ಇತ್ತಿಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುಪಿಯಲ್ಲಿ ಮಾತನಾಡುತ್ತ "ಇನ್ನೆಷ್ಟು ದಿನ ಇದೇ ರೀತಿ ಉತ್ತರಪ್ರದೇಶದ ಯುವಕರು ಭಿಕ್ಷೆ ಕೇಳಿ ಮುಂಬೈನಂತಹ ಊರಿಗೆ ವಲಸೆ ಹೋಗುತ್ತಿರಿ?" ಅಂದರು. ಅಭಿವೃದ್ದಿಯಲ್ಲಿ ಉತ್ತರಪ್ರದೇಶ ಎಷ್ಟು ಹಿಂದೆ ಬಿದ್ದಿದೆ, ಅಲ್ಲಿನ ಯುವಕರಿಗೆ ಒಳ್ಳೆ ಜೀವನ, ದುಡಿಮೆ ಕಲ್ಪಿಸುವಲ್ಲಿ ಅದೆಷ್ಟು ಎಡವಿದೆ, ಅಲ್ಲಿನ ಯುವಕರೆಲ್ಲ ಅನ್ನ ಅರಸಿ ಮುಂಬೈ, ದೆಹಲಿ, ಬೆಂಗಳೂರಿನಂತಹ ಹಸಿರು ಹುಲ್ಲುಗಾವಲಿಗೆ ವಲಸೆ ಹೋಗದೇ ವಿಧಿಯಿಲ್ಲ ಅನ್ನುವಂತೆ ಅಲ್ಲಿನ ಆಡಳಿತ ಹೇಗೆ ಮಾಡಿದೆ ಅನ್ನುವುದನ್ನು ಒಂದು ರೀತಿಯಲ್ಲಿ ಎಲ್ಲರ ಎದುರಿಟ್ಟರು. ಅಲ್ಲಿ ತಮ್ಮ ಪಕ್ಷಕ್ಕೆ ಲಾಭ ಮಾಡಿಕೊಳ್ಳುವ ದೃಷ್ಟಿಯಿಂದ ಈ ಮಾತನ್ನು ಅವರು ಹೇಳಿದ್ದರೂ, ಅವರು ಎತ್ತಿರುವ ಪ್ರಶ್ನೆ ಮಾತ್ರ ಎಲ್ಲರೂ ಯೋಚಿಸಬೇಕಾದಂತದ್ದೇ. ಅವರ ಮಾತನ್ನು ಸಹಜವಾಗಿಯೇ ಕೆಲವು ವಲಸೆ ಪರವಾಗಿರುವವರು ವಿರೋಧಿಸಿದರು. ಮೈಸೂರಿನ ಒಂದು ಪ್ರಖ್ಯಾತ ಇಂಗ್ಲಿಷ್ ಬ್ಲಾಗ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಹುಲ್ ಗಾಂಧಿ ಈ ಮಾತಿನ ಮೂಲಕ ಅವರಿಗೂ ಮರಾಠಿಗರ ಹಿತಕ್ಕಾಗಿ ಧ್ವನಿ ಎತ್ತುವ ಎಮ್.ಎನ್.ಎಸ್ ಮತ್ತು ಕನ್ನಡಿಗರ ಹಿತಕ್ಕಾಗಿ ಹೋರಾಡುವ ಕರವೇಗೂ ಯಾವುದೇ ಅಂತರವಿಲ್ಲ ಎಂದು ತೋರಿಸಿದ್ದಾರೆ ಎಂದು ಪ್ರತಿಪಾದಿಸುವ ಅಂಕಣವೊಂದನ್ನು ಪ್ರಕಟಿಸಿತು ಮತ್ತು ಆ ಬಗ್ಗೆ ಚರ್ಚೆಯಾಗಲಿ ಎಂದು ತಮ್ಮ ಅನಿಸಿಕೆ ಬರೆದ ಅನೇಕ ಗೆಳೆಯರ ಅನಿಸಿಕೆಯನ್ನು ಪ್ರಕಟಿಸಲೂ ಇಲ್ಲ. ಇರಲಿ, ಪ್ರಜಾತಂತ್ರದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ತಿಳಿಸುವ ಎಲ್ಲ ಆಯ್ಕೆಯಿದೆ. ಆದರೆ ತಮ್ಮ ಅನ್ನ, ಕಲಿಕೆ, ದುಡಿಮೆ, ಬಾಳುವೆಗಾಗಿ ಧ್ವನಿ ಎತ್ತುವ ಯಾವುದೇ ಸಂಸ್ಥೆ, ಸಂಘಟನೆಯನ್ನು ಈ ಹೊತ್ತಿನ ಹಲ ಮಾಧ್ಯಮಗಳು, ಬುದ್ದಿಜೀವಿಗಳು ನೋಡುವ ರೀತಿ, ಸಂಕುಚಿತ, ಮೂಲಭೂತವಾದಿಗಳು ಎಂದೆಲ್ಲ ಮಾಡಲಾಗುವ ಟೀಕೆಗಳು, ತಮ್ಮ ಹಕ್ಕಿಗಾಗಿ ನಡೆಯುವ ಹೋರಾಟವನ್ನು ಟ್ರಿವಿಯಲೈಸ್ ಮಾಡುವುದನ್ನು ಗಮನಿಸಿದಾಗ ಅನಿಯಂತ್ರಿತ ವಲಸೆ, ಅದರಿಂದಾಗುವ ಡೆಮಾಗ್ರಾಫಿಕ್ ಬದಲಾವಣೆಗಳು, ವಲಸೆಗೆ ಪ್ರೋತ್ಸಾಹ ನೀಡುವ ಭಾಷಾ ನೀತಿ, ತಪ್ಪು ಜನಸಂಖ್ಯಾ ನೀತಿ, ಇವೆಲ್ಲದರಿಂದ ದೇಶದ ವೈವಿಧ್ಯತೆಗೆ ತಗಲುತ್ತಿರುವ ಅಪಾಯ ಮತ್ತು ಅದರಿಂದ ಮುಂದಾಗಬಹುದಾದ ಪರಿಣಾಮಗಳನ್ನು ಈ ಜನರು ಯೋಚಿಸುತ್ತಿಲ್ಲವೆನೋ ಎಂದು ನನ್ನ ಅನಿಸಿಕೆ. ನನ್ನ ಮಾತುಗಳಿಗೆ ಕೆಲವು ಸಮರ್ಥನೆಯನ್ನು ಈ ಕೆಳಗೆ ನೀಡಲು ಬಯಸುತ್ತೇನೆ.ಉತ್ತರ ಪ್ರದೇಶದ ಯುವಕರಿಗೆ ಕೆಲಸ ಕೊಡಬೇಕಾದದ್ದು ಯಾರು? ಉತ್ತರ ಪ್ರದೇಶವೋ, ಇಲ್ಲ ಮಹಾರಾಷ್ಟ್ರ, ಕರ್ನಾಟಕವೋ?
ಅನಿಯಂತ್ರಿತ ವಲಸೆಗೆ ಇಂಬು ಕೊಡುತ್ತಿರುವ ಹುಳುಕಿನ ಭಾಷಾ ನೀತಿ
ಜನಸಂಖ್ಯಾ ನೀತಿ ತರುತ್ತಿರುವ ಆತಂಕ !
ಮೇಲಿನ ಮಾತೆಲ್ಲ ಒಂದು ತೂಕವಾದರೆ, ಇವತ್ತು ಭಾರತ ಅನುಸರಿಸುತ್ತಿರುವ ಜನಸಂಖ್ಯಾ ನೀತಿ ತಂದಿರುವ ಆತಂಕ ಇನ್ನೊಂದು ತೂಕದ್ದು. ನಮ್ಮ ಕರ್ನಾಟಕದ ಜನಸಂಖ್ಯೆ ಇಂದು ಸುಮಾರು ೬ ಕೋಟಿಯ ಆಸುಪಾಸಿನಲ್ಲಿದೆ. ಆದರೆ ಕರ್ನಾಟಕದಲ್ಲಿ ಇನ್ನು ಮುಂದೆ ಮಕ್ಕಳ, ಯುವಕರ ಸಂಖ್ಯೆಯ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ. ೨೦೧೧ರ ಜನಸಂಖ್ಯೆಯ ಆಧಾರದಲ್ಲಿ ಕರ್ನಾಟಕ ಈಗಾಗಲೇ ತನ್ನ ರಿಪ್ಲೇಸ್-ಮೆಂಟ್ ಅನುಪಾತವಾದ TFR=2.0 ಅನ್ನು ತಲುಪಿದೆ. (TFR ಅಂದರೆ Total Fertility Rate- ಯಾವುದೇ ಜನಾಂಗ ಅಳಿಯದೇ ಉಳಿಯಲು ಇರಬೇಕಾದ ಜನಸಂಖ್ಯೆ ಬೆಳವಣಿಗೆಯ ಪ್ರಮಾಣ). ಆದರೆ 11ನೇ ಪಂಚವಾರ್ಷಿಕ ಯೋಜನೆ ಅನ್ವಯ ಭಾರತ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ TFR ಟಾರ್ಗೆಟ್ 1.8. ಇದರರ್ಥ ಕರ್ನಾಟಕದ TFR ಮಟ್ಟ ಈಗ ತಲುಪಿರುವ ನಾರ್ಮಲ್ ರಿಪ್ಲೇಸ್-ಮೆಂಟ್ ಮಟ್ಟದಿಂದಲೂ ಕೆಳಗಿಳಿದು ಕುಸಿಯುತ್ತ ಸಾಗುತ್ತೆ. ಅದರಿಂದಾಚೆ, ವರ್ಷದಿಂದ ವರ್ಷಕ್ಕೆ ನಮ್ಮ ಕನ್ನಡ ಜನಾಂಗದ ಸಂಖ್ಯೆ ಇಳಿಮುಖವಾಗುತ್ತ ಹೋಗುವುದು. ಇದೇ ಸಮಯದಲ್ಲಿ ಬಿಹಾರ್, ಉತ್ತರ ಪ್ರದೇಶದಂತಹ ರಾಜ್ಯಗಳ TFR ಮಟ್ಟ 3.0ಕ್ಕಿರುತ್ತೆ. ಅಲ್ಲಿ ಜನಸಂಖ್ಯೆ ಹೆಚ್ಚಿದರೆ, ಇಲ್ಲಿ ಇಳಿಮುಖ ! ಪರಿಣಾಮ? ತಗ್ಗಿರುವ ಜಾಗಕ್ಕೆ ನೀರು ಹರಿವಂತೆ ನಿರಂತರವಾಗಿ ವಲಸೆ ಹೆಚ್ಚುವುದು. ಅಂತಹ ವಲಸೆಗೆ ಇಂಬು ಕೊಡುವ ಭಾಷಾ ನೀತಿಯೂ ಈಗಾಗಲೇ ಇಲ್ಲಿದೆ ಅಂದ ಮೇಲೆ ಪರಿಣಾಮ ಊಹಿಸುವುದು ಕಷ್ಟವೇ? ಇಂತಹ ಕಟ್ಟೆಯೊಡೆದ ವಲಸೆಯ ಪ್ರವಾಹಕ್ಕೆ ಸಿಕ್ಕುವ ಕನ್ನಡ, ಕನ್ನಡಿಗನಿಗೆ ಕೊನೆಗೇನು ಉಳಿವುದು? ಒಂದು ಭಾಷಾ ಸಮೂಹದ ಅಸ್ತಿತ್ವವನ್ನೇ ಕಿತ್ತು ಹಾಕಬಹುದಾದ ಇಂತಹ ತೊಂದರೆಗಳ ಬಗ್ಗೆ ಮಾತನಾಡಬೇಕಾದದ್ದು ಯಾರು? ಇದೇ ಮಾಧ್ಯಮವಲ್ಲವೇ? ಆದರೆ ಅವರಿಗೆ ಇಂತಹ ಶ್ರಮದ ಕೆಲಸವಾವುದು ಬೇಡ. ತುರಿಕೆ ಆದಾಗ ಕೆರೆದುಕೊಳ್ಳುವಂತೆ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುವವರು parochial, fanatic, fringe elements ಎಂದು ಜರಿದು ತಮ್ಮದೇ ಪ್ರಪಂಚದಲ್ಲಿ ಮುಳುಗಿ ಹೋಗುತ್ತಾರೆ.
ಸಂವಿಧಾನದಲ್ಲಿ ಅಂತರ್-ರಾಜ್ಯ ವಲಸೆಯ ಬಗ್ಗೆ ಏನು ಹೇಳಿಲ್ಲ. ಯಾರೂ ಎಲ್ಲಿಗೆ ಬೇಕಾದರೂ ಹೋಗಬಹುದು ಅನ್ನುವವರು ಅರ್ಥ ಮಾಡಿಕೊಳ್ಳಬೇಕಿರುವುದು ಒಂದಿದೆ. ಸಂವಿಧಾನವೆನ್ನುವುದು ಇರುವುದು ಜನರಿಗಾಗಿ. ಜನರ (ಯಾರೋ ಒಂದು ಭಾಷಿಕ ಜನರಲ್ಲ, ಎಲ್ಲ ಭಾಷಿಕರು) ಒಳಿತಿಗಾಗಿ ಸಂವಿಧಾನವನ್ನು ತಿದ್ದುವ ಕೆಲಸ ಮಾಡಿದರೆ ತಪ್ಪಿಲ್ಲ. ಮಿತಿ ಮೀರಿದ ವಲಸೆಯಿಂದ ಮುಂಬೈ ಅನ್ನುವುದು ಕೊಳಗೇರಿಯ ನಗರವಾಗಿದೆ ಅಲ್ಲಿನ ಮೂಲಭೂತ ಸೌಕರ್ಯವೆಲ್ಲವೂ ಹಳಿತಪ್ಪಿವೆ ಅನ್ನುವುದು ಅಲ್ಲಿಯ ಜನರ ಅನಿಸಿಕೆ. ಬೆಂಗಳೂರಿನಂತಹ ಊರಲ್ಲೂ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ದೊಡ್ಡ ಮಟ್ಟದಲ್ಲೇ ಎಲ್ಲರನ್ನೂ ಕಾಡುತ್ತಿವೆ. ವಲಸೆಯನ್ನು ನಿಯಂತ್ರಿಸುವ, ಆಯಾ ನಾಡಿನ ಸ್ಥಳೀಯತೆ, ಬದುಕು, ಸಂಸ್ಕೃತಿ ಮೂರಾಬಟ್ಟೆ ಮಾಡುವಂತಹ ವಲಸೆಯನ್ನು ನಿಯಂತ್ರಿಸುವ ಹಕ್ಕು ಪ್ರತಿ ರಾಜ್ಯಕ್ಕೂ ಕೊಡುವ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯಲು ಇದು ಸಕಾಲ. ಅದು ಬಿಟ್ಟು ಮಾತೆತ್ತಿದರೆ ಸಂವಿಧಾನದ ಹೆಸರು ಹೇಳಿ ಏನು ಮಾಡೋಕಾಗಲ್ಲ ಎಂದು ಕೈ ಚೆಲ್ಲುವ ಧೋರಣೆ ಬಿಡಲು ವಲಸೆಯಿಂದ ತತ್ತರಿಸಿರುವ ರಾಜ್ಯಗಳೆಲ್ಲ ಮುಂದಾಗಬೇಕಿದೆ.
ಕೊನೆಹನಿ: ಸರಿಯಾದ ಮಾಧ್ಯಮವಾಗಿದ್ದರೆ " ಹೌದು, ರಾಹುಲ್ ಗಾಂಧಿ ಹೇಳಿದ್ದು ಸರಿಯಿದೆ.ಪ್ರತಿ ರಾಜ್ಯವೂ ತನ್ನ ಏಳಿಗೆಗೆ ದುಡಿಯಬೇಕು. ಪ್ರತಿ ರಾಜ್ಯದ ಸರ್ಕಾರವೂ ಅಲ್ಲಿನ ಜನರ ಹಿತ ಕಾಯಲೆಂದೇ ಅಧಿಕಾರಕ್ಕೆ ಬಂದಿರುವುದು, ಅಲ್ಲಿನ ಜನರಿಗೆ ದುಡಿಮೆ, ಬದುಕು ರೂಪಿಸುವ ಕೆಲಸ ಮಾಡಬೇಕು. ಪ್ರತಿ ರಾಜ್ಯದ ಅನನ್ಯತೆ, ಸಂಸ್ಕೃತಿ, ನುಡಿ, ಬದುಕು ಎಲ್ಲವೂ ಉಳಿಯಬೇಕು, ಅದಕ್ಕೆ ಮಾರಕವಾಗುವ ವಲಸೆಗೆ ನಿಯಂತ್ರಣವಿರಬೇಕು" ಎಂದು ಮಾತಾಡುತ್ತಿದ್ದರೋ ಇಲ್ಲವೇ "ಇಂತಹ ಹೇಳಿಕೆ ಮೂಲಕ ಮೂಲಭೂತವಾದಿಗಳಿಗೂ ಇವರಿಗೂ ಯಾವ ಅಂತರವೂ ಇಲ್ಲ" ಅನ್ನುವ ಬಾಲಿಶವಾದ ಮಾತಾಡುತ್ತಿದ್ದರೋ ನೀವೇ ಊಹಿಸಿ.


