ಭಾನುವಾರ, ಜನವರಿ 31, 2010

ನಮ್ಮ ಹುಡುಗ್ರು ಯಾರಿಗೂ ಕಮ್ಮಿ ಇಲ್ಲ !

ಇವತ್ತು ಜೀ ಕನ್ನಡದಲ್ಲಿ ಬರುವ ಸರೆಗಮಪ ಹಾಡಿನ ಸ್ಪರ್ಧೆ ನೋಡ್ತಾ ಇದ್ದೆ. ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರ "ಜಸ್ಟ್ ಮಾತ್ ಮಾತಲ್ಲಿ" ನ promote ಮಾಡಲು ಸುದೀಪ್, ರಘು ದೀಕ್ಷಿತ್ ವಿಶೇಷ ಅತಿಥಿಗಳಾಗಿ ಬಂದಿದ್ರು. ನನಗೆ ತುಂಬಾ ಖುಶಿ ಅನ್ನಿಸಿದ ವಿಷಯಗಳಲ್ಲಿ ಇದು ಒಂದು. ಬರೀ ಚಿತ್ರ ಮಾಡಿ, ಸರಿಯಾಗಿ promote ಮಾಡದೇ ಇರೋದ್ರಿಂದಲೇ ಅದೆಷ್ಟೋ ಒಳ್ಳೆಯ ಕನ್ನಡ ಚಿತ್ರಗಳು ನೆಲಕ್ಕಚ್ಚುತ್ತವೆ. ಅಂತಾದ್ರಲ್ಲಿ "ಜಸ್ಟ್ ಮಾತ್ ಮಾತಲ್ಲಿ" ಗಾಗಿ ಸುದೀಪ್, ಮಳೆಯಲಿ ಜೊತೆಯಲಿ ಚಿತ್ರಕ್ಕಾಗಿ ಗಣೇಶ್ ಮಾಡಿದ ಪ್ರಚಾರ ನಿಜಕ್ಕೂ ಉದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯ ಹೆಜ್ಜೆ. ಮಳೆಯಲಿ ಜೊತೆಯಲಿ ಚೆನ್ನಾಗಿ ಓಡುತ್ತಿರುವುದಕ್ಕೆ, ಗಣೇಶ ಪ್ರಚಾರಕ್ಕಾಗಿ ಪಟ್ಟ ಶ್ರಮ ಕೂಡಾ ಒಂದು ಕಾರಣ ಅನ್ನಬಹುದು.


ನಮ್ಮ ಹುಡುಗ್ರು ಯಾರಿಗೂ ಕಮ್ಮಿ ಇಲ್ಲ !
ಅದಿರಲಿ, ಈ ಕಾರ್ಯಕ್ರಮದಲ್ಲಿ ಸುದೀಪ್ ನನಗೆ ಇಷ್ಟ ಆಗಿದ್ದು ಇನ್ನೊಂದು ಬೇರೆ ಕಾರಣಕ್ಕೆ. "ಮರುಭೂಮಿ ಹೂವು ಅರಳೋ ಹುಚ್ಚು ಕನಸಾ ಕಂಡೆ" ಅನ್ನೋ ಸಕತ್ ಹಾಡೊಂದನ್ನ ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಸ್ಪರ್ಧೆಯಲ್ಲಿ ಒಬ್ಬ ಈ ಹಾಡನ್ನು ಹಾಡಿದಾಗ, ರಾಜೇಶ್ ಮಾತಾಡಿ " ಇಂತಹ ಹಾಡು ನನ್ ಕೈಲೂ ಹಾಡೋಕೆ ಆಗ್ತಿರಲಿಲ್ಲ, It's a different genre song. ಆದ್ರೆ ರಘು ಹಾಡಿಸಿದ್ರು" ಅಂತಾ ಹೇಳಿದ್ರು. ಆಗ ಮಾತಾಡಿದ ಸುದೀಪ್ " ರಾಜೇಶ್, ನಿಮ್ಮಲ್ಲಿರೋ ಸಾಮರ್ಥ್ಯ ನಿಮಗೆ ಗೊತ್ತಿಲ್ಲ. ನಿಮ್ಮ ಸಾಮರ್ಥ್ಯನಾ underestimate ಮಾಡಬೇಡಿ. ಕನ್ನಡದ ಗಾಯಕರು ಯಾರಿಗೂ ಕಮ್ಮಿ ಇಲ್ಲ. ಹೊರಗಿನಿಂದ ಬಂದ ಯಾವ ಗಾಯಕನೂ ಕನ್ನಡದ ಗಾಯಕನ feel ಕೊಡಲಾರ, ಆದ್ರೆ ನಾವು ನಮ್ಮನ್ನ ಸರಿಯಾಗಿ promote ಮಾಡಿಕೊಳ್ಳದೇ ಇರೋದ್ರಿಂದಲೇ ಇವತ್ತು ಹೊರಗಿನವರು ನಮ್ಮ ಮಾರುಕಟ್ಟೆಯಲ್ಲಿ ಮಿಂಚುತ್ತಾ  ಇರೋದು, ಕನ್ನಡದ ಗಾಯಕರು ಇದರ ಬಗ್ಗೆ ಗಮನ ಕೊಡಬೇಕು" ಅನ್ನೋ ಸಂದೇಶ ಕೊಟ್ರು. ಇದು ನಿಜಕ್ಕೂ ಸಕತ್ ಒಳ್ಳೆಯ ಮಾತು. We should become more market savvy. We should not hesitate to promote ourselves.

