ಗುರುವಾರ, ಮಾರ್ಚ್ 10, 2011

ವಿಶ್ವ ಕನ್ನಡ ಸಮ್ಮೇಳನ - ಏನಿದೆ, ಏನಿರಬೇಕಾಗಿತ್ತು?

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನೇನು ಹೊತ್ತು ಎಣಿಕೆ ಶುರುವಾಗಿದೆ. ನಾಟಕ, ಕವನ ವಾಚನ, ಗಮಕ ವಾಚನ, ಕುಣಿತ, ಹಾಡುಗಾರಿಕೆ ಸೇರಿದಂತೆ ನಾಡಿನ ಕಲೆ, ಸಂಸ್ಕೃತಿ ಪ್ರದರ್ಶನಕ್ಕೆ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅನ್ನುತ್ತೆ ಸಮ್ಮೇಳನದ ವೆಬ್ ಸೈಟ್ ಅಲ್ಲಿರೋ ಕರೆಯೋಲೆ. ಇದಲ್ಲದೇ, ಕೆಲವು ಒಳ್ಳೆಯ ವಿಷಯಗಳ ಬಗ್ಗೆ ಚರ್ಚಾ ಗೋಷ್ಟಿಯನ್ನು ಏರ್ಪಡಿಸಲಾಗಿದೆ ಅಂತಲೂ ಕಂಡೆ. ಕನ್ನಡ, ಕನ್ನಡಿಗ, ಕರ್ನಾಟಕ ಇತಿಹಾಸದಲ್ಲೆಂದೂ ಕಂಡಿರದಂತಹ ಸವಾಲುಗಳನ್ನು ಎದುರಿಸುತ್ತಿರುವ ಜಾಗತೀಕರಣದ ನಂತರದ ಈ ದಿನಗಳಲ್ಲಿ ಇಂತಹ ಸಮ್ಮೇಳನಗಳು ಹೆಚ್ಚಿನ ಮಹತ್ವ ಪಡೆದಿವೆ ಕೂಡಾ. ಈ ಸಮ್ಮೇಳನ ಕರ್ನಾಟಕದ, ಕನ್ನಡಿಗರ ನಾಳೆಗಳನ್ನು ಕಟ್ಟಲು ಆಗಬೇಕಾದ ಕೆಲಸಗಳ ಬಗ್ಗೆ, ಇವತ್ತು ನಾವೆಲ್ಲಿದೀವಿ, ಈ ದಿನ ನಮ್ಮೆದುರು ಇರುವ ಸವಾಲುಗಳೇನು, ನಾವು ಸಾಗಬೇಕಾದ ದಾರಿ ಯಾವುದು, ಎಂತದ್ದು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುವ, ಹೊಸ ದಿಕ್ಕು,ದೆಸೆ ನೀಡುವ ವೇದಿಕೆಯಾಗುತ್ತೆ ಅನ್ನುವುದು ನನ್ನ ನಿರೀಕ್ಷೆಯಾಗಿತ್ತು, ಆದರೆ ಕಾರ್ಯಕ್ರಮದ ಪಟ್ಟಿ ನೋಡಿದಾಗ ಕೆಲ ಮಟ್ಟಿಗೆ ನಿರಾಸೆಯಾಗಿದೆ ಅಂತಲೇ ಹೇಳಬೇಕು. ಜ್ಞಾನಾಧಾರಿತ ಹೊಸ ಜಗತ್ತಿನ ಸವಾಲುಗಳನ್ನು ಎದುರಿಸಿ ಗೆಲ್ಲಲು ಕನ್ನಡಿಗರ ಕಲಿಕೆ, ದುಡಿಮೆಯ ವ್ಯವಸ್ಥೆಗಳನ್ನು ಆದ್ಯತೆಯ ಮೇರೆಗೆ ಚೆನ್ನಾಗಿ ಕಟ್ಟಿಕೊಳ್ಳಬೇಕಾದ ತುರ್ತು ಅಗತ್ಯ ನಮ್ಮ ಮುಂದಿದೆ. ಆದರೆ ಕಾರ್ಯಕ್ರಮದ ಪಟ್ಟಿ ನೋಡಿದ್ರೆ, ಈ ಸಮ್ಮೇಳನ ಹೊಟ್ಟೆಗೆ ಹಿಟ್ಟಿನ ವಿಷಯಗಳಿಗಿಂತ ಹೆಚ್ಚು ಜುಟ್ಟಿನ ಮಲ್ಲಿಗೆಯ ವಿಷಯಗಳತ್ತಲೇ ಗಮನ ಹರಿಸಿದೆಯೆನೋ ಅನ್ನುವಂತಿದೆ !

ಏನಿದೆ?

ಹಾಗಂತ, ಸಮ್ಮೇಳನದಲ್ಲಿ ಪ್ರಯೋಜನವಾಗುವಂತಹ ವಿಷಯಗಳೇ ಇಲ್ಲ ಅಂತಿಲ್ಲ. ಜಾಗತೀಕರಣ, ಮಾರುಕಟ್ಟೆ ಮತ್ತು ಯುವಕರ ಮೇಲೆ ಬೀರಿರುವ ಪ್ರಭಾವದ ಬಗ್ಗೆ ಜಾಗತೀಕರಣ ಕರ್ನಾಟಕ ಅನ್ನುವ ಗೋಷ್ಟಿ, ಗಡಿನಾಡಲ್ಲಿರುವ ಕನ್ನಡಿಗರ ಶಿಕ್ಷಣ ಸವಾಲುಗಳು, ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಗಡಿನಾಡ ಕನ್ನಡಿಗರು ಅನ್ನುವ ಗೋಷ್ಟಿ, ಕನ್ನಡ ತಂತ್ರಾಂಶ, ವಿಜ್ಞಾನ ಶಿಕ್ಷಣದಂತಹ ವಿಷಯಗಳ ಬಗೆಗಿನ ಜ್ಞಾನ-ವಿಜ್ಞಾನ-ತಂತ್ರಜ್ಞಾನ-ಕರ್ನಾಟಕ ಅನ್ನುವ ಗೋಷ್ಟಿ, ಆಡಳಿತದಲ್ಲಿ ಕನ್ನಡ ಬಳಕೆ ಬಗೆಗಿನ ಕನ್ನಡ ಭಾಷಾ ಬಳಕೆ ಅನ್ನುವ ಗೋಷ್ಟಿ, ಕೃಷಿ ರಂಗ ಎದುರಿಸುತ್ತಿರುವ ಸವಾಲುಗಳ ಬಗೆಗಿನ ಕೃಷಿ-ಸಾಧನೆ ಸವಾಲು ಗೋಷ್ಟಿಗಳು ಈ ಕಾಲಮಾನಕ್ಕೆ ಪ್ರಸ್ತುತವೆನ್ನಿಸುವಂತಹ ಗೋಷ್ಟಿಗಳಾಗಿವೆ. ಇಲ್ಲಿ ಪಾಲ್ಗೊಳ್ಳುತ್ತಿರುವವರು ಅಷ್ಟೇ ಯೋಗ್ಯರು ಅನ್ನುವುದು ಕೂಡಾ ಗಮನಿಸಬೇಕಾದದ್ದು.

ಏನ್ ಇರಬೇಕಾಗಿತ್ತು ?

ಕವಿ ಗೋಷ್ಟಿ, ಹಾಸ್ಯ, ನಾಟಕ, ಸಂಗೀತದಂತಹ ವಿಷಯಗಳನ್ನು ಬಿಟ್ಟು ಚಿಂತನೆಗೆ ಹಚ್ಚುವ ಚರ್ಚಾ ಗೋಷ್ಟಿಗಳತ್ತ ನೋಡಿದಾಗ ಕಾಣೋದು ಸುಮಾರು 16 ಗೋಷ್ಟಿಗಳು. ಇವುಗಳಲ್ಲಿ ಕನ್ನಡಿಗರ ಭವಿಷ್ಯಕ್ಕೆ ಬುನಾದಿ ಹಾಕಬೇಕಾದ ಕಲಿಕೆಗೆ ಸಂಬಂಧಿಸಿದಂತೆ ಇರೋದು ಒಂದೇ ಒಂದು ಗೋಷ್ಟಿ, ಅದರಲ್ಲೂ ತಾಯ್ನುಡಿ ಶಿಕ್ಷಣದ ಮಹತ್ವ, ಇವತ್ತು ಅದು ಯಾವ ಹಂತದಲ್ಲಿದೆ, ಜಾಗತೀಕರಣದ ಸ್ಪರ್ಧೆಗೆ ಸಜ್ಜುಗೊಳಿಸಲು ಅದರಲ್ಲಿ ಆಗಬೇಕಾದ ಸುಧಾರಣೆಗಳೇನು, ಬದುಕಿನ ಎಲ್ಲ ಹಂತದ ವಿದ್ಯೆಯನ್ನು ಕನ್ನಡದಲ್ಲಿ ತರಲು ಆಗಬೇಕಾದ ಕೆಲಸಗಳೇನು ಅನ್ನುವ ವಿಷಯವೇನೂ ಚರ್ಚೆಯ ಅಜೆಂಡಾದಲ್ಲಿ ಇಲ್ಲ.  ಜಗತ್ತಿನ ಮುಂಚೂಣಿಲ್ಲಿರುವ ಎಲ್ಲ ದೇಶಗಳು ತಮ್ಮ ಏಳಿಗೆಗೆ ಏಣಿಯಾಗಿಸಿಕೊಂಡಿರುವುದು ತಮ್ಮ ತಾಯ್ನುಡಿಯನ್ನು. ಮಕ್ಕಳ ಬುದ್ದಿ ವಿಕಾಸಕ್ಕೆ ತಾಯ್ನುಡಿ ಕಲಿಕೆಗಿಂತ ಒಳ್ಳೆಯ ಹಾದಿಯಿಲ್ಲ ಅನ್ನುವುದನ್ನು ಜಗತ್ತು ಸಾರಿ ಸಾರಿ ಹೇಳಿದೆ. ತಮ್ಮ ತಮ್ಮ ತಾಯ್ನುಡಿಯನ್ನು ಜಾಗತೀಕರಣದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಿದ ಎಲ್ಲ ದೇಶಗಳು ಏಳಿಗೆ ಸಾಧಿಸಿ ಮುನ್ನಡೆದಿದ್ದರೆ, ಅಂತಹದೊಂದು ಕನಸು ಕಾಣುವುದೇ ಅಪರಾಧ, ಅದು ಎಂದಿಗೂ ಸಾಧ್ಯವಿಲ್ಲ ಅನ್ನುವ ಆತ್ಮಹತ್ಯಾ ಭಾವ ಆವರಿಸಿಕೊಂಡಿರುವ ಭಾರತದಂತಹ ದೇಶ, ಏಳಿಗೆ ಹೊಂದಿರುವ ದೇಶದ ಬ್ಯಾಕ್ ಆಫೀಸ್ ನಂತೆ ಕೆಲಸ ಮಾಡುತ್ತ ಒಂದಿಷ್ಟು ಸರ್ವಿಸಸ್ ನ ಪುಡಿಗಾಸು ಸಂಪಾದಿಸಿಕೊಂಡು, ಅದನ್ನೇ ಏಳಿಗೆ ಎಂದು ನಂಬಿ, ಸಮಾಜವನ್ನು ನಂಬಿಸುವಂತಹ ದಡ್ಡತನ ತೋರಿಸುತ್ತಿದೆ. ಹೀಗೆ ಹುಟ್ಟುತ್ತಿರುವ ಪುಡಿಗಾಸಿಗೆ ಕಾರಣವಾಗಿರುವ ಇಂಗ್ಲಿಷ್ ಒಂದೇ ನಮ್ಮನ್ನು ನಮ್ಮ ಬಡತನದಿಂದ, ದಾರಿದ್ರ್ಯದಿಂದ, ಕಷ್ಟದಿಂದ ಪಾರು ಮಾಡುವ ಕಾಮಧೇನು ಅನ್ನುವ ಕೆಲವು ಪ್ರಭಾವಿಗಳ ನಂಬಿಕೆಗಳು ತಾಯ್ನುಡಿ ಶಿಕ್ಷಣವನ್ನು ಮೇಲೆತ್ತುವ, ಅದರಲ್ಲಿ ಅನ್ನದ ವಿದ್ಯೆ ತರುವ, ಆ ಮೂಲಕ ಒಳ್ಳೆಯ ದುಡಿಮೆ ಹುಟ್ಟಿಸುವ ವ್ಯವಸ್ಥೆಗೆ ಅಡಿಪಾಯ ಹಾಕಬೇಕಿದ್ದ ಸರ್ಕಾರದ ದಿಕ್ಕು ತಪ್ಪಿಸುತ್ತಿದೆ ಅಂದರೆ ತಪ್ಪಾಗದು.

ಕನ್ನಡ ನುಡಿಯ ಯೋಗ್ಯತೆ ಹೆಚ್ಚಿಸುವುದು ಯಾವಾಗ?
ಇನ್ನೂ ಕನ್ನಡ ನುಡಿಯಲ್ಲಾಗಬೇಕಾದ ಸುಧಾರಣೆ ಬಗ್ಗೆಯೂ ಯಾವ ಚರ್ಚೆಯೂ ಏರ್ಪಟ್ಟಿಲ್ಲ. ಜ್ಞಾನ-ವಿಜ್ಞಾನದ ಸಾರವನ್ನು ಕನ್ನಡಿಗರಿಗೆ ಕನ್ನಡದಲ್ಲೇ ತರಲು ನಮ್ಮ ನುಡಿ ಸಿದ್ಧವಾಗಿದೆಯೇ? ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ಹಂತದಲ್ಲೂ ಹಂತ ಹಂತವಾಗಿ ಒಳ್ಳೆಯ ಕಲಿಕೆ ತರಲು ನಮ್ಮ ನುಡಿಯ ಸುತ್ತ ಭಾಷಾ ವಿಜ್ಞಾನದ ಕಣ್ಣಿನಿಂದ ಆಗಬೇಕಾದ ಕೆಲಸಗಳೇನು? ಇಂತಹ ಕೆಲಸಗಳಿಗೆ ಹೆಚ್ಚು ಹೆಚ್ಚು ಪ್ರತಿಭಾವಂತ ಹುಡುಗರನ್ನು ಸೆಳೆಯುವುದು ಹೇಗೆ? ಅಂತಹದೊಂದು ವಾತಾವರಣ (eco-system) ಕಟ್ಟುವುದರಲ್ಲಿ ಸರ್ಕಾರದ, ವಿಶ್ವವಿದ್ಯಾಲಯಗಳ, ಶಿಕ್ಷಣ ತಜ್ಞರ, ಭಾಷಾ ವಿಜ್ಞಾನಿಗಳ ಪಾತ್ರವೇನು ಅನ್ನುವ ಬಗ್ಗೆ ಚರ್ಚೆ ನಡೆದಿದ್ದಲ್ಲಿ, ಕನ್ನಡಕ್ಕೆ ಇವತ್ತು ಇಲ್ಲದಿರುವ ಕೆಲವು ಯೋಗ್ಯತೆ ತಂದು ಕೊಡುವ ಬಗ್ಗೆ ನಿಜವಾದ ಅರ್ಥದಲ್ಲಿ ಕೆಲಸ ಶುರುವಾಗಿದೆ ಅನ್ನಬಹುದಿತ್ತು. ನಮ್ಮ ನುಡಿಗೆ ಯೋಗ್ಯತೆ ತಂದುಕೊಡದೇ ನಮ್ಮ ವೈಫಲ್ಯತೆಗೆ ಜಾಗತೀಕರಣವನ್ನು ಬೈದು ಏನು ಪ್ರಯೋಜನವಾಗದು.

ಉದ್ದಿಮೆಗಾರಿಕೆ ಹೆಚ್ಚಿಸುವುದು ಹೇಗೆ?
ಉದ್ಯಮಿ ನಾರಾಯಣ ಮೂರ್ತಿಯವರನ್ನು ಕರೆಸುತ್ತಿರುವುದದಿಂದ ಚರ್ಚಾ ಗೋಷ್ಟಿಗಳಲ್ಲಿ ಉದ್ದಿಮೆಗಾರಿಕೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆನೋ ಅಂದುಕೊಂಡಿದ್ದೆ. ಉದ್ಯಮಿಯೊಬ್ಬರು ಈ ಸಭೆಗೆ ಚಾಲನೆ ನೀಡುತ್ತಿರುವುದದಿಂದ ಉದ್ದಿಮೆಗಾರಿಕೆ, ಉದ್ಯಮಿಗಳಾಗುವುದು, ಉದ್ಯಮಗಳನ್ನು ಕಟ್ಟುವುದು ಹೀಗೆ ಉದ್ದಿಮೆಗಾರಿಕೆಯ ನಾನ ಮಝಲನ್ನು ಮುಟ್ಟುವ, ಕನ್ನಡಿಗರಲ್ಲಿ ಈ ಕೊರತೆಯನ್ನು ನೀಗಿಸುವ ಬಗ್ಗೆ ಚರ್ಚೆ ನಡೆಸುವ ಅವಕಾಶವಿತ್ತು. ಗೋಷ್ಟಿಗಳ ಪಟ್ಟಿ ನೋಡಿದಾಗ ಈ ಬಗ್ಗೆ ಗಮನ ಕೊಟ್ಟ ಹಾಗಿಲ್ಲ.

ನಾಳೆ ನಮ್ಮದಾಗಲಿ
ಕನ್ನಡವೆಂದರೆ ಬರೀ ಸಾಹಿತ್ಯ, ಸಂಗೀತ, ನಾಟಕ,ಸಿನೆಮಾ ಅನ್ನುವ ಜುಟ್ಟಿನ ಮಲ್ಲಿಗೆಗೆ ಸೀಮಿತವಾಗಿರುವಾಗ, ಅದರಲ್ಲೂ ಬದುಕಿನ ವಿದ್ಯೆಗಳನ್ನು ತರಬಹುದು, ಅದರಲ್ಲೂ ಅನ್ನ ಹುಟ್ಟಿಸಬಹುದು ಅನ್ನುವುದನ್ನು ಸಾಧಿಸಿ ತೋರಿಸುವ ಹೊಣೆಗಾರಿಕೆ ಕನ್ನಡದ ಬಗ್ಗೆ ಕನಸು ಕಾಣುವ ಎಲ್ಲ ಕನ್ನಡದ ಯುವಕರ ಮುಂದಿದೆ. ಇವತ್ತಿನ ವ್ಯವಸ್ಥೆಯನ್ನು ಅಲ್ಲಗಳೆಯದೆಲೆ ಇಂದಿನ ವ್ಯವಸ್ಥೆಯ ಸಾರವನ್ನು ಹೀರಿಕೊಂಡೇ ನಾಳೆ ಕನ್ನಡದಲ್ಲೂ ಈಗಿರುವುದಕ್ಕಿಂತಲೂ ಅದ್ಭುತವಾದ ವ್ಯವಸ್ಥೆ ಕಟ್ಟುವ ಕೆಲಸವಾಗಬೇಕಿದೆ. ಇಂದಿರುವ ವ್ಯವಸ್ಥೆಯನ್ನು ಚಿಮ್ಮುಹಲಗೆಯಾಗಿಸಿಕೊಂಡೇ ಆಗಸಕ್ಕೆ ನೆಗೆಯುವ ಕನಸು ಕಾಣಬೇಕಿದೆ. ಅದಾಗದೇ ಎಷ್ಟು ಸಮ್ಮೇಳನ, ಸಭೆ ಮಾಡಿದರೂ ಕನ್ನಡ ಮುಂದಾಗದು.

2 ಕಾಮೆಂಟ್‌ಗಳು:

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !