ಸೋಮವಾರ, ಫೆಬ್ರವರಿ 21, 2011

ರಾಜ್ಯಸಭೆಗೆ ಕನ್ನಡೇತರರು - ಎಷ್ಟು ಸರಿ ?

ರಾಜ್ಯ ಸಭೆ ಸದಸ್ಯರಾದ ರಾಜಶೇಖರ್ ಮೂರ್ತಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಹಿಂದಿ ನಟಿ ಹೇಮಾಮಾಲಿನಿ ಅನ್ನುವವರ ಹೆಸರನ್ನು ಬಿಜೆಪಿಯ ಹೈಕಮಾಂಡ್ ತೀರ್ಮಾನಿಸಿದೆ ಅನ್ನುವ ಸುದ್ದಿ ನಿನ್ನೆ ಪತ್ರಿಕೆಗಳಲ್ಲಿ, ಟಿವಿಯಲ್ಲಿ ನೋಡಿದೆ. ಹೀಗೆ ಕನ್ನಡ, ಕರ್ನಾಟಕಕ್ಕೆ ಯಾವ ಕೊಡುಗೆಯನ್ನು ನೀಡದ, ಯಾವ ಸೇವೆಯನ್ನು ಮಾಡದ, ಕನ್ನಡಿಗರ ಬದುಕಿನ ಯಾವ ಸಮಸ್ಯೆಗಳ ಬಗ್ಗೆಯೂ ಒಂದಿನಿತು ಅರಿವಿಲ್ಲದ ಒಬ್ಬ ಮಾಜಿ ಚಿತ್ರ ನಟಿ, ಈ ರೀತಿ ರಾಜ್ಯ ಸಭೆ ಅನ್ನುವ ಒಕ್ಕೂಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲೆಂದೇ ಹುಟ್ಟಿದ ವ್ಯವಸ್ಥೆಗೆ, ಆಯ್ಕೆಯಾಗುವುದನ್ನು ನೋಡಿದಾಗ ಈ ರಾಜ್ಯಸಭೆ ಅನ್ನುವ ವ್ಯವಸ್ಥೆಯ ಅರ್ಥವಾದರೂ ಏನು? ಅದು ಯಾಕಾಗಿ ಬೇಕಾಗಿದೆ ಅನ್ನುವ ಪ್ರಶ್ನೆ ಮನದಲ್ಲಿ ಹುಟ್ಟಿತು.

ರಾಜ್ಯ ಸಭೆ ಹುಟ್ಟಿದ್ದು ಯಾಕೆಂದು ಗೊತ್ತೇ?

