿದ್ದರೆ, ಮುಖ್ಯಮಂತ್ರಿಗಳ ಮೇಲೆ ಲೋಕಾಯುಕ್ತರು ಈ ಮೊದಲು ಆರೋಪ ಮಾಡಿದ್ದರು, ತಮ್ಮ ಮಧ್ಯಂತರ ವರದಿಯ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ದೂರಿದ್ದರು, ಆಗೆಲ್ಲ ನ್ಯಾಶನಲ್ ಲೀಡರ್ಸ್ ನಿದ್ದೆ ಮಾಡುತ್ತಿದ್ದರೆ? ನ್ಯಾಶನಲ್ ಲೀಡರ್ಸ್ ಅಂದ್ರೆ ಹೆಚ್ಚು ಜವಾಬ್ದಾರಿ ಇರೋರು, ನೈತಿಕತೆ ಉಳ್ಳವರು ಅನ್ನೋದೆಲ್ಲ ಕಟ್ಟು ಕತೆ. ನೈತಿಕತೆ, ಜವಾಬ್ದಾರಿಯುತ ನಡವಳಿಕೆಯಲ್ಲಿ ಪ್ರಾದೇಶಿಕ ಪಕ್ಷಗಳು ಕೆಳಗೆ, ತಾವು ಮೇಲೆ ಅಂತ ತೋರಿಸಲು ಈ ಪೊಳ್ಳು ವಾದ ಬಳಸೋದೇ ಹೊರತು ಇದಕ್ಕೆ ಹೆಚ್ಚಿನ ಬೆಲೆಯೇನು ಕೊಡಬೇಕಿಲ್ಲ.

ಕೊನೆಹನಿ
ಯಡಿಯೂರಪ್ಪನವರು ಈಗ ತೋರಿದ ಧೈರ್ಯವನ್ನೇ ಕಾಂಗ್ರೆಸ್ ಹೈಕಮಾಂಡ್ ನ ಭೇಟಿ ಆಗೋಕೆ ಒಂದು ವಾರ ಕಾಯೋ ನಮ್ಮ ಸಿದ್ಧರಾಮಯ್ಯನಂತವರು ತೋರಿದ್ರೆ, ನಿಧಾನಕ್ಕಾದ್ರೂ ಸರಿ ಈ ಹೈಕಮಾಂಡ್ ನ ಕಮಾಂಡ್ ಸಂಸ್ಕೃತಿಯ ಬಿಗಿ ಪಟ್ಟಿನಿಂದ ಕರ್ನಾಟಕದ ರಾಜಕೀಯ ಆಚೆ ಬರುತ್ತೆನೋ. ಬೆಂಗಳೂರಿಂದ ದೆಹಲಿ ಇರಬೇಕೇ ಹೊರತು ದೆಹಲಿಯಿಂದ ಬೆಂಗಳೂರಲ್ಲ ಅನ್ನೋ ಬದಲಾವಣೆ ಇನ್ನಾದ್ರೂ ಕರ್ನಾಟಕದ ರಾಜಕೀಯದಲ್ಲಿ ಬರಲಿ.