ಮಂಗಳವಾರ, ಅಕ್ಟೋಬರ್ 8, 2013

ಡಿಯರ್ ದೆಹಲಿ, ತೆಲುಗರನ್ನು ಅವರ ಪಾಡಿಗೆ ಇರಲು ಬಿಡಿ !

ಮುಖ್ಯಮಂತ್ರಿಯಾಗಬೇಕು ಅನ್ನುವ ಹುಚ್ಚಿನ ಕೆಲವು ರಾಜಕಾರಣಿಗಳು ಹಚ್ಚಿದ ಬೆಂಕಿಗೆ ಇಡೀ ತೆಲುಗು ದೇಶವೇ ಒಡೆದ ಮನೆಯಾಗಿದೆ. ಕಳೆದ 70 ದಿನಗಳಿಂದ ಆಂಧ್ರಪ್ರದೇಶದಲ್ಲಿ ಜನಜೀವನ ದಿಕ್ಕೆಟ್ಟಿದೆ. ತೆಲಂಗಾಣದ ಪರ ವಿರೋಧವಿರುವ ಎಲ್ಲರಿಗೂ ಸಮಾಧಾನ ತರುವಂತಹ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತಹ ಯಾವುದೇ ಕ್ರಮ ಕೈಗೊಳ್ಳದೇ, 2014ರಲ್ಲಿ ತೆಲಂಗಾಣ ರಾಜ್ಯದ ಹೆಸರಲ್ಲಿ  ಎಷ್ಟು ಎಮ್.ಪಿ ಸೀಟು ಗೆಲ್ಲಬಹುದು ಅನ್ನುವ ಲೆಕ್ಕಾಚಾರದಲ್ಲಿ, ಯು.ಪಿ.ಎ ಸರ್ಕಾರ ಹೀನವಾದ ಮತ ಬ್ಯಾಂಕ್ ರಾಜಕೀಯಕ್ಕೆ ಕೈ ಹಾಕಿ ತೆಲುಗರನ್ನು ಒಡೆದು ಆಳುವ ಕೆಲಸಕ್ಕೆ ಮುಂದಾಗಿದೆ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತೆಲಂಗಾಣಕ್ಕೆ ಸಂಬಂಧಿಸಿದ ನಿರ್ಣಯ ಆಂಧ್ರದ ಅಸೆಂಬ್ಲಿಯಲ್ಲಿ ಪಾಸಾಗುವ ಅಗತ್ಯವಿಲ್ಲ, ಸಂಸತ್ತಿನ ಮುದ್ರೆಯಿದ್ದರೆ ಸಾಕು ಅನ್ನುವ ನಿಲುವು ವ್ಯಕ್ತಪಡಿಸಿದೆ. ಅಲ್ಲಿಗೆ ತೆಲುಗರು ಒಂದಾಗಿರಬೇಕೋ, ಒಡೆದು ಬೇರೆಯಾಗಬೇಕೋ ಅನ್ನುವ ನಿರ್ಣಯ ಕೈಗೊಳ್ಳಲು ತೆಲುಗರ ಒಪ್ಪಿಗೆಯೇ ಬೇಡ ಅನ್ನುವ ಸ್ಥಿತಿ ಕಣ್ಣೆದುರಿದ್ದು, ಇದಕ್ಕೆ ಬೆಂಬಲವಾಗಿ ಸಂವಿಧಾನದ ಆರ್ಟಿಕಲ್ 3 ನಿಂತಿದೆ ಅನ್ನುವುದು ಭಾರತ ಒಕ್ಕೂಟದ ಸಂವಿಧಾನಕ್ಕೆ ಒಕ್ಕೂಟ ಮಾದರಿಯ ತಿದ್ದುಪಡಿಯ ಅಗತ್ಯವನ್ನು ಸಾರಿ ಹೇಳುತ್ತಿದೆ.

ಏನು ಹೇಳುತ್ತೆ ಆರ್ಟಿಕಲ್ 3?
ಭಾರತ ಒಕ್ಕೂಟದಲ್ಲಿ ಹೊಸ ರಾಜ್ಯಗಳನ್ನು ಹುಟ್ಟು ಹಾಕುವುದು, ಇರುವ ರಾಜ್ಯಗಳನ್ನು ಬದಲಾಯಿಸುವುದು, ಹೊಸ ಹೆಸರಿಡುವುದು ಇತ್ಯಾದಿಗಳ ಬಗ್ಗೆ ಆರ್ಟಿಕಲ್ 3 ಮಾತನಾಡುತ್ತೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಕಾನೂನು 1947ರ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಇದ್ದ ಕಳವಳಗಳ ಆಧಾರದ ಮೇಲೆ ಮಾಡಿಕೊಂಡಿರುವ ಕಾನೂನಾಗಿದ್ದು, ಇವತ್ತಿಗೆ ಅದನ್ನು ಬದಲಾಯಿಸಬೇಕಾದ ಅಗತ್ಯವಿದೆ ಅನ್ನುವುದು ಕಾಣಿಸುತ್ತೆ. ಆರ್ಟಿಕಲ್ 3 ಹೀಗೆ ಹೇಳುತ್ತೆ:
Formation of new States and alteration of areas, boundaries or names of existing States: Parliament may by law
(a) form a new State by separation of territory from any State or by uniting two or more States or parts of States or by uniting any territory to a part of any State;
(b) increase the area of any State;
(c) diminish the area of any State;
(d) alter the boundaries of any State;
(e) alter the name of any State; Provided that no Bill for the purpose shall be introduced in either House of Parliament except on the recommendation of the President and unless, where the proposal contained in the Bill affects the area, boundaries or name of any of the States, the Bill has been referred by the President to the Legislature of that State for expressing its views thereon within such period as may be specified in the reference or within such further period as the President may allow and the period so specified or allowed has expired Explanation I In this article, in clauses (a) to (e), State includes a Union territory, but in the proviso, State does not include a Union territory Explanation II The power conferred on Parliament by clause (a) includes the power to form a new State or Union territory by uniting a part of any State or Union territory to any other State or Union territory

ಇದರ ಅರ್ಥ ಯಾವುದೇ ರಾಜ್ಯವನ್ನು ಒಡೆದು ಚೂರಾಗಿಸುವುದು, ಇನ್ನೊಂದಕ್ಕೆ ಸೇರಿಸುವುದು, ಹೆಸರಿಡುವುದು ಹೀಗೆ ಮನಬಂದಂತೆ ಬದಲಾಯಿಸುವ ಹಕ್ಕು ಕೇವಲ ಸಂಸತ್ತಿಗಿದೆ. ಯಾವ ರಾಜ್ಯದಿಂದ ಇನ್ನೊಂದು ರಾಜ್ಯ ಸ್ಥಾಪಿಸುವಾಗ ಮೂಲರಾಜ್ಯದ ವಿಧಾನಸಭೆಯ ಅಭಿಪ್ರಾಯ ಕೇಳಬಹುದು, ಆದರೆ ಅಲ್ಲಿ ಹೊಸ ರಾಜ್ಯಕ್ಕೆ ಒಪ್ಪಿಗೆ ಸೂಚಿಸಿ ನಿರ್ಣಯ ಪಾಸಾಗಬೇಕು ಅನ್ನುವ ಕಟ್ಟಳೆಯೇನು ಇಲ್ಲ. ಅಲ್ಲಿಗೆ ತೆಲಂಗಾಣ ರಾಜ್ಯ ಮಾಡುವ ನಿರ್ಧಾರಕ್ಕೆ ಆಂಧ್ರ ವಿಧಾನಸಭೆಯ ಅನಿಸಿಕೆ ಕೇಳುವುದು ಕೇವಲ ಕಾಟಾಚಾರವೇ ಹೊರತು ಅದರಾಚೆ ಅದಕ್ಕೆ ಯಾವುದೇ ಮಹತ್ವವಿಲ್ಲ. ಆರ್ಟಿಕಲ್ 3ರ ಈ ನಿಯಮವೇ ಯು.ಪಿ.ಎ ಸರ್ಕಾರಕ್ಕೆ ಆಂಧ್ರದಲ್ಲಿ ರೊಚ್ಚಿಗೆದ್ದಿರುವ ತೆಲುಗರ ಭಾವನೆಗಳಿಗೆ ಕವಡೆ ಕಿಮ್ಮತ್ತು ಕೊಡದೇ ಮುಂದುವರೆಯುವ ಧೈರ್ಯ ಕೊಟ್ಟಿರುವುದು. ಇದು ಎಂತಹ ಒಕ್ಕೂಟ ವಿರೋಧಿ ಕಾನೂನಲ್ಲವೇ?

ನಿಮ್ಮ ಮನೆಯ ಜಗಳ ನೀವು ಬಗೆಹರಿಸಿಕೊಳ್ಳಬೇಕೋ ದೂರದ ದೆಹಲಿಯೋ?

8 ಕೋಟಿ ತೆಲುಗರ ನಡುವೆ ಎದ್ದಿರುವ ವಿವಾದ ಬಗೆಹರಿಸಿಕೊಳ್ಳಲು ಅವರಿಗೆ ಸಂಬಂಧವೇ ಇರದವರು ನಿರ್ಣಯ ಕೈಗೊಳ್ಳಬಹುದು ಮತ್ತು ತೆಲುಗರ ಪ್ರತಿನಿಧಿಯಾದ ಆಂಧ್ರದ ವಿಧಾನಸಭೆಯನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಮಾಡಬಹುದು ಅನ್ನುವುದು ಪ್ರಜಾಪ್ರಭುತ್ವವನ್ನೇ ಅಣಕಿಸುವಂತಹ ಹೆಜ್ಜೆಯೇ ಸರಿ. ರಾಜ್ಯಗಳು ಭಾರತದ ಅತಿಯಾದ ಕೇಂದ್ರಿಕೃತ ವ್ಯವಸ್ಥೆಯ ವಿರುದ್ದ ದನಿ ಎತ್ತುತ್ತ ಹೋಗುತ್ತಿದ್ದಂತೆಯೇ ಅವರನ್ನು ಹಣಿದು ತೆಕ್ಕೆಯಲ್ಲಿಟ್ಟುಕೊಳ್ಳಲು ದೊಡ್ಡ ರಾಜ್ಯಗಳನ್ನು ಒಡೆದು ಚಿಕ್ಕದಾಗಿಸಿ ಕೇಂದ್ರದ ಬಲ ಹೆಚ್ಚಿಸಬೇಕು ಅನ್ನುವ ಚಿಂತನೆ ಬಿಜೆಪಿ, ಕಾಂಗ್ರೆಸ್ ಎರಡರಲ್ಲೂ ಇದೆ. ಹೀಗಿರುವಾಗ ದೆಹಲಿಯಲ್ಲಿ ಅಧಿಕಾರ ಹಿಡಿಯುವ ಈ ಪಕ್ಷಗಳು ಮನಸು ಮಾಡಿದರೆ ಎಲ್ಲ ಭಾಷಾವಾರು ರಾಜ್ಯಗಳನ್ನು ಒಡೆದು ಚಿಕ್ಕದಾಗಿಸಿ ದೆಹಲಿಯ ಸಾಮಂತರಾಗಿಸುವುದು ಹೆಚ್ಚು ಕಷ್ಟವೇನಲ್ಲ, ಯಾಕೆಂದರೆ 1950ರ ಸಂವಿಧಾನ ಅಂತಹದೊಂದು ಕೆಲಸಕ್ಕೆ ಅವಕಾಶವನ್ನು ಕಲ್ಪಿಸಿದೆ. ಸಂಸತ್ತಿನಲ್ಲಿರುವ ಪ್ರಾದೇಶಿಕ ಪಕ್ಷಗಳೆಲ್ಲವೂ ಈ ಬಗ್ಗೆ ಎಚ್ಚರಿಕೆಯಿಂದಿದ್ದು ರಾಜ್ಯಗಳ ಹಕ್ಕು ಉಳಿಸಿಕೊಳ್ಳಲು ಮುಂದಾಬೇಕು, ಆರ್ಟಿಕಲ್ 3ಕ್ಕೆ ತಿದ್ದುಪಡಿ ತಂದು ಯಾವುದೇ ರಾಜ್ಯದ ಸ್ವರೂಪ ಬದಲಾಯಿಸುವ ಹಕ್ಕು ಕೇವಲ ಆ ರಾಜ್ಯ ಜನರಿಗೆ, ಅವರ ಚುನಾಯಿತ ಪ್ರತಿನಿಧಿಗಳಿಗೆ ಇರುವಂತೆ ನೋಡಿಕೊಳ್ಳಬೇಕು.

ಕೊನೆಕಿಡಿ: ತೆಲುಗರ ಮಾತಿಗೆ ಬೆಲೆಯೇ ಇಲ್ಲದೇ ಬೇಕಾಬಿಟ್ಟಿ ತೆಲುಗು ದೇಶವನ್ನು ಒಡೆಯುವ ನಿರ್ಧಾರ ಕಂಡ ತೆಲುಗರಿಗೆ ಇಡೀ ಭಾರತವೇ ಅವರ ವಿರುದ್ದ ಸಂಚು ರೂಪಿಸಿದೆ ಅನ್ನಿಸಿದೆ. ಆದರೆ ತೆಲುಗರ ಮನೆಯ ವಿಷಯ ತೆಲುಗರೇ ಬಗೆಹರಿಸಿಕೊಳ್ಳಬೇಕು ಅನ್ನುವುದು ಅವರ ಪಾಲಿಗೆ ಸೆಲ್ಪ್ ರೂಲ್ ಆಗಿದ್ದು ಆ ಬಗ್ಗೆ ಭಾರತದ ಎಲ್ಲ ಭಾಷಿಕರು ಅವರ ಬೆಂಬಲಕ್ಕೆ ನಿಲ್ಲಬೇಕು.

Photo Source: https://twitter.com/Fight4UnitedAP/status/386757486994153472/photo/1 and http://dd508hmafkqws.cloudfront.net/sites/default/files/mediaimages/gallery/2013/Aug/954653_10151830224152160_457612235_n.jpg



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಹೆಸರು ಹೇಳಿ ಕಮೆಂಟ್ ಬರೆದ್ರೆ ನಿಮ್ಮ ಪರಿಚಯಾನೂ ಮಾಡಿಕೊಂಡ ಹಾಗಾಗುತ್ತೆ.. ಏನಂತೀರಾ !