ರಾಜ್ಯಸಭೆ ಅನ್ನುವುದು ಮಾಂಟೆಗೊ-ಚೆಮ್ಸಫರ್ಡ್ ಅನ್ನುವ ಬ್ರಿಟಿಷ್ ಸರ್ಕಾರದ ಅಧಿಕಾರಿಗಳ ವರದಿಯನ್ನಾಧರಿಸಿ 1918ರಲ್ಲಿ ಹುಟ್ಟಿದ ವ್ಯವಸ್ಥೆ. ಸ್ವಾತಂತ್ರ್ಯ ಬಂದ ನಂತರ ಲೋಕಸಭೆ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯಸಭೆ ಅನ್ನುವ Council of States ಮುಂದುವರೆಯಬೇಕೇ, ಅದರ ಅಗತ್ಯ ಇದೆಯೇ ಅನ್ನುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆದಿತ್ತು. ಭಾರತದಂತ ಹೆಜ್ಜೆ ಹೆಜ್ಜೆಗೂ ವೈವಿಧ್ಯತೆಯುಳ್ಳ ದೇಶಕ್ಕೆ ಒಕ್ಕೂಟ ವ್ಯವಸ್ಥೆಯೇ ಸರಿಯಾದ ವ್ಯವಸ್ಥೆ ಅಂಬುದನ್ನು ಅಂದಿನ ರಾಜಕೀಯ ನಾಯಕರು ಒಪ್ಪಿ ಭಾರತವನ್ನು ಒಂದು ಒಕ್ಕೂಟ ವ್ಯವಸ್ಥೆಯೆಂದೇ ಘೋಷಿಸಿದ್ದರು. ಜನರಿಂದಲೇ ನೇರವಾಗಿ ಆಯ್ಕೆಯಾಗುವ ಲೋಕಸಭೆಯೊಂದಕ್ಕೆ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದು, ಆದ್ದರಿಂದ ರಾಜ್ಯಸಭೆ ಅನ್ನುವ ಪ್ರತಿ ರಾಜ್ಯದ ಜನ ಪ್ರತಿನಿಧಿಗಳಿಂದಲೇ ಆಯ್ಕೆಯಾಗಿ ಬರುವ ವಿಶೇಷ ಪ್ರತಿನಿಧಿಗಳ ಸಂಸ್ಥೆಯನ್ನು ಲೋಕಸಭೆಗೆ complimentory ಎಂಬಂತೆ ಇಟ್ಟುಕೊಳ್ಳಲಾಯಿತು. ಅದರ ಸ್ಥಾಪಿತ ಉದ್ದೇಶವನ್ನು ರಾಜ್ಯಸಭೆಯ ವೆಬ್ ಸೈಟ್ ಹೀಗೆ ಬಣ್ಣಿಸುತ್ತೆ (ಕೆಳಗೆ ಕೆಲ ಅಂಶಗಳನ್ನು ನಾನೇ ಹೈಲೈಟ್ ಮಾಡಿದ್ದೇನೆ)
Extensive debate took place in the Constituent Assembly regarding the utility or otherwise of a Second Chamber in Independent India and ultimately, it was decided to have a bicameral legislature for independent India mainly because a federal system was considered to be most feasible form of Government for such a vast country with immense diversities.  A single directly elected House, in fact, was considered inadequate to meet the challenges before free India.  A second chamber known as the ‘Council of States’, therefore, was created with altogether different composition and method of election from that of the directly elected House of the People.  It was conceived as another Chamber, with smaller membership than the Lok Sabha (House of the People).  It was meant to be the federal chamber i.e., a House elected by the elected members of Assemblies of the States and two Union Territories in which  States were not given equal representation.
ಲೋಕಸಭೆಯಲ್ಲಿ ಕೈಗೊಳ್ಳುವ ತೀರ್ಮಾನವನ್ನು ಪರಿಶೀಲಿಸಲು, ಪ್ರಜೆಗಳ ಅನುಕೂಲಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಸೂಚಿಸುವ ಅಧಿಕಾರ ರಾಜ್ಯಸಭೆಗಿದೆ. ಅಷ್ಟರ ಮಟ್ಟಿಗೆ ಅದರ ಸ್ಥಾಪಿತ ಉದ್ದೇಶ ಜನರ ಕಲ್ಯಾಣಕ್ಕಾಗಿ ರೂಪಿಸುವ ಎಲ್ಲ ಯೋಜನೆಗಳನ್ನು, ಅದರ ಅನುಷ್ಟಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದಾಗಿದೆ ಅನ್ನಬಹುದು.