ನಮ್ಮನ್ನ ನಾವು promote ಮಾಡ್ಕೋಬೇಕು
ರಾಜೇಶ್ ಕೃಷ್ಣನ್ ಈ ದಶಕ ಕಂಡ ಅದ್ಭುತ ಗಾಯಕರಲ್ಲಿ ಒಬ್ಬ. ಕರ್ನಾಟಕದ ಉದ್ದಗಲಕ್ಕೂ ಸಿಕ್ಕಾಪಟ್ಟೆ ಫ್ಯಾನ್ಸ್ ಇರೋ ಗಾಯಕ. ಇಷ್ಟೆಲ್ಲಾ ಜನಪ್ರಿಯತೆ ಇರೋ ಇವರು ತಮ್ಮನ್ನು ಒಂದು ಬ್ರಾಂಡ್ ತರಹ ಪ್ರಮೋಟ್ ಮಾಡಿಕೊಂಡಿದ್ದಾರಾ? ಖಂಡಿತ ಇಲ್ಲ ಅನ್ನಬಹುದು. ರಾಜ್ಯದ ಅಸಂಖ್ಯಾತ ಶಾಲೆ-ಕಾಲೇಜುಗಳಲ್ಲಿ ನಡೆಯೋ ಫೆಸ್ಟ್, ಹಲವು ದೊಡ್ಡ ಪಟ್ಟಣಗಳಲ್ಲಿ ನಡೆಯೋ ದಸರೆ, ದೀಪಾವಳಿ ಉತ್ಸವ, ಹೀಗೆ ಇಲ್ಲೆಲ್ಲ ಕನ್ನಡದ ಗಾಯಕರು, ಸಂಗೀತ ನಿರ್ದೇಶಕರು ತಮ್ಮ concerts, music shows ಗಳನ್ನು ಆಯೋಜಿಸಿ, ತಮ್ಮ ಬ್ರಾಂಡ್ ಕಟ್ಟಿಕೊಳ್ಳಬೇಕು. ಇವರು ಇದನ್ನ ಮಾಡದೇ ಇರೋದ್ರಿಂದಲೇ, ಇವತ್ತು ಅಲ್ಲೆಲ್ಲ ಬಾಲಿವುಡ್ ಗಾಯಕರು ಬಂದು, ಹಿಂದಿ ಮೆರೆಸೋ ಕೆಲಸ ನಡಿತಿದೆ.

ಕನ್ನಡದಿಂದ ದುಡ್ಡು, ಹೆಸರು ಎಲ್ಲಾ ಮಾಡ್ಕೊಬೇಕು
ನಮ್ಮವರು ತಮ್ಮನ್ನು promote ಮಾಡ್ಕೊಳ್ಳೋದು ತಪ್ಪೇನೋ, ಆದಷ್ಟು ಎಲೆಮರೆಕಾಯಿಯಂತೆ ಇರಬೇಕು ಅನ್ನೋ ರೀತಿಲಿ ವರ್ತಿಸುತ್ತಾರೆ (ಇದಕ್ಕೆ ಅಪವಾದವೆಂಬಂತೆ ಇರೋರು ರಘು ದೀಕ್ಷಿತ್ ಒಬ್ರೇ ಅನ್ಸುತ್ತೆ. ಅವರನ್ನ ಈ ವಿಷಯಕ್ಕೆ ನಿಜಕ್ಕೂ ಮೆಚ್ಚಬೇಕು). ಆದ್ರೆ ಸೋನು ನಿಗಮ್ ಅವರನ್ನ ನೊಡಿ, ಆತನ ಕನ್ನಡ ಹಾಡುಗಳಿಗೆ ಕನ್ನಡಿಗರು ಕೊಟ್ಟ ಪ್ರೀತಿ ವಿಶ್ವಾಸಕ್ಕೆ ಪ್ರತಿಯಾಗಿ ಕಾಣಿಕೆಯಾಗಿ ಕೊಟ್ಟ "ನೀನೇ ಬರೀ ನೀನೇ" ಅಲ್ಬಮ್ ಗಾಗಿ ತಗೊಂಡಿದ್ದು ಕೇವಲ ಒಂದು ಕೋಟಿಯಂತೆ ಅನ್ನೋ ಸುದ್ದಿ ಕೆಲ ತಿಂಗಳ ಹಿಂದೆ ಓದಿದ್ದ ನೆನಪು. ದುಡ್ಡು ತಗೊಂಡು, ತಮ್ಮನ್ನ ಮಾಧ್ಯಮದಲ್ಲೂ ಚೆನ್ನಾಗಿ promote ಮಾಡಿಕೊಳ್ಳೊ ಬಾಲಿವುಡ್ ಗಾಯಕರ ಕಲೆ ಕನ್ನಡದ ಗಾಯಕರಲ್ಲೂ ಬರ್ಬೇಕು. ಕನ್ನಡದಿಂದ ಚೆನ್ನಾಗಿ ದುಡ್ದು, ಖ್ಯಾತಿ ಎಲ್ಲಾನೂ ಗಳಿಸಿಕೊಳ್ಳಬಹುದು, ಆದ್ರೆ ನಮ್ಮ ಗಾಯಕರು, ಸಂಗೀತಗಾರರು ಆ ಬಗ್ಗೆ ಯೋಚ್ನೆ ಮಾಡಬೇಕಷ್ಟೇ. ನಿಮಗೇನ್ ಅನ್ಸುತ್ತೆ ಗೆಳೆಯರೇ?

ಭಾನುವಾರ, ಜನವರಿ 24, 2010

ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸಾ ಕಂಡೆ !

ಕನ್ನಡ ಚಿತ್ರರಂಗ ಈ ದಶಕದಲ್ಲಿ ಕಂಡ ಪ್ರತಿಭಾನ್ವಿತ ನಟರಲ್ಲಿ ಸುದೀಪ್  ಒಬ್ಬರು. ಅವರ ಹುಚ್ಚ, ಮೈ ಆಟೋಗ್ರಾಫ್, ಶಾಂತಿನಿವಾಸ ಮುಂತಾದ ಚಿತ್ರಗಳ ಅಭಿನಯ ನನಗೆ ಇಷ್ಟವಾದದ್ದು. ಆದ್ರೆ ಬರೀ ರಿಮೇಕ್ ಚಿತ್ರಗಳಲ್ಲಿ ನಟಿಸ್ತಾರೆ ಅನ್ನೋ ಬೇಜಾರು ಕೊಂಚವಿತ್ತು. ಆದ್ರೆ ಈ ವರ್ಷ ಅವರು ಸ್ವಂತ ಕತೆಯೊಂದಿಗೆ ನಿರ್ದೇಶನ ಮಾಡಿರುವ "ಜಸ್ಟ್ ಮಾತ್ ಮಾತಲ್ಲಿ" ಸಿನೆಮಾ ಇನ್ನೇನು ಬಿಡುಗಡೆಯಾಗಲಿದೆ.

ರಘು ದೀಕ್ಷಿತ್, ರಮ್ಯಾ, ಸುದೀಪ್, ರಾಜೇಶ್ ಮುಂತಾದ ಪ್ರತಿಭಾನ್ವಿತರ ತಂಡವೇ ಚಿತ್ರಕ್ಕೆ ಕೆಲಸ ಮಾಡಿರುವಾಗ, ಜೊತೆಗೆ ಸುದೀಪ್ ನಿರ್ದೇಶವೂ ಇರೋದ್ರಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿರಬಹುದು ಅನ್ನುವ ನಿರೀಕ್ಷೆಯಂತೂ ಇದೆ. ಅದು ಅತ್ಲಾಗಿರಲಿ, ಈ ಸಿನೆಮಾದ ಹಾಡಿನ ಸಿ.ಡಿ ತಗೊಂಡು ಹಾಡು ಕೇಳ್ತಾ ಇದ್ದೆ. ರಘು ದೀಕ್ಷಿತ್ ಅವರ ಸಂಗೀತ ನಿಜಕ್ಕೂ ಮನಸೆಳೆಯುತ್ತೆ. ಎಲ್ಲ ಹಾಡುಗಳ ಸಾಹಿತ್ಯ, ಸಂಗೀತ ಎರಡೂ ಕೇಳೊಕೆ ಖುಷಿ ಕೊಡುತ್ತೆ. "ಈ ಕಣ್ಣಿನಲ್ಲಿ, ಕಣ್ ಚಿಪ್ಪಿನಲ್ಲಿ" ಅನ್ನೋ ಹಾಡನ್ನು ಕೇವಲ ರಘು ಮಾತ್ರ ಹಾಡಬಲ್ಲರು. ಅದು ಅವರ ಧ್ವನಿಗಿರೋ ವಿಶೇಷತೆ. "ನಿನ್ನ ಪೂಜೆಗೆ ಬಂದೆ ಮಹಾದೇಶ್ವರಾ" ಆದ ಮೇಲೆ ರಘು ಹಾಡಿರೋ ಸಕತ್ ಹಾಡಲ್ಲಿ ಇದು ಒಂದು ಅನ್ನಬಹುದು.

ಹಾಗೇ, ಈ ಚಿತ್ರದಲ್ಲಿ  ನಮ್ಮ ರಾಜೇಶ್ ಕೃಷ್ಣನ್ ಹಾಡಿರುವ ಈ ಹಾಡಿನ ಸಾಲುಗಳು ಒಂತರಾ ಸೆಳೆತ ಇದೆ.


"ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸಾ ಕಂಡೆ
ಈ ಮನಸಿನ ಭಾರಕ್ಕೆ ಹೂವಿನ ಹಗುರ ತಂದೆ
ಎಂದೂ ಕಾಣದ ಸವಿ ಕನಸೇ ನೀನಾ?
ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕಾ?
ನೀರು ಜೇನಾಯ್ತು ಹೇಗೋ ನಾನು ಅರಿಯೆ, ಹೀಗೆ ಜಸ್ಟ್ ಮಾತ್ ಮಾತಲ್ಲಿ..

ಬಾನಲ್ಲಿ ಹಕ್ಕಿಯ ಮೀರಿ ಹಾರುವ ಆಸೆ ಕಂಡೆ
ತಂಪಾದ ಮಂಜಿನ ಹನಿಯ ಮುತ್ತಿಕ್ಕೊ ಆಸೆಯ ಕಂಡೆ
ಪಯಣಕ್ಕೆ ಸವಿಯ ಸ್ನೇಹ ಸಿಕ್ಕಿದೆ ಇಲ್ಲಿ
ತೂರಿದೆ ನನ್ನ ಹೃದಯ ಬಾನಿನಲ್ಲಿ
ಕಣ್ಣಿಗೆ ಹಚ್ಚಿದೆ ನೀ ಪ್ರೇಮದ ಬಣ್ಣ,, ಹೀಗೆ ಜಸ್ಟ್ ಮಾತ್ ಮಾತಲ್ಲಿ..

ನನ್ನ ಉಸಿರಿಗೆ ನೀ ಸ್ವರವೇ, ಆ ಸ್ವರಕೆ ನಿನ್ನ ಹೆಸರು ಪದವೇ ? ||೨||
ಕೇಳಿದೆ ಕೋಗಿಲೆ, ಆ ಹಾಡು ಹಾಡಲೇ ? ಒಪ್ಪಿಗೆ ನಿನ್ನ ಕೇಳಿದೆ,, ||೨||
ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸಾ ಕಂಡೆ
ಈ ಮನಸಿನ ಭಾರಕ್ಕೆ ಹೂವಿನ ಹಗುರ ತಂದೆ
ಎಂದೂ ಕಾಣದ ಸವಿ ಕನಸೇ ನೀನಾ?
 ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕಾ?
ನೀರು ಜೇನಾಯ್ತು ಹೇಗೋ ನಾನು ಅರಿಯೆ, ಹೀಗೆ ಜಸ್ಟ್ ಮಾತ್ ಮಾತಲ್ಲಿ.."

ಈ ಹಾಡನ್ನು ಬರೆದಿದ್ದು ರಘು ದೀಕ್ಷಿತ್ ಅನ್ನೋದು ಇನ್ನೊಂದು ವಿಶೇಷ. ಆನ್ ಲೈನ್ ಇಲ್ಲಿ ಕೇಳಬಹುದು. ಇಷ್ಟ ಆದಲ್ಲಿ, ಅಂಗಡಿಗೆ ಹೋಗಿ ಒಂದು ಸಿ.ಡಿ ಖರೀದಿ ಮಾಡಿ, ಕನ್ನಡ ಸಂಗೀತ ಉದ್ಯಮವನ್ನು ಬೆಂಬಲಿಸಬೇಕು ಅನ್ನೋದು ನನ್ನ ಕೋರಿಕೆ.

ಭಾನುವಾರ, ಜನವರಿ 3, 2010

ನನ್ನ ಮಹಾರಾಷ್ತ್ರ ಪ್ರವಾಸದ ಅನುಭವಗಳು !

ಇತ್ತಿಚೆಗೆ ತಂದೆ-ತಾಯಿಯೊಂದಿಗೆ ಶಿರಡಿ ಪ್ರವಾಸಕ್ಕೆಂದು ಹೋಗಿದ್ದೆ. ದೇಶದಲ್ಲೇ ಹೆಚ್ಚು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೊಂದಾದ ಮಹಾರಾಷ್ಟ್ರದ ಬಗ್ಗೆ ತುಂಬಾ ಕೇಳಿದ್ದೆ. ಅಲ್ಲಿನ ಜನ ಜೀವನ ಹೇಗಿರಬಹುದು, ಕರ್ನಾಟಕಕ್ಕಿಂತ ಅವರು ಯಾವ ಯಾವ ವಿಷ್ಯದಲ್ಲಿ ಮುಂದಿದ್ದಾರೆ, ಅಲ್ಲಿನ ಮೂಲಭೂತ ಸೌಕರ್ಯ ಹೇಗಿರಬಹುದು ಅನ್ನುವ ಕುತೂಹಲ ನನ್ನಲ್ಲಿತ್ತು. ನಾನು ಪಯಣಿಸಿದ ದಕ್ಷಿಣ-ಪಶ್ಚಿಮ ಮಹಾರಾಷ್ಟ್ರ ಭಾಗದ ಕೊಲ್ಲಾಪುರ, ಸತಾರಾ, ಪುಣೆ, ನಾಶಿಕ್, ಅಹ್ಮದ್ ನಗರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಒಬ್ಬ ಪ್ರವಾಸಿಯಾಗಿ ನನಗೆ ಕಂಡ ಕೆಲವು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು.

ಬೆಳಗಾವಿ ದಾಟಿದ ತಕ್ಷಣ ಕನ್ನಡ ಮಾಯ !

ಬೆಳಗಾವಿ ನಗರದಿಂದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮಹಾರಾಷ್ಟ್ರದ ಗಡಿಗಿರುವ ದೂರ ಸುಮಾರು 80 ಕಿ.ಮೀ. ದಾರಿಯಲ್ಲಿ ಬರುವ ಸಂಕೇಶ್ವರ, ನಿಪ್ಪಾಣಿ, ರಾಣಿ ಚೆನ್ನಮ್ಮಳ ಹುಟ್ಟೂರು ಕಾಕತಿ ( ಇಲ್ಲಿ ಅಲ್ಲಲ್ಲಿ ಕನ್ನಡ ಬಾವುಟ ಹಾರಾಡ್ತಾ ಇತ್ತು),, ಹೀಗೆ ದಾರಿಯುದ್ದಕ್ಕೂ ಕನ್ನಡ, ಇಂಗ್ಲಿಷ್ ಜೊತೆ ಮರಾಠಿ ನಾಮಫಲಕಗಳು ರಾರಾಜಿಸುತ್ತಿದ್ದವು. ಗೆಳೆಯರೊಬ್ಬರ ಜೊತೆ ಮಾತನಾಡುವಾಗ ಅವರು ಹೇಳಿದ್ದು, ಇತ್ತಿಚೆಗೆ ಕನ್ನಡ ಪರ ಸಂಘಟನೆಗಳ ನಿರಂತರ ಪ್ರಯತ್ನದಿಂದ ಇಲ್ಲಿನ ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ ಹೆಚ್ಚಾಗಿದ್ದು, ಅದಾದ ನಂತರವಷ್ಟೇ ಈ ಫಲಕಗಳಲ್ಲಿ ಕನ್ನಡಕ್ಕೂ ಸ್ಥಾನ ಸಿಕ್ಕಿದ್ದು, ಈ ಮುಂಚೆ ಕನ್ನಡವನ್ನು ಕೇಳುವವರೇ ಇರಲಿಲ್ಲವೆಂದು. ಅಚ್ಚರಿಯೆಂದರೆ, ಒಮ್ಮೆ ಮಹಾರಾಷ್ಟ್ರ ಗಡಿ ದಾಟಿದೊಡನೆ ಒಂದೇ ಒಂದು ಕನ್ನಡ ನಾಮಫಲಕಗಳು ಕಾಣಿಸದು ! ದಾರಿಯಲ್ಲಿ ಹಲವು ಚಿಕ್ಕ ಊರುಗಳ ಹೆಸರುಗಳು ಕನ್ನಡಮಯವಾಗಿದ್ದದ್ದು ಮಹಾರಾಷ್ಟ್ರಕ್ಕಿರುವ ಕನ್ನಡ ಇತಿಹಾಸವನ್ನು ಸಾರುತ್ತಿದ್ದವು, ಆದರೆ ಇವತ್ತು ಅಲ್ಲೆಲ್ಲೂ ಕನ್ನಡ ಕಾಣಿಸದು ಅನ್ನುವುದು ಅಷ್ಟೇ ಕಟುವಾದ ಸತ್ಯ.

ಹೇಗಿದೆ ಪಶ್ಚಿಮ ಮಹಾರಾಷ್ಟ್ರ ?

ಹೀಗೆ ಶುರುವಾದ ನನ್ನ ಮಹಾರಾಷ್ಟ್ರ ಪ್ರವಾಸದಲ್ಲಿ ಮೊದಲು ನನ್ನ ಗಮನಕ್ಕೆ ಬಂದಿದ್ದು, ಅಲ್ಲಿನ ನುಣುಪು ನುಣುಪು ರಸ್ತೆಗಳು. ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸಬಹುದಾದಷ್ಟು ಚೆನ್ನಾಗಿರೊ ರಾಷ್ಟ್ರೀಯ ಹೆದ್ದಾರಿ ನಿಜಕ್ಕೂ ಅದ್ಭುತವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಜೊತೆ ಮಹಾರಾಷ್ಟ್ರ PWD ಯವರು ಈ ಯೋಜನೆಯಲ್ಲಿ ಕೈ ಜೋಡಿಸಿದ್ದರಿಂದ ಅಲ್ಲಿ ಸ್ವರ್ಣ ಪಥ ಹೆದ್ದಾರಿ ಮುಕ್ತಾಯವಾಗಿ ಆಗಲೇ ಜನಬಳಕೆಯಲ್ಲಿದೆ. ಕರ್ನಾಟಕದಲ್ಲಿ ಮಾತ್ರ ಇದು ಇನ್ನೂ ಕುಂಟುತ್ತಾ ಸಾಗಿದೆ. ಬೆಳಗಾವಿಯಿಂದ ಹೆಚ್ಚು ಕಮ್ಮಿ ಪುಣೆಯವರೆಗೂ ಪ್ರತಿ 20-30 ಕಿ.ಮೀ ಗೊಂದರಂತಿರುವ ಸಕ್ಕರೆ ಕಾರ್ಖಾನೆಗಳು, ಹಾಲು ಉತ್ಪಾದನಾ ಘಟಕಗಳು, ಜೊತೆಗೆ ಅಲ್ಲಿ ಹರಿಯುವ ಕೃಷ್ಣಾ ನದಿ ದಕ್ಷಿಣ-ಪಶ್ಚಿಮ ಮಹಾರಾಷ್ಟ್ರ ಭಾಗದ ರೈತರ ಬಾಳನ್ನು ಹಸನಾಗಿಸಿದೆ. ಮಾರನೇ ದಿನ ಪುಣೆಯಿಂದ ಹೊರಟು ತಲುಪಿದ್ದು ನಾಶಿಕ್. ಪಂಚವಟಿ, ತ್ರೈಯಂಬಕೇಶ್ವರ ಸೇರಿದಂತೆ ಹಲವು ಯಾತ್ರಾ ಸ್ಥಳಗಳನ್ನುಳ್ಳ, ಶಿರಡಿ, ಶನಿ ಶಿಂಗಣಾಪುರ ದಂತಹ ಯಾತ್ರಾ ಸ್ಥಳಗಳಿಗೆ ಹತ್ತಿರ ಇರುವ ಕಾರಣಕ್ಕೆ ನಾಶಿಕ್ ನಗರಕ್ಕೆ city of pilgrimage ಅನ್ನುವ ಹೆಸರು ಕೂಡಾ ಇದೆ.


ಪ್ರವಾಸೋದ್ಯಮ ಇಲ್ಲಿನ ಒಂದು ಮುಖ್ಯ ಆದಾಯ ಮೂಲವೂ ಹೌದು. ಈ ಭಾಗದಲ್ಲಿ ಕೂಡ ಸಾಕಷ್ಟು ಸಕ್ಕರೆ ಕಾರ್ಖಾನೆಗಳು ಕಂಡು ಬಂದವು. ಇಲ್ಲಿಂದ ಶಿರ್ಡಿವರೆಗಿನ ರಾಜ್ಯ ರಸ್ತೆಯೂ ಚೆನ್ನಾಗಿತ್ತು. ಪುಣೆ, ನಾಶಿಕ್ ದಂತಹ ಎರಡನೇ ದರ್ಜೆಯ ಊರಿನಲ್ಲಿ ಕಂಡ ಅಗಲವಾದ ರಸ್ತೆಗಳು ಮೈಸೂರನ್ನು ನೆನೆಯುವಂತೆ ಮಾಡಿದವು. ಶಿರ್ಡಿ, ಶನಿಶಿಂಗಣಾಪುರದ ಭೇಟಿಯ ನಂತರ ಅಹ್ಮದ್ ನಗರದ ಮೂಲಕ ಪುಣೆಯತ್ತ ಪಯಣಿಸಿದೆವು. ಅಹ್ಮದ್ ನಗರದಿಂದ ಪುಣೆಗಿರುವ 4 ಸಾಲಿನ ರಾಜ್ಯ ಹೆದ್ದಾರಿ 60 ಎಷ್ಟು ಅದ್ಭುತವಾಗಿತ್ತೆಂದರೆ 120 ಕಿ.ಮೀ ದೂರವನ್ನು ಕೇವಲ 90  ನಿಮಿಷದಲ್ಲಿ ಕ್ರಮಿಸಿದೆವು ! ಈ ಭಾಗದಲ್ಲಿನ ಅಭಿವೃದ್ಧಿಯನ್ನು ಗಮನಿಸಿ, ಅಲ್ಲಿನ ಕೆಲ ಸ್ಥಳೀಯರನ್ನು ಮಾತನಾಡಿಸಿದಾಗ ಕೇಳಿ ಬಂದ ಅಂಶವೆಂದರೆ ಇದಕ್ಕೆಲ್ಲ ಕಾರಣ ಆ ಭಾಗದ ನೇತಾರರು. ಛಗನ್ ಭುಜಬಲ್, ಆರ್.ಆರ್.ಪಾಟೀಲ್, ಶರದ್ ಪವಾರ್ ಮುಂತಾದ ನಾಯಕರು ಇಲ್ಲಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಅನ್ನುವುದು. ಅಲ್ಲಿ ಜಾತಿ ಜೊತೆ, ಕೆಲಸವನ್ನೂ ಮಾಡಿ ರಾಜ್ಯ ಮಟ್ಟದ ನಾಯಕರಾದರೇ, ಕರ್ನಾಟಕದಲ್ಲಿ ಬರೀ ಜಾತಿ ಆಧಾರದ ಮೇಲೆ ಪ್ರಭಾವಿ ಮುಖಂಡರಾಗೋದು ಎರಡು ರಾಜ್ಯಗಳ ನಡುವಿನ ಇನ್ನೊಂದು ವ್ಯತ್ಯಾಸ.





ಹಿಂದಿ ಹೇರಿಕೆಗೆ ಕೊನೆಯಿಲ್ಲ !

ಮಹಾರಾಷ್ಟ್ರದುದ್ದಕ್ಕೂ ಕಂಡ ಇನ್ನೊಂದು ಅಂಶವೆಂದರೆ ಹಿಂದಿ ಅಲ್ಲಿ ಹೊಕ್ಕಿರುವ ರೀತಿ. ಲಿಪಿ, ನುಡಿ ಎರಡರಲ್ಲೂ ಹಿಂದಿಗೆ ಸಾಕಷ್ಟು ಸಾಮ್ಯತೆ ಇರುವ ಕಾರಣದಿಂದಲೋ ಏನೋ ಮರಾಠಿಗರಲ್ಲಿ ಹೆಚ್ಚಿನವರು ಹಿಂದಿ ಹೇರಿಕೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಇದಕ್ಕೆ ಸಿಕ್ಕ ಅತಿ ದೊಡ್ಡ ನಿದರ್ಶನವೆಂದರೆ ಸುಮಾರು 1500 ಕಿ.ಮೀ ಮಹಾರಾಷ್ಟ್ರದಲ್ಲಿ ಓಡಾಡಿದರೂ, ಕೊಲ್ಲಾಪುರದ ಒಂದು ಚಿತ್ರಮಂದಿರ ಬಿಟ್ಟರೆ, ಬೇರೆಲ್ಲೂ ಮರಾಠಿ ಚಿತ್ರಗಳ ಒಂದೇ ಒಂದು ಪೋಸ್ಟರ್ ಕೂಡಾ ಕಾಣಿಸಲಿಲ್ಲ. ಎಲ್ಲಿ ನೋಡಿದರೂ ಹಿಂದಿ ಚಿತ್ರಗಳ ಅಬ್ಬರ ! ಅಪೂರ್ವ ಇತಿಹಾಸ, ಸಂಸ್ಕೃತಿ, ಸಾಹಿತ್ಯದ ಹಿನ್ನೆಲೆ ಇರುವ ಮರಾಠಿಗೆ, 10 ಕೋಟಿ ಮರಾಠಿಗರಿಗೆ ಒಂದು 100 ಕೋಟಿ ರೂಪಾಯಿ ಸಾಮರ್ಥ್ಯದ ಚಿತ್ರೋದ್ಯಮ ಕಟ್ಟಿಕೊಳ್ಳಲು ಆಗದಿರುವುದಕ್ಕೆ ಹಿಂದಿ ಒಪ್ಪಿಕೊಂಡಿರುವುದೇ ಕಾರಣವೆನ್ನುವುದು ಸ್ಪಷ್ಟವಾಗಿ ಕಾಣಿಸುತ್ತಾ ಇತ್ತು. ಕನ್ನಡ ಚಿತ್ರೋದ್ಯಮ ಸುಮಾರು 250 ಕೋಟಿ ಸಾಮರ್ಥ್ಯದ ಉದ್ದಿಮೆಯಾಗಿದೆ. ಹಿಂದಿ ಹೇರಿಕೆಗೆ ಸೊಪ್ಪು ಹಾಕಿದ್ರೆ, ನಮ್ಮ ಚಿತ್ರೋದ್ಯಮವೂ ಅವನತಿಯಾಗುವುದರಲ್ಲಿ ಅನುಮಾನವೇ ಇಲ್ಲ.  ಇದು ಚಿತ್ರೋದ್ಯಮದ ಮಾತಾದರೆ, ಇನ್ನೂ ಇಲ್ಲಿನ ಹೆಚ್ಚಿನ ಹೋಟೆಲ್, ವಸತಿ ಗೃಹಗಳಲ್ಲಿ ಕೆಲಸ ಮಾಡುವವರು ಬಿಹಾರ್, ಉತ್ತರ ಪ್ರದೇಶ್ ಮೂಲದ ವಲಸಿಗರು. ವಿಧರ್ಭ, ಮರಾಠವಾಡ ಪ್ರಾಂತ್ಯಗಳಲ್ಲಿ ಬರಗಾಲ, ಉದ್ಯೋಗ ಅವಕಾಶಗಳ ಕೊರತೆಯಿದೆ ಅನ್ನುವ ಮರಾಠಿಗರು ಇಲ್ಲೆಲ್ಲ ಬಂದು ಅದ್ಯಾಕೆ ಕೆಲಸ ಮಾಡುವುದಿಲ್ಲವೋ ಗೊತ್ತಿಲ್ಲ. ಇನ್ನೂ ಎಲ್ಲ ದೇವಸ್ಥಾನಗಳಲ್ಲಿ ಇಂಗ್ಲಿಷ್, ಮರಾಠಿಗಳ ಜೊತೆ ಎಲ್ಲೆಡೆ ಹಿಂದಿಯಲ್ಲಿ ಫಲಕಗಳು ರಾರಾಜಿಸುತ್ತಿದ್ದವು ! ಒಮ್ಮೆ ಹಿಂದಿ ಒಪ್ಪಿಕೊಂಡ ಮೇಲೆ, ಹಿಂದಿ ವಲಸಿಗರು ಬರದೇ ಇರುತ್ತಾರೆಯೇ?  ಸಂತೋಷದ ವಿಷಯವೆಂದರೆ, ಹಿಂದಿ ಹೇರಿಕೆಯ ವಿರುದ್ಧ, ಎಲ್ಲ ಭಾರತೀಯ ಭಾಷೆಗಳಿಗೂ ಸಮಾನ ಸ್ಥಾನ ಸಿಗಬೇಕು ಅನ್ನುವ ಕೂಗು ಕೊನೆಗೂ ಮಹಾರಾಷ್ಟ್ರದಲ್ಲಿ ಕೇಳಿ ಬರುತ್ತಿರುವುದು !

ಶಿವಾಜಿ ಮತ್ತು ಮರಾಠಿಗರು

ತಮ್ಮ ಭಾಷೆಯ ಮೇಲಿನ ಎಲ್ಲ ಆಕ್ರಮಣದ ನಡುವೆಯೂ, ಮರಾಠಿಗರನ್ನೆಲ್ಲ ಒಂದಾಗಿ ಬೆಸೆಯುತ್ತಿರುವುದು, ಅವರಲ್ಲಿ ಒಗ್ಗಟ್ಟು ಮೂಡಿಸುತ್ತಿರುವುದು ಅವರ ಇತಿಹಾಸದ ಅತೀ ಮುಖ್ಯ ಕೊಂಡಿಯಾದ ಶಿವಾಜಿ ಮಹಾರಾಜ. ಮಹಾರಾಷ್ಟ್ರ ಶುರುವಾದ ನಂತರ ಬರುವ ಕೊಲ್ಲಾಪುರ, ಸತಾರಾ, ಪುಣೆ, ಸಂಗಮನೇರ್, ನಾಶಿಕ್, ಅಹ್ಮದ ನಗರ ಹೀಗೆ ಪ್ರತಿ ಊರಲ್ಲಿ ಶಿವಾಜಿ ಮೂರ್ತಿ ಕಂಡು ಬಂತು. ಇತಿಹಾಸದಿಂದ, ಇತಿಹಾಸದಲ್ಲಿ ಸಾಧನೆಗೈದ ನಾಯಕರು ಒಂದು ಜನಾಂಗದ ಒಗ್ಗಟ್ಟು ಹೆಚ್ಚಿಸುವಲ್ಲಿ, ಅವರಲ್ಲಿ ಸ್ಪೂರ್ತಿ ಹೆಚ್ಚಿಸುವಲ್ಲಿ ಎಷ್ಟು ಸಹಕಾರಿಯಾಗಬಲ್ಲರು ಅನ್ನುವುದು ಮರಾಠಿಗರು ಮತ್ತು ಅವರ ಶಿವಾಜಿ ಆರಾಧನೆಯಿಂದ ಕಾಣಿಸುತ್ತೆ. ಕರ್ನಾಟಕದಲ್ಲೂ ಇದು ಹೆಚ್ಚಾಗಬೇಕು. ಕೃಷ್ಣ ದೇವರಾಯ, ಕಿತ್ತೂರು ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಒನಕೆ ಒಬವ್ವ, ಆಲೂರು ವೆಂಕಟರಾಯರು, ಡಾ.ರಾಜ್ ಕುಮಾರ್ ರಂತಹ ನಾಡು ಕಂಡ ಹೆಮ್ಮೆಯ ಪುತ್ರರ ಬಗ್ಗೆ ನಾಡಿನ ಮಕ್ಕಳಲ್ಲಿ ಹೆಚ್ಚು ಅರಿವು ಮೂಡಿಸುವ ಪ್ರಯತ್ನಗಳಾಗಬೇಕು. ಇದು ಅವರಲ್ಲಿ ಇತಿಹಾಸ ಪ್ರಜ್ಞೆ, ನಮ್ಮ ನಾಡು-ನುಡಿಯ ಬಗ್ಗೆ ಹೆಮ್ಮೆ ತಾಳುವಲ್ಲಿ ಖಂಡಿತ ಸಹಾಯವಾಗಬಲ್ಲುದು.


ಮರಾಠಿ ಸಾಹಿತ್ಯಕ್ಕೆ ಈಗಲೂ ಇರುವ ಬೇಡಿಕೆ !

ಕೊಲ್ಲಾಪುರದ ದೇವಸ್ಥಾನದ ಬಾಗಿಲಲ್ಲೇ ಒಂದು ಪುಸ್ತಕ ಮಳಿಗೆ ಕಂಡು ಬಂತು. ಸಾಕಷ್ಟು ಜನಸಂದಣಿ ಇದ್ದ ಆ ಮಳಿಗೆ ಹೊಕ್ಕು ನೋಡಿದರೆ ಎಲ್ಲಿ ನೋಡಿದರೂ ಮರಾಠಿ ಪುಸ್ತಕಗಳ ರಾಶಿ !! ಅಷ್ಟೇ ಅಲ್ಲ, ಇಂಗ್ಲಿಷ್ ನಲ್ಲಿ ಬಂದ ಹಲವು ಪುಸ್ತಕಗಳ ಮರಾಠಿ ಅನುವಾದದ ಪ್ರತಿಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿಲಿದ್ದವು. Five point someone  ಅನ್ನುವ ಕೃತಿ ಬರೆದ ಚೇತನ್ ಭಗತ್ ಅವರ ಎಲ್ಲ ಕೃತಿಗಳ ಮರಾಠಿ ಆವೃತ್ತಿಗಳು ಅಲ್ಲಿ ಮಾರಾಟಕ್ಕಿದ್ದವು. ಯುವ ಜನರನ್ನು ಗುರುಯಾಗಿಸಿಕೊಂಡು ಬರೆಯುತ್ತಿರುವ ಎಲ್ಲ ಇಂಗ್ಲಿಷ್ ಬರಹಗಾರರ ಕೃತಿಗಳನ್ನು ಮರಾಠಿಯಲ್ಲಿ ದೊರಕುವಂತೆ ಮಾಡುವ ಮೂಲಕ ಮರಾಠಿ ಯುವಕರನ್ನು ಮರಾಠಿ ಸಾಹಿತ್ಯದೆಡೆ ಸೆಳೆಯುವ ಪ್ರಯತ್ನ ನಡೆಯುತ್ತಾ ಇದೆ ಅನ್ನುವುದು ಪುಸ್ತಕದಂಗಡಿಯ ಮಾಲಿಕರ ಅಂಬೋಣ. ಇಂತಹ ಪ್ರಯತ್ನಗಳು ಕನ್ನಡದಲ್ಲೂ ಹೆಚ್ಚೆಚ್ಚು ನಡೆಯಬೇಕು.



ಕೊನೆ ಹನಿ
ಒಟ್ಟಾರೆ ಹಲವು ವಿಷ್ಯಗಳಲ್ಲಿ ಅವರು ನಮ್ಮಿಂದ ಕಲಿಯಬಹುದಾದ್ದು ಇದ್ದು, ಹಲವು ಬೇರೆ ವಿಷಯಗಳಲ್ಲಿ ಮರಾಠಿಗರು ನಮ್ಮಿಂದ ಮುಂದೆ ಇದ್ದು, ಅವರಿಂದ ನಮ್ಮ ನೆಲದ ನಾಯಕರು ಕಲಿಯಬಹುದಾದ್ದು ಇದೆ ಎಂದು ನನ್ನ ಅನಿಸಿಕೆ. ಕೇವಲ ನಾಲ್ಕು ದಿನಗಳ ಪ್ರವಾಸದಲ್ಲಿ ಒಂದು ಸ್ಥಳದ ಬಗ್ಗೆ ಕರಾರುವಾಕ್ ಅನ್ನುವಂತ ವರದಿ ಕೊಡಲು ಆಗದು ಅನ್ನುವುದು ನನ್ನ ಅರಿವಲ್ಲಿ ಇದ್ದರೂ, ಇಂತಹದೊಂದು ಪ್ರಯತ್ನವನ್ನು ಮಾಡಿದ್ದೇನೆ. ನನಗಿಂತಲೂ ಮಹಾರಾಷ್ಟ್ರವನ್ನು ಹೆಚ್ಚು ಕಂಡು-ಬಲ್ಲ ಹಲವರು ನಾನೆಲ್ಲಿ ಎಡವಿದ್ದೇನೆ ಅನ್ನುವುದನ್ನು ತೋರಿಸಿಕೊಟ್ಟು ನನ್ನನ್ನು ತಿದ್ದಬೇಕೆಂದು ಕೋರುತ್ತಾ ನನ್ನ ಮಿನಿ ಪ್ರವಾಸ ಕಥನ ಮುಗಿಸುತ್ತೇನೆ.