ಶುಕ್ರವಾರ, ಮೇ 11, 2012

An open letter to Aamir Khan about the undemocratic ban on dubbing Satya Meva Jayate programme to Kannada

To,
Aamir Khan
5 Marina Apartments
Pali hill, Bandra West
Mumbai 400050

Dear Aamir Khan,

Congratulations on your successful TV debut with Satya Meva Jayate and a huge round of applause for touching a topic as sensitive and heart rendering as female foeticide in the very first episode of your show. You even went a step further by meeting the Rajasthan Chief Minister Ashok Gehlot and requesting him for a fast track court to bring the killer doctors to justice at the earliest. To me, you seem to be a man committed to bring social change in India and I truly appreciate your efforts. You may have 12 different issues to highlight in the weeks to come, but today I am writing this letter to you to highlight the highly undemocratic ban on dubbing content to Kannada that is affecting millions of Kannadigas living in Karnataka and elsewhere.
Let me explain this. As you know, there is an unconstitutional and undemocratic ban imposed on dubbing content to Kannada by a few trade organisations in the name of protecting culture. Due to this ban, the dubbed version of the first episode of your programme was not telecast on Suvarna TV. Earlier, thousands of people like me wrote to you on Twitter and Facebook requesting you to get this ban on dubbing your Satya Mev Jayate to Kannada removed. As a result of that, you wrote a letter to Karnataka Film Chamber of Commerce (KFCC) requesting them to let your programme in Kannada on Suvarna TV but we have not heard about the response of KFCC to your letter. Suvarna TV uploaded the Kannada webcast of the first episode of your programme on Youtube three days ago. The video received 30,000 views in just 3 days busting all myths around lack of demand for dubbed content in Kannada and even sealing the mouth of all those naysayers in Kannada film / TV industry who ridiculed demand for dubbed content in Kannada as fringe. 
But yesterday, even this video on Youtube was taken off by Suvarna TV. From the circumstances, Kannadigas feel that this might have been done because of the pressure put by the same anti dubbing associations, who were scared after seeing the popularity of the video. With that, even Internet is under seige in Karnataka, where a few private people decide what people should watch and in which language. A lot of people who believe in democracy, constitution and freedom to choose are again writing to you to know how on earth a content creating social awareness be banned even on Internet just because it was dubbed from Hindi to Kannada?

Aamir, if you truly believe in transforming a society, bringing a social change, it's time for you to talk and act. Please raise your voice supporting the legitimate demand of Kannadigas demanding knowledge and entertainment in their mother tongue. Please stand  up and say that in this free country, every individual has freedom to watch any cinema, any TV program in any language of their choice and no vested interest should dictate terms to voiceless citizens in the name of guarding culture. For four decades Kannadigas have been deprived of knowledge and entertainment in their language of choice due to this illegal ban on dubbing and now will Satya Meva Jayate change that? After all, truth alone should prevail.
Thank you.
A Kannadiga

ಬುಧವಾರ, ಮೇ 9, 2012

ಸತ್ಯ ಮೇವ ಜಯತೇ ಮತ್ತು ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿ ಅನ್ನುವ ಪರಿಹಾರ !

ಸತ್ಯ ಮೇವ ಜಯತೇ ಅನ್ನುವ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡದಂತೆ ಸುವರ್ಣ ವಾಹಿನಿಯನ್ನು ಕೆಲವು ಖಾಸಗಿ ಸಂಸ್ಥೆಗಳು ತಡೆದರು. ಅದರ ಬೆನ್ನಲ್ಲೇ ಜಗತ್ತಿನ ಜ್ಞಾನ, ಮನರಂಜನೆಯೆಲ್ಲವನ್ನು ಕನ್ನಡದಲ್ಲೇ ಪಡೆಯುವುದು ಕನ್ನಡ ಪರವೂ, ಗ್ರಾಹಕರಾಗಿ ಅದು ಕನ್ನಡಿಗರ ಹಕ್ಕು ಎಂಬ ಕೂಗು ಬಲು ದೊಡ್ಡ ದನಿಯಲ್ಲೇ ಕಳೆದೆರಡು ವಾರದಲ್ಲಿ ಸಾಮಾಜಿಕ
ಸಂಪರ್ಕ ತಾಣಗಳು, ಪತ್ರಿಕೆಗಳು, ಸುದ್ದಿವಾಹಿನಿಗಳು ಸೇರಿದಂತೆ ಹಲವೆಡೆ ಪ್ರತಿಧ್ವನಿಸಿವೆ. ಇದರ ಫಲವೆಂಬಂತೆ ಯಾವುದೇ ಪಾಳೇಗಾರರ ಅಂಕೆಗೆ ಇನ್ನೂ ಸಿಲುಕದ ಯೂ ಟ್ಯೂಬ್ ನಂತಹ ತಾಣದಲ್ಲಿ ಈ ಕಾರ್ಯಕ್ರಮದ ಕನ್ನಡ ಆವೃತ್ತಿಯನ್ನು ನೋಡಲಾಗುವಂತಹ ಬದಲಾವಣೆಯನ್ನು ಎಚ್ಚೆತ್ತ ಕನ್ನಡದ ಗ್ರಾಹಕರು ತಂದು ಕೊಂಡಿದ್ದಾರೆ ಅನ್ನಬಹುದು.

ಈ ಗೆಲುವು ಕೊಟ್ಟಿರುವ ಸಂದೇಶವೊಂದಿದೆ. ಹೆಚ್ಚೆಚ್ಚು ಮಾರುಕಟ್ಟೆ ಆಧಾರಿತ ವ್ಯವಸ್ಥೆಯತ್ತ ನಮ್ಮ ಸಮಾಜ ಮುಂದಡಿಯಿಡುತ್ತಿರುವಾಗ ಮತ್ತು ಆ ಬದಲಾವಣೆ ಕನ್ನಡ ನುಡಿಯ ಮುಂದೆ ಹಲವಾರು ಸವಾಲುಗಳನ್ನು ತರುತ್ತಿರುವಾಗ ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯ ಪಾತ್ರ ಅತ್ಯಂತ ಹಿರಿದಾಗಿದೆ ಅನ್ನುವುದು.
ಮಾರುಕಟ್ಟೆ ಅನ್ನುವುದು ಗ್ರಾಹಕ ಪಕ್ಷಪಾತಿ
1991ರಲ್ಲಿ ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಇತರೆಡೆಯಂತೆ ಕನ್ನಡ ಸಮಾಜದಲ್ಲೂ ಹಲವಾರು ಬದಲಾವಣೆಗಳಾಗಿವೆ. ಅರ್ಥ ವ್ಯವಸ್ಥೆಯ ಎಲ್ಲ ಹಂತಗಳನ್ನು ಸರ್ಕಾರವೇ ನಿಯಂತ್ರಿಸುತ್ತಿದ್ದ ದಿನಗಳಿಂದ ಸಾಕಷ್ಟು ಹೊರ ಬಂದು ಮಾರುಕಟ್ಟೆ ಆಧಾರಿತ ವ್ಯವಸ್ಥೆಯೆಡೆಗೆ ಹೆಜ್ಜೆ ಹಾಕಿದ್ದೇವೆ. ಅದರ ಒಳಿತು-ಕೆಡಕುಗಳ ಬಗ್ಗೆ ಇಲ್ಲಿ ಚರ್ಚಿಸುವುದು ಬೇಡ. ಇಲ್ಲಿ ಗಮನಿಸಬೇಕಿರುವುದು ಏನೆಂದರೆ ಈ ಬದಲಾವಣೆ ನಿಲ್ಲದು. ಮುಂದಿನ ದಿನಗಳಲ್ಲಿ ಅರ್ಥ ವ್ಯವಸ್ಥೆಯ ಹೆಚ್ಚಿನ ಮಝಲುಗಳು ಮಾರುಕಟ್ಟೆ ಆಧಾರಿತವಾಗುತ್ತವೆ. ಇದರ ಪರಿಣಾಮವಾಗಿ ಹೆಚ್ಚಿನ ವಲಸೆ,ಹಲ ಸಂಸ್ಕೃತಿಗಳ ದಾಳಿಯಂತಹ
ಕೆಲ ಸಮಸ್ಯೆಗಳು ಮುಂದೆಯೂ ಇರುತ್ತವೆ, ಅಷ್ಟೇ ಏಕೆ, ಕೆಲ ಮಟ್ಟಿಗೆ ಅವು ಹೆಚ್ಚಲೂ ಬಹುದು. ಈಗ, ಕನ್ನಡದ ಮುಂದಿರುವ ಸವಾಲು ಇದನ್ನು ಎದುರಿಸುವುದು ಹೇಗೆ? ಎಂಬುದು. ನನ್ನ ಪ್ರಕಾರ ಯಾವ ಸರ್ಕಾರ, ಸಾಮಾಜಿಕ ಸಂಘಟನೆಗಳು ಇದಕ್ಕೆ ಪೂರ್ತಿ ಪರಿಹಾರ ಕೊಡಲಾರರು. ಮಾರುಕಟ್ಟೆ ಅನ್ನುವುದು ಗ್ರಾಹಕ ಪಕ್ಷಪಾತಿ. ಗ್ರಾಹಕನೊಬ್ಬನೇ ಅದನ್ನು ಬಗ್ಗಿಸಬಲ್ಲ. ಗ್ರಾಹಕನೊಬ್ಬನೇ ಅದನ್ನು ತನಗೆ ಬೇಕಾದಂತೆ ರೂಪಿಸಿಕೊಳ್ಳಬಲ್ಲ. ಕನ್ನಡ ಸಮಾಜದಲ್ಲಿ ಕನ್ನಡ ಸಾರ್ವಭೌಮ ಭಾಷೆಯಾಗಬೇಕು, ಈ ವ್ಯವಸ್ಥೆಯ ಎಲ್ಲ ಹಂತದಲ್ಲೂ ಕನ್ನಡ ನೆಲೆ ಕಾಣಬೇಕು ಅನ್ನುವುದಾದರೆ ಈ ಗ್ರಾಹಕನಿಗೂ ಕನ್ನಡಕ್ಕೂ ಒಂದು ಕಡಿಯದ ನೆಂಟು ಬೆಸೆಯಬೇಕು. ಕನ್ನಡದ ಸುತ್ತ, ಕನ್ನಡ ಕೇಂದ್ರಿತ ಗ್ರಾಹಕ ಚಳುವಳಿಯನ್ನು ರೂಪಿಸುವುದೊಂದೇ ಮುಕ್ತ ಮಾರುಕಟ್ಟೆ ಆಧಾರಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಅಡುಗೆಮನೆಯ ಭಾಷೆಯಾಗದಂತೆ ತಡೆಯುವ ಪರಿಹಾರ ಅನ್ನುವುದು ನನ್ನ ಗಟ್ಟಿ ನಂಬಿಕೆಯಾಗಿದೆ.
ಕನ್ನಡ ಕೇಂದ್ರಿತವಾದ ಗ್ರಾಹಕ ಚಳುವಳಿಯೇ ಪರಿಹಾರ
ನೀವು ಕೇಳಬಹುದು ಅದು ಹೇಗೆ ಎಂದು. ಕಳೆದ ಕೆಲ ವರ್ಷದಲ್ಲಿ ಬೆಂಗಳೂರಿನಲ್ಲಿ ನಡೆದ ಹಲವು ಬದಲಾವಣೆಗಳನ್ನು ನೀವು ಸುಮ್ಮನೆ ಗಮನಿಸಿ. 2005ರಲ್ಲಿ ಎಫ್.ಎಮ್ ವಾಹಿನಿಗಳು ಶುರುವಾಗಿ ಕನ್ನಡವನ್ನೇ ಕೈ ಬಿಟ್ಟು ನಡೆಯುತ್ತಿದ್ದಾಗ, ಇಂದಿನ ಯುವಕರಿಗೆ ಹಿಂದಿ,ಇಂಗ್ಲಿಷೇ ಬೇಕು ಅನ್ನುವ ತಪ್ಪು ನಿಲುವಲ್ಲಿದ್ದಾಗ, ಅವರಿಗೆ ಕನ್ನಡಕ್ಕಿರುವ ಮಾರುಕಟ್ಟೆ ವ್ಯಾಪ್ತಿಯನ್ನು ದೊಡ್ಡ ಸಂಖ್ಯೆಯಲ್ಲಿ ಮನವರಿಕೆ ಮಾಡಿ ಕೊಟ್ಟದ್ದು ಕನ್ನಡದ ಗ್ರಾಹಕರೇ. ಇಂದು ಹಲವಾರು ಖಾಸಗಿ ಬ್ಯಾಂಕುಗಳ ಎಟಿಎಮ್, ಐವಿಆರ್, ಕಚೇರಿಗಳಲ್ಲಿ ಹಂತ ಹಂತವಾಗಿ ಕನ್ನಡ ನೆಲೆ ಕಂಡಿದ್ದರೆ ಅದರ ಹಿಂದೆ ಕೆಲಸ ಮಾಡಿದ್ದು ಕನ್ನಡದ ಗ್ರಾಹಕರೇ. ಮಲ್ಟಿಪ್ಲೆಕ್ಸುಗಳಲ್ಲಿ, ಮಾಲುಗಳಲ್ಲಿ, ವಿಮಾನದಲ್ಲಿ, ಮೆಟ್ರೊದಲ್ಲಿ ಹೀಗೆ ಎಲ್ಲೆಲ್ಲಿ ಕನ್ನಡ ಮೂಲೆಗುಂಪಾಗಿತ್ತೋ ಅಲ್ಲೆಲ್ಲ ಅದನ್ನು ತಕ್ಕ ಮಟ್ಟಿಗೆ ಸರಿ ಮಾಡಿದ್ದು ಮತ್ತದೇ ಕನ್ನಡದ ಗ್ರಾಹಕರು. ಸರ್ಕಾರದ ನೂರು ನಿಯಮಗಳಿದ್ದಾಗಲೂ ಆಗದ  ಬದಲಾವಣೆಯನ್ನು ತಕ್ಕ ಮಟ್ಟಿಗೆ ಮಾಡಿಕೊಳ್ಳಲಾಗಿದ್ದು ಕನ್ನಡ ಗ್ರಾಹಕನ ಹಕ್ಕೊತ್ತಾಯವೊಂದರಿಂದಲೇ. ಇನ್ನೂ ನೂರಾರು ಉದಾಹರಣೆಗಳನ್ನು ಕೊಡಬಲ್ಲೆ. ಹಾಗಿದ್ರೆ ಎಲ್ಲ ಸರಿ ಹೋಗಿದೆಯಾ ಎಂದು ಕೇಳಿದರೆ ನನ್ನ ಉತ್ತರ "ಇಲ್ಲ, ಎಲ್ಲವೂ ಸರಿ ಹೋಗಿಲ್ಲ. ಆದರೆ ಸರಿ ಹೋಗಿರುವ ಬಹುತೇಕ ವಿಷಯಗಳು ಕನ್ನಡದಲ್ಲಿ ಸೇವೆಗೆ ಆಗ್ರಹಿಸಿದ ಗ್ರಾಹಕನ ಒತ್ತಾಯದಿಂದಲೇ ಆಗಿದ್ದು" ಅನ್ನುವುದಾಗಿದೆ. ಕನ್ನಡ ಕೇಂದ್ರಿತವಾದ ಒಂದು ಗಟ್ಟಿ ಗ್ರಾಹಕ ಚಳುವಳಿಯನ್ನು ರೂಪಿಸುವುದೇ ಮುಂದಿನ ದಿನದಲ್ಲಿ ಕನ್ನಡವನ್ನು ಮಾರುಕಟ್ಟೆಯ ನುಡಿಯಾಗಿ ಉಳಿಸಿಕೊಳ್ಳುವ ಏಕೈಕ ಹಾದಿ. ಈ ಆಯಾಮದಲ್ಲಿ ನೋಡಿದಾಗ ಮಾತ್ರವೇ ಡಬ್ಬಿಂಗ್ ನಿಷೇಧ ಗ್ರಾಹಕನ ಹಕ್ಕಿನ ಉಲ್ಲಂಘನೆ ಅನ್ನುವ ಹಲವು ಕನ್ನಡ ಗ್ರಾಹಕರ ವಾದದ ತಿರುಳು ಅರ್ಥವಾದೀತು.

ಕೊನೆಹನಿ: ಕೊಟ್ಟಿದ್ದನ್ನು ತಗೊಂಡು ಬಿದ್ದಿರು ಅನ್ನುವ ಚಿತ್ರೋದ್ಯಮದ ಹಲವರ ಧೋರಣೆಯ ವಿರುದ್ದ ಸಿಡಿದೆದ್ದು ಸಂಘಟಿತರಾದ ಕನ್ನಡಿಗರು ತಮ್ಮ ಗ್ರಾಹಕ ಅನ್ನುವ ಗುರುತನ್ನು ಒತ್ತಿ ಹೇಳುತ್ತಿರುವುದು ಮತ್ತು ಜಗತ್ತಿನ ಒಳ್ಳೆಯದೆಲ್ಲವನ್ನು ಕನ್ನಡದಲ್ಲೇ ಪಡೆಯುವುದು ಗ್ರಾಹಕನಾಗಿ ತನ್ನ ಹಕ್ಕು ಎಂದು ಮಾತನಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ದುಡ್ಡು ಕೊಟ್ಟು ಮನರಂಜನೆ ಬಯಸುವವನು ಗ್ರಾಹಕನಲ್ಲ ಅವನು ಪ್ರೇಕ್ಷಕ ಅನ್ನುವ ವಿತಂಡವಾದ ಮಾಡುವ ಚಿತ್ರರಂಗದ ಕೆಲ "ಬುದ್ದಿಜೀವಿಗಳು" ಇದನ್ನು ಅರ್ಥ ಮಾಡಿಕೊಂಡು ಗ್ರಾಹಕನ ಬಗ್ಗೆ ತಾತ್ಸಾರದಿಂದ ಮಾತನಾಡುವುದನ್ನು ನಿಲ್ಲಿಸದೇ ಹೋದರೆ
ಕನ್ನಡ ಗ್ರಾಹಕನ ಉರಿಗಣ್ಣಿಗೆ ಬಲಿಯಾಗಿ ಮನೆ ಸೇರುವುದು ಖಂಡಿತ.

ಶುಕ್ರವಾರ, ಏಪ್ರಿಲ್ 27, 2012

Talibanisation of Kannada cinema and television

Amir Khan announced his entry into small screen with "Satya Meva Jayate" few days ago. The program was planned to be aired in several Indian languages including Kannada in Star India's network channels. In Kannada, Suvarna channel was supposed to air this program from 6th of May. Now, this program will be telecasted in Hindi, Telugu and Tamil while Kannada gets dropped from the list, thanks to the ban on dubbing imposed by few sundry private organisations in the name of protecting Kannada language and culture.

The same associations which ransacked the office of Zee Kannada last year protesting it's move to air voice dubbed program on Zhansi Rani Laxmibai are at it again. Fortunately, this time Suvarna backed off before the associations took law into their hands.

This brings us to the question. Who are they to ban anything in a constitutional democracy?

In a civilised democratic society, there is no place for bans of any kind even if it is imposed by an elected government. In a democracy, I as a consumer have every right to demand all sources of knowledge and entertainment in a language of my choice as long as my demands are within the limits of law. Like me, there are lakhs of Kannadigas who may want to watch a Disney character speaking in Kannada, or a Discovery, Animal planet program on Amazon forests being aired in Kannada, or watching Avatar 3D in Kannada, why am I being denied my rightful access to all these in a language of my choice? 
Has Karnataka ceased to be a democratic state any more?
Has it become a banana republic where unelected feudal people rule the roost?
Have you seen something similar in any other cinema industry?
Like any other trade, the trade of cinema runs on supply and demand. Where there is demand for certain products, services, there will be suppliers willing to supply them for profit. Plain and simple? Sadly, it isn't the case with Kannada cinema and television industry. It runs on Taliban like fatwas to TV channels to not air the dubbed content than going by the merits/demerits of demand for dubbed content in the market, it runs by sucking tax payers money in the form of subsidies offered to almost 60% of films made every year than going through the test of markets, and it also runs on blaming government for it's failures almost day in day out. It has failed to internalise the fact that it is a for-profit industry run by private individuals and not some government funded public goods with a charitable motive.

Kannada film industry, though small in size has bigger social impact when it comes to cinema as a linguistic register. Kannada films have a decisive role in keeping the language on the tongues of young Kannadigas. The undemocratic and unconstitutional ban on dubbing has made sure that in a fast globalising world, Kannadigas are left with very little choice of knowledge and entertainment offered in Kannada. Except for the boring soap operas, fighting news channels and macchu-kocchu movies, I do not have anything in Kannada that ticks my senses. The Telugu, Tamil and Hindi cinema industries where no such dubbing ban exists, have way bigger market size in both cinema and television sector and are offering clear lessons on the importance of doing away with such bans of undemocratic types. The media in Karnataka has a bigger role in building a narrative of how this ban on dubbing is turning out to be detrimental for the future of Kannada by engaging in debates, discussions involving everyone,most importantly the consumer who holds the purse strings deciding the future of everyone involved.

ಸೋಮವಾರ, ಏಪ್ರಿಲ್ 23, 2012

ಖಾಸಗಿ ಶಾಲೆಗಳಿಗೆ ಮೂಗುದಾರ - ಸರ್ಕಾರದ ಒಳ್ಳೆಯ ನಿರ್ಧಾರ

ಉಳ್ಳವರ ಮತ್ತು ಇಲ್ಲದವರ ನಡುವೆ ಒಂದು ದೊಡ್ಡ ಕಂದರವನ್ನೇ ಹುಟ್ಟು ಹಾಕುವಂತೆ ಶಿಕ್ಷಣ ಕ್ಷೇತ್ರದಲ್ಲಿ ಯಾರ ಲಂಗು ಲಗಾಮು ಇಲ್ಲದೇ ನಡೆದಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಸುಪ್ರೀ ಕೋರ್ಟ್ ಎತ್ತಿ ಹಿಡಿದ ಬೆನ್ನಿಗೆ ಇನ್ನೆರಡು ಒಳ್ಳೆಯ ಸುದ್ದಿಗಳನ್ನು ಇಂದಿನ ಪತ್ರಿಕೆಗಳು ವರದಿ ಮಾಡಿವೆ. ಮೊದಲನೆಯದಾಗಿ, ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿ ಮಾಡದ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದು ಮಾಡುವುದಾಗಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಹೇಳಿರುವುದು ಇಂದಿನ ಡೆಕ್ಕನ್ ಹೆರಾಲ್ಡ್  ಅಲ್ಲಿ ವರದಿಯಾಗಿದೆ. ಎರಡನೆಯ ಸುದ್ದಿಯೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮನಸ್ಸಿಗೆ ಬಂದ ಹಾಗೆ ಶುಲ್ಕ ಏರಿಸದಂತೆ ತಡೆದ ರಾಜ್ಯ ಸರ್ಕಾರದ ಕಾಯ್ದೆಯನ್ನು ಪ್ರಶ್ನಿಸಿ ಕೋರ್ಟಿಗೆ ಹೋಗಿದ್ದ ಖಾಸಗಿ ಅನುದಾನರಹಿತ ಶಾಲೆಗಳ ವಾದಕ್ಕೆ ಕೋರ್ಟಿನಲ್ಲಿ ಸೋಲಾಗಿದೆ. ಒಂದು ನಾಡಿನ ಏಳಿಗೆಗೆ ಉಸಿರು ತುಂಬುವ ಶಕ್ತಿ ಇರುವ ಮಹತ್ವದ ಕ್ಷೇತ್ರ ಕಲಿಕೆ ಆದರೆ ಅಲ್ಲಿ ಯಾವ ಅಂಕೆಯೂ ಇಲ್ಲದೇ ಸರ್ಕಾರ, ಕಾನೂನುಗಳನ್ನು ಅಣಕಿಸುವಂತೆ ಮೆರೆಯುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಕೆಲಸಕ್ಕೆ ಕೊನೆಗೂ ಸರ್ಕಾರ ಮುಂದಾಗಿರುವುದು ನಿಜಕ್ಕೂ ಬಹುದಿನದಿಂದ ಆಗಬೇಕಾಗಿದ್ದ ಕೆಲಸವೇ ಸರಿ.

ಕಂದರದ ಸಮಾಜ ಕಟ್ಟುವ ಶಾಲೆಗಳನ್ನು ನಿಯಂತ್ರಿಸಬೇಕು
ನಾವೆಲ್ಲ ಚಿಕ್ಕ ಪುಟ್ಟ ಊರುಗಳಲ್ಲಿ, ಹಳ್ಳಿಗಳಲ್ಲಿ ಶಾಲೆ ಕಲಿತದ್ದನ್ನು ಒಮ್ಮೆ ನೆನೆಸಿಕೊಳ್ಳಿ. ಅಲ್ಲಿ ಎಲ್ಲ ಜಾತಿ, ಧರ್ಮ, ಆರ್ಥಿಕ ಹಿನ್ನೆಲೆಯವರೆಲ್ಲ ಒಟ್ಟಾಗಿ ಕಲೆತು ಕಲಿಯುತ್ತಿದ್ದೇವು. ಉಳ್ಳವನು ಇಲ್ಲದಿರುವವನ ಜೀವನವನ್ನು ಹತ್ತಿರದಿಂದ ನೋಡುತ್ತ  ಒಂದಳತೆಯಲ್ಲಿ ಸಮಾಜವನ್ನು ಅರ್ಥ ಮಾಡಿಕೊಳ್ಳಲಾಗುತ್ತಿದ್ದದ್ದೇ ಅಂತಹ ಶಾಲೆಗಳಲ್ಲಿ. ಉಳ್ಳವರಿಗೆ ಮಾತ್ರ ಒಳ ಬಿಟ್ಟುಕೊಂಡು, ಉಳಿದವರನ್ನು ಆಚೆ ಇಟ್ಟು ಒಂದರ್ಥದಲ್ಲಿ ಒಂದೇ ಆರ್ಥಿಕ ಹಿನ್ನೆಲೆಯ, ಒಂದೇ ವರ್ಗದ, ಒಂದೇ ರೀತಿ ಯೋಚಿಸುವಂತಹ ರೋಬಾಟ್ಸ್ ಗಳನ್ನು ತಯಾರಿಸುವ concentration camps ಅನ್ನುವಂತೆ ಈ ಹೊಸ ಖಾಸಗಿ ಇಂಗ್ಲಿಷ್ ಶಾಲೆಗಳು ತಲೆ ಎತ್ತಿವೆ. ಇಲ್ಲಿ ಕಲಿಯುವ ಮಕ್ಕಳಿಗೆ ಇಂಗ್ಲಿಷ್ ಚೆನ್ನಾಗಿ ಬರುತ್ತೆ, ಆದರೆ ಜೀವನವನ್ನು ಎದುರಿಸುವ ಕಾಮನ್ ಸೆನ್ಸ್ ಆಗಲಿ, ಸಮಾಜವನ್ನು ಅದರ ಎಲ್ಲ ಮೇಲು-ಕೀಳು, ಬಡತನ-ಸಿರಿತನದ ಪದರಗಳ ನಡುವೆ ಅರ್ಥ ಮಾಡಿಕೊಳ್ಳುವ ಕಣ್ಣಾಗಲಿ ಕಾಣಿಸದು. ಇಂದು ಇಂಗ್ಲಿಷ್ ನ ಸುತ್ತಲಿನ ಉಳ್ಳವರ ಪ್ರಪಂಚಕ್ಕೂ, ಅದರಾಚೆಗಿನ ಕನ್ನಡ ಪ್ರಪಂಚಕ್ಕೂ ಯಾವ ನಂಟೂ ಇಲ್ಲ ಅನ್ನುವಂತಹ ಒಂದು ಶ್ರೇಣಿಕೃತ ವ್ಯವಸ್ಥೆಯನ್ನು ಈ ಶಾಲೆಗಳು ಹುಟ್ಟು ಹಾಕಿವೆ. ಈಗ ಇಂತಹ ಶಾಲೆಗಳಲ್ಲಿ ಬಡ ಮಕ್ಕಳಿಗೂ ಅವಕಾಶ ಕಲ್ಪಿಸಲೇಬೇಕು ಅನ್ನುವ ಮೂಲಕ ಇಂತಹ ಪೋಲರೈಸ್ಡ್ ಸಮಾಜವನ್ನು ಕಟ್ಟುವ ಶಾಲೆಗಳಿಗೆ ಕೊಂಚ ಮೂಗುದಾರ ಹಾಕುವ ಕೆಲಸವಾಗಿರುವುದು ಒಳ್ಳೆಯ ಬೆಳವಣಿಗೆ ಅನ್ನಬಹುದು.

ಸಿ.ಬಿ.ಎಸ್.ಈ ಶಾಲೆಗಳನ್ನು ನಿಯಂತ್ರಿಸುವ ಹಕ್ಕು ರಾಜ್ಯಕ್ಕಿರಲಿ
ಆರ್.ಟಿ.ಈ ಅನುಷ್ಟಾನಕ್ಕೆ ಒಪ್ಪಬೇಕು, ಬೇಕಾಬಿಟ್ಟಿ ಶುಲ್ಕ ಏರಿಸಬಾರದು ಅನ್ನುವುದಕ್ಕಷ್ಟೇ ಸರ್ಕಾರ ನಿಲ್ಲಬಾರದು. ಇವತ್ತು ಸಿ.ಬಿ.ಎಸ್.ಈ/ಐ.ಸಿ.ಎಸ್.ಈ  ಶಾಲೆಗಳು ನಾಯಿಕೊಡೆಗಳಂತೆ ಕರ್ನಾಟಕದ ದೊಡ್ಡ ದೊಡ್ಡ ಊರುಗಳಲ್ಲಿ ಹರಡುತ್ತಿದೆ. ಇಂತಹ ಶಾಲೆಗಳನ್ನು ಸೇರುವುದು ಒಂದು ರೀತಿಯಲ್ಲಿ ಪ್ರತಿಷ್ಟೆಯ ಸಂಕೇತ ಅನ್ನುವ ಪ್ರಚಾರ ಒಂದೆಡೆಯಾದರೆ ಅಲ್ಲಿ ಹೆಚ್ಚಿನ ಶುಲ್ಕ ಪಡೆಯಬಹುದು ಮತ್ತು ಅಂತಹ ಶಾಲೆಗಳ ಮೇಲೆ ರಾಜ್ಯ ಸರ್ಕಾರದ ಯಾವುದೇ ಅಂಕೆಯೂ ಇಲ್ಲ ಅನ್ನುವ ಕಾರಣದಿಂದ ಹಾದಿಗೊಂದು ಬೀದಿಗೊಂದು ಅನ್ನುವಂತೆ ಇವು ತಲೆ ಎತ್ತುತ್ತಿವೆ. ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುವ ಕೇಂದ್ರ ಸರ್ಕಾರದ ಉದ್ಯೋಗಿಗಳ ಮಕ್ಕಳಿಗಾಗಿ ಎಂದು ಶುರುವಾದ ಸಿ.ಬಿ.ಎಸ್.ಈ ಶಾಲೆಗಳು ಇಂದು ಅಂತಹ ಯಾವುದೇ ನಿಯಮಗಳಿಗೆ ಒಳಪಡದೇ ಶುರುವಾಗುತ್ತಿವೆ ಮತ್ತು ಅಂತಹದೊಂದು ಕೆಟ್ಟ ಬೆಳವಣಿಗೆಗೆ  ಹಿಂದೆ ಮುಂದೆ ಯೋಚಿಸದೇ No Objection Certificate ಕೊಡುತ್ತಿರುವ ಸರ್ಕಾರದ ಧೋರಣೆಯೇ ಕಾರಣವಾಗಿದೆ. ಇಂತಹ ಹೆಚ್ಚಿನ ಶಾಲೆಗಳ ಹಿಂದೆ ಪ್ರಭಾವಿಗಳು, ರಾಜಕಾರಣಿಗಳೇ ಇದ್ದಾರೆ ಅಂದ ಮೇಲೆ ಸರ್ಕಾರದ ನಡೆಯ ಹಿಂದಿನ ರಹಸ್ಯ ಏನು ಎಂದು ಹೆಚ್ಚೇನು ಯೋಚಿಸಬೇಕಿಲ್ಲ. ಅಲ್ಲದೇ, ಈ ಶಾಲೆಗಳಲ್ಲಿ (ಹೆಚ್ಚಿನ ಶಾಲೆಗಳಲ್ಲಿ) ಕನ್ನಡ ಒಂದು ಭಾಷೆಯಾಗಿ ಕಲಿಸುವುದು ಕಡ್ಡಾಯವೂ ಇಲ್ಲ ಮತ್ತು ಇಲ್ಲಿ ಕಲಿಸುವ ಸಮಾಜ ವಿಜ್ಞಾನದಲ್ಲಿ ಕನ್ನಡ, ಕನ್ನಡನಾಡಿನ ಇತಿಹಾಸ, ಸಂಸ್ಕೃತಿ, ಆಚರಣೆ, ಸಮಾಜದ ಬಗ್ಗೆ ಯಾವ ಮಾಹಿತಿಯೂ ಮಕ್ಕಳಿಗೆ ಹೇಳಿಕೊಡುವುದಿಲ್ಲ.  ನೀವೇ ಯೋಚಿಸಿ ಇಂತಹ ಶಾಲೆಗಳಲ್ಲಿ ಕಲಿಯುವ ಕನ್ನಡದ ಮಕ್ಕಳು ನಾಳೆ ದಿನ ಕನ್ನಡ, ಕನ್ನಡ ನಾಡಿನ ಬಗ್ಗೆ ಹೇಗೆ ಅಭಿಮಾನ, ಪ್ರೀತಿ ತಳೆದಾರು? ಡಾ. ರಾಜ್ ಕುಮಾರ್ ಅಂತಹ ಕನ್ನಡದ ಕಣ್ಮಣಿ ತೀರಿದಾಗ ಕಟ್ಟೆಯೊಡೆದ ಕನ್ನಡಿಗರ ದುಃಖದ ಜೊತೆ ಇವರು ಎಂದಿಗಾದರೂ ಗುರುತಿಸಿಕೊಂಡಾರೆಯೇ? ಇಂತಹ ಶಾಲೆಗಳಿಂದ ಹೊರ ಬಂದವರು ನಾಳೆ ದಿನ ಐ.ಎ.ಎಸ್/ಐ.ಪಿ.ಎಸ್/ಕೆ.ಎಸ್.ಎ ನಂತಹ ಪದವಿಗಳನ್ನು ಪಡೆದು ಕರ್ನಾಟಕದ ಆಡಳಿತ ವರ್ಗವನ್ನು ಸೇರಿಕೊಂಡರೆ ಜನರ ನುಡಿಯಾದ ಕನ್ನಡದಲ್ಲಿ ಎಲ್ಲ ಸೇವೆಗಳನ್ನು ಕೊಡಬೇಕು ಅನ್ನುವ ಸಾಮಾನ್ಯ ಪ್ರಜ್ಞೆ ಇವರಿಂದ ಎದುರು ನೋಡಬಹುದಾ? ಆದ್ದರಿಂದ ಕರ್ನಾಟಕದಲ್ಲಿರುವ ಯಾವುದೇ ಶಾಲೆಯಾಗಿರಲಿ ಅಲ್ಲಿ ಕಡ್ಡಾಯವಾಗಿ ಕನ್ನಡ ಕಲಿಸಬೇಕು, ಅಲ್ಲಿ ಕಲಿಸುವ ಸಮಾಜ ವಿಜ್ಞಾನದಲ್ಲಿ ಕರ್ನಾಟಕದ ಇತಿಹಾಸ ಕಡ್ಡಾಯವಿರುವಂತೆ ನೀತಿ ನಿಯಮ ರೂಪಿಸುವ ಕೆಲಸಕ್ಕೆ ಕರ್ನಾಟಕ ಸರ್ಕಾರ ಮುಂದಾಗಲಿ ಮತ್ತು ಕನ್ನಡ ಪರ ಚಿಂತಕರು, ಸಾಹಿತಿಗಳು, ಮಾಧ್ಯಮದವರು ಈ ನಿಟ್ಟಿನಲ್ಲಿ ಸರ್ಕಾರದ ಒತ್ತಡ ತರುವ ಕೆಲಸಕ್ಕೆ ಮುಂದಾಗಲಿ.

ಕೊನೆ ಹನಿ:  ಒಳ್ಳೆಯ ಗುಣಮಟ್ಟದ ಖಾಸಗಿ ಶಾಲೆಗಳನ್ನು ತೆಗೆದು ಲಾಭ ಮಾಡಿಕೊಳ್ಳುವುದು ತಪ್ಪೇ? ಎಂದು ಪ್ರಶ್ನಿಸುವವರಿಗೆ ನನ್ನ ಉತ್ತರ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ, ಖಾಸಗಿಯವರು ಎಲ್ಲರೂ ಬರಲಿ. ಸರ್ಕಾರಿ ಶಾಲೆಗಳಲ್ಲಿ ಪರಿಸ್ಥಿತಿ ಸುಧಾರಿಸುವತ್ತ ಗಮನ ಹರಿಸಬೇಕು ಅನ್ನುವುದು ಎಷ್ಟು ಮುಖ್ಯವೋ ಅಂಕೆಯಿಲ್ಲದೇ ನಡೆಯುತ್ತಿರುವ ಖಾಸಗಿ ಶಾಲೆಗಳಿಗೆ ಮೂಗು ದಾರ ಹಾಕುವುದು ಅಷ್ಟೇ ಮುಖ್ಯ. ಸಂವಿಧಾನದ ಆಶಯದಂತೆ ಎಲ್ಲರಿಗೂ ಅವಕಾಶ ಕಲ್ಪಿಸುವ, ಪೋಷಕರನ್ನು, ಮಕ್ಕಳನ್ನು ಶೋಷಿಸದಂತಹ, ಸರ್ಕಾರದ ನೀತಿ ನಿಯಮಗಳನ್ನು ಒಪ್ಪಿ ನಡೆಯುವಂತಹ ಖಾಸಗಿ ಶಾಲೆಗಳು ಬರಲಿ. ಅಚ್ಚುಕಟ್ಟಾಗಿ ಶಾಲೆ ನಡೆಸಿ ಲಾಭ ಮಾಡಿಕೊಳ್ಳುವುದಾದರೆ ಮಾಡಲಿ. ತೊಂದರೆಯಿಲ್ಲ.  ಆದರೆ  ಸಮಾಜ ಕಟ್ಟುವ ಒಂದು ಭಾಗವಾದ ಶಾಲೆಗಳನ್ನು ಒಂದು ರೀತಿಯಲ್ಲಿ ಉಳ್ಳವರಿಗಾಗಿಯೇ ಮೀಸಲಿಟ್ಟ gated communities ಮಾಡ್ತಿನಿ ಮತ್ತು ಅದಾವುದಕ್ಕೂ ಸರ್ಕಾರ ಅಡ್ಡ ಬರಬಾರದು ಅನ್ನುವಂತಾದರೆ ಅದನ್ನು ಲಾಭವೊಂದನ್ನೇ ಗುರಿಯಾಗಿಸಿಕೊಂಡ ವ್ಯಾಪಾರ ಎಂದು ಕರೆಯಬಹುದೇ ಹೊರತು ಮಕ್ಕಳ ನಾಳೆಯ ಭವಿಷ್ಯ ಕಟ್ಟುವ ದೇಗುಲ ಅನ್ನಲಾಗದು. ಸಮಾನತೆಯ ಆಧಾರದ ಕಲಿಕೆ ರೂಪಿಸುವತ್ತ ಸರ್ಕಾರದ ಈ ನಡೆಯನ್ನು ನಾನು ಬರಮಾಡಿಕೊಳ್ಳುತ್ತೇನೆ.

ಗುರುವಾರ, ಡಿಸೆಂಬರ್ 29, 2011

ನಮ್ಮನ್ನು ನಾವು ಆಳಿಕೊಳ್ಳುವುದಕ್ಕಿಂತ ದೊಡ್ಡದೇನಾದರೂ ಇದೆಯೇ?

ಭಾರತ ಅನ್ನುವುದು ಒಂದು ಒಕ್ಕೂಟ. ಭಾಷೆ, ಸಂಸ್ಕೃತಿ, ಆಚರಣೆ ಹೀಗೆ ಎಲ್ಲದರಲ್ಲೂ ಇಷ್ಟೊಂದು ವೈವಿಧ್ಯತೆಯ ನೆಲೆಯಾಗಿರುವ ಕಾರಣದಿಂದಲೇ ಇಲ್ಲಿ ಆಡಳಿತ ಅನ್ನುವುದು ಪರಿಣಾಮಕಾರಿಯಾಗಿ ಜನರನ್ನು ತಲುಪಲು ಒಕ್ಕೂಟ ಮಾದರಿಯ ಆಡಳಿತ ವ್ಯವಸ್ಥೆ ಸರಿ ಅನ್ನುವ ನಿಲುವಿಗೆ ಸಂವಿಧಾನ ಬರೆದವರು ಬಂದಿದ್ದರಾದರೂ ಬ್ರಿಟಿಷರ ಬಳುವಳಿಯಾದ ಸಂವಿಧಾನವನ್ನೇ ಇಟ್ಟುಕೊಂಡ ಕಟ್ಟಿಕೊಂಡ ಭಾರತದ ಸಂವಿಧಾನದಲ್ಲಿ ಬ್ರಿಟಿಷರ ಕಾಲದಲ್ಲಿದ್ದಂತೆಯೇ ಕೇಂದ್ರ ಸರ್ಕಾರಕ್ಕೆ ಹೆಚ್ಚು ಹೆಚ್ಚು ಅಧಿಕಾರ ಕೊಡುವ, ಕೇಂದ್ರಿಕೃತ ವ್ಯವಸ್ಥೆ ಕಲ್ಪಿಸುವ, ರಾಜ್ಯಗಳನ್ನು ಕೇಂದ್ರದ ಅಡಿಯಾಳಾಗಿಸುವ ಹಲವು ಅವಕಾಶಗಳನ್ನು ಸಂವಿಧಾನದಲ್ಲಿ ಕೇಂದ್ರಕ್ಕೆ ಕೊಡಲಾಗಿದೆ. ಆದರೆ ಇಂದು ಆಡಳಿತವನ್ನು ನಿಜಕ್ಕೂ ಪರಿಣಾಮಕಾರಿಯಾಗಿಸಲು ಹೆಚ್ಚೆಚ್ಚು ಅಧಿಕಾರವನ್ನು ವಿಕೇಂದ್ರಿಕರಣಗೊಳಿಸುವ ಅಗತ್ಯ, ರಾಜ್ಯಗಳಿಗೆ ಇನ್ನಷ್ಟು ಅಧಿಕಾರ, ಸ್ವಾಯತ್ತತೆ ಕೊಡಬೇಕಾದ ಬಗ್ಗೆ ಚರ್ಚೆ ನಡೆಯಬೇಕಾದ ಕಾಲ ಬಂದಿದೆ ಅನ್ನಬಹುದು. ಅಗತ್ಯ ಹೀಗಿರುವಾಗ, ರಾಜ್ಯಗಳ ಕೈಯಲ್ಲಿ ಇರುವ ಕೆಲವೇ ಕೆಲವು ಅಧಿಕಾರವನ್ನು ಕೂಡಾ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಕೇಂದ್ರ ನಿರಂತರವಾಗಿ ಮುಂದಾಗುತ್ತಿದೆ. ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲಿ ಲೋಕಪಾಲ ಮಸೂದೆ ಮತ್ತು ಒಕ್ಕೂಟ ವ್ಯವಸ್ಥೆಯ ಮೆಲೆ ಅದರ ಪರಿಣಾಮಗಳ ಬಗ್ಗೆ ಕೆಲ ರಾಜ್ಯಗಳು ಎತ್ತಿರುವ ಪ್ರಶ್ನೆಯ ಬಗ್ಗೆ ಉತ್ತರಿಸುತ್ತ ಪ್ರಧಾನಿ ಮನಮೋಹನ್ ಸಿಂಗ್ ಅವರು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಒಕ್ಕೂಟ ವ್ಯವಸ್ಥೆ ಅಡ್ಡಿಯಾಗಬಾರದು ಅನ್ನುವ ಹೇಳಿಕೆ ನೀಡಿದರು. ಅವರ ಹೇಳಿಕೆ ಮತ್ತು ಅದರ ಹಿಂದಿನ ಮನಸ್ಥಿತಿಯ ಬಗ್ಗೆ ನಾವು ಯೋಚಿಸಬೇಕಾಗಿದೆ.

Good government is no substitute for self-government - Gandhi
ಪ್ರಧಾನಿಯವರ ಹೇಳಿಕೆಯಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದರೂ ಪರವಾಗಿಲ್ಲ ಅನ್ನುವ ಅರ್ಥ ಇಣುಕುತ್ತೆ. ಅಸಲಿಗೆ, ಭ್ರಷ್ಟಾಚಾರದ ನಿಗ್ರಹಕ್ಕೆ ಬೇಕಾಗಿರುವ ಹೊಸ ನೀತಿ ನಿಯಮಗಳು, ಕಾನೂನು ಸುಧಾರಣೆ ಮುಂತಾದವುಗಳ ಅಗತ್ಯದ ಬಗ್ಗೆ ಯಾರಿಗೂ ಗೊಂದಲವಿಲ್ಲ, ಆದರೆ ಅದನ್ನು ಸಾಧಿಸಲು ಒಕ್ಕೂಟದಲ್ಲಿ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವುದರಲ್ಲಿ ಏನು ತಪ್ಪಿಲ್ಲ ಅನ್ನುವುದು ರಾಜ್ಯಗಳ ಸ್ವಾಯತ್ತತೆ, ಅಸ್ತಿತ್ವ, ಅಧಿಕಾರದ ವ್ಯಾಪ್ತಿಯ ಬಗ್ಗೆ ಕೇಂದ್ರಕ್ಕಿರುವ ಬದ್ದತೆ ಏನು, ಎಷ್ಟು ಅನ್ನುವ ಪ್ರಶ್ನೆ ಎತ್ತುವುದಿಲ್ಲವೇ?  ನಮ್ಮನ್ನು ನಾವು ಆಳಿಕೊಳ್ಳುವುದಕ್ಕಿಂತ ದೊಡ್ಡದು ಯಾವುದು ಇಲ್ಲ ಅನ್ನುವ ಮಾತಗಳನ್ನು ಗಾಂಧಿ ಹೇಳಿದ್ದರು." ’good government is no substitute for self-government’. It means a continuous effort to be independent of government control, whether it is foreign government or whether it is national." ಅನ್ನುವ ಮಾತನ್ನು ಮಹಾತ್ಮ ಗಾಂಧಿಯವರು ಹೇಳಿದ್ದರು. ಅಮೇರಿಕದವರು ಇನ್ನೂ ಚೆನ್ನಾಗಿ ಆಳುತ್ತಾರೆ ಎಂದು ನಮ್ಮನ್ನು ನಾವು ಆಳಿಕೊಳ್ಳುವ ಹಕ್ಕನ್ನು ಅವರ ಕೈಗೆ ಕೊಡಲಾಗುವುದೇ? ಇಲ್ಲ ತಾನೇ? ಹಾಗಿದ್ದಲ್ಲಿ ಒಳ್ಳೆಯ ಆಡಳಿತಕ್ಕೆ ಹೊಸ ಕಾನೂನಿನ ನೆಪದಲ್ಲಿ ರಾಜ್ಯಗಳ ಹಕ್ಕನ್ನು ಮೊಟಕುಗೊಳಿಸುವ, ಇನ್ನಷ್ಟು ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ, ರಾಜ್ಯಗಳನ್ನು ಹೆಚ್ಚು ಕಡಿಮೆ ತನ್ನ ಅಡಿಯಾಳಾಗಿಸುವಂತಹ ಕೇಂದ್ರದ ಪ್ರಯತ್ನವನ್ನು ಒಪ್ಪಲಾದೀತೆ? ಪ್ರಧಾನಿಯವರ ಮಾತಲ್ಲಿ ಒಕ್ಕೂಟದ ಪಾಲುದಾರರ ಅಭಿಪ್ರಾಯವನ್ನು ಪರಿಗಣಿಸುವ, ಗೌರವಿಸುವ ಧೋರಣೆಗಿಂತಲೂ ಕೇಂದ್ರ ಹೇಳಿದ್ದನ್ನು ರಾಜ್ಯಗಳು ಸುಮ್ಮನೆ ಒಪ್ಪಲಿ ಅನ್ನುವ ನಿಲುವಿದ್ದಂತೆ ಅನ್ನಿಸುವುದಿಲ್ಲವೇ?  

ಸಮ ಗೌರವದ ಒಕ್ಕೂಟ ಎಲ್ಲ ರಾಜ್ಯಗಳ ಹಕ್ಕಲ್ಲವೇ?
ಕಳೆದ ೬೪ ವರ್ಷದ ಆಡಳಿತವನ್ನು ಗಮನಿಸಿದರೆ ಎಲ್ಲ ಕಾಲದಲ್ಲೂ ರಾಜ್ಯಗಳನ್ನು ತನ್ನ ಮೂಗಿನ ನೇರಕ್ಕೆ ನಡೆಸಿಕೊಂಡ ಇತಿಹಾಸ ಕೇಂದ್ರಕ್ಕಿದೆ. ರಾಜ್ಯದ ಪಟ್ಟಿಯಲ್ಲಿದ್ದ ಕಲಿಕೆಯನ್ನು ತನ್ನ ತೆಕ್ಕೆಗೂ ಬರುವಂತೆ ಕಂಕರೆಂಟ್ ಪಟ್ಟಿಗೆ ಸೇರಿಸಿದ್ದಾಗಿರಬಹುದು, ರಾಜ್ಯಗಳ ಆರ್ಥಿಕತೆಯ ಮೇಲಿನ ಪರಿಣಾಮಗಳೇನು, ರಾಜ್ಯಗಳಿಗೆ ಸರಿಯಾಗಿ ಅನುಷ್ಟಾನ ಮಾಡುವ ವ್ಯವಸ್ಥೆ ಇಂದಿದೆಯೇ? ಅನ್ನುವುದನ್ನು ಎಣಿಸದೇ ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಯೋಜನೆಯನ್ನು ರಾಜ್ಯಗಳ ಮೇಲೆ ಹೊರಿಸಿದ್ದಾಗಿರಬಹುದು,  ಇಲ್ಲವೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪಾಲು ಕೊಟ್ಟು ಲಾಭ ಬಂದರೆ ನಮಗೆ ಪಾಲು ಕೊಡಿ, ನಷ್ಟ ಆದರೆ ನೀವೇ ತುಂಬಿ ಅನ್ನುವಂತಹ ಒಪ್ಪಂದವನ್ನು ಕರ್ನಾಟಕ ಸರ್ಕಾರದ ಜೊತೆ ಮಾಡಿಕೊಂಡಿದ್ದಾಗಿರಬಹುದು, ಒಕ್ಕೂಟದ ಪಾಲುದಾರ ರಾಜ್ಯಗಳ ಜೊತೆ ಸಮ ಗೌರವದ ಚರ್ಚೆಗೆ ಮುಂದಾಗದೇ ತನ್ನ ನಿಲುವನ್ನು ಎಲ್ಲ ರಾಜ್ಯಗಳು ಒಪ್ಪಲಿ ಅನ್ನುವ ನಿಲುವು ಕೇಂದ್ರದ್ದು ಅನ್ನಲು ಸಾಕಷ್ಟು ಉದಾಹರಣೆಗಳಿವೆ. ಸಮ ಗೌರವದ ಮೇಲೆ ಒಕ್ಕೂಟದ ಪಾಲುದಾರರಾಗಿರುವ ರಾಜ್ಯಗಳು ಇದನ್ನು ಪ್ರಶ್ನಿಸಬೇಕಾಗಿರುವುದು ನ್ಯಾಯವಲ್ಲವೇ?

ಫೆಡರಲ್ ಅಲಾಯನ್ಸ್ ಗೆ ಸಕಾಲ !
ಇರಲಿ, ಕೇಂದ್ರದಲ್ಲಿ ಆಳುವ ರಾಷ್ಟ್ರೀಯ ಪಕ್ಷಗಳಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಇರುವ ಗೌರವ ಎಂತದ್ದು ಅನ್ನುವುದನ್ನು ನೋಡುತ್ತಲೇ ಇದ್ದೇವೆ. ಅಧಿಕಾರ ಕಳೆದುಕೊಂಡು ವಿರೋಧ ಪಕ್ಷದಲ್ಲಿರುವಾಗ ಒಕ್ಕೂಟದ ಬಗ್ಗೆ ಮಾತನಾಡುವ ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಹೇಗೆ ನಡೆದುಕೊಂಡಿವೆ ಎಂಬುದು ಕೂಡಾ ನಮ್ಮ ಕಣ್ಣ ಮುಂದಿದೆ. ಹೀಗಿರುವಾಗ ಇಂತಹ ರಾಜ್ಯಗಳನ್ನು ಹಿಂತಳ್ಳುವ ಕೇಂದ್ರದ ವಿರುದ್ದ ಬೇರೆ ಬೇರೆ ರಾಜ್ಯದ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಧ್ವನಿ ಎತ್ತುತ್ತಿರುವುದು ಒಳ್ಳೆಯ ಸೂಚನೆಯೇ ಸರಿ. ಪ್ರಾದೇಶಿಕ ಪಕ್ಷಗಳೆಲ್ಲವೂ ಸೇರಿ ಫೆಡರಲ್ ಅಲಾಯನ್ಸ್ ತರಹದ ಒಕ್ಕೂಟ ಪರವಾದ ಇನ್ನೊಂದು ಅಲ್ಟರನೇಟಿವ್ ಹುಟ್ಟು ಹಾಕಲು ಇದು ಸಕಾಲ ಅನ್ನಿಸುತ್ತೆ. ಕರ್ನಾಟಕದಲ್ಲೂ ಕೇಂದ್ರದ ದೊರೆಸಾನಿಗಳತ್ತ ಮುಖ ಮಾಡಿಕೊಂಡು ಮಾತೆತ್ತಿದರೆ ದೆಹಲಿಗೆ ಹೋಗಿ ಹೈಕಮಾಂಡ್ ಮುಂದೆ ಮಂಡಿಯೂರುವ, ಅವರ ಕೈಯಲ್ಲಿ ಮೂಗಿಗೆ ತುಪ್ಪ ಸವರಿಸಿಕೊಂಡು ಬರುವ ಕರ್ನಾಟಕದ ಕೆಲ ರಾಜಕಾರಣಿಗಳು ಒಟ್ಟಾಗಿ ಮನಸ್ಸು ಮಾಡಿ ಸರಿಯಾದ ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟು ಹಾಕಲು ಯತ್ನಿಸಿದರೆ ಮತ್ತು ಅಂತಹ ಹೊಸ ಶಕ್ತಿ ದೇಶದಲ್ಲಿರುವ ಇತರ ಸಮಾನ ಮನಸ್ಕ ಪಕ್ಷಗಳೊಡನೆ ಬೆರೆತು ಒಕ್ಕೂಟ ವ್ಯವಸ್ಥೆಯ ಸಬಲೀಕರಣಕ್ಕೆ ಧ್ವನಿ ಎತ್ತಿದರೆ ಖಂಡಿತವಾಗಿಯೂ ಕೇಂದ್ರದ ಈ ಪಾಳೇಗಾರಿಕೆ ಮನಸ್ಥಿತಿಯ ಧೋರಣೆ ಬದಲಾದೀತು.

ಚಿತ್ರ ಕೃಪೆ: indiawires.com

ಗುರುವಾರ, ನವೆಂಬರ್ 24, 2011

ರಾಹುಲ್ ಗಾಂಧಿ ಹೇಳಿಕೆ, ಅಂತರ್-ರಾಜ್ಯ ವಲಸೆ ಮತ್ತು ಕೆಲ ಇಂಗ್ಲಿಷ್ ಮಾಧ್ಯಮಗಳ ಇಬ್ಬಂದಿತನವೂ...

ಇತ್ತಿಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುಪಿಯಲ್ಲಿ ಮಾತನಾಡುತ್ತ "ಇನ್ನೆಷ್ಟು ದಿನ ಇದೇ ರೀತಿ ಉತ್ತರಪ್ರದೇಶದ ಯುವಕರು ಭಿಕ್ಷೆ ಕೇಳಿ ಮುಂಬೈನಂತಹ ಊರಿಗೆ ವಲಸೆ ಹೋಗುತ್ತಿರಿ?" ಅಂದರು. ಅಭಿವೃದ್ದಿಯಲ್ಲಿ ಉತ್ತರಪ್ರದೇಶ ಎಷ್ಟು ಹಿಂದೆ ಬಿದ್ದಿದೆ, ಅಲ್ಲಿನ ಯುವಕರಿಗೆ ಒಳ್ಳೆ ಜೀವನ, ದುಡಿಮೆ ಕಲ್ಪಿಸುವಲ್ಲಿ ಅದೆಷ್ಟು ಎಡವಿದೆ, ಅಲ್ಲಿನ ಯುವಕರೆಲ್ಲ ಅನ್ನ ಅರಸಿ ಮುಂಬೈ, ದೆಹಲಿ, ಬೆಂಗಳೂರಿನಂತಹ ಹಸಿರು ಹುಲ್ಲುಗಾವಲಿಗೆ ವಲಸೆ ಹೋಗದೇ ವಿಧಿಯಿಲ್ಲ ಅನ್ನುವಂತೆ ಅಲ್ಲಿನ ಆಡಳಿತ ಹೇಗೆ ಮಾಡಿದೆ ಅನ್ನುವುದನ್ನು ಒಂದು ರೀತಿಯಲ್ಲಿ ಎಲ್ಲರ ಎದುರಿಟ್ಟರು. ಅಲ್ಲಿ ತಮ್ಮ ಪಕ್ಷಕ್ಕೆ ಲಾಭ ಮಾಡಿಕೊಳ್ಳುವ ದೃಷ್ಟಿಯಿಂದ ಈ ಮಾತನ್ನು ಅವರು ಹೇಳಿದ್ದರೂ, ಅವರು ಎತ್ತಿರುವ ಪ್ರಶ್ನೆ ಮಾತ್ರ ಎಲ್ಲರೂ ಯೋಚಿಸಬೇಕಾದಂತದ್ದೇ. ಅವರ ಮಾತನ್ನು ಸಹಜವಾಗಿಯೇ ಕೆಲವು ವಲಸೆ ಪರವಾಗಿರುವವರು ವಿರೋಧಿಸಿದರು. ಮೈಸೂರಿನ ಒಂದು ಪ್ರಖ್ಯಾತ ಇಂಗ್ಲಿಷ್ ಬ್ಲಾಗ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಹುಲ್ ಗಾಂಧಿ ಈ ಮಾತಿನ ಮೂಲಕ ಅವರಿಗೂ ಮರಾಠಿಗರ ಹಿತಕ್ಕಾಗಿ ಧ್ವನಿ ಎತ್ತುವ ಎಮ್.ಎನ್.ಎಸ್ ಮತ್ತು ಕನ್ನಡಿಗರ ಹಿತಕ್ಕಾಗಿ ಹೋರಾಡುವ ಕರವೇಗೂ ಯಾವುದೇ ಅಂತರವಿಲ್ಲ ಎಂದು ತೋರಿಸಿದ್ದಾರೆ ಎಂದು ಪ್ರತಿಪಾದಿಸುವ ಅಂಕಣವೊಂದನ್ನು ಪ್ರಕಟಿಸಿತು ಮತ್ತು ಆ ಬಗ್ಗೆ ಚರ್ಚೆಯಾಗಲಿ ಎಂದು ತಮ್ಮ ಅನಿಸಿಕೆ ಬರೆದ ಅನೇಕ ಗೆಳೆಯರ ಅನಿಸಿಕೆಯನ್ನು ಪ್ರಕಟಿಸಲೂ ಇಲ್ಲ. ಇರಲಿ, ಪ್ರಜಾತಂತ್ರದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ತಿಳಿಸುವ ಎಲ್ಲ ಆಯ್ಕೆಯಿದೆ. ಆದರೆ ತಮ್ಮ ಅನ್ನ, ಕಲಿಕೆ, ದುಡಿಮೆ, ಬಾಳುವೆಗಾಗಿ ಧ್ವನಿ ಎತ್ತುವ ಯಾವುದೇ ಸಂಸ್ಥೆ, ಸಂಘಟನೆಯನ್ನು ಈ ಹೊತ್ತಿನ ಹಲ ಮಾಧ್ಯಮಗಳು, ಬುದ್ದಿಜೀವಿಗಳು ನೋಡುವ ರೀತಿ, ಸಂಕುಚಿತ, ಮೂಲಭೂತವಾದಿಗಳು ಎಂದೆಲ್ಲ ಮಾಡಲಾಗುವ ಟೀಕೆಗಳು, ತಮ್ಮ ಹಕ್ಕಿಗಾಗಿ ನಡೆಯುವ ಹೋರಾಟವನ್ನು ಟ್ರಿವಿಯಲೈಸ್ ಮಾಡುವುದನ್ನು ಗಮನಿಸಿದಾಗ ಅನಿಯಂತ್ರಿತ ವಲಸೆ, ಅದರಿಂದಾಗುವ ಡೆಮಾಗ್ರಾಫಿಕ್ ಬದಲಾವಣೆಗಳು, ವಲಸೆಗೆ ಪ್ರೋತ್ಸಾಹ ನೀಡುವ ಭಾಷಾ ನೀತಿ, ತಪ್ಪು ಜನಸಂಖ್ಯಾ ನೀತಿ, ಇವೆಲ್ಲದರಿಂದ ದೇಶದ ವೈವಿಧ್ಯತೆಗೆ ತಗಲುತ್ತಿರುವ ಅಪಾಯ ಮತ್ತು ಅದರಿಂದ ಮುಂದಾಗಬಹುದಾದ ಪರಿಣಾಮಗಳನ್ನು ಈ ಜನರು ಯೋಚಿಸುತ್ತಿಲ್ಲವೆನೋ ಎಂದು ನನ್ನ ಅನಿಸಿಕೆ. ನನ್ನ ಮಾತುಗಳಿಗೆ ಕೆಲವು ಸಮರ್ಥನೆಯನ್ನು ಈ ಕೆಳಗೆ ನೀಡಲು ಬಯಸುತ್ತೇನೆ.

ಉತ್ತರ ಪ್ರದೇಶದ ಯುವಕರಿಗೆ ಕೆಲಸ ಕೊಡಬೇಕಾದದ್ದು ಯಾರು? ಉತ್ತರ ಪ್ರದೇಶವೋ, ಇಲ್ಲ ಮಹಾರಾಷ್ಟ್ರ, ಕರ್ನಾಟಕವೋ?
ಉತ್ತರ ಪ್ರದೇಶದ ಸರ್ಕಾರವಿರುವುದು ಯಾರ ಏಳಿಗೆಗಾಗಿ? ಅಲ್ಲಿನ ಸಂಪತ್ತು, ಸಂಪನ್ಮೂಲ ಬಳಸಿ ಅಲ್ಲಿನ ಜನರಿಗೆ ದುಡಿಮೆ, ಬದುಕಿನ ಅವಕಾಶಗಳನ್ನು ಕಲ್ಪಿಸಲೆಂದೇ ಅಲ್ಲಿನ ಸರ್ಕಾರವಿರುವುದಲ್ಲವೇ? ಜನರಿಗೆ ಒಳ್ಳೆಯ ಆಡಳಿತ ನೀಡದೇ ಜನರು ವಲಸೆ ಹೋಗಲು ಅನುಕೂಲವಾಗುವಂತೆ ರೈಲಿನ ಮೇಲೆ ರೈಲು ಬಿಟ್ಟು ಜನರನ್ನು ಹೊರ ರಾಜ್ಯಕ್ಕೆ ತಳ್ಳುವಂತದ್ದನ್ನೇ ಆಡಳಿತ ಎಂಬಂತೆ ನಡೆದುಕೊಂಡರೆ ಅಂತಹ ವೈಫಲ್ಯತೆಯನ್ನು ಪ್ರಶ್ನಿಸುವುದು ಯಾವ ರೀತಿಯಲ್ಲಿ ಸಂಕುಚಿತ ಇಲ್ಲವೇ ಮೂಲಭೂತವಾದವಾಗುತ್ತೆ? ಇದು ಭಾರತ, ಯಾರು ಎಲ್ಲಿ ಬೇಕಾದರೂ ವಲಸೆ ಹೋಗಬಹುದು ಅನ್ನುವ ಮಾತನ್ನೇ ಆಡಿಕೊಂಡು ಎಲ್ಲೆಂದರಲ್ಲಿ ವಲಸೆ ಹೋಗಿ ಅಲ್ಲಿನ ಸ್ಥಳೀಯರ ಉದ್ಯೋಗ, ಬದುಕು, ಸ್ಥಳೀಯತೆಯ  ಹಕ್ಕುಗಳಿಗೆ ತೊಂದರೆ ಆದಾಗ ಅಲ್ಲಿ ನೂರಾರು ಕಾಲದಿಂದ ನೆಲೆಸಿರುವ ಸ್ಥಳೀಯ ತನ್ನ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಯಾವ ರೀತಿಯಲ್ಲಿ ಸಂಕುಚಿತ ಇಲ್ಲವೇ ಮೂಲಭೂತವಾದವಾಗುತ್ತೆ? ವಿವಿಧತೆಯಲ್ಲಿ ಏಕತೆ ಎಂದು ಕಟ್ಟಿರುವ ಈ ದೇಶದಲ್ಲಿ ಎಲ್ಲ ಭಾಷಿಕರು ಈ ಒಕ್ಕೂಟವನ್ನು ಸೇರಿದ್ದು ಎಲ್ಲರಿಗೂ ಸಮ ಬಾಳು, ಸಮ ಪಾಲು ದೊರಕಲಿ ಅನ್ನುವ ಕಾರಣಕ್ಕಲ್ಲವೇ? ಹಾಗಿದ್ದಲ್ಲಿ, ಆ ನಂಬಿಕೆಗೆ ತೊಂದರೆ ಆದಾಗ ಅದನ್ನು ಪ್ರಶ್ನಿಸಿದರೆ ಅದನ್ನು ಸಂಕುಚಿತ, ಮೂಲಭೂತವಾದ ಅನ್ನುವ ಹಲವು ಬುದ್ದಿಜೀವಿಗಳಿಗೆ ನನ್ನದೊಂದು ಸರಳ ಉದಾಹರಣೆ ಸಮೇತ ಪ್ರಶ್ನೆ. ಎರಡು ವರ್ಷದ ಹಿಂದೆ ರೈಲ್ವೆ ಇಲಾಖೆಯ ಗ್ರೂಪ್ ಡಿ ಹಂತದ ೪೭೦೦ ಹುದ್ದೆಗಳನ್ನು ಕನ್ನಡಿಗರಿಗೆ ಗೊತ್ತೂ ಆಗದಂತೆ ಬಿಹಾರಿಗಳ ಪಾಲಾಗಿಸುವ ಯತ್ನ ನಡೆದಾಗ ಅದನ್ನು ತಡೆದು ನ್ಯಾಯ ಸಿಗುವಂತೆ ಮಾಡಿದ್ದು ಯಾರು? ಕನ್ನಡ ಪರ ಸಂಘಟನೆಗಳೋ ಇಲ್ಲ ಕೂತು ತೋಚಿದ್ದು ಬರೆಯುವ  ಇಂತಹ ಮಾಧ್ಯಮಗಳೋ? ಸಹಜವಾಗಿ ಜನರ ಬದುಕಿನ ಈ ಪ್ರಶ್ನೆಯನ್ನು ಎತ್ತಿಕೊಂಡು ಅವರಿಗೆ ನ್ಯಾಯ ದೊರಕಿಸುವ ಕೆಲಸ ಈ ಮಾಧ್ಯಮಗಳು ಯಾಕೆ ಮಾಡಲಿಲ್ಲ? ಯಾಕೆ ಕನ್ನಡ ಪರ ಸಂಘಟನೆಗಳು ಬೇಕಾದವು?

ಅನಿಯಂತ್ರಿತ ವಲಸೆಗೆ ಇಂಬು ಕೊಡುತ್ತಿರುವ ಹುಳುಕಿನ ಭಾಷಾ ನೀತಿ
ಇವತ್ತು ಅನಿಯಂತ್ರಿತ ವಲಸೆ ಮುಂಬೈ, ಬೆಂಗಳೂರಿನಂತಹ ಊರಿಗಾಗುತ್ತಿದ್ದಲ್ಲಿ ಅದಕ್ಕೆ ಬಹು ದೊಡ್ಡ ಕಾರಣ ಭಾರತದ ಹುಳುಕಿನ ಭಾಷಾ ನೀತಿ. ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳಿನಡಿ ಕಲಿಕೆ, ಮನರಂಜನೆ, ಆಡಳಿತ,ಉದ್ಯೋಗ ಹೀಗೆ ಎಲ್ಲ ರೂಪದಲ್ಲೂ ಹಿಂದಿಯನ್ನು ಹೇರಿ ಎಲ್ಲೆಡೆ ಹಿಂದಿಗೆ ಮಾನ್ಯತೆ ದೊರಕಿಸುವಂತಹ ಭಾಷಾ ನೀತಿಯಿಂದಾಗಿಯೇ ಇಂದು ಎಲ್ಲೆಡೆ ಹಿಂದಿ ಭಾಷಿಕರ ವಲಸೆ ಅಂಕೆಯಿಲ್ಲದೇ ನಡೆಯುತ್ತಿದೆ. ನೀವೇ ಗಮನಿಸಿ, ಬೆಂಗಳೂರು ಇಲ್ಲ ಮುಂಬೈಗೆ ಬರುವ ಹಿಂದಿ ಭಾಷಿಕನಿಗೆ ಇವತ್ತು ಒಂದಿನಿತಾದರೂ ತೊಡಕಾಗುತ್ತಿದೆಯೇ? ಸ್ಥಳೀಯ ನುಡಿಯ ಒಂದೇ ಒಂದು ಪದ ಕಲಿಯದೇ ಬದುಕಿ, ಬಾಳುವಂತಹ ವ್ಯವಸ್ಥೆ ಕಲ್ಪಿಸಿರುವುದರಿಂದಲೇ ಇವತ್ತು ಈ ಪಾಟಿ ವಲಸೆಯಾಗುತ್ತಿದೆಯಲ್ಲವೇ? ಇಂತಹ ವಲಸೆಯಿಂದಲೇ ಬೆಂಗಳೂರಿನ ಸರ್ಜಾಪುರ, ಮಾರ್ತಹಳ್ಳಿಯಂತಹ ಕೇವಲ ೨೦ ವರ್ಷಗಳ ಹಿಂದೆ ಅಪ್ಪಟ ಕನ್ನಡದವಾಗಿದ್ದ ಹಳ್ಳಿಗಳಲ್ಲಿ ಇವತ್ತು ಕನ್ನಡದ ಧ್ವನಿ ಉಡುಗಿ ಹೋಗುವ ಹಂತ ತಲುಪಿರುವುದು? ಯಾವ ವಲಸೆ ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಅಳಿಸುವಂತದ್ದೋ ಅಂತಹ ವಲಸೆ, ಅದಕ್ಕೆ ಇಂಬು ಕೊಡುವ ಭಾಷಾ ನೀತಿಯ ಬಗ್ಗೆ ಯಾರು ಧ್ವನಿ ಎತ್ತಬೇಕಿತ್ತು? ಇಂತಹ ಮಾಧ್ಯಮಗಳೇ ಅಲ್ಲವೇ? ಆದರೆ ಅಲ್ಲಿನ ಕೆಲ ಜನರಿಗೆ ಇವತ್ತು ಅದಾವುದು ಮುಖ್ಯವಲ್ಲ. ಜನಸಾಮಾನ್ಯರಿಂದ, ಅವರ ನಾಡಿಮಿಡಿತದಿಂದ ಬೇರ್ಪಟ್ಟಿರುವ ಈ ಜನರು, ಸಂಸ್ಥೆಗಳು ಈ ಜನರ ಪರವಾಗಿ ಧ್ವನಿ ಎತ್ತುವವರನ್ನು ಸಂಕುಚಿತ ಮನಸ್ಸಿನ ಮೂಲಭೂತವಾದಿಗಳು ಎಂದು ಟೀಕಿಸುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ ಮತ್ತು ಆ ಮೂಲಕ ತಾವು ಒಂದು ರೀತಿ ತೂಗು ಕುರ್ಚಿಯ ಬುದ್ದಿಜೀವಿಗಳೆಂದು ತೋರಿಸಿಕೊಂಡಿದ್ದಾರೆನ್ನಬಹುದು. ಧರ್ಮದ ವೈವಿಧ್ಯತೆಗೆ ಯಾವುದೇ ತೊಡಕಾಗುವುದನ್ನು ಉಗ್ರವಾಗಿ ಖಂಡಿಸುವ ಈ ಮಾಧ್ಯಮಗಳು ಭಾಷಾ ವೈವಿಧ್ಯತೆಯ ವಿಷಯಕ್ಕೆ ಬಂದಾಗ ಮಾತ್ರ ಯಾಕೆ ಸಂಕುಚಿತತೆಯ ರಾಗ ಎಳೆಯುವುದು? ವೈವಿಧ್ಯತೆ ಯಾವುದಿದ್ದರೂ ಅದು ವೈವಿಧ್ಯತೆಯೇ ಅಲ್ಲವೇ? ಯಾಕೀ ಈ ಇಬ್ಬಂದಿತನ ಹಾಗಿದ್ದರೆ?

ಜನಸಂಖ್ಯಾ ನೀತಿ ತರುತ್ತಿರುವ ಆತಂಕ !
ಮೇಲಿನ ಮಾತೆಲ್ಲ ಒಂದು ತೂಕವಾದರೆ, ಇವತ್ತು ಭಾರತ ಅನುಸರಿಸುತ್ತಿರುವ ಜನಸಂಖ್ಯಾ ನೀತಿ ತಂದಿರುವ ಆತಂಕ ಇನ್ನೊಂದು ತೂಕದ್ದು. ನಮ್ಮ ಕರ್ನಾಟಕದ ಜನಸಂಖ್ಯೆ ಇಂದು ಸುಮಾರು ೬ ಕೋಟಿಯ ಆಸುಪಾಸಿನಲ್ಲಿದೆ. ಆದರೆ ಕರ್ನಾಟಕದಲ್ಲಿ ಇನ್ನು ಮುಂದೆ ಮಕ್ಕಳ, ಯುವಕರ ಸಂಖ್ಯೆಯ ಬೆಳವಣಿಗೆ ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ. ೨೦೧೧ರ ಜನಸಂಖ್ಯೆಯ ಆಧಾರದಲ್ಲಿ ಕರ್ನಾಟಕ ಈಗಾಗಲೇ ತನ್ನ ರಿಪ್ಲೇಸ್-ಮೆಂಟ್ ಅನುಪಾತವಾದ TFR=2.0 ಅನ್ನು ತಲುಪಿದೆ. (TFR ಅಂದರೆ Total Fertility Rate- ಯಾವುದೇ ಜನಾಂಗ ಅಳಿಯದೇ ಉಳಿಯಲು ಇರಬೇಕಾದ ಜನಸಂಖ್ಯೆ ಬೆಳವಣಿಗೆಯ ಪ್ರಮಾಣ). ಆದರೆ 11ನೇ ಪಂಚವಾರ್ಷಿಕ ಯೋಜನೆ ಅನ್ವಯ ಭಾರತ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ TFR ಟಾರ್ಗೆಟ್ 1.8. ಇದರರ್ಥ ಕರ್ನಾಟಕದ TFR ಮಟ್ಟ ಈಗ ತಲುಪಿರುವ ನಾರ್ಮಲ್ ರಿಪ್ಲೇಸ್-ಮೆಂಟ್ ಮಟ್ಟದಿಂದಲೂ ಕೆಳಗಿಳಿದು ಕುಸಿಯುತ್ತ ಸಾಗುತ್ತೆ. ಅದರಿಂದಾಚೆ, ವರ್ಷದಿಂದ ವರ್ಷಕ್ಕೆ ನಮ್ಮ ಕನ್ನಡ ಜನಾಂಗದ ಸಂಖ್ಯೆ ಇಳಿಮುಖವಾಗುತ್ತ ಹೋಗುವುದು. ಇದೇ ಸಮಯದಲ್ಲಿ ಬಿಹಾರ್, ಉತ್ತರ ಪ್ರದೇಶದಂತಹ ರಾಜ್ಯಗಳ TFR ಮಟ್ಟ 3.0ಕ್ಕಿರುತ್ತೆ. ಅಲ್ಲಿ ಜನಸಂಖ್ಯೆ ಹೆಚ್ಚಿದರೆ, ಇಲ್ಲಿ ಇಳಿಮುಖ ! ಪರಿಣಾಮ? ತಗ್ಗಿರುವ ಜಾಗಕ್ಕೆ ನೀರು ಹರಿವಂತೆ ನಿರಂತರವಾಗಿ ವಲಸೆ ಹೆಚ್ಚುವುದು. ಅಂತಹ ವಲಸೆಗೆ ಇಂಬು ಕೊಡುವ ಭಾಷಾ ನೀತಿಯೂ ಈಗಾಗಲೇ ಇಲ್ಲಿದೆ ಅಂದ ಮೇಲೆ ಪರಿಣಾಮ ಊಹಿಸುವುದು ಕಷ್ಟವೇ? ಇಂತಹ ಕಟ್ಟೆಯೊಡೆದ ವಲಸೆಯ ಪ್ರವಾಹಕ್ಕೆ ಸಿಕ್ಕುವ ಕನ್ನಡ, ಕನ್ನಡಿಗನಿಗೆ ಕೊನೆಗೇನು ಉಳಿವುದು? ಒಂದು ಭಾಷಾ ಸಮೂಹದ ಅಸ್ತಿತ್ವವನ್ನೇ ಕಿತ್ತು ಹಾಕಬಹುದಾದ ಇಂತಹ ತೊಂದರೆಗಳ ಬಗ್ಗೆ ಮಾತನಾಡಬೇಕಾದದ್ದು ಯಾರು? ಇದೇ ಮಾಧ್ಯಮವಲ್ಲವೇ? ಆದರೆ ಅವರಿಗೆ ಇಂತಹ ಶ್ರಮದ ಕೆಲಸವಾವುದು ಬೇಡ. ತುರಿಕೆ ಆದಾಗ ಕೆರೆದುಕೊಳ್ಳುವಂತೆ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುವವರು parochial, fanatic, fringe elements ಎಂದು ಜರಿದು ತಮ್ಮದೇ ಪ್ರಪಂಚದಲ್ಲಿ ಮುಳುಗಿ ಹೋಗುತ್ತಾರೆ. 
ಜನರಿಗೋಸ್ಕರ ಸಂವಿಧಾನವಿರುವುದು
ಸಂವಿಧಾನದಲ್ಲಿ ಅಂತರ್-ರಾಜ್ಯ ವಲಸೆಯ ಬಗ್ಗೆ ಏನು ಹೇಳಿಲ್ಲ. ಯಾರೂ ಎಲ್ಲಿಗೆ ಬೇಕಾದರೂ ಹೋಗಬಹುದು ಅನ್ನುವವರು ಅರ್ಥ ಮಾಡಿಕೊಳ್ಳಬೇಕಿರುವುದು ಒಂದಿದೆ. ಸಂವಿಧಾನವೆನ್ನುವುದು ಇರುವುದು ಜನರಿಗಾಗಿ. ಜನರ (ಯಾರೋ ಒಂದು ಭಾಷಿಕ ಜನರಲ್ಲ, ಎಲ್ಲ ಭಾಷಿಕರು) ಒಳಿತಿಗಾಗಿ ಸಂವಿಧಾನವನ್ನು ತಿದ್ದುವ ಕೆಲಸ ಮಾಡಿದರೆ ತಪ್ಪಿಲ್ಲ. ಮಿತಿ ಮೀರಿದ ವಲಸೆಯಿಂದ ಮುಂಬೈ ಅನ್ನುವುದು ಕೊಳಗೇರಿಯ ನಗರವಾಗಿದೆ ಅಲ್ಲಿನ ಮೂಲಭೂತ ಸೌಕರ್ಯವೆಲ್ಲವೂ ಹಳಿತಪ್ಪಿವೆ ಅನ್ನುವುದು ಅಲ್ಲಿಯ ಜನರ ಅನಿಸಿಕೆ. ಬೆಂಗಳೂರಿನಂತಹ ಊರಲ್ಲೂ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ದೊಡ್ಡ ಮಟ್ಟದಲ್ಲೇ ಎಲ್ಲರನ್ನೂ ಕಾಡುತ್ತಿವೆ. ವಲಸೆಯನ್ನು ನಿಯಂತ್ರಿಸುವ, ಆಯಾ ನಾಡಿನ ಸ್ಥಳೀಯತೆ, ಬದುಕು, ಸಂಸ್ಕೃತಿ ಮೂರಾಬಟ್ಟೆ ಮಾಡುವಂತಹ ವಲಸೆಯನ್ನು ನಿಯಂತ್ರಿಸುವ ಹಕ್ಕು ಪ್ರತಿ ರಾಜ್ಯಕ್ಕೂ ಕೊಡುವ ಬಗ್ಗೆ ದೇಶವ್ಯಾಪಿ ಚರ್ಚೆ ನಡೆಯಲು ಇದು ಸಕಾಲ. ಅದು ಬಿಟ್ಟು ಮಾತೆತ್ತಿದರೆ ಸಂವಿಧಾನದ ಹೆಸರು ಹೇಳಿ ಏನು ಮಾಡೋಕಾಗಲ್ಲ ಎಂದು ಕೈ ಚೆಲ್ಲುವ ಧೋರಣೆ ಬಿಡಲು ವಲಸೆಯಿಂದ ತತ್ತರಿಸಿರುವ ರಾಜ್ಯಗಳೆಲ್ಲ ಮುಂದಾಗಬೇಕಿದೆ.

ಕೊನೆಹನಿ: ಸರಿಯಾದ ಮಾಧ್ಯಮವಾಗಿದ್ದರೆ " ಹೌದು, ರಾಹುಲ್ ಗಾಂಧಿ ಹೇಳಿದ್ದು ಸರಿಯಿದೆ.ಪ್ರತಿ ರಾಜ್ಯವೂ ತನ್ನ ಏಳಿಗೆಗೆ ದುಡಿಯಬೇಕು. ಪ್ರತಿ ರಾಜ್ಯದ ಸರ್ಕಾರವೂ ಅಲ್ಲಿನ ಜನರ ಹಿತ ಕಾಯಲೆಂದೇ ಅಧಿಕಾರಕ್ಕೆ ಬಂದಿರುವುದು, ಅಲ್ಲಿನ ಜನರಿಗೆ ದುಡಿಮೆ, ಬದುಕು ರೂಪಿಸುವ ಕೆಲಸ ಮಾಡಬೇಕು. ಪ್ರತಿ ರಾಜ್ಯದ ಅನನ್ಯತೆ, ಸಂಸ್ಕೃತಿ, ನುಡಿ, ಬದುಕು ಎಲ್ಲವೂ ಉಳಿಯಬೇಕು, ಅದಕ್ಕೆ ಮಾರಕವಾಗುವ ವಲಸೆಗೆ ನಿಯಂತ್ರಣವಿರಬೇಕು" ಎಂದು ಮಾತಾಡುತ್ತಿದ್ದರೋ ಇಲ್ಲವೇ "ಇಂತಹ ಹೇಳಿಕೆ ಮೂಲಕ ಮೂಲಭೂತವಾದಿಗಳಿಗೂ ಇವರಿಗೂ ಯಾವ ಅಂತರವೂ ಇಲ್ಲ" ಅನ್ನುವ ಬಾಲಿಶವಾದ ಮಾತಾಡುತ್ತಿದ್ದರೋ ನೀವೇ ಊಹಿಸಿ.

ಮಂಗಳವಾರ, ನವೆಂಬರ್ 8, 2011

ದೆಹಲಿ, ಚೆನ್ನೈ ಮೆಟ್ರೊಗೂ ಬೆಂಗಳೂರಿನ ನಮ್ಮ ಮೆಟ್ರೊಗೂ ಏನ್ ವ್ಯತ್ಯಾಸ ಗೊತ್ತಾ? ..

(ದೆಹಲಿಯ ಮೆಟ್ರೋದಲ್ಲಿ ಭಾಷಾ ಆಯ್ಕೆ ಹಿಂದೀ/ ಇಂಗ್ಲೀಷ್)
ನಮ್ಮ ಮೆಟ್ರೋ ಮಿಂಬಲೆಗೆ ಯಾವಾಗಾದ್ರೂ ಭೇಟಿ ನೀಡಿದ್ದೀರಾ? ಅದಕ್ಕಿಂತ ಮೊದಲು ಭಾರತದ ರಾಜಧಾನಿ ದೆಹಲಿಯ ಮೆಟ್ರೋ ಮಿಂಬಲೆಯನ್ನು ತೆರೆದು ನೋಡಿ. ಇದರ ಮುಖಪುಟ ಇಂಗ್ಲೀಷಿನಲ್ಲಿ ತೆರೆದುಕೊಳ್ಳುತ್ತದೆ. ದೆಹಲಿ ಮೆಟ್ರೋದ ಹೆಸರು "ದೆಹಲಿ ಮೆಟ್ರೋ" ಅಂತಾ. ಇದರ ಮಿಂಬಲೆಯಲ್ಲಿ ಹಿಂದೀ ಭಾಷೆಯ ಆಯ್ಕೆಯೂ ಇದೆ. ದೆಹಲಿ ಮೆಟ್ರೋದ ಅಧಿಕಾರಿಗಳ ಈ ಪಟ್ಟಿಯನ್ನೊಮ್ಮೆ ನೋಡಿ ಬಿಡಿ. ಎಷ್ಟು ಜನ ಹಿಂದೀ ಅಧಿಕಾರಿಗಳಿದ್ದಾರೆ ಅಂತಾ ಹಾಗೇ ಲೆಕ್ಕ ಹಾಕ್ಕೊಂಡ್ಬುಡಿ.
ಈಗ ಇಲ್ಲಿ ಬನ್ನಿ... ಇನ್ನೂ ಯೋಜನಾ ಹಂತದಲ್ಲಿರೋ ಚೆನ್ನೈ ಮೆಟ್ರೋ ಮಿಂಬಲೆಯನ್ನು ಈಗ ತೆರೆಯೋಣ. 
(ಚೆನ್ನೈ ಮೆಟ್ರೋದಲ್ಲಿ ಭಾಷಾ ಆಯ್ಕೆ ಇಂಗ್ಲೀಷ್/ ತಮಿಳು)
ಚೆನ್ನೈ ಮೆಟ್ರೋದ ಹೆಸರು "ಚೆನ್ನೈ ಮೆಟ್ರೋ ರೈಲ್" ಅಂತಾ. ಇದರ ಮಿಂಬಲೆ ತೆರೆದು ಕೊಳ್ಳುವುದು ಇಂಗ್ಲೀಷಿನಲ್ಲೇ... ಇದರಲ್ಲಿ ತಮಿಳು ಭಾಷೆಯ ಆಯ್ಕೆಯ ಅವಕಾಶವೂ ಇದೆ. ಇದರ ಅಧಿಕಾರಿಗಳ ಪಟ್ಟಿಯನ್ನೂ ನೋಡಿ. ಇದರಲ್ಲಿ ಎಷ್ಟು ಜನ ತಮಿಳು ಭಾಷಿಕರಿದ್ದಾರೆ ಅನ್ನೋದನ್ನೊಂದು ಸಲ ಗುರುತಿಟ್ಟುಕೊಂಡುಬಿಡಿ. 

ಈಗ ಬನ್ನಿ, ಬೆಂಗಳೂರಿನ ನಮ್ಮ ಮೆಟ್ರೋ ಮಿಂಬಲೆಗೆ. ಏನು ಕಾಣುಸ್ತಿದೆ? ಇಂಗ್ಲೀಷಿನ ಮುಖಪುಟವಾ? ದಿಲ್ಲೀಲೂ ಚೆನ್ನೈಲೂ ಅದೇ ಕಾಣೋದಲ್ವಾ? ಮತ್ತೇನು ಹುಡುಕ್ತಿದೀರಾ? ಭಾಷಾ ಆಯ್ಕೆ? ಕನ್ನಡ ಇಲ್ಲಾ ಅಂತಾ ಬೇಸರಾನಾ? ಸ್ವಾಮಿ ಹಾಗೆಲ್ಲಾ ಹುಡುಕಕ್ಕೆ ಹೋಗಿ ಬೇಸರವಾಗಿ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಪತ್ರ ಗಿತ್ರಾ ಬರೆದೀರಾ ಜೋಕೆ! 

(ಬೆಂಗಳೂರಿನ ನಮ್ಮ ಮೆಟ್ರೋಲಿ ಭಾಷಾ ಆಯ್ಕೆಯೇ ಇಲ್ಲ...)
ಅದರ ಮುಖ್ಯಸ್ಥರೇ ನಿಮಗೆ ಖುದ್ದಾಗಿ ಉತ್ತರ ಬರೆದು "ಕನ್ನಡಿಗರು ಸಹನಶೀಲರು. ದಯವಿಟ್ಟು ನೀವು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಈ ರೀತಿಯ ಭಾಷಾ ದುರಭಿಮಾನ ಸಲ್ಲದು. ಈ ತಾಣಕ್ಕೆ ಪರಭಾಷಿಕರು ಬರುತ್ತಾರೆ ಹಾಗಾಗಿ ಇಂಗ್ಲೀಷು ಹಾಕಿದ್ದೀವಿ..ನೀವು ಹೀಗೆ ಆಕ್ಷೇಪಿಸುವುದು ನಿಮ್ಮ ಪರಭಾಷಾ ದ್ವೇಷದ ಮನಸ್ಥಿತಿ ತೋರಿಸುತ್ತದೆ..." ಎಂದಾರು!

ನಮ್ಮ ಮೆಟ್ರೋಲಿ ಮಾತ್ರಾ ಯಾಕೆ ಕನ್ನಡ ಆಯ್ಕೆ ಇಲ್ಲಾ ಅಂತಾ ಯೋಚಿಸೋ ಮೊದಲು ಇದರ ಅಧಿಕಾರಿಗಳ ಹೆಸರಿನ ಪಟ್ಟಿಯನ್ನೊಮ್ಮೆ ನೋಡಿ. ಎಷ್ಟು ಜನ ಕನ್ನಡದವರಿದ್ದಾರೆ ಹುಡುಕ್ಕೊಳ್ಳಿ. ಏನು? ದುರ್ಬೀನು ಬೇಕಾ?

ಸೋಮವಾರ, ಅಕ್ಟೋಬರ್ 31, 2011

ರಾಜ್ಯೋತ್ಸವಕ್ಕೆ ಸರ್ಕಾರದ ಉಡುಗೊರೆ - 3 ಸಾವಿರ ಶಾಲೆಗಳಿಗೆ ಬೀಗ !

ಇವತ್ತು ಭಾರತ ಒಕ್ಕೂಟದಲ್ಲಿ ಕರ್ನಾಟಕ ರಾಜ್ಯ ಸ್ಥಾಪನೆಯಾದ ದಿನ. ಸರಿಯಾಗಿ 55 ವರ್ಷದ ಹಿಂದೆ ಇದೇ ದಿನದಂದು ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಮಾತನಾಡುವ ಹಲವು ಭಾಗಗಳು ಆಲೂರು ವೆಂಕಟರಾಯರ ಮುಂದಾಳತ್ವದಲ್ಲಿ ನಡೆದ ದಶಕಗಳ ಕಾಲದ ಹೋರಾಟದ ಫಲವಾಗಿ ಒಂದಾದ ಸುದಿನ. ಇಂತಹ ದಿನವೊಂದನ್ನು ನೆನೆಯಲು ನಮ್ಮ ರಾಜ್ಯ ಸರ್ಕಾರ ಎಲ್ಲ ಕನ್ನಡಿಗರಿಗೆ ಒಂದು ಭರ್ಜರಿ ಉಡುಗೊರೆ ಕೊಡುತ್ತಿದೆ. ಏನು ಗೊತ್ತೇ? ಮಕ್ಕಳ ಸಂಖ್ಯೆ ಕಡಿಮೆಯಿದೆ ಅನ್ನುವ ನೆಪವೊಡ್ಡಿ ಸರಿ ಸುಮಾರು ಮೂರು ಸಾವಿರ ಶಾಲೆಗಳನ್ನು ಮುಚ್ಚುವ ನಿರ್ಧಾರ ! ಕನ್ನಡದ ಮಕ್ಕಳ ಏಳಿಗೆಗೆ ಬುನಾದಿ ಹಾಕಬೇಕಾದ ಶಾಲೆಗಳನ್ನು ಒಳ್ಳೆ ಅವೆನ್ಯೂ ರಸ್ತೆಯಲ್ಲಿ ಅಂಗಡಿ ಇಟ್ಟಿರೋ ವ್ಯಾಪಾರಿ ರೀತಿಯಲ್ಲಿ ಲಾಭ-ನಷ್ಟದ ಕಣ್ಣಿಂದ ಅಳೆದು ಮುಚ್ಚುವ ನಿಲುವಿಗೆ ಬಂದಿರುವ ಸರ್ಕಾರ "ಸರಿಯಾದ ಕಲಿಕೆ ರೂಪಿಸುವುದು" ನಾಡಿನ ಮಕ್ಕಳ ಬಗ್ಗೆ ತನಗಿರುವ ಕರ್ತವ್ಯದಂತೆ ಕಾಣದೇ ವ್ಯಾಪಾರವೆಂಬಂತೆ ಕಾಣುತ್ತಿರುವುದು ಬರಲಿರುವ ದಿನಗಳ ದಿಕ್ಸೂಚಿಯೇನೊ ಅನ್ನಿಸುವಂತಿದೆ.

ಮೂರು ಸಾವಿರ ಶಾಲೆಗಳಿಗೆ ಬೀಗ
ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಸುಮಾರು ಮೂರು ಸಾವಿರ ಶಾಲೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದೆ. ಕಾರಣ? ಆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 5ಕ್ಕಿಂತ ಕಡಿಮೆ ಇದೆ ಅನ್ನುವುದು. ಅಲ್ಲದೇ ಇತ್ತಿಚೆಗೆ ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಶಿಕ್ಷಣ ಮಂತ್ರಿ ಕಾಗೇರಿಯವರು ಹೇಳಿದ ಇನ್ನೂ ಕೆಲವು ಮಾತುಗಳೆಂದರೆ "ಕೇಂದ್ರ ಸರ್ಕಾರ 20 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳನ್ನು ಮುಚ್ಚಬೇಕೆಂದು ಆದೇಶಿಸಿದೆ", "ಕೇಂದ್ರದಿಂದಲೇ ಆದೇಶ ಬಂದಿರುವಾಗ ನಾನೇನು ಮಾಡಲು ಸಾಧ್ಯ?", "ಇಂದು ಹಳ್ಳಿಗಳಲ್ಲಿ ಬಹಳಷ್ಟು ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಿಲ್ಲ. ಖಾಸಗಿ ಶಾಲೆಗಳ ಕಡೆ ಹೊರಳುತ್ತಿದ್ದಾರೆ. ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆ ಕಡೆಗೆ ಮಕ್ಕಳ ಮನಸ್ಸು ಒಲಿಯುತ್ತಿದೆ. ಇಂತಹ ಸಂದರ್ಭದಲ್ಲಿ ಈ ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ಸರಿಯಾದ ಗುಣಮಟ್ಟದ ಶಿಕ್ಷಣ, ಸ್ಪರ್ಧಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಶಿಕ್ಷಣ ಪೂರೈಸುವುದು ಸಾಧ್ಯವಾಗುತಿಲ್ಲ" ನೀವೇ ಯೋಚನೆ ಮಾಡಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಅನ್ನುವುದು ಮೂಲಭೂತ ಹಕ್ಕು ಅನ್ನುವ ಕಾನೂನು ತರುತ್ತಿರುವ ಈ ದಿನಗಳಲ್ಲಿ ಇಲ್ಲಿ ಕಡಿಮೆ ಮಕ್ಕಳಿದ್ದಾರೆ, ಅದಕ್ಕೆ ನಷ್ಟ ಆಗುತ್ತೆ ಅದಕ್ಕೆ ಮುಚ್ಚಿ ಇನ್ನೊಂದು ಕಡೆ ಹಾಕ್ತೀವಿ ಅನ್ನಲು ಶಿಕ್ಷಣ ಅನ್ನುವುದು ಲಾಭ-ನಷ್ಟದ ವ್ಯಾಪಾರವೇ? ಕಲಿಕೆ ಅನ್ನುವುದು ಸಂವಿಧಾನದ ಜಂಟಿ ಪಟ್ಟಿಯಲ್ಲಿದ್ದರೂ  (ಸರಿಯಾದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಕೈಯಲ್ಲಿರಬೇಕಿತ್ತು !) ಅದರ ಹೆಚ್ಚಿನ ಜವಾಬ್ದಾರಿ ರಾಜ್ಯ ಸರ್ಕಾರದ್ದು, ಹೀಗಿರುವಾಗ ಕರ್ನಾಟಕದ ಮಕ್ಕಳ ಕಲಿಕೆಯ ಅಗತ್ಯಗಳ ಬಗ್ಗೆ ಏನೇನು ತಿಳಿಯದ ಯಾರೋ ದೆಹಲಿಯ ಯಜಮಾನರು ಆಜ್ಞೆ ಮಾಡಿದ್ದಾರೆ, ಅದಕ್ಕೆ ಮುಚ್ಚುತ್ತೀವಿ ಅನ್ನುವುದು ಮೈಗೆ ಎಣ್ಣೆ ಸವರಿಕೊಂಡು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಕೆಲಸವಲ್ಲವೇ?  ಇನ್ನೂ ಮುಂದೆವರೆದು, ಸ್ಪರ್ಧಾತ್ಮಕ ಶಿಕ್ಷಣದ ಕಡೆಗೆ ಮಕ್ಕಳ ಮನಸ್ಸು ಒಲಿಯುತ್ತಿದೆ ಅನ್ನುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಅಂತಹದೊಂದು ಶಿಕ್ಷಣ ಕೊಡಲಾಗುವುದಿಲ್ಲ, ಅಂತಹ ಶಿಕ್ಷಣ ಬೇಕಿದ್ದರೆ ಖಾಸಗಿ ಶಾಲೆಗಳಿಗೆ ಹೋಗಿ ಎಂದು ಸರ್ಕಾರವೇ ಒಪ್ಪಿಕೊಳ್ಳುತ್ತಿರುವುದು ಎಲ್ಲ ವರ್ಗದ ಕನ್ನಡಿಗರ ಕಲಿಕೆಯ ಅಗತ್ಯಗಳನ್ನು ಪೂರೈಸುವ ಬಗ್ಗೆ ಈ ಸರ್ಕಾರಕ್ಕೆ ಎಷ್ಟರ ಮಟ್ಟಿಗಿನ ಬದ್ಧತೆ, ಯೋಗ್ಯತೆ ಇದೆ ಅನ್ನುವ ಪ್ರಶ್ನೆ ಹುಟ್ಟಿಸುವುದಿಲ್ಲವೇ? ಸರ್ಕಾರಿ ಶಿಕ್ಷಣ ಕಳಪೆ, ಖಾಸಗಿ ಇಂಗ್ಲಿಷ್ ಶಿಕ್ಷಣವೇ ಶ್ರೇಷ್ಟ ಅನ್ನುವ ಕೆಲವು ಖಾಸಗಿ ಮಾರುಕಟ್ಟೆ ಶಕ್ತಿಗಳ ನಿಲುವನ್ನೇ ಸರ್ಕಾರ ಪ್ರತಿಪಾದಿಸುವುದು ಕನ್ನಡ ಮಾಧ್ಯಮ ಶಿಕ್ಷಣದ ಸಮಾಧಿಯನ್ನೇ ಕಟ್ಟುವ ದಿನಗಳನ್ನು ತಂದೀತು. ಇದೇ ರೀತಿ ಸರ್ಕಾರಿ ಶಾಲೆಗಳನ್ನು ಬೇಕಾಬಿಟ್ಟಿ ಅಂಬಂತೆ ನಡೆಸುತ್ತ ಹೋದಲ್ಲಿ ಇವತ್ತು ಮೂರು ಸಾವಿರ ಮುಚ್ಚಿದವರೂ ನಾಳೆ ಎಲ್ಲ ಶಾಲೆಗಳನ್ನು ಮುಚ್ಚಿ ಬೇಕಾದ್ರೆ ಖಾಸಗಿ ಶಾಲೆಗೆ ಹೋಗಿ, ಇಲ್ಲ ಮನೇಲಿ ಬೆಚ್ಚಗೆ ಮಲ್ಕೊಳ್ಳಿ, ನಾವೇನು ಮಾಡೋಕಾಗಲ್ಲ ಅನ್ನುವ ಉಡಾಫೆಯ ನಿಲುವು ತಳೆದರೂ ಅಚ್ಚರಿಯಿಲ್ಲ.

ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆ
ಸರ್ಕಾರಿ ಶಾಲೆಗಳನ್ನು ಮುಚ್ಚುವುದು, ಇರುವ ಶಾಲೆಗಳನ್ನು ಮುಚ್ಚಿ ಹೋಬಳಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆ ಮಾಡ್ತೀವಿ ಅನ್ನುವುದು, ಪಾಲಿಕೆ ಶಾಲೆಗಳನ್ನು ಸಿ.ಬಿ.ಎಸ್.ಈ ತೆಕ್ಕೆಗೆ ದೂಡಿ ಧನ್ಯತಾ ಭಾವ ಅನುಭವಿಸುವುದು, ತಮ್ಮ ಸಿದ್ಧಾಂತವನ್ನು ಯಾವ ಯಾವುದೋ ರೂಪದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ತೂರಿಸುವ ಪ್ರಯತ್ನ ಮಾಡುವುದು ಹೀಗೆ ಚಿತ್ರ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿರುವ ಸರ್ಕಾರದ ಕ್ರಮ ಮುಂದಿನ ದಿನಗಳಲ್ಲಿ ಕನ್ನಡ ಸಮಾಜದ ಮೇಲೆ ಮಾಡಬಹುದಾದ ಪರಿಣಾಮ ಎಂತಹುದು? ಒಂದೆಡೆ  ಶಾಲೆ ಮುಚ್ಚಿ, ಹಳ್ಳಿಗಾಡಿನ ಮಕ್ಕಳ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಕಲಿಕೆಯ ಹಕ್ಕನ್ನೇ ಕಸಿದುಕೊಳ್ಳುವ ತೊಂದರೆ ಇದ್ದರೆ, ಇನ್ನೊಂದೆಡೆ ಒಳ್ಳೆಯ ಶಿಕ್ಷಣ ಬೇಕಾ ಖಾಸಗಿ ಶಾಲೆಗೆ ಹೋಗಿ, ಸರ್ಕಾರಿ ಶಾಲೆಯಲ್ಲಿ ಅದನ್ನು ಕೊಡಲಾಗದು ಅನ್ನುವ ಸಂದೇಶದ ಮೂಲಕ ಜನರು ಖಾಸಗಿ ಇಂಗ್ಲಿಷ್ ಶಾಲೆಗಳತ್ತ ಹೋಗುವಂತೆ ಮಾಡುತ್ತಿದ್ದಾರೆ. ಇದರ ನೇರ ಪರಿಣಾಮ ತಿಳಿಯಬೇಕೇ? ಸುಮ್ಮನೆ ಬೆಂಗಳೂರನ್ನು ಗಮನಿಸಿ. ಖಾಸಗಿ ಇಂಗ್ಲಿಶ್ ಮಾದ್ಯಮ ಶಾಲೆಗಳ ಸಂಖ್ಯೆ ಹೆಚ್ಚಿರುವ  ಬೆಂಗಳೂರಿನಲ್ಲಿ ಕನ್ನಡದಲ್ಲಿ ಇಂಗ್ಲಿಶ್ ಬೆರಕೆ, ಕನ್ನಡ ಮಾತನಾಡದಿರುವುದೇ ಪ್ರತಿಷ್ಟೆಯ ಸಂಕೇತ, ಕನ್ನಡದ ಬಗ್ಗೆ ಕೀಳರಿಮೆ ಮುಂತಾದ ಸಮಸ್ಯೆಗಳು ಮಿತಿ ಮೀರಿ ಉಲ್ಬಣಿಸಿವೆ ಅನ್ನುವುದು ಏನನ್ನು ತೋರಿಸುತ್ತಿವೆ? ನಾಳೆ ಇದು ಇಡೀ ಕರ್ನಾಟಕವನ್ನು ವ್ಯಾಪಿಸಿದರೂ ಅಚ್ಚರಿಯಿಲ್ಲ. ಇಡೀ ಕರ್ನಾಟಕಕ್ಕೆ ಸಮಗ್ರವಾದ, ಅತ್ಯುತ್ತಮ ಗುಣಮಟ್ಟದ, ಎಲ್ಲ ಹಂತದ ಒಳ್ಳೆಯ ಕಲಿಕೆಯನ್ನು ಕನ್ನಡದಲ್ಲೇ ತರುವ ಹೊಣೆಗಾರಿಕೆಯನ್ನು ಸರ್ಕಾರ ಹೊರದೇ ಹೋದರೆ ಆಗುವ ಕೆಟ್ಟ ಬದಲಾವಣೆಗಳು ಎಂದಿಗೂ ಹಿಂಪಡೆಯಲಾಗದ ( irreversible) ಬದಲಾವಣೆಗಳಾಗಲಿವೆ.

ಒಂದಿಷ್ಟು ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವುದು, ಮಾಣೇಕ್ ಶಾ ಮೈದಾನದಲ್ಲಿ ಒಂದು ಕಾರ್ಯಕ್ರಮ ಮಾಡಿ ಸಿಹಿ ತಿನ್ನುವುದು, ಆಮೇಲೆ ಕನ್ನಡ, ಕನ್ನಡಿಗರ ಉಳಿವಿಗೆ ತಾವೆಷ್ಟು ಬದ್ಧ ಎಂದು ಭಾಷಣ ಕೊರೆಯುವುದು, ಕಲೆ, ಸಾಹಿತ್ಯ, ಸಿನೆಮಾ ಅಂತ ಬೊಕ್ಕಸದಿಂದ ಒಂದಿಷ್ಟು ಹಣ ಕೊಡುವುದೇ ಕನ್ನಡದ ಕೆಲಸ ಅಂದುಕೊಂಡಿರುವ ಈ ಸರ್ಕಾರ ನಾಡಿನ ನಾಳೆಯನ್ನು ರೂಪಿಸಬೇಕಾದ ಕಲಿಕಾ ವ್ಯವಸ್ಥೆಗಳತ್ತ ಇದೇ ಕಡೆಗಣನೆ ಮುಂದುವರೆಸಿದರೆ ಕನ್ನಡ, ಕನ್ನಡಿಗನಿಗೆ ಉಳಿಗಾಲವಿಲ್ಲ.

ಕೊನೆ ಹನಿ: ಉದ್ಯಮಿ ಅಜೀಂ ಪ್ರೇಮ್ ಜಿ ತಮ್ಮ ಫೌಂಡೇಶನ್ ಮೂಲಕ ಎಲ್ಲ ರೀತಿಯ ವ್ಯವಸ್ಥೆಯುಳ್ಳ ಎರಡೆರಡು ಶಾಲೆಯನ್ನು ಎಲ್ಲ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತೆಗೆಯುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಈ ಶಾಲೆಗಳಲ್ಲಿ ಆಯಾ ರಾಜ್ಯದ ಸ್ಥಳೀಯ ಭಾಷೆಯಲ್ಲೇ ಕಲಿಕಾ ವ್ಯವಸ್ಥೆ ರೂಪಿಸುವುದು ಮತ್ತು ಅದನ್ನು ರಾಜ್ಯದ ಬೋರ್ಡ್ ನೊಂದಿಗೆ ನೊಂದಾಯಿಸಿಕೊಳ್ಳುವ ಅತ್ಯಂತ ಸಂತೋಷದ ನಿಲುವು ಪ್ರಕಟಿಸಿದ್ದಾರೆ. ನಮ್ಮ ನಾರಾಯಣ ಮೂರ್ತಿ, ಕ್ಯಾ.ಗೋಪಿನಾಥ್ ಅವರು ಇದನ್ನು ಗಮನಿಸುತ್ತಿದ್ದಾರೆ ಅಂದುಕೊಳ್ಳುವೆ. ಇಂತಹ ಕ್ರಮಗಳು ಹೊಳಪು ಕಳೆದುಕೊಳ್ಳುತ್ತಿರುವ ತಾಯ್ನುಡಿ ಶಿಕ್ಷಣದತ್ತ ಎಲ್ಲರೂ ದೊಡ್ಡ ಮಟ್ಟದಲ್ಲಿ ತಿರುಗಿ ನೋಡುವಂತೆ ಮಾಡಲಿ ಆಗಲಾದರೂ ಸರ್ಕಾರಕ್ಕೆ ತನ್ನ ಹೊಣೆಗಾರಿಕೆ ನೆನಪಾಗುವುದಾ ನೋಡೊಣ.

ಭಾನುವಾರ, ಅಕ್ಟೋಬರ್ 23, 2011

ನಮ್ಮ ಮೆಟ್ರೋ ನಿಜಕ್ಕೂ ನಮ್ಮದೇನಾ ?

ಯಾವುದೇ ಊರಿನ ಸಾರಿಗೆ ವ್ಯವಸ್ಥೆ ಒಂದು ರೀತಿಯಲ್ಲಿ ಆ ಊರಿನ ಮುಖವಾಣಿಯಂತೆ ಇರುತ್ತೆ. ಅಲ್ಲಿಗೆ ಬರುವ ಪ್ರಯಾಣಿಕನಿಗೆ, ಪ್ರವಾಸಿಗನಿಗೆ ಆ ಊರು, ಅಲ್ಲಿನ ಜನರ ಭಾಷೆ, ಅಲ್ಲಿನ ಜನ ಜೀವನ ಎಲ್ಲವನ್ನು ಒಂದು ರೀತಿಯಲ್ಲಿ ಪರಿಚಯಿಸುವ ಕನ್ನಡಿಯಾಗಿರುತ್ತೆ. ಬಿ.ಎಂ.ಟಿ.ಸಿಯ ನಂತರ ಈಗ ಬೆಂಗಳೂರಿನ ಸಾರಿಗೆ ಮೂಲಭೂತ ಸೌಕರ್ಯದ ಚಹರೆಯನ್ನೇ ಬದಲಾಯಿಸುವ ಹೊಸ ವ್ಯವಸ್ಥೆಯಾಗಿ ನಮ್ಮ ಮೆಟ್ರೋ ನಗರ ರೈಲು ಸಾರಿಗೆ ಕಳೆದ ಗುರುವಾರದಿಂದ ಶುರುವಾಗಿದೆ. ಹೆಚ್ಚು ಕಡಿಮೆ ೩೦ ವರ್ಷಗಳ ಕಾಲದಿಂದ ಇಂತಹದೊಂದು ವ್ಯವಸ್ಥೆಯ ಬಗ್ಗೆ ಹಲವಾರು ನಾಯಕರು, ಸರ್ಕಾರಗಳು, ನಟ ಶಂಕರ್ ನಾಗ್ ನಂತಹ ಕನಸುಗಾರ ಕನ್ನಡಿಗರು ಕಂಡ ಕನಸು ನನಸಾಗುವ ಮೊದಲ ಹಂತವಾಗಿ ಇದು ಬಂದಿದೆ. ತುಂಬಾ ಸಂತಸದ ವಿಚಾರವೇ ಸರಿ. ನಮ್ಮ ಮೆಟ್ರೋದಲ್ಲಿ ನಮ್ಮತನದ ಅಚ್ಚು ಒತ್ತಿರಬೇಕು ಎಂದುಕೊಂಡು ನೋಡಲು ಹೋದರೆ ಅಚ್ಚರಿ ಕಾದಿದೆ. ಅಲ್ಲಿನ ನಾಮ ಫಲಕ, ಘೋಷಣೆ, ಸುರಕ್ಷೆಯ ಸಂದೇಶ, ಹೀಗೆ ಎಲ್ಲ ವ್ಯವಸ್ಥೆಯಲ್ಲೂ ಯಾರದೋ ಒತ್ತಾಯಕ್ಕೆ ಸಿಲುಕಿಯೋ ಅಥವಾ ಯಾರನ್ನೋ ಒಲೈಸಲೋ ಎಂಬಂತೆ ಕನ್ನಡ, ಇಂಗ್ಲಿಶ್ ಜೊತೆ ಅನಾವಶ್ಯಕವಾಗಿ ಹಿಂದಿಯನ್ನೂ ಬಳಸಿರುವುದು ಕಂಡಾಗ ಹಿಂದಿ ಮೂಲಭೂತವಾದಿಗಳ ಕೈಗೆ ಹಿಂದಿ ಹೇರಿಕೆಯ ಹೊಸ ಅಸ್ತ್ರವಾಗಿ ನಮ್ಮ ಮೆಟ್ರೋ ಕಂಡಿದೆ ಅಂದರೆ ತಪ್ಪಾಗದು.


ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ? 

ನಮ್ಮ ಮೆಟ್ರೋ ರೈಲಿನ ಎಲ್ಲ ಸೂಚನೆ, ನಾಮ ಫಲಕ, ನಿಲ್ದಾಣದ ಎಲ್ಲ ಕಡೆಯಲ್ಲೂ ತ್ರಿ ಭಾಷಾ ಸೂತ್ರ ಅನ್ನುವ ಪೊಳ್ಳು ನೆಪವೊಡ್ಡಿ ಹಿಂದಿ ಬಳಸಿರುವುದು ಯಾಕೆ? ಇಡೀ ಬೆಂಗಳೂರಿನ ಜೀವನಾಡಿಯಾಗಿರುವ  ಬಿ.ಎಂ.ಟಿ.ಸಿ ಕನ್ನವೊಂದನ್ನೇ ಬಳಸಿ ಎಲ್ಲ ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪುತ್ತಿರುವಾಗ ಇಲ್ಲಿ ಮಾತ್ರ ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ?  ಕೇಂದ್ರ ಸರ್ಕಾರ ಈ ಯೋಜನೆಗೆ ಕೊಟ್ಟ ಹಣ ಕೇವಲ ೨೫%. ರಾಜ್ಯದ ಪಾಲು ೩೦% ಜೊತೆಗೆ ಮೆಟ್ರೋ ಆಸ್ತಿ-ಪಾಸ್ತಿಯನ್ನೇ ಆಧಾರವಾಗಿಟ್ಟುಕೊಂಡು ಪಡೆದ ಸಾಲ ಖಾಸಗಿ ಸಾಲ ೪೫% ಇದೆ. ಕೇಂದ್ರ ಕೊಟ್ಟಿರುವ ೨೫% ಹಣ ಕೂಡ ಅವರದ್ದಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಹೋಗೋ ಸಾವಿರಾರು ಕೋಟಿಯ ತೆರಿಗೆ ಹಣದಲ್ಲಿ ನಮಗೆ ಮರಳಿ ಕೊಟ್ಟ ಪುಡಿಗಾಸಷ್ಟೇ. ಹೀಗಿರುವಾಗ ಕೊಟ್ಟಿರುವ ೨೫% ನಮ್ಮದೇ ಹಣಕ್ಕೆ ಎಲ್ಲೆಡೆ ಹಿಂದಿ ಬಳಸಬೇಕು ಎಂದು ಕೇಂದ್ರ ಅಂದರೆ ಅದು ಹಿಂದಿ ಹೇರಿಕೆಯಲ್ಲದೆ ಇನ್ನೇನು?  ಅಷ್ಟಕ್ಕೂ ಹಿಂದಿಯಲ್ಲೇ ಆಡಳಿತ ಮಾಡಬೇಕು ಅನ್ನಲು ಕೇಂದ್ರ ಸರ್ಕಾರ ಅನ್ನುವುದು ಕೇವಲ ಹಿಂದಿ ಭಾಷಿಕರ ಸರ್ಕಾರವೇ? ಭಾರತದ ೨೨ ಭಾಷೆಯವರು ಸೇರಿ ತಾನೇ ಕೇಂದ್ರ ಆಗಿರುವುದು? ಹಾಗಿದ್ದಾಗ ನಿಮ್ಮೂರಲ್ಲೇ ನಿಮ್ಮ ನಿಮ್ಮ ಭಾಷೆ ಏನಾದ್ರೂ ಮಾಡ್ಕೊಳ್ಳಿ ( ಮನೇಲಿ ಇದ್ರೆ ಒಳ್ಳೆಯದು ಅಂತ ಓದಿಕೊಳ್ಳಿ) ಹಿಂದಿ ಮಾತ್ರ ಬಳಸಲೇಬೇಕು ಅಂತ ಕೇಂದ್ರ ಹೇಳುವುದು ಹಿಂದಿಯೇತರ ನುಡಿಗಳ ಬಗ್ಗೆ ಅದಕ್ಕೆಷ್ಟು ಕಾಳಜಿ ಇದೆ ಅನ್ನುವ ಪ್ರಶ್ನೆ ಹುಟ್ಟಿಸುವುದಿಲ್ಲವೇ ? ಇರಲಿ ಕೇಂದ್ರ ತನ್ನ ವ್ಯಾಪ್ತಿಯಲ್ಲಿರುವ ಕಛೇರಿಗಳಲ್ಲಿ ಪ್ರಜಾತಂತ್ರ ವಿರೋಧಿಯಾಗಿ  ಹಿಂದಿ ಹೇರುವುದೇ ಗೊತ್ತೇ ಇದೆ, ಒಂದಲ್ಲ ಒಂದು ದಿನ ಅದು ಅಂತ್ಯ ಕಾಣಲು ಬೇಕು. ಆದ್ರೆ ಒಂದು ಊರಿನ ಸ್ಥಳೀಯ ಸಾರಿಗೆಯಲ್ಲೂ ಹಿಂದಿ ಹೇರಬೇಕು ಎಂದು ಅದು ಹೊರಟಿತ್ತೆ ಎಂದು ನೋಡಲು ಹೊರಟರೆ ಕಾಣುವುದು ಇನ್ನೂ ಅಚ್ಚರಿಯ ಸಂಗತಿ. ಅದೇನು ಗೊತ್ತೇ? ನಮ್ಮ ಮೆಟ್ರೋದಲ್ಲಿ ಕಡ್ಡಾಯವಾಗಿ ಹಿಂದಿ ಬಳಸಲೇಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆಯೇ ಎಂದು ಮೆಟ್ರೋ ಎಂ.ಡಿ ಶ್ರೀ ಶೈಲಂ ಅವರಿಗೆ ಈ ಹಿಂದೆ ಗೆಳೆಯರೊಬ್ಬರು ಮಿಂಚೆ ಕಳಿಸಿ ಕೇಳಿದ್ದಾಗ ಅವರು ಕೊಟ್ಟ ಸ್ಪಷ್ಟ ಉತ್ತರ "ಇಲ್ಲ" ಅನ್ನುವುದಾಗಿತ್ತು. ಆ ಮಿಂಚೆಯಲ್ಲಿ ಏನಿತ್ತು ಎಂದು ಕೆಳಗೆ ನೋಡಿ:
ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು?
ಹಾಗಿದ್ದಲ್ಲಿ ಇವತ್ತು ನಮ್ಮ ಮೆಟ್ರೋ ದಲ್ಲಿ ಎಲ್ಲ ಸೂಚನೆ, ಸುರಕ್ಷೆ, ಘೋಷಣೆಗಳಲ್ಲಿ ಹಿಂದಿ ಬಳಸುತ್ತಿರುವುದು ಯಾತಕ್ಕೆ? ಕನ್ನಡವೇ ಬಾರದ ರಕ್ಷಣಾ ಸಿಬ್ಬಂದಿ ಕಾಣಿಸಿಕೊಳ್ಳುತ್ತಿರುವುದು ಯಾಕೆ? ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು?  ಇವತ್ತು ಮೊದಲ ಹಂತದಲ್ಲಿ ಮಾಡಿರುವ ಈ ಹೇರಿಕೆ ನಾಳೆ ಎಲ್ಲ ಹಂತದಲ್ಲೂ ಕಾಣುತ್ತೆ.. ಮುಂದೆ? ಬಿ.ಎಂ.ಟಿ.ಸಿ ಯಲ್ಲೂ ತ್ರಿಭಾಷ ಸೂತ್ರ? ಆಮೇಲೆ ಕೆಸ್ಸಾರ್ಟಿಸಿ ? ನಂತರ ಸಾರಿಗೆ ಇಲಾಖೆ? ಎಲ್ಲಿದೆ ಇದಕ್ಕೆ ಕೊನೆ? ಮೊದಲು  ಕನ್ನಡದ ಜೊತೆಗೆ ಹಿಂದಿ ಹಾಕ್ತಿವಿ ಅಂತಾರೆ, ಆಮೇಲೆ ಹಿಂದಿ ಕಲಿತಾಗಿದೆಯಲ್ಲ, ಇನ್ಯಾಕೆ ಕನ್ನಡ, ಸುಮ್ನೆ ದುಡ್ಡು ದಂಡ ಅಂತಾರೆ. ಅಲ್ಲಿಗೆ ಕನ್ನಡದ ತಿಥಿ. ಈ ರೀತಿಯ ನೂರೆಂಟು ವಲಸಿಗರಿಗಾಗಿನ  ಅನುಕೂಲಗಳು ಕರ್ನಾಟಕಕ್ಕೆ ಇನ್ನಷ್ಟು ಪರಭಾಷಿಕರ ವಲಸೆ ಹೆಚ್ಚಿಸಿ, ಸ್ಥಳೀಯ ಡೆಮಾಗ್ರಫಿಯನ್ನು ಬದಲಾಯಿಸಿ, ಅವರೆಂದು ಕನ್ನಡ ಕಲಿತು ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡಿ  ಸ್ಥಳೀಯರ ಜೀವನವನ್ನು ಇನ್ನಷ್ಟು ಅಸಹನೀಯ ಮಾಡಬಲ್ಲದೇ  ಹೊರತು ಇನ್ನಾವ ದೊಡ್ಡ ಲಾಭವು ನಮಗೆ ಸಿಗದು. ಈ ಹಿಂದಿ ಹೇರಿಕೆಯನ್ನು ನಾವೆಲ್ಲರೂ ವಿರೋಧಿಸಬೇಕು. ನಮ್ಮ ಮೆಟ್ರೋಗೆ ಹೋದಾಗಲೆಲ್ಲ ನಿಮ್ಮ ಅನಿಸಿಕೆ ಬರೆಯಿರಿ, ಮೆಟ್ರೋ ಅಧಿಕಾರಿಗಳಿಗೆ ಪತ್ರ, ಮಿಂಚೆ, ಕರೆಗಳ ಮೂಲಕ ಈ ಮೂರ್ಖತನವನ್ನು ಕೈ ಬಿಡುವಂತೆ ಒತ್ತಾಯಿಸಿ.  ಇಲ್ಲದಿದ್ದಲ್ಲಿ ಇವತ್ತು ಶುರುವಾದ ಈ ಹೊರ ಬಗೆಯ ಹೇರಿಕೆ ಮುಂದೆ ದೊಡ್ಡ ಅನಾಹುತವನ್ನೇ ತಂದೀತು!
ನೀವು ಬರೆಯಬೇಕಾದ ಮೆಟ್ರೋ ಅಧಿಕಾರಿಗಳ ವಿಳಾಸ: sivasailam@bmrc.co.insudhirchandra@bmrc.co.invasanthrao@bmrc.co.inbmrcl@dataone.in

ಮಂಗಳವಾರ, ಅಕ್ಟೋಬರ್ 11, 2011

ಬಾರದ ಕರೆಂಟು - ಎತ್ತಿರೋ ಪ್ರಶ್ನೆ ನೂರೆಂಟು !


ಮಳೆಗಾಲ ಇನ್ನೇನು ಮುಗೀತು ಅನ್ನೋ ಹೊತ್ತಿಗಾಗಲೇ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದೆ. ದಿನವೊಂದಕ್ಕೆ 160 ಮಿಲಿಯನ್ ಯುನಿಟ್ ವಿದ್ಯುತ್ತಿಗೆ ಬೇಡಿಕೆ ಇದ್ದರೆ ಕೇವಲ 136 ಮಿಲಿಯನ್ ಯುನಿಟ್ ವಿದ್ಯುತ್ ಲಭ್ಯವಿದ್ದು, ಸುಮಾರು 24 ಮಿಲಿಯನ್ ಯುನಿಟ್ ವಿದ್ಯುತ್ತಿನ ಕೊರತೆ ಕರ್ನಾಟಕಕ್ಕೆ ಎದುರಾಗಿದೆ.  ಕಲ್ಲಿದ್ದಲ್ಲಿನ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ ಅನ್ನುವುದು ಮಾಧ್ಯಮದಲ್ಲಿ ಕಂಡು ಬರುತ್ತಿರುವ ವರದಿಯಾಗಿದೆ.  ಅದೇನೇ ಇದ್ದರೂ ಜನರ ಜೀವನಾಡಿಯಾದ ವಿದ್ಯುತ್ ಪೂರೈಕೆಯ ಈ ಸಮಸ್ಯೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿರುವ ರೀತಿ ನೋಡಿದರೆ  ಸಮಸ್ಯೆ ಬಗೆಹರಿಸುವುದಕ್ಕಿಂತ  ಪರಸ್ಪರ ದೋಷಾರೋಪ, ಕೆಸೆರೆರೆಚಾಟಕ್ಕೆ ಹೆಚ್ಚು ಗಮನ ಕೊಟ್ಟಂತಿದೆ ! 
ಯಾವ ಯಾವ ಮೂಲದಿಂದ ಎಷ್ಟೆಷ್ಟು ವಿದ್ಯುತ್ ?
ಕರ್ನಾಟಕದ ವಿದ್ಯುತ್ ಬೇಡಿಕೆ 160 ಮಿಲಿಯನ್ ಯುನಿಟ್ ಗಳಾಗಿದ್ದರೆ ಲಭ್ಯವಿರುವ ವಿದ್ಯುತ್ ಸುಮಾರು 136 ಮಿಲಿಯನ್ ಯುನಿಟ್ ಅನ್ನುತ್ತೆ ಕನ್ನಡಪ್ರಭ ವರದಿ. ಈ 136 ಮಿಲಿಯನ್ ಯುನಿಟ್ ಅಲ್ಲಿ 50 ಮಿಲಿಯನ್ ಯುನಿಟ್ ಜಲ ವಿದ್ಯುತ್ ಮೂಲದಿಂದ ಬಂದರೆ, ಸುಮಾರು 26 ಮಿಲಿಯನ್ ಯುನಿಟ್ ಉಷ್ಣ ವಿದ್ಯುತ್ ಮೂಲದಿಂದಲೂ, ಬಾಕಿ 60 ಮಿಲಿಯನ್ ಯುನಿಟ್ ಹೊರ ರಾಜ್ಯ ಮತ್ತು ಕೇಂದ್ರ ಗ್ರಿಡ್ ನಿಂದ ರಾಜ್ಯ ಖರೀದಿಸುತ್ತೆ.  ಆಂಧ್ರಪ್ರದೇಶದಲ್ಲಿ  ತೆಲಂಗಾಣ ರಾಜ್ಯಕ್ಕಾಗಿ ಒತ್ತಾಯಿಸಿ ನಡೆಯುತ್ತಿರುವ ಹೋರಾಟದಿಂದಾಗಿ ಅಲ್ಲಿನ ತೆಲಂಗಾಣ ಪ್ರಾಂತ್ಯದಲ್ಲಿರುವ ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಕಲ್ಲಿದ್ದಲು ಪೂರೈಕೆಯಾಗದ ಹಿನ್ನೆಲೆಯಲ್ಲಿ ನಮ್ಮಲ್ಲೇ ಉತ್ಪಾದನೆಯಾಗುವ ಮತ್ತು ಕೇಂದ್ರ ಗ್ರಿಡ್ ನಿಂದ ದೊರಕುವ ಉಷ್ಣ ವಿದ್ಯುತ್ತಿನಲ್ಲಾಗಿರುವ ಕೊರತೆಯಿಂದಾಗಿ ಇವತ್ತು ಕತ್ತಲಲ್ಲಿ ಕೈ ತೊಳೆಯುವಂತಾಗಿದೆ ಅಂಬುದು ಮಾದ್ಯಮಗಳ ವರದಿ. 
ತಾಂತ್ರಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಹೋಗದೇ ಈ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಮ್ಮ ಮಂತ್ರಿಗಳ ಹೇಳಿಕೆ ನೋಡಿದರೆ ಸಮಸ್ಯೆಗೆ ಒಟ್ಟಾಗಿ ಪರಿಹಾರ ಕಂಡುಕೊಳ್ಳುವುದಕ್ಕಿಂತ ಹೆಚ್ಚಾಗಿ ಯಾರ ತಪ್ಪಿನಿಂದಾಗಿ ಈ ಸಮಸ್ಯೆ ತಲೆದೋರಿದೆ ಎಂದು ಆರೋಪಿಸುವುದರಲ್ಲೇ ಇಬ್ಬರಿಗೂ ಹೆಚ್ಚು ಸಮಾಧಾನವಾದಂತಿದೆ. ಈ ಸಮಯದಲ್ಲಿ ಇಬ್ಬರಿಗೂ ನಾನು ಕೇಳುವ ಕೆಲವು ಪ್ರಶ್ನೆಗಳೆಂದರೆ 
ರಾಜ್ಯದ ಅಧಿನಾಯಕರಿಗೆ:
  • ಕೇಂದ್ರವನ್ನು ದೂರುತ್ತ ಕೂರುವ ಬದಲು ತಮ್ಮ ಆಳ್ವಿಕೆಯ ಕಳೆದ ಮೂರು ವರ್ಷದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸುವತ್ತ ತಾವೇನು ಮಾಡಿದ್ದೀರಿ? ತಮ್ಮ ಆಳ್ವಿಕೆಯಲ್ಲಿ ವಿದ್ಯುತ್ ಉತ್ಪಾದನೆ ಎಷ್ಟರ ಮಟ್ಟಿಗೆ ಹೆಚ್ಚಿದೆ? 
  • ಎಸ್ಕಾಮ್ ಕಂಪನಿಗೆ ರಾಜ್ಯ ಸರ್ಕಾರ ಕೊಡಬೇಕಿರುವ ಬಾಕಿ 12,000 ಕೋಟಿ ರೂಪಾಯಿಗಳು ಅನ್ನುತ್ತೆ ಮಾಧ್ಯಮ ವರದಿ. ವಿದ್ಯುತ್ ವ್ಯವಸ್ಥೆಯೇ ಕುಸಿದು ಬೀಳುವ ಹಂತದಲ್ಲಿರುವಾಗಲೂ ರೈತರಿಗೆ ಉಚಿತ ವಿದ್ಯುತ್ ಅನ್ನುವ ಪಾಪುಲಿಸ್ಟ್ ಕ್ರಮಗಳಿಗೆ ಜೋತು ಬಿದ್ದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದ್ದು ಯಾಕೆ? ಹೋಗಲಿ,  ಆಗಾಗ ವಿದ್ಯುತ್ ದರ ಏರಿಸುವುದನ್ನು ಬಿಟ್ಟು ಈ ಬಾಕಿ ತೀರಿಸಲು ಇನ್ಯಾವ ಕ್ರಮ ಕೈಗೊಂಡಿದ್ದೀರಿ?
  • ತೆಲಂಗಾಣ ಹೋರಾಟದ ಸಕಲ ಜನುಲಾ ಸಮ್ಮೆ ಹೋರಾಟ ಶುರುವಾಗಿ 29 ದಿನಗಳಾದವು. ಈ ಸಮಸ್ಯೆ ಇಂತಹದೊಂದು ವಿಪರೀತಕ್ಕೆ ಹೋಗಬಹುದು ಅನ್ನುವ ಕೊಂಚ ಮುಂದಾಲೋಚನೆಯೂ ತಮಗೆ ಇಲ್ಲದಾಯಿತೇ? ಕಳೆದ 29 ದಿನಗಳಲ್ಲಿ ಸರ್ವ ಪಕ್ಷದ ನಿಯೋಗವನ್ನು ದೆಹಲಿಗೆ ಕರೆದೊಯ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನಮ್ಮ ಪಾಲಿನ ಕಲ್ಲಿದ್ದಲ್ಲಿನ ವ್ಯವಸ್ಥೆ  ಕಲ್ಪಿಸಿಕೊಳ್ಳಲು ಯಾಕೆ ಮುಂದಾಗಲಿಲ್ಲ? 
  • ಹೋಗಲಿ, ಸರ್ವ ಪಕ್ಷ ಸಭೆಗೆ ಪ್ರತಿಪಕ್ಷಗಳು ತಯಾರಿಲ್ಲ ಅಂದುಕೊಳ್ಳೊಣ, ತಮ್ಮ ಪಕ್ಷದ 19 ಜನ ಸಂಸತ್ ಸದಸ್ಯರಿದ್ದಾಗಲೂ ಅವರನ್ನೆಲ್ಲ ಸೇರಿಸಿ ದೆಹಲಿಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಯಾಕೆ ಮುಂದಾಗಿಲ್ಲ? ಕೇಂದ್ರವನ್ನು ದೂರುವುದು ಹೆಚ್ಚು ಸುಲಭ ಅನ್ನುವ ಕಾರಣಕ್ಕೊ?
ಕೇಂದ್ರದಲ್ಲಿ ಮಂತ್ರಿಗಳಾಗಿರುವ  ನಮ್ಮ ನಾಡಿನ  ದೊರೆಸಾನಿಗಳಿಗೆ:
  • ಕೇಂದ್ರ ಮತ್ತು ಆಂಧ್ರ ಪ್ರದೇಶ ಸರ್ಕಾರದ ಜಂಟಿ ಒಡೆತನದಲ್ಲಿರುವ ಸಿಂಗರೇಣಿ ಗಣಿಯಿಂದ ಕಲ್ಲಿದ್ದಲು ತರಿಸಿಕೊಳ್ಳಲು ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಆ ಗಣಿಯ ಕಲ್ಲಿದ್ದಲ್ಲಿನ ಮೇಲೆ ನಮಗೆ ಇಂತಹದೊಂದು ಅವಲಂಬನೆ ಇರುವಾಗ ಒಪ್ಪಂದ ಮಾಡಿಕೊಂಡ ರಾಜ್ಯಗಳಿಗೆ ಒಪ್ಪಂದದನ್ವಯ ಸಮರ್ಪಕ ಕಲ್ಲಿದ್ದಲು ಪೂರೈಸಲು ಯಾವ ಕ್ರಮವನ್ನು ಯಾಕೆ ಕೈಗೊಂಡಿಲ್ಲ? ಒಂದು ರಾಜ್ಯದ ಆರ್ಥಿಕತೆಯನ್ನೇ ಬುಡಮೇಲು ಮಾಡುವಂತಹ ಇಂತಹ ಗಂಭೀರ ಸಮಸ್ಯೆ ಬಂದಾಗಲೂ ಮಧ್ಯ ಪ್ರವೇಶಿಸಿ ಪರಿಹಾರ ನೀಡುವಂತೆ ತಾವುಗಳು ಯಾಕೆ ಮನವಿ ಮಾಡಿಲ್ಲ? 
  • ಪಡೆದ  ಕಲ್ಲಿದ್ದಲಿಗೆ ಹಣ ಪಾವತಿಸುವಾಗ ಕರ್ನಾಟಕವೂ ಹೀಗೆ ಬೇಕಾಬಿಟ್ಟಿ ವರ್ತಿಸಿದರೆ ನಿಮ್ಮ ಕೇಂದ್ರ ಸರ್ಕಾರ ಕೇಳುವುದೇ?
  • ಆಂಧ್ರದ ಮುಖ್ಯಮಂತ್ರಿ ಮನವಿ ಮಾಡಿದ ತಕ್ಷಣ ಅಲ್ಲಿಗೆ ಪೂರ್ವ ಗ್ರಿಡ್ ನಿಂದ 800 ಮೆಗಾ ವ್ಯಾಟ್ ವಿದ್ಯುತ್ ಪೂರೈಸಲು ಮುಂದಾಗುವ ಕೇಂದ್ರ ಕರ್ನಾಟಕದ ಮನವಿಗೆ ಸ್ಪಂದಿಸದಿರುವುದು ಏನು ತೋರಿಸುತ್ತೆ? ಒಕ್ಕೂಟದಲ್ಲಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಾದವರು ತಮ್ಮ  ಪಕ್ಷದ ಆಡಳಿತ ಇರುವ ರಾಜ್ಯದ ನೋವಿಗೆ ಮಾತ್ರ ಸ್ಪಂದಿಸುವುದು ಒಕ್ಕೂಟಕ್ಕೆ ಬಗೆಯುತ್ತಿರುವ ಅಪಚಾರವಲ್ಲವೇ? ಇದರ ಬಗ್ಗೆ ತಮ್ಮ ಸರ್ಕಾರದ ಗಮನ ತಾವುಗಳು ಯಾಕೆ ಸೆಳೆದಿಲ್ಲ?
  • ಓರಿಸ್ಸಾ, ಮಹಾರಾಷ್ಟ್ರಗಳಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳೊಣವೆಂದರೆ ಸರಿಯಾದ ರೈಲ್ವೇ ಮಾರ್ಗಗಳು ಇಲ್ಲದಿರುವುದೇ ಸಮಸ್ಯೆಯಾಗಿದೆ ಅನ್ನುವುದು ಶೋಭಾ ಕರಂದ್ಲಾಜೆಯವರ ಹೇಳಿಕೆ. ಹಾಗಿದ್ದಲ್ಲಿ, ರಾಜ್ಯದ ರೈಲ್ವೇ ಯೋಜನೆಗಳ ತ್ವರಿತ ಅನುಷ್ಟಾನಕ್ಕಾಗಿ ನಿಮ್ಮದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇದಕ್ಕಿಂತ ಒಳ್ಳೆಯ ಸಂದರ್ಭವುಂಟೇ?  
ಪರಸ್ಪರ ಕೆಸರೆರಚಾಟ, ರಾಜಕೀಯ ಮೇಲಾಟ ಬಿಟ್ಟು ಇನ್ನಾದರೂ ಒಂದು ಧ್ವನಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದ್ರೆ  ಕತ್ತಲಲ್ಲಿ ಕೈ ತೊಳೆಯುತ್ತಿರುವ ನಮ್ಮ ಜನರು, ಉದ್ದಿಮೆಗಳು, ರೈತರು, ವಿಧ್ಯಾರ್ಥಿಗಳು ಎಲ್ಲರೂ ನಿಟ್ಟುಸಿರು ಬಿಟ್ಟಾರು.  ಮಾಡ್ತಿರಾ ಅಧಿನಾಯಕರೇ, ದೊರೆಸಾನಿಗಳೇ?