ಎಲ್ಲ ಸರಿ, ಆದರೆ ಇಂದು ನಡೆಯುತ್ತಿರುವುದಾದರೂ ಏನು?
ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಧರ್ಮವನ್ನು ಸರಿಯಾಗಿ ಪಾಲಿಸಲೆಂದೇ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆಯಲ್ಲಿ ಇಂದು ನಡೆಯುತ್ತಿರುವುದು ಏನು? ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯವೂ ತನ್ನ ನೆಲದ ಸಮಸ್ಯೆಗಳಿಗೆ ಕೇಂದ್ರದಿಂದ ಅರ್ಹವಾಗಿ ಸಿಗಬೇಕಾದ ಪರಿಹಾರ,ನೆರವು, ಅನುದಾನಕ್ಕಾಗಿ ಲೋಕಸಭೆ,ರಾಜ್ಯಸಭೆಯತ್ತ ನೋಡುತ್ತವೆ. ಎರಡೂ ಕಡೆಗಳಲ್ಲೂ ಆಯಾ ರಾಜ್ಯದ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಇದ್ದು, ಆ ಸಮಸ್ಯೆಗಳಿಗೆ ಪರಿಹಾರವೇನು, ಅದರಲ್ಲಿ ಕೇಂದ್ರ ಸರ್ಕಾರದಿಂದ ಆಗಬೇಕಾದ ಕೆಲಸಗಳೇನು ಅನ್ನುವುದರ ಅರಿವಿರುವ ಜನರು ಸದಸ್ಯರಾಗಿದ್ದಲ್ಲಿ, ಅವರು ಸಮರ್ಥರಾಗಿ ಧ್ವನಿ ಎತ್ತಿದಲ್ಲಿ ಅವುಗಳಿಗೆ ತಕ್ಕ ಪರಿಹಾರ ದೊರಕುತ್ತೆ. ಹೀಗಿರುವಾಗ ಕರ್ನಾಟಕದ ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡದ, ಇಲ್ಲಿನ ಸಮಸ್ಯೆ, ದುಃಖ-ದುಮ್ಮಾನಗಳನ್ನು ಹತ್ತಿರದಿಂದೆಲೂ ನೋಡದ ಯಾವುದೋ ಚಿತ್ರನಟಿಯೊಬ್ಬರನ್ನು ಕರೆತಂದು ಸದಸ್ಯರಾಗಿಸುವುದು ಒಕ್ಕೂಟ ವ್ಯವಸ್ಥೆಯನ್ನೇ ಅಣಕ ಮಾಡುವಂತಹ ತಪ್ಪೆನಿಸುವುದಿಲ್ಲವೇ? ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೆಂದೇ ರಾಜ್ಯ ಸಭೆ ಇರುವುದಲ್ಲವೇ? ಹೇಮಾ ಮಾಲಿನಿ ಕಲಾವಿದೆ, ಕಲೆಗೆ ಭಾಷೆಯ ಹಂಗಿಲ್ಲ ಅನ್ನುವವರು ಅರ್ಥ ಮಾಡಿಕೊಳ್ಳಬೇಕಿರುವುದು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯಸಭೆಯಂತ ವೇದಿಕೆ ಇರುವುದೇ ಹೊರತು, ಯಾವುದೋ ನಿವೃತ್ತ ನಟಿಮಣಿಯರಿಗೆ, ಇಲ್ಲವೇ ವ್ಯಾಪಾರಿಗಳಿಗೆ rehabilitation ಕಲ್ಪಿಸುವ ಆಶ್ರಯ ಕೇಂದ್ರ ಇದಲ್ಲ ಅನ್ನುವುದು.

ಕಾನೂನು ಬದಲಾಯಿಸಿದ್ದು ಎನ್.ಡಿ.ಎ
ಈ ಮೊದಲು ಹೀಗಿರಲಿಲ್ಲ. ರಾಜ್ಯಸಭೆಗೆ ಆಯಾ ರಾಜ್ಯದ ಮತದಾರರ ಪಟ್ಟಿಯಲ್ಲಿರುವ ಮತದಾರರು ಮಾತ್ರವೇ ಆಯಾ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಬಹುದು ಅನ್ನುವ ಕಟ್ಟಳೆಯಿತ್ತು. ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರ ರಾಜ್ಯಸಭೆಯ ಆಯ್ಕೆ ಮಾನದಂಡವನ್ನು ತಿಳಿಸುವ ಪೀಪಲ್ಸ್ ರೆಪ್ರಸೆಂಟೇಟಿವ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಆಯಾ ರಾಜ್ಯದವರೇ ಆಗಿರಬೇಕು ಅನ್ನುವ ಕಾನೂನು ತೆಗೆದು ರಾಜ್ಯಸಭೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು ಅನ್ನುವ ಬದಲಾವಣೆ ತಂದಿತು. ಆ ತಿದ್ದುಪಡಿ ಇಲ್ಲಿದೆ (ಪುಟ 4 ಅನ್ನು ಗಮನಿಸಿ,ಕೆಳಗೆ ಕೆಲ ಅಂಶಗಳನ್ನು ನಾನೇ ಹೈಲೈಟ್ ಮಾಡಿದ್ದೇನೆ)
In order to be chosen a member of Rajya Sabha, a person (a) must be a citizen of India, (b) must not be less than 30 years of age. Under the Representation of the People Act, 1951, a person had to be an elector in a parliamentary constituency in the State from where he seeks election to Rajya Sabha. It may, however, be mentioned that the Representation of the People (Amendment) Act, 2003, which amended Section 3 of the Representation of the People Act, 1951, has done away with the requirement of being a resident of State or Union territory from which a person seeks to contest elections to Rajya Sabha.
ಇವತ್ತು ಅದೇ ಪಕ್ಷದ ಸರ್ಕಾರ ಕರ್ನಾಟಕದಿಂದ ವೆಂಕಯ್ಯನಾಯ್ಡುವಿನ ನಂತರ ಹೇಮಾಮಾಲಿನಿಯೆಂಬ ಕನ್ನಡೇತರರನ್ನು ಕರ್ನಾಟಕದ ಪ್ರತಿನಿಧಿಗಳಾಗಿ ರಾಜ್ಯಸಭೆಗೆ ಕಳಿಸುತ್ತಿದೆ. ಬಿ.ಜೆ.ಪಿಯ ಧನಂಜಯ್ ಕುಮಾರ್ ದೆಹಲಿಯ ಕರ್ನಾಟಕ ಪ್ರತಿನಿಧಿಯಾಗಿ ಸುಮಾರು ಸಮಯದಿಂದ ಕೆಲಸ ಮಾಡಿಕೊಂಡಿದ್ದರು. ಇನ್ನೂ ಹಲವು ಯೋಗ್ಯ ಕನ್ನಡಿಗರು ಬಿಜೆಪಿಯ ಪಾಳೆಯದಲ್ಲಿ ಇದ್ದಾಗಲೂ ಹೈಕಮಾಂಡ್ ಅನ್ನುವ ಶಾನುಭೋಗ ಕೊಡುವ ಪತ್ರಕ್ಕೆ ಹೆಬ್ಬೆಟ್ಟೆತ್ತುವ ಗಮಾರನಂತೆ ನಡೆದುಕೊಳ್ಳುವ ರಾಜ್ಯದ ನಾಯಕರು ಎಂದಿಗಾದರೂ ಈ ನಾಡಿನ, ಈ ಜನರ ಸಮಸ್ಯೆಗಳಿಗೆ ಸ್ಪಂದಿಸಿಯಾವಾ ? ಬರೀ ಭಾಷಾ ಅಲ್ಪಸಂಖ್ಯಾತರನ್ನು ಒಲೈಸುವುದರಲ್ಲೇ ತಮ್ಮ ಮತಬ್ಯಾಂಕ್ ರಾಜಕೀಯ ಮಾಡುವ ರಾಷ್ಟ್ರೀಯ ಪಕ್ಷಗಳಿಗೆ  ಕನ್ನಡ, ಕನ್ನಡಿಗ ಅನ್ನುವುದು ಎಂದಿಗಾದರೂ ಒಂದು ಗಂಭೀರ ವಿಷಯ ಅನ್ನಿಸಿತಾ ಅನ್ನೋ ಪ್ರಶ್ನೆ ಬಿಟ್ಟು ಬಿಡದೇ ಕಾಡುತ್ತೆ. ಏನಂತೀರಾ ಗೆಳೆಯರೇ?

7 ಕಾಮೆಂಟ್‌ಗಳು:

  1. ಇದು ಕೋತಿ ಬೆಣ್ಣೆ ತಿಂದು ಮೇಕೆ ಮೂತಿಗೆ ವರೆಸಿದ ಕಥೆ.....ನಾಡು, ನುಡಿ, ಜಲದ ಬಗ್ಗೆ ಗೊತ್ತಿರುವ ನಮ್ಮ ನಾಯಕರೆ ಏನು ಮಾತದುವುದಿಲ್ಲ ಇನ್ನೂ..ಎಲ್ಲೋ ದೂರದ, ಬರಿ ತಳುಕು, ಬಳುಕು ಪ್ರಪಂಚದಲ್ಲಿ ಮೆರೆದು ಮರೆಯಾಗುತ್ತಿರುವ ಈ ಪ್ರತಿನಿಧಿಗಳಿಂದ ಒಳ್ಳೆಯದು ಆಗುವುದು, ಬಯಸುವುದು, ಕಾಗದದ ಅಂಗಡಿಯಲ್ಲಿ ಮೇಣ ಕೇಳಿದಂತೆ...

    ಒಳ್ಳೆಯ ವಿಷಯ, ಸೂಕ್ತ ರೀತಿಯಲ್ಲಿ ಪ್ರಚುರ ಪಡಿಸಿರುವ ನಿಮ್ಮ ಪ್ರಯತ್ನಕ್ಕೆ ಹಾರೈಕೆಗಳು.

    ಪ್ರತ್ಯುತ್ತರಅಳಿಸಿ
  2. ಎಲ್ಲರು ಯೋಚನೆ ಮಾಡಬೇಕಾದ ವಿಚಾರ, ಹೇಗಾದರೂ ಮಾಡಿ ಅವರು ಆಯ್ಕೆ ಮಾಡಿರುವ ವ್ಯಕ್ತಿಯನ್ನ ಬದಲಿಸಿ, ಕನ್ನಡ, ಕರ್ನಾಟಕದ ಪ್ರತಿನಿಧಿಗಳಿಗೆ ಮಾನ್ಯತೆ ಸಿಕ್ಕರೆ ತುಂಬಾ ಅನುಕೂಲಕರವಾದೀತು..!! ಈ ವಿಚಾರ ಎಲ್ಲರ ಗಮನಕ್ಕೆ ತಂದಿದ್ದು ಒಳ್ಳೆಯದು ವಸಂತ್ ..!!

    ಪ್ರತ್ಯುತ್ತರಅಳಿಸಿ
  3. ಇದೇನು ಮೊದಲ ಸಲ ಅಲ್ಲ. ಹಿಂದೆ ವೆಂಕಯ್ಯ ನಾಯ್ಡು ಅವರೂ ಕರ್ನಾಟಕದಿಂದಲೇ ರಾಜ್ಯಸಭೆಗೆ ಆರಿಸಿ ಹೋಗಿದ್ರು.
    ತಮ್ಮ ಕುರ್ಚಿಗಾಗಿ ಹಠ ಹಿಡಿಯೋ ಯಡಿಯೂರಪ್ಪ ರಾಜ್ಯದ ಒಳಿತಿಗಾಗಿ ಈ ಸಾರಿಯೂ ರಗಳೆ ಮಾಡಬಹುದಿತ್ತು.
    ಕನ್ನಡ ಜನ ಸೌಮ್ಯ ಸ್ವಭಾವದವರು ಅಂತ ದುರುಪಯೋಗ ಪಡೆದುಕೊಳ್ಳುತ್ತಾರೆ.

    ಪ್ರತ್ಯುತ್ತರಅಳಿಸಿ
  4. ಕನ್ನಡಿಗರನ್ನು ಪ್ರತಿನಿಧಿಸುವ ಕರ್ನಾಟಕದ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಮಾತ್ರ ಇದಕ್ಕೆ ತದ್ವಿರುದ್ದವಾಗಿರುವುದು ವಿಪರ್ಯಾಸ. ಪದೇ ಪದೇ ಕರ್ನಾಟಕದಿಂದ ರಾಜ್ಯಸಭೆ ಪ್ರತಿನಿಧಿಸುತ್ತಿದ್ದರೂ ಕನ್ನಡ ಮಾತಾಡಲು ಕಲಿಯಬೇಕು ಅನ್ನಿಸಿರದೇ, ಇಂದಿಗೂ ಕನ್ನಡ ಕಲಿಯದೇ ಇರುವವರು. ಅಧಿವೇಶನಗಳಲ್ಲಿ ಸರಿಯಾಗಿ ಭಾಗವಹಿಸಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಶ್ನೆ ಎತ್ತದವರು, ರಾಜಕೀಯದ ಮೂಲಕ ತಮ್ಮ ಉದ್ದಿಮೆಯ ಹಿತರಕ್ಷಣೆಗೆ ಹಣ ಚೆಲ್ಲಿ ಸದಸ್ಯತ್ವ ಗಳಿಸುತ್ತಿರುವವರು, ನಾನು ರಾಷ್ಟ್ರೀಯ ನಾಯಕ- ಲೋಕಲ್ ವಿಷಯಕ್ಕೂ ನನಗೂ ಸಂಬಂಧವಿಲ್ಲಾ ಎನ್ನುವವರನ್ನು ನಾವು ನಮ್ಮ ರಾಜ್ಯಸಭೆ ಸದಸ್ಯರನ್ನಾಗಿ ಕಂಡಿರುವುದು ದುರದೃಷ್ಟಕರ.


    ಈಗ ಬಿಜೆಪಿ ಹೇಮಮಾಲಿನಿಗೆ ಮಣೆ ಹಾಕಿದೆ. ಅವರು ಭಾರತೀಯರಲ್ಲವೇ ಎಂದು ಅವರ ನಾಯಕರೊಬ್ಬರು ಸಮರ್ಥಿಸಿದ್ದಾರೆ ಬೇರೆ! ಹೇಮಮಾಲಿನಿ ಆಯ್ಕೆಯ ಮೂಲಕ ಬಿಜೆಪಿ ಬಯಸುತ್ತಿರುವುದು ಕನ್ನಡ-ಕನ್ನಡಿಗ-ಕರ್ನಾಟಕದ ಹಿತವಲ್ಲ ಬದಲಿಗೆ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಮುಂಬರುವ ಚುನಾವಣೆ ಪ್ರಚಾರಕ್ಕೆ ಬಳಸುವ ಸಾಧನವಾಗಿ.

    ರಾಷ್ಟ್ರೀಯ ಪಕ್ಷವಾದ ಭಾರತೀಯ ಜನತಾ ಪಕ್ಷವು ಕರ್ನಾಟಕದಲ್ಲಿ ಶಾಸಕರನ್ನೂ, ಸಂಸದರನ್ನೂ, ಕಾರ್ಯಕರ್ತರನ್ನೂ ಹೊಂದಿದ್ದೂ ಕನ್ನಡಿ ಗನೊಬ್ಬ ರಾಜ್ಯಸಭೆ ಪ್ರವೇಶಿಸಲು ಅರ್ಹನಾಗಿಲ್ಲ ಎಂದು ಹೇಮಮಾಲಿನಿ ಆಯ್ಕೆಯ ಮೂಲಕ ಸಾಬೀತು ಮಾಡಿದೆ. ನಮ್ಮ ಪ್ರಜಾಪ್ರಭುತ್ವ, ಸಂವಿಧಾನ, ಅದರ ಆಶಯಗಳು, ಆ ಆಶಯಗಳನ್ನು ಪೂರೈಸಲೆಂದೇ ರೂಪಿತವಾಗಿರುವ ರಾಜ್ಯಸಭೆ ಮೂಲಕ ಕರ್ನಾಟಕದ ಹಿತ ಕಾಪಾಡುವುದನ್ನು ಅವರು ಮರೆತಿರುವುದು ವಿಷಾದಕರ.

    ಪ್ರತ್ಯುತ್ತರಅಳಿಸಿ
  5. ಇದು ನಮ್ಮ ಕರ್ಮ ಅಷ್ಟೇ. ಕೇವಲ ರಾಜ್ಯಸಭೆ ಅಲ್ಲ ಲೋಕಸಭೆಗೂ ಇನ್‌ನ್ನೊಂದಿಷ್ಟು ದಿನದಲ್ಲಿ ಕನ್ನಡೇತರರೂ ಆರಿಸಿ ಬಂದರು ಬರಬಹುದು. ಕನ್ನಡ ನಾಡಿನಲ್ಲಿ ಮಾತ್ರ ಇದು ಸಾಧ್ಯ.

    ಬೇಸರವಾಗುತ್ತೆ.

    ಪ್ರತ್ಯುತ್ತರಅಳಿಸಿ
  6. Karnatakadantaha nadu bahala vicharavantarige tavaru. Ellarannu bittu horagade inda karetaruva agatya eenide? Hmm. Central alli party president de ee gati aagiruvaaga, rajdaddu eenu doddadalla bidi

    ಪ್ರತ್ಯುತ್ತರಅಳಿಸಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !